ಕನ್ನಡ ಕಿರುತೆರೆಯಲ್ಲಿ ತಮ್ಮ ಹಾಸ್ಯದ ಮೂಲಕ ನಗು ಹಂಚಿ ಮನೆ ಮನೆಯಲ್ಲಿ ನಗೆ ಹಬ್ಬ ಮಾಡುತ್ತಿದ್ದ ಜೋಡಿ ಯಜಮಾನ್ರು ಗುಂಡಣ್ಣ, ಹಾಸ್ಯ ಲಾಸ್ಯ ಖ್ಯಾತಿಯ ಮುತ್ತುರಾಜ್ ಹಾಗು ಶ್ರೀಕಂಠ ಜೋಡಿ ಈಗ ಬೆಳ್ಳಿ ತೆರೆಯಲ್ಲಿ ತಮ್ಮ ಕಾಮಿಡಿ ಕಮಾಲ್ ತೋರಿಸಲು ಜಾತಿಗಿಂತ ಪ್ರೀತಿ ಮೇಲು ಅನ್ನೋ ಕಥಾವಸ್ತು ಇಟ್ಟುಕೊಂಡು ಮತ್ತೊಮ್ಮೆ ಎಲ್ಲಾರನ್ನೂ ನಗೆ ಕಡಲಲ್ಲಿ ತೇಲಿಸೋಕೆ “ಪ್ರೀತಿ ಪ್ರೇಮ ಪಂಗನಾಮ” ಚಿತ್ರದ ಮೂಲಕ ನಿಮ್ಮ ಮುಂದೆ ಬರುತ್ತಿದ್ದಾರೆ.

ಈ ಸಿನಿಮಾದಲ್ಲಿ ವಿಶೇಷವೇನೆಂದರೆ ಇಬ್ಬರು ಆಡೋ ಆಟಕ್ಕೆ ಇವರ ಮಕ್ಕಳು ಸಾಥ್ ಕೊಡೋದು, ಇವರ ಮಕ್ಕಳ ಆಟಕ್ಕೆ ಇವರೂ ಉತ್ಸಾಹ ಕೊಡೋದು. ತಂದೆ-ಮಕ್ಕಳ ಸಂಬಂಧ , ಕಾಯಕದ ಮಹತ್ವ, ನಾಡಿನ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವ ದೃಶ್ಯಗಳು, ದೇಶಕ್ಕೆ ನಮ್ಮ ಕೊಡುಗೆ ಮುಂದಿನ ಪೀಳಿಗೆಗೆ ಉಡುಗೊರೆ ಎಂಬ ರೋಮಾಂಚಕ ದೃಶ್ಯಗಳನ್ನು ನಗಿಸುವ ಮೂಲಕ ಜನರನ್ನು ತಲುಪಿಸುವ ನಿಟ್ಟಿನಲ್ಲಿ ಸಾಗುವ ಚಿತ್ರಕಥೆ ಕೊನೆಯಲ್ಲಿ ಕಾಯಕಯೋಗಿಗಳ ನೆನೆದು ತಮ್ಮ ಕಾಯಕ ತಮಗೆ ಶ್ರೇಷ್ಠ. ಎಂಬ ಶತಮಾನಗಳ ಮಾತುಗಳಿಗೆ ಮಹತ್ವ ಕೊಟ್ಟು, ತಮ್ಮ ಕಥೆಗೆ ತಕ್ಕ ಹಾಗೆ ಪಾತ್ರದಾರಿಗಳ ಆಯ್ಕೆ , ಚಿತ್ರಕಥೆ, ಹಿಡಿತದ ಸಂಭಾಷಣೆ ಜೊತೆಗೆ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಶ್ರೀಕಂಠ ಬಿ ಎ ಮುಖ್ಯ ಪಾತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಇದ್ದಕ್ಕೆ ಜೊತೆಯಾಗಿ ಮುತ್ತುರಾಜ್ ಈ ಚಿತ್ರಕ್ಕೆ ನಿರ್ಮಾಪಕರಾಗಿ ಅಭಿನಯದಲ್ಲಿ ಬೆಳ್ಳಿತೆರೆಗೆ ಒಂದು ಉಡುಗೊರೆ ನೀಡಿದ್ದಾರೆ.

ಅಷ್ಟೇ ಅಲ್ಲದೆ ಈ ಸಿನಿಮಾದ ಸಂಗೀತ ನಿರ್ದೇಶಕ ಕುಮಾರ್ ಈಶ್ವರ್ ಈ ಜೋಡಿಗೆ ಒಂದು ಕಾಮಿಡಿ ಗೀತೆ ಹಾಗೆ ಮಕ್ಕಳ ಪಾತ್ರಕ್ಕೆ ಒಂದು ಪ್ರೇಮ ಗೀತೆ ಸಂಯೋಜಿಸಿದ್ದು ಹಾಡಿನ ಸಾಹಿತ್ಯವನ್ನು ಈ ಚಿತ್ರಕ್ಕೆ ಸಹ ನಿರ್ದೇಶಕನಾಗಿದ್ದ ಶ್ರೀಕಾಂತ್ ಕುಮಾರ್ ತುಮಕೂರು ರಚಿಸಿದ್ದು ಪ್ರಣಯ ಕವಿ ಎಂದು ಗುರುತಿಸಿಕೊಳ್ಳುತ್ತಿದ್ದಾರೆ, ಈ ಗೀತೆ ಪ್ರೇಮಿಗಳ ಮನಸಲ್ಲಿ ಮನೆ ಮಾಡಿದ್ದು ಬಹಳ ಸದ್ದು ಮಾಡುತ್ತಿದೆ. ಶೀರ್ಷಿಕೆ ಗೀತೆ ಕಥೆಗೆ ಪೂರಕವಾಗಿದ್ದು ಜನರ ಬಾಯಲ್ಲಿ ಈ ಹಾಡು ಕೇಳಿಬರುತ್ತಿದೆ . ಎರಡು ಹಾಡುಗಳು ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿದ್ದು ಚಿತ್ರ ಶೀರ್ಷಿಕೆ ಇಂದ ಜನರನ್ನು ಸೆಳೆಯುತ್ತಿದೆ. ಧ್ವನಿ ಸುರುಳಿ ಬಿಡುಗಡೆ ಜರುಗಿದ್ದು ಸಿನಿಮಾ ಇದೆ ಮೇ 02 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ .

ಶ್ರೀಕಂಠ ಮುತ್ತುರಾಜ್ ಜೋಡಿಯ ಈ Comeback ಬಹಳ ಜನರಲ್ಲಿ ಕೌತುಕ ತೋರಿದಂತಿದೆ. ಸಧ್ಯ ಮನೋರಂಜನೆ ಇಲ್ಲದ ಚಿತ್ರಗಳಿಂದ ಬೇಸರದಲ್ಲಿದ್ದ ಚಿತ್ರರಂಗಕ್ಕೆ ಒಂದು ಹಾಸ್ಯಮಯ ಚಿತ್ರ ಬರುತ್ತಿರುವುದು ಖುಷಿ ವಿಷಯ. ಪ್ರೀತಿ ಪ್ರೇಮ ಪಂಗನಾಮ ಚಿತ್ರ ಯಶಸ್ವಿಯಾಗಲಿ, ಇನ್ನಷ್ಟು ಸಿನಿಮಾಗಳನ್ನ ಈ ಜೋಡಿ ನಮ್ಮ ಚಂದನವನಕ್ಕೆ ನೀಡಲಿ.