ಮೂಲ : Portuguese Civil Code:
The silent law that unites Goa, Daman and Diu
ಎಲ್ಗಾರ್ ನೊರೋನ್ಹಾ
ಫ್ರಂಟ್ ಲೈನ್ 27 ಜುಲೈ 2023
ಅನುವಾದ : ನಾ ದಿವಾಕರ
ಪೋರ್ಚುಗೀಸ್ ಸಂಹಿತೆ ಮತ್ತು ಗೋವಾ
ಪೋರ್ಚುಗೀಸ್ ನಾಗರಿಕ ಸಂಹಿತೆಗೆ ಗೋವಾದ ಅತಿದೊಡ್ಡ ಕೊಡುಗೆಯನ್ನು ವ್ಯಾಖ್ಯಾನಕಾರ ಡಾ.ಲೂಯಿಸ್ ಡಾ ಕುನ್ಹಾ ಗೊನ್ಸಾಲ್ವೆಸ್ (1875-1956) ನೀಡಿದ್ದಾರೆ, ಅವರು 1929 ಮತ್ತು 1934 ರ ನಡುವೆ ನಾಗರಿಕ ಸಂಹಿತೆಗೆ 15 ಸಂಪುಟಗಳ ಸ್ಮರಣೀಯ ವ್ಯಾಖ್ಯಾನವನ್ನು ಬರೆದಿದ್ದಾರೆ. ಇದು 20 ನೇ ಶತಮಾನದ ಕೊನೆಯವರೆಗೂ ಈ ವಿಷಯದ ಬಗ್ಗೆ ಕಂಡಿರುವ ಏಕೈಕ ವ್ಯಾಖ್ಯಾನವಾಗಿದೆ.
ಪೋರ್ಚುಗೀಸ್ ನಾಗರಿಕ ಸಂಹಿತೆಯ ಬಗ್ಗೆ ಆಕರ್ಷಕವಾದ ವಿಷಯವೆಂದರೆ ಅದರ ಏಕರೂಪತೆ, ಕ್ರಮಬದ್ಧತೆ ಮತ್ತು ಕಾನೂನಿನ ಕ್ರಮಬದ್ಧಗೊಳಿಸುವಿಕೆ ಹಾಗೂ ಜನರು ಸಂಹಿತೆಯನ್ನು ಸುಗಮವಾಗಿ ಮತ್ತು ಸಂತೋಷದಿಂದ ಸ್ವೀಕರಿಸುವುದು. ಅದು ಅವರ ಜೀವನದಲ್ಲಿ ಸುಲಭವಾಗಿ ಉಪಯುಕ್ತವಾಗಿ ಬಳಕೆಗೊಳಗಾಯಿತು. ನಾಗರಿಕ ಸಂಹಿತೆಯನ್ನು ಎಲ್ಲರೂ ಸಂತೋಷದಿಂದ ಸ್ವೀಕರಿಸುತ್ತಾರೆ ಮತ್ತು ಅನುಸರಿಸುತ್ತಾರೆ ಎಂಬುದು ರಾಷ್ಟ್ರವು ಹೊಂದಬಹುದಾದ ಅತಿದೊಡ್ಡ ಹೆಮ್ಮೆಯ ವಿಚಾರವಾಗಿದೆ.
ಗೋವಾದ ಜನರ ಕಾಸ್ಮೋಪಾಲಿಟನ್ ಸ್ವಭಾವ ಮತ್ತು ಅದರ ವಿವಿಧ ವಿಭಾಗಗಳ ನಡುವಿನ ಆರಾಮದಾಯಕ ಬಂಧನದಕ್ಕೆ ಪೋರ್ಚುಗೀಸ್ ನಾಗರಿಕ ಸಂಹಿತೆಯು ಮೌನವಾದ, ಅಲಿಖಿತ, ಅಪರಿಚಿತ ಮತ್ತು ಬಹುಶಃ ಗುರುತಿಸಲಾಗದ ಕಾರಣವಾಗಿದೆ. ಅವರು ಮತ್ತು ಅವರ ಪೂರ್ವಜರು ಎಲ್ಲರೂ ಒಂದೇ ಕಾನೂನನ್ನು ಅನುಸರಿಸಿದರು. ಅತ್ಯಂತ ದೂರದ ಗ್ರಾಮೀಣ ನಿವಾಸಿಗೂ ಸಹ ತನ್ನ ಹೆಂಡತಿ ತನ್ನ ಅರ್ಧದಷ್ಟು ಆಸ್ತಿಯ ಮಾಲೀಕಳಾಗಿದ್ದಾಳೆಂದು ತಿಳಿದಿದೆ ಏನನ್ನಾದರೂ ಮಾರಾಟ ಮಾಡಲು ಅವನಿಗೆ ತನ್ನ ಹೆಂಡತಿಯ ಸಹಿ ಬೇಕು. ಅವರು ವಿಲ್ ಮಾಡಬೇಕಾದರೆ, ಇಬ್ಬರೂ ಅದನ್ನು ಒಟ್ಟಿಗೆ ಮಾಡಬೇಕು. ಮದುವೆಯ ವಿಚಾರದಲ್ಲಿ ಮೊಟ್ಟಮೊದಲು ಅದನ್ನು ನೋಂದಾಯಿಸಬೇಕು. ಮಕ್ಕಳ ಜನನವನ್ನು ಕಡ್ಡಾಯವಾಗಿ ನೋಂದಾಯಿಸಬಹುದು. ಒಬ್ಬ ಸಹ-ಮಾಲೀಕನು ಇತರ ಸಹ-ಮಾಲೀಕರ ಒಪ್ಪಿಗೆಯಿಲ್ಲದೆ ಮಾರಾಟ ಮಾಡಲು ಸಾಧ್ಯವಿಲ್ಲ. ಪೋಷಕರು ಮಕ್ಕಳಿಗೆ ಮಾರಾಟ ಮಾಡಲು ಸಾಧ್ಯವಿಲ್ಲ (ಏಕೆಂದರೆ ಇದು ಉತ್ತರಾಧಿಕಾರ ಕಾನೂನನ್ನು ಬೈಪಾಸ್ ಮಾಡುತ್ತದೆ). ಈ ನಿಯಮಗಳು ಹಾಗೂ ಭೂ ಅನುದಾನಗಳ ಅಡಿಯಲ್ಲಿ ಎಂಫೈಟ್ಯೂಟಿಕ್ ಶಾಶ್ವತ ಗುತ್ತಿಗೆಯಂತಹ ಕಾನೂನಿನ ಇತರ ನಿಬಂಧನೆಗಳು ವ್ಯವಸ್ಥೆಯನ್ನು ವಿಭಿನ್ನವಾಗಿ ರೂಪಿಸುತ್ತವೆ. ಜನನ, ಮರಣ ಮತ್ತು ವಿವಾಹಗಳ ನಾಗರಿಕ ನೋಂದಣಿ ವ್ಯವಸ್ಥೆಯ ಜೊತೆಗೆ, ಆಸ್ತಿ ನೋಂದಣಿ ವ್ಯವಸ್ಥೆಯು ಇತ್ತು ಅದರ ಮೂಲಕ ಪ್ರತಿ ಆಸ್ತಿಯನ್ನು ಅದರ ಮಾಲೀಕರ ಹೆಸರಿನೊಂದಿಗೆ ನೋಂದಾಯಿಸಲಾಗುತ್ತಿತ್ತು. ಶೀರ್ಷಿಕೆಯ ಪರಿಶೀಲನೆ ತುಂಬಾ ಸರಳವಾಗಿತ್ತು.
ಪೋರ್ಚುಗೀಸ್ ನಾಗರಿಕ ಸಂಹಿತೆಯು ಪರಿಣಾಮಕಾರಿಯಾಗಿತ್ತು ಬಹುಶಃ ಆ ಕಾಲದ ವಿದ್ವಾಂಸ ವಕೀಲರನ್ನು ಹೊರತುಪಡಿಸಿ ಗೋವಾದ ಜನಸಂಖ್ಯೆಯ 99 ಪ್ರತಿಶತದಷ್ಟು ಜನರು ಎಂದಿಗೂ ಓದಲಿಲ್ಲ. ಸಂಹಿತೆಯನ್ನು ಆಂಗ್ಲಭಾಷೆಗೆ ಭಾಷಾಂತರಿಸಲಾಗಿಲ್ಲ. 1978 ಮತ್ತು 1986ರಲ್ಲಿ ಕುಟುಂಬ ಕಾನೂನುಗಳನ್ನು ಒಳಗೊಂಡಿರುವ ಎರಡು ಕಿರುಪುಸ್ತಕಗಳು ಪ್ರಕಟವಾದವು. ಅವು ಸುಮಾರು 30 ವರ್ಷಗಳವರೆಗೆ ಬಳಕೆಯಲ್ಲಿದ್ದವು. ಪೂರ್ಣ ಸಂಹಿತೆಯ ಉಳಿದಿರುವ ಎಲ್ಲಾ ನಿಬಂಧನೆಗಳ ಮೊದಲ ಸಮಗ್ರ ಅನುವಾದವನ್ನು ಈ ಬರಹಗಾರ 2016 ರಲ್ಲಿ ಮಾಡಿದರು, ಅವರು ಹೈಕೋರ್ಟ್ ಆದೇಶದ ಅಡಿಯಲ್ಲಿ ಗೋವಾ ಸರ್ಕಾರಕ್ಕೆ ಕ್ರಮವಾಗಿ 2018 ಮತ್ತು 2019 ರಲ್ಲಿ ಪೋರ್ಚುಗೀಸ್ ಸಿವಿಲ್ ಕೋಡ್ ಮತ್ತು ಪೋರ್ಚುಗೀಸ್ ಸಿವಿಲ್ ಪ್ರೊಸೀಜರ್ ಕೋಡ್ನ ಅಧಿಕೃತ ಅನುವಾದಗಳನ್ನು ಮಾಡಿದರು.
“ಗೋವಾದಲ್ಲಿ ಈ ಕಾನೂನಿನಲ್ಲಿ ಮಹತ್ತರವಾಗಿ ಕಾಣುವ ವಿಷಯವೇನು?” ಎಂಬುದು ಆಗಾಗ್ಗೆ ಕೇಳಲಾಗುವ ಪ್ರಶ್ನೆಯಾಗಿದೆ. ಅದರ ಕೆಲವು ವಿಶಿಷ್ಟ ಲಕ್ಷಣಗಳನ್ನು ನಾನು ಸೂಚಿಸುತ್ತೇನೆ:
ಪೋರ್ಚುಗೀಸ್ ನಾಗರಿಕ ಸಂಹಿತೆಯು ಒಂದು ಸಂಕಲನವಲ್ಲ ಆದರೆ ಪ್ರಾರಂಭದಿಂದ ಅಂತ್ಯದವರೆಗೆ ಒಬ್ಬ ವ್ಯಕ್ತಿಯು ಮಾಡಿದ ಕಾನೂನಿನ ನಿರೂಪಣೆಯಾಗಿದೆ. ಇದು ಬರವಣಿಗೆಯ ಪಠ್ಯದ ಮೂಲಕ ಒಂದು ಸಮಾನ ಎಳೆಯ ಚಿಂತನೆಯೊಂದಿಗೆ ನಿರಂತರ ಸಂವಾದ ನಡೆಸಿದಂತೆ.
ಬೆಂಥಾಮ್ನೊಂದಿಗೆ ಹೋಲಿಕೆ ಮಾಡುವುದಾದರೆ, ಪೋರ್ಚುಗೀಸ್ ಸಿವಿಲ್ ಕೋಡ್ನ ನಾಲ್ಕು ವಿಶಾಲ ಭಾಗಗಳು ಮತ್ತು ಜೆರೆಮಿ ಬೆಂಥಮ್ ಗುರುತಿಸಿದ ನಾಗರಿಕ ಕಾನೂನಿನ ಪ್ರಸಿದ್ಧ ಧ್ಯೇಯಗಳ ನಡುವೆ ಅದ್ಭುತವಾದ ಒಡನಾಟವನ್ನು ಗಮನಿಸಬಹುದು. ಭಾಗ 1ರಲ್ಲಿ ನಾಗರಿಕ ಸಾಮರ್ಥ್ಯವು ಬೆಂಥಮ್ನ ಜೀವನಾಧಾರ ಪರಿಕಲ್ಪನೆಗೆ ಅನುಗುಣವಾಗಿರುತ್ತದೆ. ಭಾಗ 2ರಲ್ಲಿ ಬೆಂಥಮ್ನ ಸಮೃದ್ಧಿಯ ಪರಿಕಲ್ಪನೆ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕೆ ಅನುಗುಣವಾಗಿದೆ.; ಭಾಗ 3Iರಲ್ಲಿ ಬೆಂಥಮ್ನ ಸಮಾನತೆಯ ಪರಿಕಲ್ಪನೆಯು ಆಸ್ತಿಯ ಹಕ್ಕುಗಳನ್ನೇ ಧ್ವನಿಸುತ್ತದೆ. ಕೊನೆಯದಾಗಿ ಭಾಗ 4ರಲ್ಲಿ ಬೆಂಥಮ್ ಸೂಚಿಸುವ ಭದ್ರತೆಯ ಪರಿಕಲ್ಪನೆಯು, ಹಕ್ಕುಗಳು ಮತ್ತು ಪರಿಹಾರಗಳ ಉಲ್ಲಂಘನೆಗೆ ಅನುಗುಣವಾಗಿ ಕಾಣುತ್ತದೆ. ಇದೊಂದು ಸೈದ್ಧಾಂತಿಕ ಸಂಹಿತೆಯಾಗಿದ್ದು ಇದು ಕೇವಲ ಬೋಳು ನಿಯಮಗಳ ಗ್ರಂಥವಲ್ಲ ಬದಲಾಗಿ ನಾಗರಿಕ ಕಾನೂನು ಪರಿಕಲ್ಪನೆಗಳ ರಚನಾತ್ಮಕ ಸ್ವರೂಪವಾಗಿದೆ. ಪ್ರತಿಯೊಂದು ಪರಿಕಲ್ಪನೆಯನ್ನು ವಿವರಿಸಲಾಗಿದ್ದು ಸಂಬಂಧಿತ ಸಿದ್ಧಾಂತವನ್ನು ರೂಪಿಸಲಾಗಿದೆ.
ಪರಿಕಲ್ಪನೆಯ ವಿಧಾನದಲ್ಲೂ ಸಹ ಕಾನೂನು ವಿದ್ಯಮಾನಗಳು ಮತ್ತು ಕಾನೂನು ಸಂಸ್ಥೆಗಳನ್ನು ಪರಿಕಲ್ಪನಾ ಮಟ್ಟದಲ್ಲಿ ಬೌದ್ಧಿಕ ಮತ್ತು ತಾತ್ವಿಕ ಭಾಷೆಯಲ್ಲಿ ವ್ಯವಹರಿಸಲಾಗುತ್ತದೆಯೇ ಹೊರತು ಸಂಪೂರ್ಣವಾಗಿ ಪ್ರಾಯೋಗಿಕ ಮಟ್ಟದಲ್ಲಿ ಅಲ್ಲ. ಇದು ದೈನಂದಿನ ಭಾಷೆಯಲ್ಲಿರುವುದಲ್ಲದೆ ಕಾನೂನು ಚರ್ಚೆಗಳು, ವಿಷಯ ಮಂಡನೆಯನ್ನು ಒಳಗೊಂಡಿರುತ್ತದೆ. ಅಂದರೆ ವಾಸ್ತವಗಳಿಗೆ ಕಾನೂನನ್ನು ಅನ್ವಯಿಸುವಾಗ ವಕೀಲರು ಮತ್ತು ನ್ಯಾಯಾಧೀಶರಿಗೆ ಸುಲಭವಾಗುತ್ತದೆ. ಹಕ್ಕುಗಳನ್ನು ನಿರ್ಧರಿಸುವಾಗ ನ್ಯಾಯಾಲಯಗಳು ಪರಿಕಲ್ಪನಾ ಸಂಶೋಧನೆ, ನಿರೂಪಣೆಗಳಿಗೆ ಮೊರೆ ಹೋಗಿ ನಿರ್ಧಾರವನ್ನು ಕೈಗೊಳ್ಳುವ ಅಗತ್ಯತೆಯನ್ನು ತಪ್ಪಿಸುತ್ತದೆ.
ಪರಿಕಲ್ಪನಾ ಅಥವಾ ಸೈದ್ಧಾಂತಿಕ ವಿಧಾನವು ಎರಡು ಹಂತಗಳಲ್ಲಿದೆ:
• ಪ್ರಾಥಮಿಕ ಶೀರ್ಷಿಕೆ: ನಾಗರಿಕ ಕಾನೂನನ್ನು ಮೀರಿದ ಅತ್ಯಂತ ಸಾಮಾನ್ಯ ಪರಿಕಲ್ಪನೆಗಳು ಮತ್ತು ತತ್ವಗಳನ್ನು ಅನುಚ್ಛೇದ 1 ರಿಂದ 16 ರಲ್ಲಿ ಹಾಕಲಾಗಿದೆ.
• ತದನಂತರ, ಪ್ರತಿ ಭಾಗ, ಪುಸ್ತಕ, ಶೀರ್ಷಿಕೆ, ಅಧ್ಯಾಯ, ವಿಭಾಗ ಮತ್ತು ಉಪವಿಭಾಗದ ಆರಂಭದಲ್ಲಿ ಸಂಬಂಧಿತ ಕಾನೂನು ಪರಿಕಲ್ಪನೆಯನ್ನು ಮೊದಲು ಸ್ಪಷ್ಟವಾಗಿ ವಿವರಿಸಲಾಗುತ್ತದೆ ಮತ್ತು ವ್ಯಾಖ್ಯಾನಿಸಲಾಗುತ್ತದೆ. ತದನಂತರ, ಅದಕ್ಕೆ ಸಂಬಂಧಿಸಿದ ಕಾನೂನಿನ ನಿಯಮಗಳನ್ನು ಸರಳ ಮತ್ತು ಸರಾಗವಾದ ಆದರೆ ನಿಖರವಾದ ಕ್ಲಾಸಿಕ್ ಭಾಷೆಯಲ್ಲಿ ವಿವರಿಸಲಾಗುತ್ತದೆ. ಈ ಸಂಹಿತೆಯು ಸಾಹಿತ್ಯಕ ಮೇರುಕೃತಿಯಾಗಿದೆ. ವಕೀಲರಲ್ಲದೆ, ಯಾವುದೇ ವಿದ್ಯಾವಂತ ವ್ಯಕ್ತಿಯು ಅದನ್ನು ಓದಲು ಅಪೇಕ್ಷಿಸುತ್ತಾನೆ.
ಆಸ್ತಿಗಳ ಸಮನ್ವಯದ ನೀತಿಗಳನ್ವಯ ಗಂಡನ ಎಲ್ಲಾ ಆಸ್ತಿಗಳಲ್ಲಿ ಹೆಂಡತಿಗೆ ಅರ್ಧದಷ್ಟು ಹಕ್ಕನ್ನು ನೀಡುತ್ತದೆ ಅಲ್ಲದೆ ಹೆಂಡತಿಯ ಒಪ್ಪಿಗೆಯಿಲ್ಲದೆ ಅವುಗಳನ್ನು ವಿಲೇವಾರಿ ಮಾಡಲು ಸಾಧ್ಯವಿಲ್ಲ.
ಧಾರ್ಮಿಕ ಆಚರಣೆಗಳು ಹಾಗೂ ಧಾರ್ಮಿಕ ಮತ್ತು ನಾಗರಿಕ ವಿವಾಹಗಳ ನಡುವಿನ ಪರಸ್ಪರ ಸಂಬಂಧಗಳನ್ನೂ ಮೀರಿ ವಿವಾಹ ನೋಂದಣಿಯನ್ನು ಪರಿಗಣಿಸಲಾಗುತ್ತದೆ.
ಉತ್ತರಾಧಿಕಾರದ ವಿಚಾರದಲ್ಲಿ ಪುತ್ರರು ಮತ್ತು ಪುತ್ರಿಯರನ್ನು ಅನುಕ್ರಮವಾಗಿ ಸಮಾನವಾಗಿ ಪರಿಗಣಿಸಲಾಗುತ್ತದೆ.
ಲೆಜಿಟೈಮ್ ನಿಯಮವು ಕಾನೂನಿನ ಸಂಪೂರ್ಣ ಕಾರ್ಯಾಚರಣೆಯ ಮೂಲಕ ಎಲ್ಲಾ ಮಕ್ಕಳಿಗೆ, ಲಿಂಗ ತಾರತಮ್ಯವಿಲ್ಲದೆ, ಪೋಷಕರ ಆಸ್ತಿಯಲ್ಲಿ 50 ಪ್ರತಿಶತದಷ್ಟು ಸಮಾನ ಹಕ್ಕುಗಳನ್ನು ನೀಡುತ್ತದೆ. ಪೋಷಕರು ತಮ್ಮ ಆಸ್ತಿಯ ಪಾಲಿನಲ್ಲಿ ಶೇ 50ಕ್ಕಿಂತ ಹೆಚ್ಚಿನದನ್ನು ಸ್ವಇಚ್ಛೆಯಿಂದ ವಿಲೇವಾರಿ ಮಾಡುವುದನ್ನು ಅಥವಾ ಉಡುಗೊರೆಯಾಗಿ ನೀಡುವುದನ್ನು ನಿಷೇಧಿಸುತ್ತದೆ. ಉಳಿದವು ಕಾನೂನುಬದ್ಧವಾಗಿ ಉಳಿಯುವುದಲ್ಲದೆ ಕಾನೂನಿನ ನಿಉಮಾನುಸಾರ ಅಥವಾ ಅವಿಚ್ಚಿನ್ನತೆಯಿಂದ ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗುತ್ತದೆ.
“ಅಫೊರಮೆಂಟೊ” ಅಥವಾ ಎಂಫೈಟ್ಯೂಟಿಕ್ ಲೀಸ್ ಯುರೋಪಿಯನ್ ಕಾನೂನಿನ ಒಂದು ವಿಶಿಷ್ಟ ಸಂಸ್ಥೆಯಾಗಿದ್ದು ಇದು ಸರ್ಕಾರಕ್ಕೆ ಅಥವಾ ಸಾರ್ವಜನಿಕ ಸಂಸ್ಥೆಗೆ ಸೇರಿದ ಭೂಮಿಯಾಗಿರುತ್ತದೆ ಹಾಗೂ ನಿರ್ದಿಷ್ಟ ಉದ್ದೇಶಕ್ಕಾಗಿ ಗುತ್ತಿಗೆಗೆ ನೀಡಲಾಗುತ್ತದೆ. ಗುತ್ತಿಗೆದಾರನು ಆಸ್ತಿಯನ್ನು ಅನುಭವಿಸಿದರೂ ಅದರ ಒಡೆತನ ಮಾಲೀಕರ ಬಳಿಯೇ ಉಳಿಯುತ್ತದೆ. ಗುತ್ತಿಗೆಯನ್ನು ವರ್ಗಾಯಿಸುವ ಅವಕಾಶ ಇರುತ್ತದೆ. ಗುತ್ತಿಗೆದಾರನಿಗೆ 20 ವರ್ಷಗಳ ಎಂಫೈಟ್ಯೂಟಿಕ್ ಶುಲ್ಕವನ್ನು ಒಂದೇ ಮೊತ್ತದಲ್ಲಿ ಪಾವತಿಸುವ ಮೂಲಕ ಸಂಪೂರ್ಣ ಮಾಲೀಕತ್ವವನ್ನು ಪಡೆಯುವ ಹಕ್ಕನ್ನು ಸಹ ನೀಡಲಾಗುತ್ತದೆ.
ಇಡೀ ಭಾರತವು ನಾಗರಿಕ ಸಂಹಿತೆಯನ್ನು ಹೊಂದಬೇಕೇ?
ಇದಕ್ಕೆ ಯಾವುದೇ ಚರ್ಚೆಯ ಅಗತ್ಯವಿಲ್ಲ ಎಂದು ಸಂವಿಧಾನವು 1950 ರಲ್ಲಿ ಹೇಳಿದೆ. ಇದು ಯಾವುದೇ ವ್ಯಕ್ತಿ ಅಥವಾ ಪಕ್ಷದ ಕಲ್ಪನೆಯಲ್ಲ ಬದಲಾಗಿ ರಾಷ್ಟ್ರದ ಆಗ್ರಹ. ಭಾರತದಂತಹ ಪ್ರಮುಖ ರಾಷ್ಟ್ರವು ಖಂಡಿತವಾಗಿಯೂ ನಾಗರಿಕ ಸಂಹಿತೆಯನ್ನು ಹೊಂದಿರಬೇಕು. ಬ್ರಿಟನ್ ಅಥವಾ ಅಮೆರಿಕ ನಾಗರಿಕ ಸಂಹಿತೆಯನ್ನು ಹೊಂದಿಲ್ಲ ಎಂಬ ನೆಪ ಹೂಡಬೇಕಿಲ್ಲ. ಅದು ಪೂರ್ವನಿಯೋಜಿತವಾಗಿದೆ. ಅಮೆರಿಕೆಯಲ್ಲಿ ಲೂಯಿಸಿಯಾನ ಮತ್ತು ಕ್ಯಾಲಿಫೋರ್ನಿಯಾದಂತಹ ಹಲವಾರು ರಾಜ್ಯಗಳು ರಾಜ್ಯ ಮಟ್ಟದ ನಾಗರಿಕ ಸಂಹಿತೆಗಳನ್ನು ಹೊಂದಿವೆ.
ಒಬ್ಬ ಭಾರತೀಯನಾಗಿ, ನಾಗರಿಕನಾಗಿ ಸಾಮಾನ್ಯ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳುವುದು ಅತ್ಯವಶ್ಯವಾಗಿದೆ. ಧರ್ಮವು ಒಂದು ಖಾಸಗಿ ವ್ಯವಹಾರವಾಗಿದೆ. ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದುವ, ಇಷ್ಟಬಂದಂತೆ ವಿಚ್ಛೇದನ ನೀಡುವ, ಹೆಣ್ಣುಮಕ್ಕಳು ಮತ್ತು ಹೆಂಡತಿಯರನ್ನು ಉತ್ತರಾಧಿಕಾರದಿಂದ ಹೊರಗಿಡುವ ಮತ್ತು ಅದನ್ನು ಧರ್ಮವೆಂದು ಬಿಂಬಿಸುವ ಹಕ್ಕು ಯಾರಿಗೂ ಇಲ್ಲ. ಅಂತಹ ವಿಷಯಗಳು ಧರ್ಮದ ವಿಕೃತಿಗಳಾಗಿವೆ. ಭಾರತವು ಸ್ವತಂತ್ರ ದೇಶವಾಗಿದೆ ಎಂದ ಮಾತ್ರಕ್ಕೆ ಯಾರು ಬೇಕಾದರೂ ತಮ್ಮ ಧರ್ಮವನ್ನು ಆಯುಧವನ್ನಾಗಿ ಮಾಡಿಕೊಳ್ಳಬಹುದು ಎಂದರ್ಥವಲ್ಲ. ಅದೇ ಸಮಯದಲ್ಲಿ, ನಾಗರಿಕ ಸಂಹಿತೆಯು ಇತರ ಸಮುದಾಯಗಳನ್ನು ದಮನಿಸಲು ತೀವ್ರಗಾಮಿಗಳಿಗೆ ಒಂದು ಆಯುಧವಲ್ಲ. ಅಂತಹ ತೀವ್ರಗಾಮಿಗಳು ತಮ್ಮ ಸ್ವಂತ ಸಮುದಾಯಗಳತ್ತ ಗಮನಹರಿಸುವುದು ಉತ್ತಮ.
“ಪೋರ್ಚುಗೀಸ್ ಸಿವಿಲ್ ಕೋಡ್ನಲ್ಲಿ ಆಸ್ತಿಗಳ ಸಂಯೋಜನೆ ಮತ್ತು ಪುತ್ರರು ಮತ್ತು ಪುತ್ರಿಯರಿಗೆ ಉತ್ತರಾಧಿಕಾರದ ಸಮಾನ ಹಕ್ಕುಗಳಂತಹ ಅನೇಕ ವಿಚಾರಗಳನ್ನು ಖಂಡಿತವಾಗಿಯೂ ಭಾರತೀಯ ನಾಗರಿಕ ಸಂಹಿತೆಯಲ್ಲಿ ಸೇರಿಸಬಹುದು.”
ಭಾರತದಲ್ಲಿ ದೇಶವ್ಯಾಪಿ ಜಾರಿಯಲ್ಲಿರುವ ವ್ಯವಸ್ಥೆಯನ್ನು ಬದಲಿಸಿ ಈ ಸಂಹಿತೆಯನ್ನು ಅಳವಡಿಸುವುದು ಸೂಕ್ತವೇ ?
ಭಾರತದಲ್ಲಿ ಕಾನೂನು ಅಂತಹ ವ್ಯವಸ್ಥೆಯನ್ನು ಅನುಸರಿಸುವುದಿಲ್ಲ. ಯಾವುದೇ ವ್ಯವಸ್ಥೆ ಇಲ್ಲ ಎಂದು ನಾನು ಧೈರ್ಯದಿಂದ ಹೇಳುತ್ತೇನೆ, ವ್ಯವಸ್ಥೆಯಲ್ಲಿನ ಲೋಪಗಳು ಕೊರತೆಗಳು ವಕೀಲರನ್ನು ಶ್ರೀಮಂತರನ್ನಾಗಿ ಮಾಡುತ್ತದೆ ಮತ್ತು ನ್ಯಾಯಾಧೀಶರನ್ನು ಅನಗತ್ಯವಾಗಿ ಮುಖ್ಯವಾಗಿಸುತ್ತದೆ. ನ್ಯಾಯಾಧೀಶರು ಕಾನೂನನ್ನು ಜಾರಿಗೊಳಿಸುವವರಾಗಿದ್ದು ನಾಗರಿಕ ಸಂಹಿತೆ ಜಾರಿಯಾದರೆ ಕಾನೂನಿನ ವೃತ್ತಿಯು ಹಣ ಗಳಿಸುವ ಒಂದು ಮಾರ್ಗವಾಗಿ ಉಳಿಯುವುದಿಲ್ಲ .
ಈ ಸಮಸ್ಯೆ ಇಂಗ್ಲೆಂಡ್ ದೇಶವನ್ನು ಕಾಡುತ್ತಿದೆ ಮತ್ತು ಭಾರತವನ್ನೂ ಸಹ ಕಾಡುತ್ತಿದೆ. ಭಾರತದಲ್ಲಿ ನಾವು ಬ್ರಿಟಿಷ್ ಯುಗದ ಕ್ರೋಡೀಕೃತ ಶಾಸನಗಳು ಮತ್ತು ಬ್ರಿಟಿಷ್ ಮೂಲದ ಪ್ರಕರಣ ಕಾನೂನು ವ್ಯವಸ್ಥೆಯ ನಡುವೆ ಕಳೆದುಹೋಗಿದ್ದೇವೆ. ಬ್ರಿಟಿಷರು ಬೆಂಥಮ್ನ ಪ್ರಭಾವದಿಂದ ಭಾರತದಲ್ಲಿ ಕಾನೂನನ್ನು ಕ್ರೋಡೀಕರಿಸಲು ಪ್ರಯತ್ನಿಸಿದರು ಆದರೆ ಅದನ್ನು ಅವರು ತಮ್ಮ ದೇಶದಲ್ಲಿ ಮಾಡಲು ಸಾಧ್ಯವಾಗಲಿಲ್ಲ. ಭಾರತದಲ್ಲಿ ಈಗ ಕಾನೂನು ಒಂದು ಉದ್ಯೋಗ, ವ್ಯಾಪಾರ ಮತ್ತು ಕೌಶಲ್ಯವಾಗಿದೆ. ಅದು ನಿಜವಾಗಿಯೂ ಅಧ್ಯಯನದ ವಿಷಯವಾಗಿ ಉಳಿದಿಲ್ಲ.. ಹೆಸರಿಸಲು ಯೋಗ್ಯವಾದ ಯಾವುದೇ ನ್ಯಾಯಶಾಸ್ತ್ರ ಅಥವಾ ಕಾನೂನು ಸಿದ್ಧಾಂತವಿಲ್ಲ. ಬೋಧಕರು ಇದ್ದಾರೆಯೇ ಹೊರತು ನ್ಯಾಯಶಾಸ್ತ್ರಜ್ಞರಲ್ಲ. ಕಾನೂನಿನಲ್ಲಿ ದೀರ್ಘ ಅನುಭವ ಹೊಂದಿರುವ ಯಾವುದೇ ವ್ಯಕ್ತಿಯನ್ನು “ನ್ಯಾಯಶಾಸ್ತ್ರಜ್ಞ” ಎಂದು ಕರೆಯಲಾಗುತ್ತದೆ. ಕಾನೂನು ಕಾಲೇಜುಗಳಲ್ಲಿ ಸಿವಿಲ್ ಕಾನೂನನ್ನು ಒಂದು ವಿಷಯವಾಗಿ ಕಲಿಸಲಾಗಿಲ್ಲ. ಭಾರತದಲ್ಲಿ ನಾಗರಿಕ ಸಂಹಿತೆಯನ್ನು ಹೊಂದಲು ನಾಗರಿಕ ಕಾನೂನಿನ ಬೋಧನೆ ಮತ್ತು ಭಾರತೀಯ ನಾಗರಿಕ ನ್ಯಾಯಶಾಸ್ತ್ರದ ಬೆಳವಣಿಗೆ ಪೂರ್ವಾಪೇಕ್ಷಿತವಾಗಿದೆ.
ಗೋವಾ, ದಮನ್ ಮತ್ತು ಡಿಯುಗಳ ಪೋರ್ಚುಗೀಸ್ ನಾಗರಿಕ ಸಂಹಿತೆಯನ್ನು ಸರಳವಾಗಿ ಮತ್ತು ಯಾಂತ್ರಿಕವಾಗಿ ಭಾರತದ ಉಳಿದ ಭಾಗಗಳಿಗೆ ವಿಸ್ತರಿಸಲು ಸಾಧ್ಯವಿಲ್ಲ. ಆದರೆ ಆಸ್ತಿಗಳ ಸಮನ್ವಯ, ಗಂಡುಮಕ್ಕಳಿಗೆ ಮತ್ತು ಹೆಣ್ಣುಮಕ್ಕಳಿಗೆ ಉತ್ತರಾಧಿಕಾರದ ಸಮಾನ ಹಕ್ಕುಗಳು ಮುಂತಾದ ಅನೇಕ ವಿಚಾರಗಳನ್ನು ಖಂಡಿತವಾಗಿಯೂ ಭಾರತೀಯ ನಾಗರಿಕ ಸಂಹಿತೆಯಲ್ಲಿ ಸೇರಿಸಬಹುದು. ಇದರಿಂದ ಹಿಂದೆಂದಿಗಿಂತಲೂ ಭಾರತೀಯ ಮಹಿಳೆಯರನ್ನು ಸಬಲೀಕರಣಗೊಳಿಸಲು ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮೇಲೆ ಹೇಳಿದಂತೆ, ನಾಗರಿಕ ಸಂಹಿತೆಯು ಭಾರತದ ನಾಗರಿಕ ಕಾನೂನಿನಲ್ಲಿ, ಕಾನೂನು ಅಭ್ಯಾಸ, ನ್ಯಾಯಾಂಗ ಪ್ರಕ್ರಿಯೆ ಮತ್ತು ವಿಧಿವಿಜ್ಞಾನ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸುತ್ತದೆ. ಕಾನೂನಿನಲ್ಲಿ ಸ್ಪಷ್ಟತೆ ಇರುವುದರಿಂದ ಇದು ಖಂಡಿತವಾಗಿಯೂ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡುತ್ತದೆ.
ನಾಗರಿಕ ಸಂಹಿತೆಯ ಗ್ರಂಥವನ್ನು ತಮ್ಮ ಕೈಯಲ್ಲಿ ಹಿಡಿದುಕೊಳ್ಳುವ ಮೂಲಕ, ಕಾನೂನಿನ ವಿಶಾಲ ಕ್ಷೇತ್ರದಲ್ಲಿ ತಮ್ಮ ಹಕ್ಕುಗಳ ಬಹುಪಾಲನ್ನು ತಿಳಿದುಕೊಳ್ಳುವ ಎಲ್ಲಾ ನಾಗರಿಕರನ್ನು ಇದು ಸಶಕ್ತಗೊಳಿಸುತ್ತದೆ. ಮೊದಲು ಮಾಡಬೇಕಾಗಿರುವುದು ಒಂದು ಸಂಹಿತೆಯನ್ನು ರೂಪಿಸುವುದು. ಕರಡಿನ ಬಗ್ಗೆ ಚರ್ಚೆ ನಡೆಯಬಹುದು. ಇತ್ತೀಚಿನ ದಿನಗಳಲ್ಲಿ ಕರಡು ಸಂಹಿತೆಯ ಮೇಲೆ ಸಮಗ್ರ ಚರ್ಚೆಯು ನಡೆಯುವುದಿಲ್ಲ ಬದಲಾಗಿ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವಿಷಯಗಳ ಮೇಲೆ ನಡೆಯುತ್ತಿದೆ. ಈ ಚರ್ಚೆಗಳಲ್ಲಿ ಮೊದಲನೆಯದಾಗಿ ಹೊರಹೊಮ್ಮುವ ಸತ್ಯಾಂಶವೆಂಧರೆ ಸಂಬಂಧಪಟ್ಟ ಎಲ್ಲರೂ ಈ ವಿಷಯದ ಬಗ್ಗೆ ಸಂಪೂರ್ಣ ಅಜ್ಞಾನಿಗಳಾಗಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಏನನ್ನೂ ನಿರೀಕ್ಷಿಸಲಾಗುವುದಿಲ್ಲ. ಪ್ರಾಮಾಣಿಕ ಅಧ್ಯಯನಕ್ಕೆ ದ್ವೇಷವು ಪರ್ಯಾಯವಲ್ಲ.
(ಎಫ್.ಇ. ನೊರೊನ್ಹಾ ಅವರು ಬಾಂಬೆ ಹೈಕೋರ್ಟ್ ವಕೀಲರು. ಅವರು ಗೋವಾ ಸರ್ಕಾರಕ್ಕಾಗಿ 1867 ರ ಪೋರ್ಚುಗೀಸ್ ಸಿವಿಲ್ ಕೋಡ್ ಮತ್ತು 1939 ರ ಪೋರ್ಚುಗೀಸ್ ಸಿವಿಲ್ ಪ್ರೊಸೀಜರ್ ಕೋಡ್ನ ಅಧಿಕೃತ ಅನುವಾದಗಳನ್ನು ಮಾಡಿದ್ದಾರೆ ).