ಬಸವಕಲ್ಯಾಣ (ಬೀದರ್ ಜಿಲ್ಲೆ):`ಛತ್ರಪತಿ ಶಿವಾಜಿ ಮಹಾರಾಜರ ನಿಜ ಇತಿಹಾಸ ಅರಿಯಬೇಕು. ಅವರ ಅಮೋಘ ಕಾರ್ಯವನ್ನು ಮರೆಮಾಚಿ ಅವರನ್ನು ಬರೀ ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಿರುವುದು ಸರಿಯಲ್ಲ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜ ಪ್ರತಿಮೆ ಪ್ರತಿಷ್ಠಾಪನೆ ಮತ್ತು ಪಾರ್ಕ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ತೋರಿದ ಮಾರ್ಗದಲ್ಲಿ ನಡೆಯಬೇಕು. ಭೇದಭಾವವಿಲ್ಲದ ಸೌಹಾರ್ದತೆ ಸಾರುವ ಶಿವಾಜಿ ಮಹಾರಾಜರ ಹಿಂದುತ್ವ ನಮ್ಮದಾಗಲಿ. ರಾಜಕೀಯ, ಆರ್ಥಿಕ ಮತ್ತು ಶೈಕ್ಷಣವಾಗಿ ಅಭಿವೃದ್ಧಿ ಹೊಂದಬೇಕು. ಸಮಾಜದಲ್ಲಿ ಒಗ್ಗಟ್ಟು ಇಲ್ಲದ್ದಿದ್ದರೆ ಏನೂ ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮರಾಠಾ ಸಮುದಾಯದ ಶಾಸಕರು, ಸಚಿವರು ಇರುತ್ತಾರೆ. ಬಿಜೆಪಿಯಲ್ಲಿ ಕಡೆಗಣಿಸಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ವಿಜಯಸಿಂಗ್ ಮತ್ತು ಡಾ.ಅಜಯಸಿಂಗ್ ಈ ಅಣ್ಣತಮ್ಮಂದಿರು ಶಿವಾಜಿ ಪಾರ್ಕ್ ಅಭಿವೃದ್ಧಿಗೆ ಪ್ರಯತ್ನಿಸಿದ್ದು ಅವರ ಕೆಲಸ ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಮಾತನಾಡಿ, `ಶಿವಾಜಿ ಪಾರ್ಕ್ ಅಭಿವೃದ್ಧಿಪಡಿಸಿ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಮಂಡಳಿಯಿಂದ ರೂ.1.50 ಕೋಟಿ ಅನುದಾನ ನೀಡಲಾಗಿದೆ. ತಾಲ್ಲೂಕಿನ ಮಂಠಾಳದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ರೂ. 10 ಕೋಟಿ ಮಂಜೂರು ಮಾಡಿದ್ದೇನೆ. ಹುಲಸೂರನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ರೂ. 15 ಕೋಟಿ ನೀಡಲಾಗಿದೆ. ಹಿಂದುಳಿದ ವರ್ಗಳ ಮತ್ತು ಅಲ್ಪಸಂಖೈಆತರ ಅಭಿವೃದ್ಧಿಗಾಗಿಯೂ ಮಂಡಳಿ ಪ್ರಯತ್ನಿಸುತ್ತಿದೆ’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, `ಶಿವಾಜಿ ಪಾರ್ಕ್ ಅಭಿವೃದ್ಧಿಗೆ ಅನೇಕ ವರ್ಷಗಳಿಂದ ಆಗ್ರಹಿಸಲಾಗುತ್ತಿತ್ತು. ಕಲ್ಯಾಣ ಕರ್ನಾಟಕ ಮಂಡಳಿಯಿಂದ ಅನುದಾನ ದೊರೆತಿದ್ದರಿಂದ ಬಹುದಿನದ ಕನಸು ನನಸು ಆಗುತ್ತಿರುವುದಕ್ಕೆ ಸಂತಸವಾಗಿದೆ. ನಮ್ಮ ತಂದೆಯವರಾದ ಧರ್ಮಸಿಂಗ್ ಅವರಿಗೆ ಸಂಸದರಾಗಲು ಮರಾಠಾ ಸಮಾಜ ಸಹಕರಿಸಿದ್ದು ನನ್ನ ಪ್ರತಿ ಕೆಲಸದಲ್ಲೂ ಈ ಸಮಾಜ ಬೆಂಬಲಿಸುತ್ತದೆ ಎಂಬ ಭರವಸೆಯಿದೆ’ ಎಂದರು.