ಮುಂಬರುವ ಪಂಚರಾಜ್ಯ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚಿಗೆ ಪಂಜಾಬಿಗೆ ಭೇಟಿ ನೀಡಿದ್ದರು. ಫೀರೋಜಪುರದಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವವರಿದ್ದರು. ಆದರೆ, ಕಾರಣಾಂತರಗಳಿಂದ ಭದ್ರತಾ ಲೋಪ ಎದುರಾದ ಕಾರಣ ಪ್ರಧಾನಿ ಮೋದಿ 20 ನಿಮಿಷಗಳ ಕಾಲ ರಸ್ತೆಯಲ್ಲೇ ಕಾಯುವಂತಾಯಿತು. ಈ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರುಗಳು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಆದರೆ, ಬಿಜೆಪಿ ಕಾರ್ಯಕರ್ತರು ಧ್ವಜವನ್ನು ಹಿಡಿದುಕೊಂಡು ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಪ್ರಧಾನಿ ಕಾರಿನಿಂದ ಕೆಲವು ಮೀಟರ್ಗಳು ಹಿಂದೆ ನಿಂತು ಬಿಜೆಪಿ ಹಾಗೂ ಪ್ರಧಾನಿಗೆ ಜೈಕಾರ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರ್ಯಕರ್ತರು ಕಾರಿನ ಬಳಿ ಬರುತ್ತಿದ್ದಂತೆಯೇ ಕಾರು ನಿಧಾನವಾಗಿ ಮುಂದೆ ಚಲಿಸಲು ಶುರು ಮಾಡುತ್ತದೆ.
ಫಿರೋಜ್ಪುರದಲ್ಲಿ ರೈತರು ಪ್ರತಿಭಟನೆ ರಸ್ತೆ ತಡೆದು ನಡೆಸುತ್ತಿದ್ದ ಕಾರಣ ಪ್ರಧಾನಿ ಮೇಲ್ಸೇತುವೆ ಮೇಲೆ ಇಪ್ಪತು ನಿಮಿಷಗಳ ಕಾಲ ಕಾದು ನಂತರ ವಿಮಾನ ನಿಲ್ಧಾಣಕ್ಕೆ ಹಿಂದಿರುಗಿದರು. ಸಮಾವೇಶಕ್ಕೆ ತೆರಳುತ್ತಿದ್ದ ಕಾರ್ಯಕರ್ತರು ಸಹ ಮೇಲ್ಸೇತುವೆ ಮೇಲೆ ಪ್ರಯಾಣಿಸುತ್ತಿದ್ದ ಕಾರಣ ವಿಷಯ ತಿಳಿದ ಕಾರ್ಯಕರ್ತರು ಪ್ರಧಾನಿ ಕಾರಿನ ಬಳಿ ಹೋಗಿ ಮಾತನಾಡಿಸಲು ಪ್ರಯತ್ನಿಸಿದ್ದರು.
ಈ ಘಟನೆಯು ಪ್ರಧಾನಿಗೆ ಭದ್ರತೆ ಒದಗಿಸುವಲ್ಲಿ ಮತ್ತೊಂದು ಲೋಪವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಚುನಾವಣೆ ಹೊಸ್ತಿಲಲ್ಲಿ ಈ ವಿಚಾರ ಕೇಂದ್ರ ಬಿಜೆಪಿ ಹಾಗೂ ಪಂಜಾಬ್ ಕಾಂಗ್ರೆಸ್ ಸರ್ಕಾರದ ನಡುವೆ ತೀವ್ರ ಕೆಸರೆರೆಚಾಟಕ್ಕೆ ದಾರಿ ಮಡಿಕೊಟ್ಟಿದೆ. ಈ ಸಂಬಂಧ ಕೇಂದ್ರ ಹಾಗೂ ಪಂಜಾಬ್ ಸರ್ಕಾರ ಪ್ರತ್ಯೇಕ ತನಿಖೆಗೆ ಆದೇಶಿಸಿವೆ. ಆದರೆ, ಸುಪ್ರೀಂ ಕೋರ್ಟ್ ಸೋಮವಾರದವರೆಗೂ ಯಾವುದೇ ತನಿಖೆ ನಡೆಸದಂತೆ ಆದೇಶಿಸಿದೆ.
![](https://pratidhvani.com/wp-content/uploads/2022/01/photo1641546837-1024x620.jpeg)
ಪ್ರಧಾನಿ ಪ್ರಯಾಣದ ಬಗ್ಗೆ ಸಾಕಷ್ಟು ಭಾರಿ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದರು ಸಹ ಭದ್ರತೆ ವಿಚಾರದಲ್ಲಿ ತಾರತಮ್ಯ ಎಸಗಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರ ಪಂಜಾಬ್ ಸರ್ಕಾರದ ವಿರುದ್ದ ಆರೋಪಿಸಿತ್ತು. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಪಂಜಾಬ್ ಸರ್ಕಾರ ಕೊನೆ ಕ್ಷಣದಲ್ಲಿ ಯೋಜನೆ ಬದಲಾಗಿದ್ದರಿಂದ ತಮಗೆ ಈ ವಿಚಾರವಾಗಿ ತಿಳಿದಿಲ್ಲ ಹಾಗೂ ಈ ವಿಚಾರದಲ್ಲಿ ತನ್ನ ಪಾತ್ರವಿಲ್ಲ ಎಂದು ಪಂಜಾಬ್ ಸರ್ಕಾರ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದೆ.
ಕೇಂದ್ರ ಸರ್ಕಾರ ಹಲವು ಭಾರೀ ಪಂಜಾಬ್ ಪೊಲೀಸರೊಂದಿಗೆ ಈ ವಿಚಾರವಾಗಿ ಚರ್ಚಿಸಿದರು ಸಹ ಪಂಜಾಬ್ ಪೊಲೀಸರು ಯಾವುದೇ ಅಡೆ ತಡೆ ಇಲ್ಲ ಎಂದು ಹೇಳಿದ್ದರಿಂದ ಪ್ರಧಾನಿ 111 ಕಿ.ಮೀ ಉದ್ದದ ಮಾರ್ಗವನ್ನ ರಸ್ತೆ ಮೂಲಕ ಕ್ರಮಿಸಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಈ ವಿಚಾರ ರಾಜಕೀಯ ವಲಯದಲ್ಲಿ ಎರಡು ರಾಷ್ಟೀಯ ಪಕ್ಷಗಳ ನಡುವಿನ ಕೆಸೆರೆರೆಚಾಟಕ್ಕೆ ದಾರಿ ಮಾಡಿಕೊಟ್ಟಿದೆ. ಈ ವಿಚಾರ ಮುಂದಿನ ದಿನಗಳಲ್ಲಿ ಎಲ್ಲಿಗೆ ಬಂದು ನಿಲ್ಲುತದೆ ಎಂಬುದನ್ನ ಕಾದು ನೋಡಬೇಕಿದೆ.