ಮುಂಬರುವ ಪಂಚರಾಜ್ಯ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚಿಗೆ ಪಂಜಾಬಿಗೆ ಭೇಟಿ ನೀಡಿದ್ದರು. ಫೀರೋಜಪುರದಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವವರಿದ್ದರು. ಆದರೆ, ಕಾರಣಾಂತರಗಳಿಂದ ಭದ್ರತಾ ಲೋಪ ಎದುರಾದ ಕಾರಣ ಪ್ರಧಾನಿ ಮೋದಿ 20 ನಿಮಿಷಗಳ ಕಾಲ ರಸ್ತೆಯಲ್ಲೇ ಕಾಯುವಂತಾಯಿತು. ಈ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರುಗಳು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಸಲೆಬೇಕು ಎಂದು ವ್ಯಾಪಕವಾಗಿ ಕೇಳಿ ಬಂದಿದೆ.
ಆದರೆ, ಇದೀಗ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿದ್ದು ಭದ್ರತಾ ಲೋಪವಾಗಿರುವ ಕುರಿತು ಪ್ರಧಾನಿ ಪ್ರಯಾಣದ ದಾಖಲೆಗಳನ್ನು ಸಂರಕ್ಷಿಸುವಂತೆ ಆದೇಶಿಸಿದೆ. ಈ ಬಗ್ಗೆ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ನ ರಿಜಿಸ್ಟಾರ್ ಜನರಲ್ ಗೆ ಎಲ್ಲಾ ದಾಖಲೆಗಳನ್ನು ಒಂದೆಡೆ ಸಂರಕ್ಷಿಸುವಂತೆ ಆದೇಶಿಸಿದೆ. ಭದ್ರತಾ ಪಡೆಗಳು ಸಹ ಈ ವಿಚಾರವಾಗಿ ನಿಮ್ಮಗೆ ಸಹಕರಿಸಲಿವೆ ಎಂದು ಕೋರ್ಟ್ ಹೇಳಿದೆ.
ಕೇಂದ್ರ ಹಾಗೂ ಪಂಜಾಬ್ ಸರ್ಕಾರ ಪ್ರತ್ಯೇಕವಾಗಿ ತನಿಖೆಗೆ ಆದೇಶಿಸಿವೆ. ಈ ತನಿಖೆಗೆ ಸೋಮವಾರದವರೆಗೂ ಉಚ್ಚನ್ಯಾಯಾಲಯ ತಡೆ ನೀಡಿದೆ. ಭದ್ರತಾ ಲೋಪವು ಅಪರೂಪದ ಪ್ರಕರಣವಾಗಿದ್ದು ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮುಜುಗರವನ್ನ ಉಂಟು ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಈ ವೇಳೆ ನ್ಯಾಯಾಲಯ ರಾಷ್ಟ್ರೀಯ ತನಿಖಾ ಸಂಸ್ಥೆಗೆ ತನಿಖೆ ವಹಿಸುವುದರ ಬಗ್ಗೆ ಸುಪ್ರೀಂ ಕೋರ್ಟ್ ಹೆಚ್ಚು ಒಲವನ್ನ ಹೊಂದಿದೆ ಎಂದು ತಿಳಿದು ಬಂದಿದೆ.

ಘಟನೆಯ ನಂತರ ಪ್ರಧಾನಿಯವರ ಭದ್ರತೆ ವಿಚಾರದಲ್ಲಿ ಅತ್ಯಂತ ಗಂಭೀರ ಚರ್ಚೆಗಳಿಗೆ ದೇಶಾದ್ಯಂತ ಮುನ್ನುಡಿ ಬರೆಯಲಾಗಿತ್ತು. ಈ ಸಂಬಂಧ ಪ್ರಧಾನಿಯವರ ಪ್ರಯಾಣ ದಾಖಲೆ ಹಾಗೂ ಭದ್ರತೆ ಒದಗಿಸುವ ದಾಖಲೆಗಳನ್ನು ಈ ಕೂಡಲೇ ತರಿಸಬೇಕು ಎಂದು ಸುಪ್ರೀಂ ಕೋರ್ಟ್ಗೆ ತುಷಾರ್ ಮೆಹ್ತಾ ಮನವಿ ಮಾಡಿದ್ದಾರೆ.
ಈ ಘಟನೆಗೆ ಪಂಜಾಬ್ ಸರ್ಕಾರ ಹಾಗೂ ಪೊಲೀಸರು ಸಂಪೂರ್ಣ ಜವಾಬ್ದಾರರು ಭದ್ರತೆ ಲೋಪವಾದಂತ ಸಮಯದಲ್ಲಿ ವಿದ್ವಂಸಕ ಕೃತ್ಯಗಳು ನಡೆಯಬಹುದು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇದು ಭಾರತಕ್ಕೆ ಮುಜುಗರವನ್ನುಂಟು ಮಾಡಿದೆ ಎಂದು ಮೆಹ್ತಾ ನ್ಯಾಪೀಠದ ಮುಂದೆ ವಿವರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಸರ್ಕಾರ, ಪ್ರಕರಣವನ್ನು ಲಘುವಾಗಿ ಪರಿಗಣಿಸಿಲ್ಲ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸರ್ಕಾರ 24 ಘಂಟೆಯೊಳಗೆ ತನಿಖೆಗೆ ಆದೇಶಿಸಿದೆ ಮತ್ತು ಸಮಿತಿಯನ್ನು ರಚಿಸಿದೆ. ತನಿಖೆಯನ್ನು ಮುಕ್ತವಾಗಿ ನಡೆಸಲಾಗುವುದು ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ತನಿಖಾ ಸಮಿತಿಗೆ ಸದಸ್ಯರನ್ನು ನೇಮಿಸಬಹುದು ಎಂದು ಪಂಜಾಬ್ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನಮ್ಮ ರಾಜ್ಯದ ಮುಖ್ಯಮಂತ್ರಿಯವರು ಪ್ರಧಾನಿ ನಮ್ಮವರೆ ಎಂದು ಭಾವಿಸಿದ್ದಾರೆ. ಈ ವಿಚಾರದಲ್ಲಿ ಪಂಜಾಬ್ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿರುವದರಿಂದ ನಾವು ಸಹ ತನಿಖೆ ನಡೆಸಲು ಬಯಸುತ್ತಿದ್ದೇವೆ. ನ್ಯಾಯಾಲಯ ಏನೇ ಆದೇಶ ನೀಡಿದ್ದರು ಸೂಕ್ತ ಎಂದು ಭಾವಿಸಿ ಆದೇಶಕ್ಕೆ ತಲೆ ಬಾಗುತ್ತೇವೆ ಎಂದು ಹೇಳಿದ್ದಾರೆ.