ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರದ ವಿರುದ್ಧ ಕೇಳಿ ಬಂದ 40 ಪರ್ಸೆಂಟ್ ಆರೋಪ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಆಡಳಿತ ಮತ್ತು ವಿಪಕ್ಷಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ. ಪರಿಷತ್ ಚುನಾವಣೆ ಹೊತ್ತಲ್ಲೇ ಬೊಮ್ಮಾಯಿ ಸರ್ಕಾರಕ್ಕೆ ಪರ್ಸೆಂಟ್ ಫೈಟ್ ಬಿಸಿ ತುಪ್ಪವಾಗಿದೆ. ಸರ್ಕಾರವನ್ನೇ ವಜಾ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿದೆ. ಇದರ ಬೆನ್ನಲ್ಲೇ ಪರ್ಸೇಂಟೇಜ್ ತನಿಖೆಗೆ ಆದೇಶ ಹೊರಬಿದ್ದಿದೆ.
ರಾಜ್ಯ ರಾಜಕರಣಲ್ಲಿ ಪರ್ಸೆಂಟೇಜ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬೊಮ್ಮಾಯಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಗುತ್ತಿಗೆದಾರ ಸಂಘ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಟೆಂಡರ್ನಲ್ಲಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಅಂತಾ ದೂರಿದ್ದಾರೆ. ಗುತ್ತಿಗೆದಾರರ ಆರೋಪ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.
ಯಾವಾಗ ಗುತ್ತಿಗೆದಾರರ ಸಂಘ ಸರ್ಕಾರದ ಮೇಲೆ ಆರೋಪ ಮಾಡಿತ್ತೋ ಅಂದೇ ಇದನ್ನು ವಿಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡವು. ರಾಜ್ಯಪಾಲರನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರ ನಿಯೋಗ ಸರ್ಕಾರವನ್ನು ವಜಾ ಮಾಡುವಂತೆ ದೂರು ನೀಡಿದೆ. ಅಲ್ಲದೆ ಸುಪ್ರೀಂ ಕೋರ್ಟ್ ಜಡ್ಜ್ ಸಮ್ಮುಖದಲ್ಲಿ ತನಿಖೆಗೆ ಆಗ್ರಹಿಸಿದೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿಗೆ ನೀಡಿದ ದೂರಿನಲ್ಲಿ ಏನಿದೆ?
- ಅನುಮೋದನೆಗೂ ಮೊದಲು ಸಚಿವರಿಂದ ಲಂಚಕ್ಕೆ ಒತ್ತಾಯ
- ಟೆಂಡರ್ ಮೊತ್ತದ ಶೇ 5ರಷ್ಟು ಲಂಚಕ್ಕೆ ಸಚಿವರಿಂದ ಬೇಡಿಕೆ
- ಶೇ 2ರಷ್ಟು ತಮಗೆ ನೀಡುವಂತೆ ಕೆಲ ಸಂಸದರ ಕಿರುಕುಳ
- ಸ್ಥಳೀಯ ಜನಪ್ರತಿನಿಧಿಗಳಿಗೆ ಮುಂಗಡು ಲಂಚಕ್ಕೆ ಬೇಡಿಕೆ
- ಕಟ್ಟಡ ಕಾಮಗಾರಿಯಲ್ಲಿ ಶೇಕಡಾ 5ರಷ್ಟು ಲಂಚಕ್ಕೆ ಒತ್ತಡ
- ರಸ್ತೆ ಕಾಮಗಾರಿಗಳಲ್ಲಿ ಶೇ ಶೇಕಡಾ 10ರಷ್ಟು ಲಂಚಕ್ಕೆ ಒತ್ತಡ
- ವಿವಿಧ ಇಲಾಖೆಗಳ ಬಿಲ್ ಪಾವತಿ ಹಂತದಲ್ಲಿಯೂ ಅಕ್ರಮ
- ಹಣ ಬಿಡುಗಡೆ ಹಂತದಲ್ಲಿ 6% ರಿಂದ 8% ಲಂಚಕ್ಕೆ ಬೇಡಿಕೆ
- ಕೇಳಿದಷ್ಟು ಲಂಚ ಕೊಟ್ಟವರಿಗೆ ಮಾತ್ರ ಬಿಲ್ ಪಾವತಿ ವ್ಯವಸ್ಥೆ
ಪರ್ಸೆಂಟೇಜ್ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ
ಪರ್ಸೆಂಟೇಜ್ ಬಾಂಬ್ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದಂತೆ ಸರ್ಕಾರ ಎಚ್ಚತ್ತುಕೊಂಡಿದೆ. ಪರ್ಸೆಂಟೇಜ್ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಸಿಎಂ ಸೂಚನೆಯಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ತನಿಖೆಗೆ ಆದೇಶಿಸಿದ್ದಾರೆ. ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗೆ ರಾಕೇಶ್ ಸಿಂಗ್ ತನಿಖೆ ಜವಾಬ್ದಾರಿ ನೀಡಿದ್ದಾರೆ. 10 ಕೋಟಿ ರೂಪಾಯಿ ಮೀರಿದ ಎಲ್ಲಾ ಟೆಂಡರ್ಗಳ ತನಿಖೆ ನಡಿಸಿ, ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಪರ್ಸೆಂಟೇಜ್ ವಿಚಾರ ಆಡಳಿತ ಪಕ್ಷ-ವಿಪಕ್ಷಗಳ ನಡುವೆ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಇದು ಪರಿಷತ್ ಚುನಾವಣೆ ಹೊತ್ತಲ್ಲೇ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಮುಂದೆ ಈ ಪರ್ಸೆಂಟೇಜ್ ಫೈಟ್ ಯಾವ ತಿರುವು ಪಡೆಯುತ್ತೋ, ಅಥವಾ ಕೇವಲ ಆರೋಪವಾಗಿಯೇ ಉಳಿಯುತ್ತೋ ಕಾದು ನೋಡಬೇಕಿದೆ.