ಮರಿಲಿನ್ ಫ್ರೆಂಚ್ ಅವರ ಈ ಹೇಳಿಕೆಯ ಹಿಂದಿರುವ ಆಕ್ರೋಶವನ್ನು ಅರ್ಥಮಾಡಿಕೊಳ್ಳಲು ಭಾರತದ ರಾಜಕೀಯ ನಾಯಕರ ವರ್ತನೆ, ಧೋರಣೆ ಮತ್ತು ಹೇಳಿಕೆಗಳನ್ನು ಗಮನಿಸಿದರೂ ಸಾಕು. ಮಹಿಳೆಯರು ಅತ್ಯಾಚಾರಕ್ಕೀಡಾಗುವ, ಚಿತ್ರಹಿಂಸೆಗೀಡಾಗುವ ಸುದ್ದಿ ಇಲ್ಲದ ಪತ್ರಿಕೆಯನ್ನು ಒಂದು ದಿನವೂ ನೋಡಲು ಸಾಧ್ಯವಿಲ್ಲದಂತಹ ಸಂದರ್ಭದಲ್ಲಿ ನಾವಿದ್ದೇವೆ. ಕಟ್ಟುನಿಟ್ಟಾದ ಕಾನೂನುಗಳು, ಕರಾಳ ಶಾಸನಗಳು, ದಂಡನೆಯ ಭೀತಿ ಇದಾವುದೂ ಮಹಿಳೆಗೆ ರಕ್ಷಣೆ ನೀಡುತ್ತಿಲ್ಲ ಏಕೆಂದರೆ ಈ ಕಾನೂನುಗಳನ್ನು ರೂಪಿಸುವವರಲ್ಲಿ, ಪಾಲಿಸುವವರಲ್ಲಿ ಮತ್ತು ಅನುಕರಿಸುವವರಲ್ಲಿ ಪುರುಷಾಧಿಪತ್ಯದ ಧೋರಣೆ ಸದಾ ಜಾಗೃತಾವಸ್ಥೆಯಲ್ಲೇ ಇರುತ್ತದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಆಡಿದ ಮಾತುಗಳು ಈ ಜಾಗೃತಾವಸ್ಥೆಯ ಅಭಿವ್ಯಕ್ತಿಯೇ ಆಗಿದೆ. ನಮ್ಮ ನಡುವಿನ ಜನಪ್ರತಿನಿಧಿಗಳ, ರಾಜಕೀಯ ನಾಯಕರ ಹೇಳಿಕೆಗಳನ್ನು ಗಮನಿಸಿದರೂ ಇದು ಸ್ಪಷ್ಟವಾಗುತ್ತದೆ.
2012ರ ನಿರ್ಭಯ ಪ್ರಕರಣದ ನಂತರ ದೇಶಾದ್ಯಂತ ಪ್ರತಿಭಟನೆಗಳು ಕಾವು ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುತ್ರ ಅಭಿಜಿತ್ ಮುಖರ್ಜಿ ಪ್ರತಿಭಟನೆಯಲ್ಲಿದ್ದ ಮಹಿಳೆಯರನ್ನು ಕುರಿತು “ಪ್ರತಿಭಟನೆಯಲ್ಲಿರುವ ಬಣ್ಣ ಬಳಿದುಕೊಂಡಿರುವ ಈ ಸುಂದರ ಮಹಿಳೆಯರು ವಿದ್ಯಾರ್ಥಿನಿಯರಲ್ಲ, ಈ ವಯಸ್ಸಿನ ಮಹಿಳೆಯರು ವಿದ್ಯಾರ್ಥಿನಿಯರಾಗಿರಲು ಸಾಧ್ಯವಿಲ್ಲ ” ಎಂದು ಹೇಳಿದ್ದರು. 2014ರಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಮೂವರಿಗೆ ಗಲ್ಲು ಶಿಕ್ಷೆಯಾಗಿದ್ದನ್ನು ವಿರೋಧಿಸಿದ ಮುಲಾಯಂಸಿಂಗ್ ಯಾದವ್ “ ಹುಡುಗರು ಹುಡುಗರೇ, ತಪ್ಪು ಮಾಡುತ್ತಲೇ ಇರುತ್ತಾರೆ, ನಾಲ್ಕು ಜನ ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಲು ಸಾಧ್ಯವೇ ಇಲ್ಲ ” ಎಂದು ಹೇಳುತ್ತಾರೆ. 2015ರಲ್ಲಿ ಕರ್ನಾಟಕದ ಗೃಹ ಸಚಿವರಾಗಿದ್ದ ಕೆ ಜೆ ಜಾರ್ಜ್, 22 ವರ್ಷದ ಯುವತಿಯ ಪ್ರಕರಣದ ಸಂದರ್ಭದಲ್ಲಿ “ ಇಬ್ಬರು ಅತ್ಯಾಚಾರ ಎಸಗಿದರೆ ಅದು ಸಾಮೂಹಿಕ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ” ಎಂದು ಹೇಳುತ್ತಾರೆ.
2013ರಲ್ಲಿ ಅತ್ಯಾಚಾರದ ವಿರುದ್ಧ ದೇಶಾದ್ಯಂತ ಆಕ್ರೋಶದ ಕಿಡಿ ಹರಡುತ್ತಿದ್ದ ಸಂದರ್ಭದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ “ ಮಹಿಳೆಯರ ಮೇಲಿನ ಅತ್ಯಾಚಾರಗಳು ನಗರಗಳ ವಿದ್ಯಮಾನ ಇದು ಪಾಶ್ಚಿಮಾತ್ಯ ಪ್ರಭಾವದ ಫಲ, ಸಾಂಪ್ರದಾಯಿಕ ಮೌಲ್ಯಗಳನ್ನು ಉಳಿಸಿಕೊಂಡಿರುವ ಭಾರತದಲ್ಲಿ, ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವುದಿಲ್ಲ ” ಎಂದು ಹೇಳಿದ್ದರು. 2014ರಲ್ಲಿ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಅಬು ಅಜ್ಮಿ “ ಅತ್ಯಾಚಾರ ಪ್ರಕರಣದಲ್ಲಿ ಮಹಿಳೆಯೂ ಶಿಕ್ಷೆಗೊಳಗಾಗಬೇಕು. ಭಾರತದಲ್ಲಿ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸಲಾಗುತ್ತದೆ ಆದರೆ ವಿವಾಹೇತರ ಲೈಂಗಿಕ ಸಂಬಂಧಗಳಲ್ಲಿ ಮಹಿಳೆಯರಿಗೆ ಮರಣದಂಡನೆ ವಿಧಿಸುವುದಿಲ್ಲ ” ಎಂದು ಹೇಳಿದ್ದರು. 2013ರಲ್ಲಿ ಕೊಲ್ಕತ್ತಾದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳ ಬಗ್ಗೆ ಪ್ರತಿಕ್ರಯಿಸುತ್ತಾ ಮಮತಾ ಬ್ಯಾನರ್ಜಿ “ ಮೊದಲೆಲ್ಲಾ ಹುಡುಗ ಹುಡುಗಿ ಕೈಕೈ ಹಿಡಿದು ಹೋಗುತ್ತಿದ್ದರೆ ಪೋಷಕರು ನಿರ್ಬಂಧಿಸುತ್ತಿದ್ದರು, ಈಗ ಎಲ್ಲವೂ ಮುಕ್ತವಾಗಿದೆ. ಇದು ಮುಕ್ತ ಮಾರುಕಟ್ಟೆಯಂತಾಗಿದೆ ಮುಕ್ತ ಅವಕಾಶಗಳೂ ಇರುತ್ತವೆ ” ಎಂದು ಹೇಳಿದ್ದರು.
ನಿರ್ಭಯ ಪ್ರಕರಣದ ಸಂದರ್ಭದಲ್ಲಿ ಆಂಧ್ರಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಬೋತ್ಸಾ ಸತ್ಯನಾರಾಯಣ “ ಭಾರತಕ್ಕೆ ಅರ್ಧರಾತ್ರಿಯಲ್ಲಿ ಸ್ವಾತಂತ್ರ್ಯ ಲಭಿಸಿದೆ ಎಂದ ಮಾತ್ರಕ್ಕೆ ಮಹಿಳೆಯರು ಕತ್ತಲಲ್ಲಿ ಓಡಾಡಬಾರದು. ಕೆಲವೇ ಪ್ರಯಾಣಿಕರಿರುವ ಬಸ್ಸುಗಳಲ್ಲಿ ಮಹಿಳೆ ಪ್ರಯಾಣ ಮಾಡಬಾರದು ” ಎಂದು ಹೇಳುವ ಮೂಲಕ ತಮ್ಮ ಕರಾಳ ಮನಸ್ಸನ್ನು ಹೊರಗೆಡಹಿದ್ದರು. ನಿರ್ಭಯ ಪ್ರಕರಣದ ಸಂದರ್ಭದಲ್ಲೇ ಹರಿಯಾಣದ ಖಾಪ್ ಪಂಚಾಯತ್ ಒಂದರಲ್ಲಿ ಮಹಿಳೆಯರ ವಿವಾಹಕ್ಕೆ 16 ವರ್ಷಗಳ ಮಿತಿ ನಿಗದಿಪಡಿಸಲು ನಿರ್ಣಯ ನೀಡಲಾಗಿತ್ತು ಇದರಿಂದ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಓಮ್ ಪ್ರಕಾಶ್ ಚೌತಾಲಾ ಸಮರ್ಥಿಸಿಕೊಂಡಿದ್ದರು. ತೃಣಮೂಲ ಕಾಂಗ್ರೆಸ್ ನಾಯಕ ತಾಪಸ್ ಪಾಲ್ ತಮ್ಮ ವಿರೋಧಿಗಳಿಗೆ ಬೆದರಿಕೆ ಹಾಕುತ್ತಾ “ ವಿರೋಧ ಪಕ್ಷದವರ ಮಡದಿಯರು, ಸೋದರಿಯರು ಇಲ್ಲಿದ್ದರೆ ಕೇಳಿಸಿಕೊಳ್ಳಿ, ನಾನು ನಮ್ಮ ಹುಡುಗರನ್ನು ಕಳಿಸುತ್ತೇನೆ ಅವರು ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಾರೆ ” ಎಂದು ಹೇಳಿದ ವಿಡಿಯೋ ಸಾಕಷ್ಟು ಸುದ್ದಿ ಮಾಡಿತ್ತು. 2014ರಲ್ಲಿ ಬದೌನ್ ಅತ್ಯಾಚಾರ ಪ್ರಕರಣಗಳ ಸಂದರ್ಭದಲ್ಲಿ ಉತ್ತರ ಪ್ರದೇಶದ ಗೃಹ ಸಚಿವ ಬಾಬುಲಾಲ್ ಗೌರ್ “ ಅತ್ಯಾಚಾರ ಒಂದು ಸಾಮಾಜಿಕ ಅಪರಾಧ ಇದಕ್ಕೆ ಪುರುಷರೂ ಕಾರಣ ಮಹಿಳೆಯರೂ ಕಾರಣ, ಕೆಲವೊಮ್ಮೆ ಇದು ಸರಿ ಎನಿಸುತ್ತದೆ ಕೆಲವೊಮ್ಮೆ ತಪ್ಪು ಎನಿಸುತ್ತದೆ ” ಎಂದು ಹೇಳಿದ್ದರು.

2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ಮುನ್ನ ಎಂಎನ್ಎಸ್ ಅಭ್ಯರ್ಥಿ ಸುಧಾಕರ್ ಖಡೆ ಅತ್ಯಾಚಾರ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ಆತನಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿದ ಎನ್ಸಿಪಿ ನಾಯಕ ಆರ್ ಆರ್ ಪಾಟೀಲ್ “ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕನಾಗುವ ಬಯಕೆ ಹೊಂದಿದ್ದಲ್ಲಿ ಚುನಾವಣೆಯ ನಂತರ ಈ ಅಪರಾಧ ಎಸಗಬಹುದಿತ್ತು ” ಎಂದು ಹೇಳಿದ್ದರು. ಇದೇ ಪರಂಪರೆಯನ್ನು ಪ್ರತಿನಿಧಿಸುವ ಹರಿಯಾಣದ ಕಾಂಗ್ರೆಸ್ ನಾಯಕ ಧರ್ಮವೀರ್ ಗೋಯತ್ “ ಬಹುತೇಕ ಅತ್ಯಾಚಾರ ಪ್ರಕರಣಗಳು ಪರಸ್ಪರ ಒಪ್ಪಿಗೆಯಿಂದಲೇ ಸಂಭವಿಸಿರುತ್ತವೆ, ಶೇ 90ರಷ್ಟು ಸಂತ್ರಸ್ತೆಯರು ಪತಿಯನ್ನು ತೊರೆದು ಓಡಿಹೋದವರೇ ಆಗಿರುತ್ತಾರೆ ” ಎಂದು ಹೇಳಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದರು. ಹೀಗೆ ಮಹಿಳೆಯರು ಧರಿಸುವ ಉಡುಪು, ಆಕೆಯ ಕೇಶಾಲಂಕಾರ, ಸೌಂದರ್ಯವೃದ್ಧಿಯ ಸಾಧನಗಳು ಇವೆಲ್ಲವನ್ನೂ ಅತ್ಯಾಚಾರದ ಮೂಲ ಕಾರಣಗಳು ಎಂದು ಬಿಂಬಿಸುವ ನೂರಾರು ಹೇಳಿಕೆಗಳನ್ನು ಗುರುತಿಸಬಹುದು.
ಪರಂಪರೆಯ ಕೂಪದೊಳಗಿನ ಮಾಲಿನ್ಯ
ಈ ಎಲ್ಲ ಹೇಳಿಕೆಗಳ ಹಿಂದೆ ಪುರುಷ ಪ್ರಧಾನ ವ್ಯವಸ್ಥೆಯ ಊಳಿಗಮಾನ್ಯ ಧೋರಣೆ ಮತ್ತು ಪುರುಷಾಧಿಪತ್ಯದ ಅಹಮಿಕೆ ಜಾಗೃತವಾಗಿರುತ್ತದೆ. ಭಾರತೀಯ ಸಮಾಜ ಎಷ್ಟೇ ಆಧುನೀಕರಣಕ್ಕೊಳಗಾಗಿದ್ದರೂ, ಎಷ್ಟೇ ನಾಗರಿಕತೆಯನ್ನು ಮೈಗೂಡಿಸಿಕೊಂಡಿದ್ದರೂ, ಶತಮಾನಗಳಿಂದ ಸಮಾಜದ ಗರ್ಭದಲ್ಲೇ ಬೇರೂರಿರುವ ಜಾತಿ ಶ್ರೇಷ್ಠತೆ ಮತ್ತು ಪುರುಷಾಧಿಪತ್ಯದ ಅಹಮಿಕೆ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿದೆ. 1992ರ ಭವಾರಿ ದೇವಿ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯದ ಅಂತಿಮ ತೀರ್ಪಿನಲ್ಲಿ “ ಮೇಲ್ಜಾತಿಯ ಪುರುಷರು ಕೆಳಜಾತಿಯ ಮಹಿಳೆಯ ಮೇಲೆ ಅತ್ಯಾಚಾರ ಎಸಗುವ ಮೂಲಕ ತಮ್ಮನ್ನು ಮಲಿನಗೊಳಿಸುವುದು ಸಾಧ್ಯವಿಲ್ಲ ” ಎಂದು ಹೇಳಿದ್ದುದೇ ಅಲ್ಲದೆ, 60-70 ವರ್ಷದ ಪುರುಷರು, ಗ್ರಾಮದ ಮುಖ್ಯಸ್ಥರು ಅತ್ಯಾಚಾರ ಎಸಗುವುದಿಲ್ಲ ಎಂದು ಹೇಳಲಾಗಿತ್ತು. ಭಾರತದ ಸಂದರ್ಭದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೂ ಇಲ್ಲಿನ ಜಾತಿ ವ್ಯವಸ್ಥೆಯ ತಾರತಮ್ಯಗಳಿಗೂ ನೇರ ಸಂಬಂಧವಿರುವುದನ್ನು ಇಂತಹ ತೀರ್ಪುಗಳು ಸೂಚಿಸುತ್ತವೆ.
ಮಾನ್ಯ ರಮೇಶ್ ಕುಮಾರ್ ಕ್ಷಮೆ ಕೋರಿರುವುದು ಅವರ ಅಸೂಕ್ಷ್ಮ ಹೇಳಿಕೆಗಾಗಿ, ಕಾಗೇರಿ ಕ್ಷಮೆ ಕೋರಲೂ ಮುಂದಾಗದೆ ತಮ್ಮ ನಗುವನ್ನು ಸಮರ್ಥಿಸಿಕೊಂಡಿರುವುದು ಪುರುಷಾಧಿಪತ್ಯದ ಸಂಕೇತ. ಇದು ಒಂದು ಕ್ಷಮೆ, ಒಂದು ದಂಡಸಂಹಿತೆ ಅಥವಾ ಒಂದೆರಡು ಗಲ್ಲು ಶಿಕ್ಷೆಗಳಿಂದ ಹೋಗಲಾಡಿಸಬಹುದಾದ ಕಾಯಿಲೆ ಅಲ್ಲ. ಅಸ್ಪೃಶ್ಯತೆಯಂತೆಯೇ ಪುರುಷಾಧಿಪತ್ಯದ ಕ್ಯಾನ್ಸರ್ ರೋಗ ಭಾರತದ ಸಾಂಪ್ರದಾಯಿಕ ಸಮಾಜದ ಗರ್ಭದಲ್ಲೇ ಬೇರುಬಿಟ್ಟಿದೆ. ಸ್ತ್ರೀ ಸಂವೇದನೆ ಬೆಳೆಸಿಕೊಳ್ಳಲು ಇರಬಹುದಾದ ಮಾರ್ಗಗಳನ್ನು, ಸಾಧ್ಯತೆಗಳನ್ನು ಮಾರುಕಟ್ಟೆ ಆರ್ಥಿಕತೆ ಕೊಲ್ಲುತ್ತಲೇ ಇರುತ್ತದೆ. ಏಕೆಂದರೆ ಬಂಡವಾಳಕ್ಕೂ ಪುರುಷಾಧಿಪತ್ಯಕ್ಕೂ ಅವಿನಾಭಾವ ಸಂಬಂಧ ಇರುತ್ತದೆ. ವ್ಯವಸ್ಥೆಯಲ್ಲಿ ಬೇರುಬಿಟ್ಟಿರುವ ಊಳಿಗಮಾನ್ಯ ಧೋರಣೆ ಇದನ್ನು ಪೋಷಿಸುತ್ತಲೇ ಇರುತ್ತದೆ.
ಸಮಾಜದಲ್ಲಿ ಸ್ತ್ರೀ ಸಂವೇದನೆಯನ್ನು ಬೆಳೆಸುವ ಪ್ರಯತ್ನಗಳು ಪ್ರಾಥಮಿಕ ಹಂತದ ಶಾಲಾ ಶಿಕ್ಷಣದಿಂದಲೇ ಆರಂಭವಾಗಬೇಕಿದೆ. ಮಾನವೀಯ, ನೈತಿಕ ಮೌಲ್ಯಗಳನ್ನಷ್ಟೇ ಅಲ್ಲದೆ, ಸಾಂವಿಧಾನಿಕ ಮೌಲ್ಯಗಳನ್ನೂ ಕಳೆದುಕೊಂಡು ಬೆತ್ತಲಾಗಿರುವ ನಮ್ಮ ಆಳುವವರ್ಗಗಳ ಜನಪ್ರತಿನಿಧಿಗಳಿಂದ ಏನನ್ನೂ ನಿರೀಕ್ಷಿಸಲಾಗುವುದಿಲ್ಲ. ಇದು ಒಂದು ಸಂವೇದನಾಶೀಲ ಸಾಮಾಜಿಕ ಅಭಿಯಾನವಾದಾಗ ಮಾತ್ರ ಭಾರತದ ಮಹಿಳೆಗೆ ನೆಮ್ಮದಿಯ ನಿಟ್ಟುಸಿರು ಸಾಧ್ಯ.