ಪೇಗಾಸಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ, ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ನಾಗರಿಕರ ಖಾಸಗೀತನದ ಹಕ್ಕಿನ ಗಂಭೀರ ಪ್ರಶ್ನೆ ಇದಾಗಿರುವುದರಿಂದ, ಈ ವಿಷಯದಲ್ಲಿ ಸರ್ಕಾರದ ಉದಾಸೀನ ಧೋರಣೆ ಸಹಿಸಲಾಗದು. ಇನ್ನೆರಡು ದಿನದಲ್ಲಿ ಪ್ರಕರಣದ ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ ಎಂದು ತಾಕೀತು ಮಾಡಿದೆ.
ಹಿಂದಿನ ವಿಚಾರಣೆ ವೇಳೆ, ದೇಶದ ನಾಗರಿಕರ ಮೊಬೈಲ್ ಮೇಲೆ ಬೇಹುಗಾರಿಕೆ ಮಾಡಲಾಗಿದೆಯೇ ಅಥವಾ ಇಲ್ಲವೆ ಎಂಬುದರ ಕುರಿತು ವಿವರ ಪ್ರಮಾಣ ಪತ್ರ ಸಲ್ಲಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿ ಗಡುವು ನೀಡಿತ್ತು.
ಆ ಹಿನ್ನೆಲೆಯಲ್ಲಿ ಸೋಮವಾರ ವಿಚಾರಣೆ ವೇಳೆ, ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿ, “ವಿವರವಾದ ಅಫಿಡವಿಟ್ ಸಲ್ಲಿಸಲು ಬಯಸುವುದಿಲ್ಲ. ಭಯೋತ್ಪಾದನೆ ವಿರುದ್ಧ ಹೋರಾಡಲು ಯಾವ ಸಾಫ್ಟ್ವೇರ್ ಅನ್ನು ಬಳಸಲಾಗಿದೆ ಎಂಬುದು ಭಯೋತ್ಪಾದಕ ಸಂಘಟನೆಗಳಿಗೆ ತಿಳಿಯುವುದು ಬೇಡ.
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಕೇಂದ್ರವು ಪೆಗಾಸಸ್ ಸ್ಪೈವೇರ್ ಅನ್ನು ಬಳಸುತ್ತಿದೆಯೇ ಅಥವಾ ಇಲ್ಲವೇ ಎಂಬ ವಿವರಗಳನ್ನು ವಿಷಯ ತಜ್ಞರ ಸಮಿತಿಯಲ್ಲಿ ಚರ್ಚಿಸಬಹುದು. ಆದರೆ ಪ್ರಮಾಣಪತ್ರದಲ್ಲಿ ಅಲ್ಲ ಎಂದು ಸುಪ್ರೀಂಕೋರ್ಟ್ಗೆ ತಿಳಿಸಿದರು.
ಸರ್ಕಾರದ ಈ ಹೇಳಿಕೆಯಿಂದ ಸಿಡಿಮಿಡಿಗೊಂಡ ಸಿಜೆಐ ರಮಣ ನೇತೃತ್ವದ ಪೀಠ, “ಸುಮ್ಮನೇ ಹುತ್ತವ ಬಡಿಯವುದರಿಂದ ಯಾವ ಪ್ರಯೋಜನವೂ ಇಲ್ಲ. ನಾವು ಅಂತಿಮ ಆದೇಶವನ್ನು ಕಾಯ್ದಿರಿಸುತ್ತಿದ್ದೇವೆ. ಆದರೆ, ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಮಧ್ಯಂತರ ಆದೇಶ ನೀಡುತ್ತೇವೆ. ಏಕೆಂದರೆ, ಈ ವಿಷಯದಲ್ಲಿ ದೇಶದ ನಾಗರಿಕರ ಖಾಸಗೀತನದ ಹಕ್ಕಿನ ಪ್ರಶ್ನೆ ಇದೆ. ಹಲವರ ಮೊಬೈಲುಗಳನ್ನು ಅವರಿಗೆ ಅರಿವಿಲ್ಲದಂತೆ ಹ್ಯಾಕ್ ಮಾಡಿ ಬೇಹುಗಾರಿಕೆ ಮಾಡಲಾಗಿದೆ ಎಂಬ ಗಂಭೀರ ದೂರುಗಳು ನಮ್ಮ ಮುಂದಿವೆ. ಹಾಗಾಗಿ ನಾವು ಈ ವಿಷಯವನ್ನು ಲಘುವಾಗಿ ಪರಿಗಣಿಸಲಾಗದು” ಎಂದು ಪುನರುಚ್ಛರಿಸಿತು.
ಹಾಗೇ, “ರಾಷ್ಟ್ರೀಯ ಹಿತಾಸಕ್ತಿಯ ಸೂಕ್ಷ್ಮತೆಯ ಬಗ್ಗೆ ನಮಗೂ ಅರಿವಿದೆ. ಆದರೆ ಕೆಲವು ಸಾಫ್ಟ್ವೇರ್ಬಳಸಿ, ದೇಶದ ನಾಗರಿಕರ ಮೇಲೆ ಬೇಹುಗಾರಿಕೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಮಾತ್ರ ಕೇಳುತ್ತಿದ್ದೇವೆ. ಹಾಗೊಂದು ವೇಳೆ ಅಂತಹ ತಂತ್ರಜ್ಞಾನ ಬಳಸಲಾಗಿದೆಯೇ? ಹಾಗೆ ಬಳಸಿದ್ದರೆ ಸರ್ಕಾರದ ಯಾವ ಸಂಸ್ಥೆಗೆ ಅಂತಹ ಅಧಿಕಾರ ನೀಡಲಾಗಿದೆ? ಎಂಬುದನ್ನು ಸರ್ಕಾರ ತಿಳಿಸಬೇಕಿದೆ” ಎಂದೂ ಪೀಠ ಹೇಳಿದೆ.
ಮುಂದಿನ ಎರಡು ಮೂರು ದಿನಗಳಲ್ಲಿ, ತಾವು ಮಧ್ಯಂತರ ಆದೇಶ ನೀಡುವ ಮುನ್ನ ಸರ್ಕಾರ, ಈ ವಿಷಯದಲ್ಲಿ ಮನಸು ಬದಲಾಯಿಸಿದಲ್ಲಿ ತಮಗೆ ತಿಳಿಸುವಂತೆ ಹೇಳಿದ ಪೀಠ, ಸಮಿತಿ ರಚನೆಯಂತಹ ಕ್ರಮಗಳು ಈ ವಿಷಯದಲ್ಲಿ ನಿಷ್ಪ್ರಯೋಜಕ ಎಂದು ಪರೋಕ್ಷವಾಗಿ ಹೇಳಿತು.