ಸದ್ಯ ಕರೋನಾ ಸಂಕಷ್ಟ ದೇಶದ ಕನಸುಗಳನ್ನು ಮಾತ್ರವಲ್ಲದೆ, ದೇಶದ ನಾಯಕತ್ವದ ಸುತ್ತ ಪ್ರಚಾರ ತಂತ್ರಜ್ಞರು ವ್ಯವಸ್ಥಿತವಾಗಿ ಹೆಣೆದಿದ್ದ ಹುಸಿ ವರ್ಚಸ್ಸನ್ನೂ ಕರಗಿಸತೊಡಗಿದೆ.
‘ವಿಶ್ವಗುರು’ ಎಂಬ ಪ್ರಧಾನಿ ಮೋದಿಯವರ ಜನಪ್ರಿಯ ಘೋಷಣೆಯಿಂದ ಆರಂಭವಾಗಿ, ‘ಸದೃಢ ಭಾರತ, ಸಮರ್ಥ ಭಾರತ’, ’21ನೆಯ ಶತಮಾನ, ಭಾರತದ ಶತಮಾನ’, ‘ಆತ್ಮನಿರ್ಭರ ಭಾರತ’ ಎಂಬ ಬಿಜೆಪಿಯ ಅತಿರಂಜಿತ ಉಗ್ರ ರಾಷ್ಟ್ರೊಯತೆಯ ಪ್ರಾಪಗಾಂಡಾದ ಭಾಗವಾಗಿ ಕಳೆದ ಒಂದು ದಶಕದಲ್ಲಿ ಪ್ರಚುರಪಡಿಸಿದ್ದ ಬರೀ ಬಾಯುಪಚಾರದ, ಹುಸಿ ಕನಸುಗಳು ಸಾರಾಸಗಟಾಗಿ ಕರಗತೊಡಗಿವೆ.
ದೇಶ, ದೇಶದ ಜನ, ಜನರ ಬದುಕು ಬದಲಾವಣೆ, ಸುಧಾರಣೆ, ಏಳಿಗೆಗಿಂತ, ದೇಶದ ಹೆಸರಲ್ಲಿ ತನ್ನ ಮತಬ್ಯಾಂಕ್ ಕೊಬ್ಬಿಸುವ, ತನ್ನ ನಾಯಕರ ಅತಿರಂಜಿತ ವರ್ಚಸ್ಸು ವೃದ್ಧಿಯ ತಂತ್ರಗಾರಿಕೆಯ ಅಸ್ತ್ರಗಳಾಗಿ ಚಾಲ್ತಿಗೆ ಬಂದಿದ್ದ ಇಂತಹ ಕನಸುಗಳು ಎಷ್ಟು ಹುಸಿ, ಎಷ್ಟು ಟೊಳ್ಳು ಮತ್ತು ಎಂತಹ ಹಸೀ ಸುಳ್ಳಿನ ಕಂತೆಗಳು ಎಂಬುದನ್ನು ಕರೋನಾ ಎರಡನೇ ಅಲೆ ಪದರಪದರವಾಗಿ ಬಯಲಾಗಿಸುತ್ತಿದೆ. ಹಾಗೇ ಅಧಿಕಾರದ ಚುಕ್ಕಾಣಿ ಹಿಡದವರ ನಯವಂಚಕತನವನ್ನೂ ಅಸು ಬೆತ್ತಲುಗೊಳಿಸುತ್ತಿದೆ.
ಸಾವಿರಾರು ಕೋಟಿ ರೂ. ಮೊತ್ತದ ಪಿಎಂ ಕೇರ್ಸ್, ಇಪ್ಪತ್ತು ಲಕ್ಷ ಕೋಟಿಯ ಆತ್ಮನಿರ್ಭರ ಪ್ಯಾಕೇಜ್, ಮತ್ತಿತರ ಬಹುಕೋಟಿ ಯೋಜನೆಗಳು ಎಷ್ಟು ಸುಳ್ಳು ಮತ್ತು ಆತ್ಮವಂಚಕ ಎಂಬುದನ್ನು ಕರೋನಾ ಮೊದಲ ಅಲೆ ತೋರಿಸಿಕೊಟ್ಟಿದ್ದರೆ, ಈ ಎರಡನೇ ಅಲೆ, ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಕೋವಿಡ್ -19 ಲಸಿಕೆ ವಿಷಯದಲ್ಲಿ ಸರ್ಕಾರದ ಆತ್ಮವಂಚಕ ನಡೆಗಳನ್ನು ಒಂದೊಂದಾಗಿ ಬಯಲು ಮಾಡತೊಡಗಿದೆ.
ಕಳೆದ ಬಜೆಟ್ ನಲ್ಲಿ ದೇಶದ ಎಲ್ಲ ಅರ್ಹರಿಗೆ(18 ವರ್ಷ ಮೇಲ್ಪಟ್ಟವರು) ಉಚಿತ ಲಸಿಕೆ ನೀಡುವುದಾಗಿ ಹೇಳಿದ್ದ ಮೋದಿಯವರ ಸರ್ಕಾರ, ಅದಕ್ಕಾಗಿ ಬರೋಬ್ಬರಿ 36 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿರುವುದಾಗಿ ಘೋಷಿಸಿತ್ತು. ಹಾಗಾಗಿ, ದೇಶದ ಜನಸಾಮಾನ್ಯರು ಉಚಿತ ಲಸಿಕೆಯ ನಿರೀಕ್ಷೆಯಲ್ಲಿದ್ದರು ಮತ್ತು ಮೋದಿಯವರ ಮಾತನ್ನು ಮೆಚ್ಷಿ ಉಘೇ ಉಘೇ ಎಂದಿದ್ದರು ಕೂಡ!
ದೇಶದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ‘ಟೀಕಾ ಉತ್ಸವ’ಕ್ಕೆ ಚಾಲನೆ ನೀಡುವಾಗ ಕೂಡ, ದೇಶದ ಎಲ್ಲರ ಪ್ರಾಣ ರಕ್ಷಣೆ ತಮ್ಮ ಹೊಣೆ ಎಂದು ಪ್ರಧಾನಿ ಮೊದಿ ಭರವಸೆಯನ್ನೂ ನೀಡಿದ್ದರು. ಈ ನಡುವೆ ಮೇ 1ರಿಂದ 18ರಿಂದ 45 ವರ್ಷ ವಯೋಮಾನದವರಿಗೆ ಲಸಿಕೆ ನೀಡಲಾಗುವುದು ಎಂದೂ ಮೋದಿ ಸರ್ಕಾರ ಘೋಷಿಸಿತ್ತು.
ಆದರೆ ಇದೀಗ ಸರ್ಕಾರ ದಿಢೀರನೇ ಯೂ ಟರ್ನ್ ಹೊಡೆದಿದ್ದು, 18-45 ವಯೋಮಾನದವರಿಗೆ ಉಚಿತ ಲಸಿಕೆ ನೀಡಲಾಗದು. ಅವರುಗಳು ಆನ್ ಲೈನ್ ಮೂಲಕ ನೋಂದಾಯಿಸಿಕೊಂಡು ಹಣ ತೆತ್ತು ಲಸಿಕೆ ಪಡೆಯಬಹುದು ಎಂದು ಹೇಳಿದೆ. ಮೊದಲನೆಯದಾಗಿ ಈ ವರೆಗೆ ಲಸಿಕೆ ನೀಡಿದಂತೆ ಲಸಿಕಾ ಕೇಂದ್ರಗಳಲ್ಲಿ ನೇರವಾಗಿ ನೀಡಲಾಗುವುದಿಲ್ಲ. ಎಲ್ಲರೂ ಆನ್ ಲೈನ್ ಕೋವಿಡ್ ಆ್ಯಪ್ ಗಳಾದ ಆರೋಗ್ಯಸೇತು ಅಥವಾ ಕೋವಿವಿನ್ ಮೂಲಕ ನೋಂದಾಯಿಸಿಕೊಳ್ಳಬೇಕು ಎಂದಿದ್ದರೆ, ಹಾಗೆ ನೋಂದಾಯಿಸಿಕೊಂಡ ಬಳಿಕ ಆಯಾ ರಾಜ್ಯ ಸರ್ಕಾರಗಳು ನಿಗದಿ ಮಾಡುವ ದರದಂತೆ ಹಣ ತೆತ್ತು ಖಾಸಗೀ ಅಥವಾ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದು ಎಂದು ಸರ್ಕಾರ ತನ್ನ ಸುತ್ತೋಲೆಯಲ್ಲಿ ಹೇಳಿರುವುದಾಗಿ ವರದಿಯಾಗಿದೆ.
ಲಸಿಕೆ ಅಭಿಯಾನಕ್ಕೆ ದೇಶದಲ್ಲಿ ಒಂದು ಕಡೆ ಲಸಿಕೆ ಕೊರತೆ ಕಾಡುತ್ತಿದೆ ಎಂಬ ವರದಿಗಳ ನಡುವೆ, ಲಸಿಕೆಗೆ ದುಡ್ಡು ಕೊಡಬೇಕು ಮತ್ತು ಕಡ್ಡಾಯವಾಗಿ ಆನ್ ಲೈನ್ ನೋಂದಣಿಯಾಗಬೇಕು ಎಂಬ ಹೊಸ ಸೂಚನೆ ಜನಸಾಮಾನ್ಯರನ್ನು ಮತ್ತಷ್ಟು ಕಂಗೆಡಿಸಿದೆ.
ಈ ನಡುವೆ, ದೇಶದ ಜನಸಂಖ್ಯೆಯಲ್ಲಿ ಶೇ.60ಕ್ಕಿಂತ ಹೆಚ್ಚಿರುವ 18-44 ವಯೋಮಾನದ ಮಂದಿ ಸಂಪೂರ್ಣ ದುಡ್ಡು ಕೊಟ್ಟು ಲಸಿಕೆ ಪಡೆಯುವುದೇ ಆದರೆ, ಲಸಿಕೆಗಾಗಿಯೇ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಬರೋಬ್ಬರಿ 36 ಸಾವಿರೋಟಿ ರೂ. ಜನರ ತೆರಿಗೆ ಹಣ ಯಾವ ಘನಕಾರ್ಯಕ್ಕೆ ಬಳಕೆಯಾಹೇಳಿದೆಂ!ಬ ಪ್ರಶ್ನೆಯೂ ಎದ್ದಿದೆ.
ಆ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಹಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖ್ಯಾತ ವೈದ್ಯ ಡಾ ಶ್ರಿನಿವಾಸ ಕಕ್ಕಿಲಾಯ ಅವರೂ, ಈ ಕುರಿತ ನಿಖರ ಅಂಕಿಅಂಶಗಳ ಸಹಿತ ಎತ್ತಿರುವ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವರ ಪ್ರಕಾರ, “ಕೇಂದ್ರ ಬಜೆಟ್ ನಲ್ಲಿ ಲಸಿಕೆಗೆ ಮೀಸಲಿಟ್ಟದ್ದಾಗಿ ಹೇಳಲಾದ ಮೊತ್ತ ರೂ. 35,000 ಕೋಟಿ ರೂಪಾಯಿ. ಕೇಂದ್ರ ಸರ್ಕಾರ ಲಸಿಕೆಯೊಂದಕ್ಕೆ ನೀಡಬೇಕಾದ ದರ 150 ರೂಪಾಯಿ. ಆ 35,000 ಕೋಟಿಯಲ್ಲಿ ಖರೀದಿಸಬಹುದಾದ ಲಸಿಕೆಗಳ ಸಂಖ್ಯೆ 233 ಕೋಟಿ.”
“ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್ ಯೋಜನೆಯಡಿ ಉಚಿತವಾಗಿ ಭಾರತಕ್ಮೆ ಕೊಡಲಾಗುವ ಲಸಿಕೆಗಳು 5 ಕೋಟಿ. ಅಂದರೆ, ಭಾರತೀಯರಿಗೆ ಒಟ್ಟು ಲಭ್ಯವಾಗುವ ಲಸಿಕೆಗಳು 238 ಕೋಟಿ!”
“ಆದರೆ, ಸದ್ಯ ದೇಶದ ಜನಸಂಖ್ಯೆ 137 ಕೋಟಿ. ಆ ಪೈಕಿ ಲಸಿಕೆ ಪಡೆಯಲು ಅರ್ಹರಾಗಿರುವ 18 ವರ್ಷ ಮೇಲ್ಪಟ್ಟವರ ಸಂಖ್ಯೆ 82 ಕೋಟಿ. ಒಬ್ಬರಿಗೆ ಎರಡರಂತೆ ಇವರೆಲ್ಲರಿಗೆ ಬೇಕಾದ ಲಸಿಕೆಗಳ ಸಂಖ್ಯೆ 164 ಕೋಟಿ. ಜೊತೆಗೆ ಬಳಕೆಯ ವೇಳೆ ಪೋಲಾಗಬಹುದಾದ ಲಸಿಕೆಗಳು(10%) 17 ಕೋಟಿ. ಅಂದರೆ, ಲಸಿಕೆ ಪಡೆಯಲು ಅರ್ಹ ಭಾರತೀಯರೆಲ್ಲರಿಗು ಲಸಿಕೆ ನೀಡಲು ಅಗತ್ಯವುಳ್ಳ ಲಸಿಕೆಗಳು 181 ಕೋಟಿ.”
“ಲಸಿಕೆಗೆ ಕೇಂದ್ರ ಬಜೆಟ್ ನಲ್ಲಿ ಘೋಷಿಸಿರುವ ಪೂರ್ಣ ಹಣ ಕೊಟ್ಟರೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯೂ ಅದರ ಭರವಸೆ ಈಡೇರಿಸಿದರೆ, ನಮಗೆ ಅಗತ್ಯವಿರುವ 181 ಕೋಟಿಗೆ ಬದಲಾಗಿ 238 ಕೋಟಿ ಲಸಿಕೆ ದೊರೆಯಲಿವೆ. ಅಂದರೆ ಅಗತ್ಯಕ್ಕಿಂಗ ಹೆಚ್ಚುವರಿಯಾಗಿ 57 ಕೋಟಿ ಲಸಿಕೆ ದೊರೆಯಲಿವೆ.”
ಇದಲ್ಲದೆ, “ಲಸಿಕೆ ತಯಾರಿಕೆಗಾಗಿ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ 3000 ಕೋಟಿ, ಭಾರತ್ ಬಯೋಟೆಕ್ ಗೆ 1500 ಕೋಟಿ ಆರ್ಥಿಕ ನೆರವು ಘೋಷಿಸಲಾಗಿದೆ. ಆ ನೆರವಿಗೆ ಪ್ರತಿಯಾಗಿ ಸರ್ಕಾರಕ್ಕೆ ಸುಮಾರು 30 ಕೋಟಿ ಡೋಸ್ ಲಸಿಕೆ ಸಿಗಬಹುದು. ಆಗ, ನಮಗೆ ಬಳಕೆಯಾಗಿ ಉಳಿಯುವ ಲಸಿಕೆಗಳ ಸಂಖ್ಯೆ 87 ಕೋಟಿಯಷ್ಟಾಗಲಿದೆ.”
ಹಾಗಿರುವಾಗ, ಒಂದು ಕಡೆ, ರಾಜ್ಯ ಸರ್ಕಾರಗಳು ಒಂದು ಡೋಸಿಗೆ 400-600 ರೂಪಾಯಿ ಕೊಟ್ಟು ಖರೀದಿಸುವುದು, ಮತ್ತೊಂದು ಕಡೆ ಜನ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಡೋಸಿಗೆ 600-1200 ರೂಪಾಯಿ ಕೊಟ್ಟು ನಮ್ಮ ಲಸಿಕೆ ಪಡೆಯುವುದು ಯಾಕೆ? ಎಂಬುದು ಡಾ ಕಕ್ಕಿಲಾಯ ಪ್ರಶ್ನೆ.
ಈ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ಸಿಗುತ್ತಿಲ್ಲ. ಈ ನಡುವೆ ಕೇಂದ್ರ ಸರ್ಕಾರ, 18-44 ವಯೋಮಾನದವರಿಗೆ ಉಚಿತ ಲಸಿಕೆ ಇಲ್ಲ ಎಂದು ಹೇಳಿದೆ! ಆ ಮೂಲಕ ಆತ್ಮನಿರ್ಭರದ ನಿಜ ಅರ್ಥವನ್ನು ಇದೀಗ ಮೋದಿಯವರು ದೇಶದ ಜನತೆಯ ಮುಂದಿಟ್ಟಿದ್ದಾರೆ!! ಒಂದು ಕಡೆ ಕಳ್ಳದಾರಿಯ ಲಾಕ್ ಡೌನ್ ತಂದ ಸಂಕಷ್ಟದ ಹೊತ್ತಲ್ಲಿ, ಅಚ್ಛೇದಿನದ ಈ ಪರಿಯ ಬರೆಗಳಿಗೆ ಜನ ಬೆಚ್ಚಿಬಿದ್ದರೆ, ಮತ್ತೊಂದು ಕಡೆ ಕಳಚಿಬೀಳುತ್ತಿರುವ ದೇಶ ನಾಯಕರ ಹುಸಿ ವರ್ಚಸ್ಸಿನ ಪದರಗಳ ಕಂಡು ಕಂಗಾಲಾಗಿದ್ದಾರೆ.
ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
----ನಾ ದಿವಾಕರ---- ಡಿಜಿಟಲ್ ಯುಗದಲ್ಲೂ ಅಮಾನವೀಯ ಸಾಂಪ್ರದಾಯಿಕತೆ ಜೀವಂತವಾಗಿರುವುದು ದುರಂತ 2047ರ ವೇಳೆಗೆ ಪೂರ್ಣ ವಿಕಾಸದ ಕನಸು ಕಾಣುತ್ತಿರುವ ಡಿಜಿಟಲ್ ಭಾರತ ತಾನು ಪರಿಭಾವಿಸಿಕೊಂಡಿರುವ ʼಪ್ರಗತಿ-ಆಧುನಿಕತೆ-ನಾಗರಿಕತೆʼಯ ಪರಿಕಲ್ಪನೆಗಳನ್ನು...
Read moreDetails