ಚೈತ್ರಾ ಕುಂದಾಪುರ ಸೇರಿ 6 ಮಂದಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೆಪ್ಟೆಂಬರ್ 23ರ ತನಕ ಕಸ್ಟಡಿಗೂ ಪಡೆದುಕೊಂಡಿದ್ದಾರೆ. ಹಿಂದುತ್ವದ ಫೈರ್ ಬ್ರಾಂಡ್ ಆಗಿದ್ದ ಚೈತ್ರಾ ಕುಂದಾಪುರ ಅರೆಸ್ಟ್ ಆಗುವ ಮುನ್ನ ಮುಸ್ಲಿಂ ಗೆಳತಿ ಅಜುಂ ಅವರ ಅಪಾರ್ಟ್ಮೆಂಟ್ನಲ್ಲಿ ಅಡಗಿ ಕುಳಿತಿದ್ರು ಅನ್ನೋದು ಬಯಲಾಗಿದೆ. ಅಷ್ಟೇ ಅಲ್ಲ ಬೆಂಗಳೂರಿನಿಂದ ಸಿಸಿಬಿ ಪೊಲೀಸ್ರು ಬಂಧನ ಮಾಡೋದಿಕ್ಕೆ ಬರ್ತಿದ್ದಾರೆ ಅನ್ನೋ ಮಾಹಿತಿ ತಿಳಿದು ಸ್ನೇಹಿತೆಯ ಗಂಡ, ಮನೆಯಿಂದ ಹೊರಟು ಬೇರೆ ಕಡೆಗೆ ಹೋಗಿ ಎಂದು ಕಳುಹಿಸಿದ್ರು. ಹೀಗಾಗಿ ಕೃಷ್ಣಮಠದ ಬಳಿಕ ಎಸ್ಕೇಪ್ ಆಗುವಾಗ ಅರೆಸ್ಟ್ ಮಾಡಲಾಗಿದೆ.
ಸಾಮರಸ್ಯ ಜೀವನದ ಬಗ್ಗೆ ಅಪಸ್ವರ ಎಷ್ಟು ಸರಿ..?
ಹಿಂದೂ ಮುಸ್ಲಿಂ ಭಾಯ್ ಭಾಯ್ ಅಂತಾ ಜೀವನ ಮಾಡ್ಬೇಕು ಅನ್ನೋದು ಸತ್ಯ. ಚೈತ್ರಾ ಕುಂದಾಪುರ ಕೂಡ ಮುಸಲ್ಮಾನ ಸಮುದಾಯದ ಗೆಳತಿ ಮನೆಯಲ್ಲಿ ವಾಸವಾಗಿದ್ದರು ಎನ್ನುವುದನ್ನು ದೊಡ್ಡ ಸುದ್ದಿ ಮಾಡಬಾರದು ಅನ್ನೋದು ಸತ್ಯ. ಆದರೆ ಇದೇ ಚೈತ್ರಾ ಕುಂದಾಪುರ ಹೊರಗಡೆ ಸಭೆ ಸಮಾರಂಭಗಳಲ್ಲಿ ಬಾಯಿ ಬಿಟ್ಟರೆ ಮುಸ್ಲಿಮರ ವಿರುದ್ಧ ಪುಂಕಾನು ಪುಂಖವಾಗಿ ಭಾಷಣ ಮಾಡುತ್ತಾರೆ. ಹಿಂದುತ್ವದ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುವ ಜೊತೆಗೆ ಮುಸ್ಲಿಂ ಸಮುದಾಯವನ್ನು ಹೀನಾಯವಾಗಿ ಮಾತನಾಡ್ತಾರೆ. ಹಿಜಾಬ್, ಬುರ್ಕಾ ಬಗ್ಗೆಯೂ ಹೀಗಳೆಯುತ್ತಾರೆ. ಆದರೆ ಜೀವನ ಮಾತ್ರ ಮುಸ್ಲಿಂ ಮನೆಯಲ್ಲಿ ಅನ್ನೋದು ವಿಶೇಷ.
ಚೈತ್ರಾ ಮಾತ್ರವಲ್ಲ ಚಕ್ರವರ್ತಿ ಮನೆಯಲ್ಲೂ ಮುಸ್ಲಿಂ ಸ್ನೇಹಿತ..
ಚೈತ್ರಾ ಕುಂದಾಪುರದ ಕಥೆ ಇಷ್ಟಾದ್ರೆ ಮತ್ತೋರ್ವ ಹಿಂದುತ್ವದ ಫೈರ್ ಬ್ರಾಂಡ್ ಆಗಿರುವ ಚಕ್ರವರ್ತಿ ಸೂಲಿಬೆಲೆ ಮನೆಯ ಕಥೆಯೂ ಇದೇ ರೀತಿ ಇದೆ. ಮೋದಿ ಬ್ರಿಗೇಡ್ ಸ್ಥಾಪನೆ ಮಾಡಿಕೊಂಡು ರಾಜ್ಯಾದ್ಯಂತ ಪ್ರಚಾರ ಮಾಡಿಕೊಂಡು, ಸಂಘಟನೆ ಮಾಡಿಕೊಂಡು ಓಡಾಡುವ ಚಕ್ರವರ್ತಿ ಅವರ ತಂದೆ ತಾಯಿಗೆ ಆಸರೆ ಆಗಿರುವುದು ಮುಸ್ಲಿಂ ಸಮುದಾಯದ ಯುವಕ ಸರ್ದಾರ್. ಇತ್ತೀಚಿಗೆ ಒಬ್ಬ ಯೂಟ್ಯೂಬ್ ಚಾನೆಲ್ನವರು ಚಕ್ರವರ್ತಿ ಅವರ ತಂದೆ ತಾಯಿ ಅವರನ್ನು ಮಾತನಾಡಿಸಿದ್ದು, ನಮ್ಮ ಕಷ್ಟ ಸುಖಕ್ಕೆ ಆಗುವ ವ್ಯಕ್ತಿ, ಮಗನಿಗಿಂತಲೂ ಹೆಚ್ಚಾಗಿ ನಮ್ಮನ್ನು ನೋಡಿಕೊಳ್ತಿದ್ದಾರೆ. ನಮ್ಮ ಮಗ ಚಕ್ರವರ್ತಿ ಇಲ್ಲ ಎನ್ನುವ ನೋವನ್ನೇ ಮರೆಸಿದ್ದಾನೆ ಎಂದಿದ್ದಾರೆ.
ರಾಜಕೀಯ ತೆವಲಿಗೆ ಜನ್ನರನ್ನು ಎತ್ತಿಕಟ್ಟುವುದು ಅಷ್ಟೆ ಕಾಯಕ..
ಹಿಂದೂ – ಮುಸ್ಲಿಂ ಎಂದು ಎತ್ತಿ ಭಾಷಣ ಮಾಡುವ ಚೈತ್ರಾ ಕುಂದಾಪುರ, ಚಕ್ರವರ್ತಿ ಸೂಲಿಬೆಲೆ ರಾಜಕಾರಣಕ್ಕಾಗಿ ಮಾತನಾಡುತ್ತಾರೆ ಎನ್ನುವುದು ಸತ್ಯಸಂಗತಿ. ತಮ್ಮ ಮನೆಯಲ್ಲಿ ಅಥವಾ ತಮ್ಮ ಆಪ್ತ ವಲಯದಲ್ಲಿ ಹಿಂದೂ ಮುಸ್ಲಿಂ ಎನ್ನುವ ದ್ವೇಷವನ್ನು ತುಂಬಿಕೊಂಡಿಲ್ಲ. ಮುಸ್ಲಿಂ ಸಮುದಾಯದ ಜನರ ಜೊತೆಗೆ ಸಾಂಗತ್ಯವಿದೆ. ಸ್ನೇಹಿತರಿದ್ದಾರೆ. ಆದರೆ ಹೊರಗಡೆ ಮಾತ್ರ ಒಂದು ಪಕ್ಷವನ್ನು ಬೆಂಬಲಿಸುವ ಉದ್ದೇಶದಿಂದ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆ ಹುಟ್ಟು ಹಾಕುತ್ತಿದ್ದಾರೆ ಎನ್ನುವುದು ಮಾತ್ರ ಸತ್ಯ. ಇವರ ಮಾತುಗಳನ್ನು ನಂಬಿಕೊಂಡು ಜನಸಾಮಾನ್ಯರು ರಕ್ತಪಾತಕ್ಕೆ ಕಾರಣರಾಗ್ತಿದ್ದಾರೆ. ಇವರ ಮನೆಗಳು ಮಾತ್ರ ನೆಮ್ಮದಿ ಆಗಿವೆ. ಇನ್ನಾದ್ರು ಜನರು ಅರ್ಥ ಮಾಡಿಕೊಳ್ಳಬೇಕಿದೆ. ಜನರನ್ನು ಧರ್ಮಾಂಧರನ್ನಾಗಿ ಮಾಡಲು ಯತ್ನಿಸುವ ಇವರನ್ನು ಸಮಾಜ ದೂರ ಇಟ್ಟರೆ ಉತ್ತಮ ಎನ್ನಬಹುದು.
ಕೃಷ್ಣಮಣಿ