ನವದೆಹಲಿ:ಏ.೦6: ಕೇಂದ್ರದ ಬಿಜೆಪಿ ಸರ್ಕಾರದಿಂದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ದೆಹಲಿಯ ಸಂಸತ್ ಭವನದಿಂದ ವಿಜಯ್ ಚೌಕ್ವರೆಗೆ ‘ತಿರಂಗಾ ಮೆರವಣಿಗೆ’ ನಡೆಸಿದವು. ರಾಷ್ಟ್ರಧ್ವಜವನ್ನು ಹಿಡಿದುಕೊಂಡು, ಸಮಾನ ಮನಸ್ಕ ವಿರೋಧ ಪಕ್ಷಗಳಾದ ಡಿಎಂಕೆ, ಸಮಾಜವಾದಿ ಪಕ್ಷ, ಆರ್ಜೆಡಿ, ಶಿವಸೇನೆ (ಯುಬಿಟಿ), ಆಪ್, ಎನ್ಸಿಪಿ ಮತ್ತು ಎಡಪಕ್ಷಗಳೊಂದಿಗೆ ಸೇರಿ ಕಾಂಗ್ರೆಸ್ ‘ತಿರಂಗಾ ಮೆರವಣಿಗೆ’ ನಡೆಸಿತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಸತ್ತಿನ ಗೇಟ್ ಸಂಖ್ಯೆ 1ರಲ್ಲಿ ಜಮಾಯಿಸಿದ ವಿಪಕ್ಷ ನಾಯಕರು, ರಾಷ್ಟ್ರಧ್ವಜವನ್ನು ಹಿಡಿದು ಮೆರವಣಿಗೆ ಆರಂಭಿಸಿದರು. ಈ ಮೆರವಣಿಗೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಭಾಗವಹಿಸಿದ್ದರು. ಸಂಸತ್ತಿನ ಬಜೆಟ್ ಅಧಿವೇಶನದ ಮುಕ್ತಾಯಗೊಂಡ ಹಿನ್ನೆಯಲ್ಲಿ, ಲೋಕಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸ್ಪೀಕರ್ ಓಂ ಬಿರ್ಲಾ , ಸಾಂಪ್ರದಾಯಿಕ ಚಹಾಕೂಟವನ್ನು ಆಯೋಜಿಸಿದ್ದರು. ಆದರೆ ಈ ಚಹಾಕೂಟದ ಆಹ್ವಾನವನ್ನು ತಿರಸ್ಕರಿಸಿದ ವಿಪಕ್ಷಗಳು, ‘ತಿರಂಗಾ ಮೆರವಣಿಗೆ’ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದವು.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಸಮನ್ವಯತೆಯನ್ನು ಪ್ರದರ್ಶಿಸಿವೆ. ಮಾರ್ಚ್ 13ರಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಗ್ಗಟ್ಟಿನಿಂದ ಧರಣಿಯನ್ನು ನಡೆಸಿವೆ. ಅದಾನಿ ವಿವಾದದ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚನೆಗೆ ಒತ್ತಾಯಿಸುತ್ತಿರುವ ವಿಪಕ್ಷಗಳು, ಲೋಕಸಭೆ ಮತ್ತ ಉರಾಜ್ಯಸಭೆಯ ಕಲಾಪಕ್ಕೆ ಅಡ್ಡಿಪಡಿಸಿವೆ.

ಇದಕ್ಕೆ ವ್ಯತಿರಿಕ್ತವಾಗಿ ಬ್ರಿಟನ್ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ಮಾಡಿರುವ ಭಾಷಣ ದೇಶವಿರೋಧಿ ಎಂದು ಆರೋಪಿಸಿ, ರಾಹುಲ್ ಗಾಂಧಿ ದೇಶದ ಕ್ಷಮೆ ಕೋರಬೇಕು ಎಂದು ಆಡಳಿತಾರೂಢ ಬಿಜೆಪಿ ಪಟ್ಟುಹಿಡಿದಿದೆ. ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ನಿರಂತರ ಗದ್ದಲದಲ್ಲೇ ಸಂಸತ್ತಿನ ಬಜೆಟ್ ಅಧಿವೇಶನ ಮುಕ್ತಾಯ ಕಂಡಿದೆ.
ಪ್ರತಿಭಟನಾ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದರು. ಅದಾನಿ ಹಗರಣವನ್ನು ಜೆಪಿಸಿಗೆ ವಹಿಸದ ಮೋದಿ ಸರ್ಕಾರ, ಈ ಕುರಿತು ಪ್ರಶ್ನೆ ಕೇಳಿದ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಿದೆ ಎಂದು ಖರ್ಗೆ ಕಿಡಿಕಾರಿದರು.

ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯದಲ್ಲಿದೆ. ವಿಪಕ್ಷ ನಾಯಕರನ್ನು ]ಹಣಿಯಲು ಮೋದಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿಪಕ್ಷ ನಾಯಕರಿಗೆ ಕಿರುಕುಳ ಕೊಡಲೇಂದೇ ಇಡಿ, ಸಿಬಿಐಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರಜಾಪ್ರಭುತ್ವದ ಬಗ್ಗೆ ಹೆಚ್ಚು ಮಾತನಾಡುತ್ತದೆ. ಆದರೆ ಸರ್ಕಾರದ ಕಾರ್ಯಬೈಖರಿಯಲ್ಲಿ ಪ್ರಜಾಪ್ರಭುತ್ವ ಪ್ರತಿಫಲಿಸುವುದಿಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ದೊಡ್ಡ ಭಾಷಣಗಳನ್ನು ಮಾಡಿದರೆ ಸಾಲದು, ಅದನ್ನು ಪಾಲಿಸುವ ಮನಸ್ಸು ಇರಬೇಕು ಎಂದು ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.