ರಾಜ್ಯದಲ್ಲಿ ಆಪರೇಷನ್ ಹಸ್ತ ಅಧಿಕೃತವಾಗಿ ಶುರುವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಪರೇಷನ್ ಶುರುವಾಗಿದ್ದು, ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಹಾಗು ನಾಯಕರನ್ನು ಕಾಂಗ್ರೆಸ್ ಪಕ್ಷ ಸೆಳೆಯುತ್ತಿದೆ. ಕಾಂಗ್ರೆಸ್ ಮಾಡುತ್ತಿರುವ ಆಪರೇಷನ್ ಬಿಜೆಪಿ ಶಾಸಕರಿಗೆ ತಲೆ ನೋವಾಗಿದೆ. ಆಪರೇಷನ್ ಬಿಬಿಎಂಪಿ ಹೆಸರಲ್ಲಿ ಈ ಮೊದಲು ಮಾಜಿ ಶಾಸಕ ಮುನಿರತ್ನ ಬೆಂಬಲಿಗರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಇದೀಗ ಕೆ ಆರ್ ಪುರಂ ಕ್ಷೇತ್ರದಲ್ಲೂ ಸದ್ದಿಲ್ಲದೇ ಶಾಸಕ ಬೈರತಿ ಬಸವರಾಜು ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೇ ವರ್ಷಾಂತ್ಯದಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದ್ದು, ರಾಜ್ಯ ರಾಜಧಾನಿಯ ಪಾಲಿಕೆ ಅಧಿಕಾರ ಹಿಡಿಯಲು ಸಕಲ ರೀರಿಯಲ್ಲೂ ಕಾಂಗ್ರೆಸ್ ಪಣತೊಟ್ಟಿದೆ.

ಹಾಲಿ, ಮಾಜಿ ಕಾಂಗ್ರೆಸ್ ಶಾಸಕರಿಗೆ ಆಪರೇಷನ್ ಹಸ್ತ ಹೊಣೆ..!
ಹಾಲಿ ಕಾಂಗ್ರೆಸ್ ಶಾಸಕರು ಹಾಗು ಸೋಲುಂಡಿರುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಿದ್ದು, ಕಾಂಗ್ರೆಸ್ ನಾಯಕರನ್ನು ಸೆಳೆಯುವ ಕೆಲಸ ಮಾಡಲಾಗ್ತಿದೆ. ಕೆ.ಆರ್ ಪುರ ವಿಧಾನಸಭಾ ಕ್ಷೇತ್ರದ ಇಬ್ಬರು ಮಾಜಿ ಬಿಜೆಪಿ ಕಾರ್ಪೊರೇಟರ್ಗಳು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಕೆ.ಆರ್ ಪುರ ವಾರ್ಡ್ನ ವೀರಣ್ಣ, ವಿಜಿನಾಪುರ ವಾರ್ಡ್ನ ರಾಜಣ್ಣ (ಬಂಡೆ) ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಇನ್ನೂ ರಾಮಮೂರ್ತಿನಗರ ಮಾಜಿ ಬಿಬಿಎಂಪಿ ಸದಸ್ಯೆ ಪತಿ ಶ್ರೀನಿವಾಸ್ ಕೂಡ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಕೆ.ಆರ್ ಪುರ ಪರಾಜಿತ ಅಭ್ಯರ್ಥಿ ಡಿ.ಕೆ ಮೋಹನ್ ನೇತೃತ್ವದಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆದಿದೆ. ಕುಮಾರಕೃಪ ಗೆಸ್ಟ್ ಹೌಸ್ನಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಹಾಜರಿದ್ರು. ಜೊತೆಯಲ್ಲಿ ಸಚಿವ ಬೈರತಿ ಸುರೇಶ್ ಕೂಡ ಭಾಗಿಯಾಗಿದ್ದರು.

ಯಶವಂತಪುರ ಕ್ಷೇತ್ರಕ್ಕೂ ವ್ಯಾಪಿಸಿದ ಆಪರೇಷನ್ ಹಸ್ತ..!
ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ಅನ್ನೋ ಚರ್ಚೆಗಳ ನಡುವೆ ನಾಲ್ವರು ಮಾಜಿ ಕಾರ್ಪೋರೆಟರ್ಗಳು, ಜಿಲ್ಲಾ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ನೂರಾರು ಬೆಂಬಲಿಗರೊಂದಿಗೆ 12 ಮಂದಿ ಎಸ್.ಟಿ ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗಿದ್ದಾರೆ. ಬಿಜೆಪಿ ಪಕ್ಷವನ್ನು ತೊರೆದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಆದ ಬಳಿಕ ಶಾಸಕ ಎಸ್.ಟಿ ಸೋಮಶೇಖರ್ ಕೂಡ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಬೇಕು ಅನ್ನೋ ಆಗ್ರಹ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದೆ.

ಲೋಕಸಭಾ ಚುನಾವಣೆಗೆ ಸದ್ದಿಲ್ಲದೆ ಕಾಂಗ್ರೆಸ್ ಸಿದ್ಧತೆ..!
ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡ ಬಳಿಕ ಮಾತನಾಡಿದ ನೆಲಮಂಗಲ ಶಾಸಕ ಶ್ರೀನಿವಾಸ್, ಯಶವಂತಪುರ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವೇ ಶಾಸಕ ಸ್ಥಾನ ಪಡೆಯಲಿದೆ ಎನ್ನುವ ಸುಳಿವು ನೀಡಿದ್ರು. ನಾನು ನೆಲಮಂಗಲ ಶಾಸಕರ ಆದ್ರು ಯಶವಂತಪುರ ಕ್ಷೇತ್ರದ ನಿವಾಸಿ ಆಗಿದ್ದೇನೆ. ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನ ಡಿಕೆ.ಶಿವಕುಮಾರ್ ನನಗೆ ನೀಡಿದ್ದಾರೆ. ಈಗ ಆರಂಭವಾಗಿದೆ, ಮುಂದೆ ಇದಕ್ಕೆ ಮತ್ತಷ್ಟು ವೇಗ ನೀಡುತ್ತೇವೆ ಎಂದಿದ್ದಾರೆ. ಕಳೆದ ವಾರ ಎಸ್.ಟಿ ಸೋಮಶೇಖರ್ ನಡೆಸಿದ ಸಭೆಯಲ್ಲಿ ಭಾಗಿಯಾಗಿದ್ದ ಶ್ರೀನಿವಾಸ್ ಆಪರೇಷನ್ ಹಸ್ತದಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಕ್ಷೇತ್ರಗಳನ್ನು ಭದ್ರ ಮಾಡಿಕೊಳ್ಳುವ ಕೆಲಸ ಮಾಡುತ್ತಿದೆ ಎನ್ನಲಾಗಿದೆ.
ಕೃಷ್ಣಮಣಿ