ಕರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ತೆಗೆದುಕೊಂಡ ಕಠೀಣ ಲಾಕ್ಡೌನ್ ಕ್ರಮದ ಬಳಿಕ ಆರ್ಥಿಕ ವರ್ಗದ ತಳಸ್ತರದಲ್ಲಿರುವ ಸಮುದಾಯಗಳ ದಿನನಿತ್ಯದ ಬದುಕಿನ ಶೈಲಿಯಲ್ಲಿ ಬಹುತೇಕ ಬದಲಾವಣೆಗೊಂಡಿದೆ. ಮುಖ್ಯವಾಗಿ ಹಲವಾರು ಮಕ್ಕಳು ಶಾಲೆಗಳಿಂದ, ಶಾಲಾ ಕಲಿಕೆಯಿಂದ ವಂಚಿತಗೊಂಡಿದ್ದಾರೆ.
ಶಾಲೆಗಳ ಹೊಸ ದಾಖಲಾತಿ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಗಿದ್ದು, ಶಾಲಾ ಕಲಿಕೆಯಿಂದ ಅವಕಾಶ ವಂಚಿತ ಮಕ್ಕಳು ರಸ್ತೆ ಬದಿಗಳಲ್ಲಿ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಅಥವಾ ಭಿಕ್ಷಾಟಣೆಯಲ್ಲಿ ತೊಡಗಿದ್ದಾರೆ. ಇಂತಹ ಮಕ್ಕಳನ್ನು ಗುರುತಿಸಲು ಸಮೀಕ್ಷೆ ಕೈಗೊಂಡು ಆ ಮಕ್ಕಳನ್ನು ಮುಖ್ಯವಾಹಿನಿಯ ಶಾಲೆಗಳಿಗೆ ಮತ್ತೆ ಕರೆತರಲು ಸೇತುಬಂಧ (ಬ್ರಿಡ್ಜ್ ಕೋರ್ಸ್) ತರಗತಿ ನಡೆಸಲು ಬಿಬಿಎಂಪಿ ಯೋಜನೆ ಹಾಕಿಕೊಂಡಿದೆ.
ಬಿಬಿಎಂಪಿ ಸದ್ಯ 10 ಹಳೆಯ ಬಸ್ಗಳನ್ನು ಬಿಎಂಟಿಸಿಯಿಂದ ಪಡೆದುಕೊಂಡಿದ್ದು, ಅವುಗಳನ್ನು ಸಂಚಾರಿ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು. ಸಂಚಾರಿ ಶಾಲೆಗಳಾಗಿ ಪರಿವರ್ತಿಸಲು ಪ್ರತಿ ಬಸ್ಗಳಿಗೂ ತಲಾ 4 ಲಕ್ಷಗಳಷ್ಟು ಪಾವತಿಸಿ ಖರೀದಿಸಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.
ಅಂತಹ ಒಂದು ಬಸ್ನ ಮೂಲಮಾದರಿಯನ್ನು ಬಿಬಿಎಂಪಿ ವಿಶೇಷ ಆಯುಕ್ತರಾದ ಜೆ.ಮಂಜುನಾಥ್ ಮತ್ತು ಎಸ್.ಜಿ.ರವೀಂದ್ರ ಸೋಮವಾರ ಪರಿಶೀಲಿಸಿದ್ದಾರೆ. ಪರಿವರ್ತನೆಗೊಂಡ ಬಸ್ನಲ್ಲಿ ಬಿಳಿ ಬೋರ್ಡ್, ಪುಸ್ತಕಗಳಿಗೆ ಬೀರುಗಳು, ಸಿಬ್ಬಂದಿಗಳಿಗೆ ಕುಳಿತುಕೊಳ್ಳಲು ಆಸನ ಮತ್ತು ಮಕ್ಕಳು ತಮ್ಮ ಪಾಠಕ್ಕಾಗಿ ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶವಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಿಗೆ ಬಸ್ಗಳನ್ನು ಕಳುಹಿಸಲಾಗುವುದು ಎಂದು ಮಂಜುನಾಥ್ ಹೇಳಿದ್ದಾರೆ. ಈ ಮಕ್ಕಳಿಗೆ ಕಲಿಸಲು ಬಿಬಿಎಂಪಿಯ ಶಾಲೆಗಳ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.