
ನಟ ದರ್ಶನ್ ಬಂದ್ರೆ ರಾಜ ಮರ್ಯಾದೆ ಸಿಗ್ತಿತ್ತು.. ಆನೆ ನಡೆದಿದ್ದೇ ದಾರಿ ಅನ್ನೋ ರೀತಿಯಲ್ಲಿ ಸ್ಯಾಂಡಲ್ವುಡ್ ಸುಲ್ತಾನನಾಗಿದ್ದ ನಟ ದರ್ಶನ್ಗೆ ಕಳೆದ ವರ್ಷದ ಜೂನ್ನಿಂದ ಸಂಕಷ್ಟಗಳ ಸರಮಾಲೆಯೇ ಎದುರಾಗ್ತಿದೆ. ಪ್ರೇಯಸಿಗಾಗಿ ಕತ್ತಲೆ ಕೋಣೆಯಲ್ಲಿ ಒದ್ದಾಡಿ, ರೆಗ್ಯೂಲರ್ ಬೇಲ್ ಪಡೆದು ಕುಟುಂಬದ ಜೊತೆ ಕಾಲ ಕಳೆಯುತ್ತಿರೋ ಜಗ್ಗುದಾದಾಗೆ ಪೊಲೀಸ್ರು ನೋಟಿಸ್ ಕೊಟ್ಟಿದ್ದಾರೆ. ರೆಗ್ಯೂಲರ್ ಬೇಲ್ ಕ್ಯಾನ್ಸಲ್ ಮಾಡುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿರೋ ಪೊಲೀಸ್ರು ಡೆವಿಲ್ಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ.
ಕಾಟೇರನ ಮೇಲೆ ಹದ್ದಿನ ಕಣ್ಣಿಟ್ಟಿರೋ ಪೊಲೀಸ್ರು, ಇದೀಗ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ.. ಸೆಲೆಬ್ರಿಟಿ ಆಗಿರುವ ಕಾರಣ ಸುರಕ್ಷತೆ ದೃಷ್ಟಿಯಿಂದ ದರ್ಶನ್ಗೆ ಗನ್ ಲೈಸೆನ್ಸ್ ಕೊಡಲಾಗಿತ್ತು. ಆದ್ರೀಗ ಪೊಲೀಸ್ರು ಗನ್ ಲೈಸೆನ್ಸ್ ಹಿಂಪಡೆಯಲು ನಿರ್ಧರಿಸಿದ್ದಾರೆ. ಈ ಬಗ್ಗೆ ನೋಟಿಸ್ ಕೊಟ್ಟಿರುವ ಪೊಲೀಸ್ರು, ನೀವು ಕೊಲೆ ಪ್ರಕರಣದ ಆರೋಪಿ ಆಗಿದ್ದೀರಿ, ನಿಮ್ಮ ಗನ್ ಲೈಸೆನ್ಸ್ ಅನ್ನು ಯಾಕೆ ರದ್ದು ಮಾಡಬಾರದು..? ಗನ್ ಲೈಸೆನ್ಸ್ ಇದ್ರೆ ಸಾಕ್ಷಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಗನ್ ಬಳಸಿಕೊಂಡು ನೀವು ಕಾನೂನು ಉಲ್ಲಂಘಿಸುವ ಸಾಧ್ಯತೆಯೂ ಇರುತ್ತದೆ ಎಂದು ಆರೋಪಿಸಿದ್ದಾರೆ.

ನಿಮ್ಮ ಬಳಿ ಇರುವ ಗನ್ ಲೈಸೆನ್ಸ್ ಯಾಕೆ ರದ್ದು ಮಾಡಬಾರದು..? ಎಂದು ನೀವು ಸಮರ್ಥವಾದ ವಿವರಣೆ ಕೊಡುವುದಾದರೆ, ಮುಂದಿನ 7 ದಿನಗಳಲ್ಲಿ ಉತ್ತರ ಕೊಡಿ ಎಂದು ದರ್ಶನ್ಗೆ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಕಮಿಷನರ್ ಕಚೇರಿ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹು, ದರ್ಶನ್ಗೆ ನೋಟಿಸ್ ಕೊಟ್ಟಿದ್ದು, ದರ್ಶನ್ ನೋಟಿಸ್ ತಲುಪಿದ 7 ದಿನಗಳ ಒಳಗೆ ಉತ್ತರ ಕೊಡಬೇಕಿದೆ. ಒಂದು ವೇಳೆ ದರ್ಶನ್ ಕೊಡುವ ಉತ್ತರ ಸಮಂಜಸ ಎನಿಸದಿದ್ದರೆ ಗನ್ ಲೈಸೆನ್ಸ್ ಕ್ಯಾನ್ಸಲ್ ಆಗುವ ಸಾಧ್ಯತೆಗಳು ಹೆಚ್ಚು. ದರ್ಶನ್ ನೀಡುವ ಸ್ಪಷ್ಟನೆ ಮೇಲೆ ಗನ್ ಲೈಸೆನ್ಸ್ ಭವಿಷ್ಯ ನಿಂತಿದೆ ಎನ್ನಬಹುದು.