ನಾಡಿನ ದಾರ್ಶನಿಕರು, ಮಹಾನ್ ಚೇತನಗಳಿಗೆ ಅಪಮಾನ ಮಾಡಿ, ಇತಿಹಾಸ ತಿರುಚಿರುವ ಪಠ್ಯಪುಸ್ತಕ ಪರಿಷ್ಕರಣೆ ರದ್ದುಗೊಳಿಸಿ ಹಿಂದಿನ ಪಠ್ಯಕ್ರಮ ಮುಂದುವರೆಸುವಂತೆ ಆಗ್ರಹಿಸಿ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಮಕ್ಕಳಿಗೆ ವೈಜ್ಞಾನಿಕ, ವೈಚಾರಿಕ, ನೈಜ ಇತಿಹಾಸವನ್ನು ತಿಳಿಸಬೇಕೆ ಹೊರತು RSS ಭಾಷಣವನ್ನಲ್ಲ ಶೀಘ್ರವೇ ಪರಿಷ್ಕರಣೆಯಾದ ಪಠ್ಯವನ್ನು ಹಿಂಪಡೆಯಿರಿ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಾಧ್ಯಮಗಲೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷ ಎರಡೂ ಜಂಟಿಯಾಗಿ ರೋಹಿತ್ ಚಕ್ರತೀರ್ಥ ಅವರು ಪರಿಷ್ಕರಣೆ ಮಾಡಿರುವ ಪಠ್ಯಕ್ರಮವನ್ನು ವಿರೋಧಿಸಿ ಸಾಂಕೇತಿಕವಾಗಿ ಇಂದು ಮುಷ್ಕರ ನಡೆಸುತ್ತಿದ್ದೇವೆ. ಒಂದು ಗಂಟೆ ಕಾಲ ಮಹಾತ್ಮ ಗಾಂಧಿ ಅವರ ಪ್ರತಿಮೆ ಮುಂದೆ ಕುಳಿತು ಪ್ರತಿಭಟನೆ ಮಾಡುತ್ತೇವೆ. ಸರ್ಕಾರ ರೋಹಿತ್ ಚಕ್ರತೀರ್ಥ ಅವರ ಸಮಿತಿಯನ್ನು ವಿಸರ್ಜನೆ ಮಾಡಿದೆ. ಸಾರ್ವಜನಿಕರು, ಸಾಹಿತಿಗಳು, ಮಠಾಧೀಶರು, ಶಿಕ್ಷಣ ತಜ್ಞರು, ರಾಜಕಾರಣಿಗಳಿಂದ ತೀವ್ರವಾದ ವಿರೋಧ ವ್ಯಕ್ತವಾದದ್ದು ಇದಕ್ಕೆ ಕಾರಣ.
ಈಗ ಸಮಿತಿ ವಿಸರ್ಜನೆ ಮಾಡಿದ ಮೇಲೆ ಆ ಸಮಿತಿ ಶಿಫಾರಸು ಮಾಡಿದ ಪಠ್ಯವನ್ನು ಇಟ್ಟುಕೊಂಡಿದೆ. ಸಮಿತಿ ವಜಾ ಆಗಿರುವುದರಿಂದ ಆ ಸಮಿತಿ ಪರಿಷ್ಕರಣೆ ಮಾಡಿದ ಪಠ್ಯವನ್ನು ಮಕ್ಕಳಿಗೆ ಬೋಧನೆ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದೇವೆ. ಪರಿಷ್ಕರಣೆಗೊಂಡ ಪಠ್ಯದಲ್ಲಿ ಇತಿಹಾಸ ತಿರುಚುವ ಕೆಲಸ ಆಗಿದೆ, ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರು, ಕುವೆಂಪು, ಭಗತ್ ಸಿಂಗ್, ಇನ್ನೂ ಅನೇಕ ಸಂತರು, ದಾರ್ಶನಿಕರ ಚರಿತ್ರೆಗಳನ್ನು ತಿರುಚಲಾಗಿದೆ. ಉದಾಹರಣೆಗೆ 9ನೇ ತರಗತಿ ಪಠ್ಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿತ್ತು, ಈಗ ಅದನ್ನು ತೆಗೆದು ಹಾಕಲಾಗಿದೆ. ಬಸವಣ್ಣನವರು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದ್ದಾರೆ. ಇದನ್ನು ತೆಗೆದುಹಾಕಲಾಗಿದೆ. ಹೀಗೆ ದೇಶಭಕ್ತರು, ದಾರ್ಶನಿಕರ ವಿಚಾರಗಳನ್ನು ತಿರುಚಿ ಕೇಸರಿಕರಣಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಶಿಕ್ಷಣ ಸಚಿವ ನಾಗೇಶ್ ಅವರು ಮೊದಲು ಪರಿಷ್ಕರಣೆಗೊಂಡ ಪಠ್ಯವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲ್ಲ ಎಂದು ಹೇಳಿದ್ದರು. ಗಣ್ಯ ವ್ಯಕ್ತಿಗಳಿಂದ ಇದಕ್ಕೆ ಪ್ರತಿರೋಧ ವ್ಯಕ್ತವಾದ ಮೇಲೆ ಕೆಲವು ವಿಚಾರಗಳನ್ನು ಪುನರ್ ಪರಿಶೀಲನೆ ಮಾಡುತ್ತೇವೆ, ಇನ್ನೊಂದು ತಿಂಗಳಲ್ಲಿ ಪಠ್ಯಪುಸ್ತಕ ಮುದ್ರಣ ಮಾಡಿ ಮಕ್ಕಳಿಗೆ ಹಂಚುತ್ತೇವೆ ಎಂದಿದ್ದಾರೆ. ಇದರರ್ಥ ತಾವು ಚರಿತ್ರೆ ತಿರುಚಿರುವುದು ಸತ್ಯ, ಆರ್.ಎಸ್.ಎಸ್ ನಿರ್ದೇಶನದಂತೆ ಪಠ್ಯ ರಚನೆ ಮಾಡಿದ್ದಾರೆ ಎಂದು ಒಪ್ಪಿಕೊಂಡಂತೆ.
ನಾವು ಒಂದು ರಾಷ್ಟ್ರೀಯ ಪಕ್ಷವಾಗಿ ಮಕ್ಕಳಿಗೆ ವೈಜ್ಞಾನಿಕ, ವೈಚಾರಿಕ, ನೈಜ ಇತಿಹಾಸವನ್ನು ತಿಳಿಸುವ ಕೆಲಸ ಮಾಡಬೇಕು, ಕೇಸರಿಕರಣಗೊಂಡಿರುವ ಪಠ್ಯವನ್ನು ಮಕ್ಕಳಿಗೆ ತಿಳಿಸಬಾರದು ಎಂದು ಒತ್ತಾಯ ಮಾಡುತ್ತೇವೆ. ಆರ್. ಎಸ್. ಎಸ್ ನಲ್ಲಿ ಮಾಡುವ ಭಾಷಣವನ್ನು ಮಕ್ಕಳಿಗೆ ತಿಳಿಸಿ, ಅವರ ಮನಸನ್ನು ಹಾಳು ಮಾಡುವ ಕೆಲಸ ಮಾಡಬಾರದು ಎಂಬುದು ನಮ್ಮ ನಿಲುವು ಎಂದು ಹೇಳಿದ್ದಾರೆ.
ಸರ್ಕಾರ ಪರಿಷ್ಕೃತ ಪಠ್ಯವನ್ನು ವಾಪಾಸು ಪಡೀಬೇಕು ಹಾಗೂ ಬರಗೂರು ರಾಮಚಂದ್ರಪ್ಪನವರು ಪರಿಷ್ಕರಣೆ ಮಾಡಿದ್ದ ಪಠ್ಯವನ್ನೇ ಮುಂದುವರೆಸಬೇಕು ಎಂಬುದು ನಮ್ಮ ಒತ್ತಾಯ. ಇದನ್ನು ಸರ್ಕಾರ ಈಡೇರಿಸದೆ ಹೋದರೆ ಮುಂದಿನ ಹೋರಾಟದ ರೂಪುರೇಷಗಳನ್ನು ಚರ್ಚಿಸಿ, ತೀರ್ಮಾನ ಮಾಡಲಾಗುವುದು.
ನಾವು ಮಾಡುವ ಯಾವುದೇ ಹೋರಾಟವನ್ನು ಬದ್ಧತೆಯಿಂದ ಮಾಡುತ್ತೇವೆ, ತೋರಿಕೆಗಾಗಿ ಮಾಡಲ್ಲ. ನಾವು ಆರ್. ಎಸ್. ಎಸ್ ಮತ್ತು ಕೇಸರಿಕರಣದ ವಿರುದ್ಧ ಇದ್ದೇವೆ, ಅದನ್ನು ಪ್ರಮಾಣಿಕವಾಗಿ ವಿರೋಧಿಸುತ್ತೇವೆ. ಬಿಜೆಪಿ ಅವರು ಮಕ್ಕಳ ಮನಸನ್ನು ಹಾಳು ಮಾಡುವ, ಮಕ್ಕಳಿಗೆ ವಿಷ ಉಣಿಸುವ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಎಂದು ಕರೆ ನೀಡಿದ್ದಾರೆ.