ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲವಾದರೂ, ರಾಜಪಥದಲ್ಲಿ ಪರೇಡ್ ವೀಕ್ಷಿಸಲು ಐದು ಮಧ್ಯ ಏಷ್ಯಾದ ರಾಷ್ಟ್ರಗಳ ನಾಯಕರನ್ನು ಕರೆತರಲು ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದೆ.
ಈಗಾಗಲೇ ಕಳೆದ ತಿಂಗಳು ಭಾರತ-ಮಧ್ಯ ಏಷ್ಯಾ ಸಚಿವರ ಶೃಂಗಸಭೆಯ ಸಂದರ್ಭದಲ್ಲಿ, ತುರ್ಕಮೆನಿಸ್ತಾನದ ಉಪ ಪ್ರಧಾನಿ ರಶೀದ್ ಮೆರೆಡೋವ್ ಜನವರಿಯಲ್ಲಿ ಭಾರತದೊಂದಿಗೆ ಶೃಂಗಸಭೆ ನಡೆಯಲಿದೆ ಎಂದು ಹೇಳಿದ್ದರು. ಆದರೆ COVID-19 ಸಾಂಕ್ರಾಮಿಕದ ಮೂರನೇ ಅಲೆ ಭಾರತದಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯ ವೇದಿಕೆಯಲ್ಲಿ ಯಾವುದೇ ವಿದೇಶಿ ಗಣ್ಯರು ಇರುವುದಿಲ್ಲ ಎನ್ನಲಾಗಿದೆ. ಹೀಗಾಗಿ, ಭಾರತ-ಮಧ್ಯ ಏಷ್ಯಾ ನಾಯಕರ ಶೃಂಗಸಭೆಯು ವರ್ಚುವಲ್ ಮೋಡ್ನಲ್ಲಿ ನಡೆಯುವ ಸಾಧ್ಯತೆಯಿದೆ. ಗಣರಾಜ್ಯೋತ್ಸವಕ್ಕೆ ಕೇವಲ ಎಂಟು ದಿನಗಳು ಬಾಕಿಯಿರುವುದರಿಂದ ಸರ್ಕಾರದಿಂದ ಯಾವುದೇ ಸಾರ್ವಜನಿಕ ಹೇಳಿಕೆ ಬಂದಿಲ್ಲ
2021 ರ ಗಣರಾಜ್ಯೋತ್ಸವ ಪರೇಡ್ ಗೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅವರ ಆಹ್ವಾನದ ಘೋಷಣೆಯನ್ನು ಡಿಸೆಂಬರ್ 2020 ರಲ್ಲಿ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿಯ ಭೇಟಿಯ ಸಮಯದಲ್ಲೇ ನಿಗಧಿ ಮಾಡಲಾಗಿತ್ತು.
ಆದರೆ, ಯುಕೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವಾಗ ಜನವರಿ ಮೊದಲ ವಾರದಲ್ಲಿ ಇದನ್ನು ರದ್ದುಗೊಳಿಸಲಾಯಿತು. 2020 ರಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ರಾಜಪಥದಲ್ಲಿ ಭಾರತದ ಗಣರಾಜ್ಯೋತ್ಸವದ ಮೆರವಣಿಗೆಯನ್ನು ವೀಕ್ಷಿಸಿದ ಕೊನೆಯ ವಿದೇಶಿ ಅತಿಥಿಯಾಗಿದ್ದಾರೆ.