
—ನಾ ದಿವಾಕರ—
ಯುಗಾದಿ ಜಗತ್ತಿಗೆ ತೆರೆದ ಬಾಗಿಲು ಆದರೆ ನನ್ನನ್ನು ಕಾಡುವುದು ವಿಸ್ಮೃತಿಯ ಕಡಲು
ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ ಅನ್ನ ಬೆಳೆಯುವ ಮಣ್ಣಿನ ಮಕ್ಕಳ ಪರಿಶ್ರಮವನ್ನು ಆನಂದಿಸಿ ಸಂಭ್ರಮಿಸುವ ಒಂದು ಹಬ್ಬ. ಧಾರ್ಮಿಕ ಆಚರಣೆಗಳ ನೆಲೆಯಲ್ಲಿ ಅದನ್ನು ವರ್ಷಾರಂಭ ಎಂದು ಪಾರಂಪರಿಕವಾಗಿ ಗುರುತಿಸಿದ್ದರೂ, ರೈತರ ದೃಷ್ಟಿಯಲ್ಲಿ ಅದು ಹೊಸ ಬದುಕಿನ ಸವಾಲುಗಳನ್ನೆದುರಿಸಲು ಸಜ್ಜಾಗಬೇಕಾದ ಒಂದು ದಿನ. ವಸಂತ ಋತುವಿನ ಆಗಮನದೊಂದಿಗೇ ಬೇಸಿಗೆಯ ಬಿರುಬಿಸಿಲು ಅನ್ನದಾತರಲ್ಲಿ ಮೂಡಿಸುವ ಆತಂಕಗಳನ್ನು ದೂರ ಮಾಡುವ ಮಳೆಯ ಸಿಂಚನಕ್ಕಾಗಿ ಅತೀತ ಶಕ್ತಿಗಳಲ್ಲಿ ಬೇಡಿಕೊಳ್ಳುವ ಒಂದು ಸಾಂಪ್ರದಾಯಿಕ ಸಂದರ್ಭ. ಮತ್ತೊಂದೆಡೆ ಮಾವು ಬೇವುಗಳ ಸಿಂಗರದ ನಡುವೆ ತಾವೇ ಬೆಳೆದ ಸಿಹಿಬೆಲ್ಲವನ್ನೂ ಸವಿಯುವ ಮೂಲಕ, ಭವಿಷ್ಯದ ಬದುಕು ಹಸನಾಗಲು ಅಪೇಕ್ಷಿಸುವ ಒಂದು ಸಾಂಸ್ಕೃತಿಕ ಸಂದರ್ಭ.
ಈ ಹಬ್ಬದ ಹಿಂದಿನ ಶ್ರದ್ಧಾನಂಬಿಕೆಗಳೇನೇ ಇರಲಿ, ಜಾತಿಭೇದಗಳ ಬೇಲಿಗಳನ್ನು ದಾಟಿ ಆಚರಿಸಲಾಗುವ ಈ ದಿನ ವಿಶಿಷ್ಟವಾಗುವುದು ಅದರ ಹಿಂದಿನ ನೈಸರ್ಗಿಕ ಕಾರಣಗಳಿಗಾಗಿ. ಸಂಪ್ರದಾಯವಾದಿಗಳು, ಭ್ರಮಾಧೀನ ಪ್ರಪಂಚವನ್ನು ಸೃಷ್ಟಿಸುವ ಜೋತಿಷಿಗಳು ಮತ್ತು ತಾವೇ ನಿಂತ ಗ್ರಹ ಪರಿಸರ ನಾಶದಿಂದ ವಿನಾಶದಂಚಿಗೆ ತಲುಪುತ್ತಿರುವುದನ್ನು ಕಂಡೂ ಕಾಣದಂತಿದ್ದು, ಅನ್ಯ ಗ್ರಹಗಳ ಕಲ್ಪಿತ ಪ್ರಭಾವಗಳ ಬಗ್ಗೆ ಸಮಾಜದ ಕೆಳಸ್ತರದವರೆಗೂ ಭ್ರಮೆಯನ್ನು ಸೃಷ್ಟಿಸುವ ಸಾಂಪ್ರದಾಯಿಕ ವರ್ಗ, ಈ ವರ್ಗಗಳು ಸೃಷ್ಟಿಸುವ ಒಂದು ಹಬ್ಬದ ವಾತಾವರಣ, ಬಹುಪಾಲು ಜನರನ್ನು ವಾಸ್ತವಗಳಿಂದ ವಿಮುಖಗೊಳಿಸಿ ಮೌಢ್ಯಾಚರಣೆಗಳೆಡೆಗೆ ಕರೆದೊಯ್ಯುವುದು ಮತ್ತೊಂದು ವೈಶಿಷ್ಟ್ಯ. ಈ ವಿಚಿತ್ರ ವೈವಿಧ್ಯತೆಗಳ ನಡುವೆಯೇ ಯುಗಾದಿ ಎಂದರೆ ಭಾರತೀಯ ಜನಸಂಸ್ಕೃತಿಯಲ್ಲಿ ಒಂದು ಸಂಭ್ರಮದ ದಿನ.

ವ್ಯಕ್ತಿಗತ ಬದುಕಿನಲ್ಲಿ ಯುಗಾದಿ
ಆದರೆ ನನ್ನ ವೈಯುಕ್ತಿಕ ಬದುಕಿನಲ್ಲಿ ಹಬ್ಬ ಎನ್ನುವುದು ಸಾಂಪ್ರದಾಯಿಕ ಆಚರಣೆಗಳಿಲ್ಲದ ಒಂದು ದಿನ. ಈಗ ನನ್ನೊಡನೆ ಇದ್ದಿದ್ದರೆ ಈ ದಿನ 95 ವಸಂತಗಳನ್ನು ಪೂರೈಸಬಹುದಾಗಿದ್ದ ನನ್ನ ಅಮ್ಮ 35 ವರ್ಷಗಳ ಹಿಂದೆ ಚಿರನಿದ್ರೆಗೆ ಜಾರಿದ ನಂತರದಲ್ಲಿ, ನನ್ನ ಬದುಕಿನಲ್ಲಿ ಯುಗಾದಿ ಎಂದರೆ, ವಿಸ್ಮೃತಿಗಳ ಹೊಳೆಯಲ್ಲಿ ಈಜಾಡಿ, ನೆನಪುಗಳ ಸರಪಳಿಗಳನ್ನು ಜೋಡಿಸುತ್ತಾ, ಕಳೆದು ಹೋದ ʼಅಮ್ಮʼ ನ ಮಮತೆ ವಾತ್ಸಲ್ಯಗಳ ಕ್ಷಣಗಳನ್ನು ಮತ್ತೊಮ್ಮೆ ಮಗದೊಮ್ಮೆ ಒಳಗಿಳಿಸಿಕೊಳ್ಳುವ ಒಂದು ದಿನವಾಗಿ ಕಾಣುತ್ತದೆ/ಕಾಡುತ್ತದೆ. ಏಕೆಂದರೆ ಯುಗಾದಿ ಅವಳು ಹುಟ್ಟಿದ ದಿನ. ಹಿತಕರ ಬದುಕಿನ ದಿನಗಳಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದ ಯುಗಾದಿಯನ್ನು, ನೆಲೆ ಕಳೆದುಕೊಂಡು ದುರ್ಭರ ದಿನಗಳನ್ನು ತಲುಪಿದಾಗಲೂ ಅಷ್ಟೇ ಖುಷಿಯಿಂದ ಆಚರಿಸುತ್ತಿದ್ದ ಅಮ್ಮನ ಪಾಲಿಗೆ ಮಕ್ಕಳ ಖುಷಿಯೇ ಒಂದು ಹಬ್ಬ ಅಲ್ಲವೇ?
ನನ್ನ ಅಮ್ಮ ನೆನಪಾಗುವುದು ಈ ಕಾರಣಕ್ಕಾಗಿ. ಬದುಕು ಸುಗಮವಾಗಿದ್ದ ದಿನಗಳಲ್ಲಿ, ಅಪ್ಪನೊಡನೆ ಇದ್ದ ಸಮಯದಲ್ಲಿ ಯುಗಾದಿಯ ಸಂಭ್ರಮ ಒಂದು ಉತ್ಸವದಂತಿರುತ್ತಿತ್ತು ಅಲ್ಲವೇನಮ್ಮ ? ಹತ್ತು ಜನರ ಕುಟುಂಬ ಎಂದರೇನೇ ಒಂದು ಸಣ್ಣ ಹಾಡಿ ಇದ್ದಂತೆ, ಎಲ್ಲರೂ ಒಂದಾಗಿ ಸಂಭ್ರಮಿಸುವ ವಾತಾವರಣಕ್ಕೆ ಹೇಳಿಮಾಡಿಸಿದ ಸಂಸಾರ ನೌಕೆ. ಆಗ ಅವಳ ಹೋಳಿಗೆಯ ಕಾರ್ಖಾನೆ ಚಾಲನೆ ಪಡೆಯುತ್ತಿದ್ದುದು ಹಿಂದಿನ ದಿನದ ಸಿದ್ಧತೆಗಳಿಂದ. ಯುಗಾದಿಯ ದಿನ ಬ್ರಾಹ್ಮಿಗೂ ಮುಂಚೆಯೇ ಎದ್ದು ಆರಂಭಿಸುತ್ತಿದ್ದ ಹೂರಣದ ತಯಾರಿ ಮತ್ತು ಅಡುಗೆ ಮನೆಯ ಸಿದ್ಧತೆಗಳು ಪೂರ್ತಿಯಾಗುತ್ತಿದ್ದುದು ಮಧ್ಯಾಹ್ನದ ವೇಳೆಗೆ. ಹಾಲು ಕೊಡುವವಳು, ಮೊಸರು-ತುಪ್ಪ ಮಾರುವವನು, ನಿತ್ಯ ಮಲಗುಂಡಿಯನ್ನು ಸ್ವಚ್ಚಗೊಳಿಸಲು ಬರುತ್ತಿದ್ದ ತೋಟಿ, ಅಪ್ಪನ ಕಚೇರಿಯ ಸಹಾಯಕ ಸಿಬ್ಬಂದಿ ಮತ್ತೆ ಎಂಟು ಮಕ್ಕಳ ಸಂಗಾತಿಗಳು, ಬಹಳ ಮುಖ್ಯವಾಗಿ ಪುರೋಹಿತರು-ಅವರ ಕುಟುಂಬ ಸದಸ್ಯರು ಇಷ್ಟೂ ಜನರನ್ನು ಸೇರಿಸಿ, ಸಂಸಾರ ನೌಕೆಯ ಹತ್ತು ಜನ ಪಯಣಿಗರಿಗೆ ಬೇಕಾಗುವಷ್ಟು ಹೋಳಿಗೆ ತಯಾರಿಸುತ್ತಿದ್ದುದನ್ನು ಹೇಗೆ ಬಣ್ಣಿಸಲಿ ?

ತಿನ್ನುವವರು ಬಾಯಿ ಚಪ್ಪರಿಸುವುದೊಂದೇ ಈ ಶ್ರಮಕ್ಕೆ ಸಿಗುತ್ತಿದ್ದ ಸಮಾಧಾನಕರ ಫಲ. ಆದರೆ ಸ್ವತಃ ತಿನ್ನುವ ಭಾಗ್ಯಕ್ಕಾಗಿ ಸಂಜೆ ನಾಲ್ಕರವರೆಗೂ ಕಾಯುವುದು ಒಂದು ರೀತಿ ಸಂಸಾರದಸಾಂವಿಧಾನಿಕ ಕರ್ತವ್ಯವೇ ಆಗಿಬಿಟ್ಟಿತ್ತಲ್ಲವೇ ಅಮ್ಮ ? ಈಗ ನೀನು ನಿರ್ಗಮಿಸಿದ 35 ವರ್ಷಗಳ ನಂತರ ನನ್ನನ್ನು ಕಾಡುವ ಪ್ರಶ್ನೆ ಎಂದರೆ, ಅಷ್ಟೊಂದು ಸಹನೆ, ತಾಳ್ಮೆ ಮತ್ತು ಕ್ಷಮತೆಯನ್ನು ಹೇಗೆ ರೂಢಿಸಿಕೊಂಡಿದ್ದೆ ? ಸಾಂಪ್ರದಾಯಿಕ ಸಂಸಾರದಲ್ಲಿ ಹೆಣ್ಣಿಗೆ ಇರುವ ಕಟ್ಟುಪಾಡುಗಳ ಅನಿವಾರ್ಯತೆಯಿಂದಲೇ ಅಥವಾ ನಾನು-ನನ್ನ ಮಕ್ಕಳು-ನನ್ನ ಗಂಡ ಹೀಗೆ ಸಂಬಂಧಗಳ ಸರಳುಗಳಲ್ಲಿ ಸ್ವತಃ ಬಂಧಿಸಿಕೊಂಡಿದ್ದ ಬದುಕಿನ ಅಗತ್ಯತೆಗಳಿಂದಲೇ ? ನಿದ್ರೆ, ಹಸಿವು, ವಿಶ್ರಾಂತಿ ಯಾವುದನ್ನೂ ಲೆಕ್ಕಿಸದೆ ಬಿಸಿ ಒಲೆಯ ಮುಂದೆ ಗಂಟೆಗಟ್ಟಳೆ ಕುಳಿತು, ಉಳಿದವರಿಗೆಲ್ಲಾ ಸಂಭ್ರಮದಿಂದ ಉಣಬಡಿಸುವ ನಿನ್ನ ಅಮೃತ ಹಸ್ತಗಳಿಗೆ, ಮುಕ್ತಿ ದೊರೆಯುವ ವೇಳೆಗೆ ನಾವೆಲ್ಲಾ ಆಟಪಾಠಗಳಲ್ಲೋ, ಚಾಪೆಯ ಮೇಲೆ ಹರಟುತ್ತಲೋ ಕಾಲ ಕಳೆಯುತ್ತಿದ್ದೆವಲ್ಲವೇ ? ನಿನ್ನ ಉದರ ಸೇವೆಯ ಬಗ್ಗೆ ಯೋಚಿಸುತ್ತಲೇ ಇರಲಿಲ್ಲ. ವಿಚಿತ್ರ ಎನಿಸುತ್ತದೆ.
ಹಿಂತಿರುಗಿ ನೋಡಿದಾಗ
ಈಗ 60 ದಾಟಿದ ಮೇಲೆ ಹಿಂತಿರುಗಿ ನೋಡಿದಾಗ ಇದು ಒಂದು ರೀತಿಯ ಸಾತ್ವಿಕ ಕ್ರೌರ್ಯ ಎನಿಸಿಬಿಡುತ್ತದೆ. ಹೆಣ್ಣಿಗೆ ಸಾಂಸಾರಿಕ ಕರ್ತವ್ಯಗಳನ್ನು ನಿರ್ಧಸಿರುವ ಗಂಡು ಸಮಾಜ ಇಂದಿಗೂ ಜೀವಂತವಾಗಿದೆ. ಆದರೆ ಬದಲಾದ ಬದುಕಿನಲ್ಲಿ, ಬಾಹ್ಯ ಸಮಾಜದ ಸುಡು ವಾಸ್ತವಗಳನ್ನು ಹಾದು, ನಡೆದು ಬಂದಂತೆಲ್ಲಾ, ಅಮ್ಮ ನಿನ್ನ ಆ ಸಹನಶೀಲತೆ ಮತ್ತು ಮಮತೆ ತುಂಬಿದ ಕರ್ತವ್ಯನಿಷ್ಠೆಯನ್ನು ಹೇಗೆ ನಿರ್ವಚಿಸುವುದು ಎಂದೇ ಹೊಳೆಯುವುದಿಲ್ಲ. ಈ ಗೊಂದಲಗಳ ನಡುವೆಯೇ ಅಪ್ಪ ಇಲ್ಲವಾದ ನಂತರದ ದಿನಗಳಲ್ಲಿ ನಾವು ಉಪ್ಪರಿಗೆಯಿಂದ ಪಾತಾಳಕ್ಕೆ ಕುಸಿದಾಗ ಕಳೆದ ಕ್ಷಣಗಳೂ ನೆನಪಾಗುತ್ತವೆ. ಅದೇ ಅಮ್ಮ, ಅದೇ ತಾಯಿ ಹೃದಯ, ಅದೇ ಕಾಯ, ಅದೇ ಮನಸ್ಸು ಆದರೆ ಎಷ್ಟೊಂದು ವ್ಯತ್ಯಾಸ. ಈ ಕಠಿಣ ಸಂದರ್ಭಗಳಲ್ಲಿ ನೀನು ತೋರಿದ ಸಹನಶೀಲತೆಯನ್ನು ಹೇಗೆ ಬಣ್ಣಿಸಲಿ ?

ಯುಗಾದಿಯಂದು ಹೋಳಿಗೆಯ ಸುಳಿವೂ ಇಲ್ಲದಿದ್ದ ಆ ಏಳೆಂಟು ವರ್ಷಗಳಲ್ಲಿ ನಿನ್ನ ಒಂದು ಕಟ್ಟಪ್ಪಣೆ ಕಡ್ಡಾಯವಾಗಿರುತ್ತಿತ್ತು ; ಅದೇನು ಗೊತ್ತೇ ಅಮ್ಮ ? “ ಇವತ್ತು ಹಬ್ಬದ ದಿನ ಯಾರ ಮನೆಗೂ ಹೋಗಬೇಡಿ !!! ”. ಮಕ್ಕಳ ಬಾಯಿಚಪಲದ ಅರಿವು ತಾಯಿಗೆ ಮಾತ್ರ ಇರುತ್ತದೆ ಎನ್ನಲು ಇದೊಂದು ಜ್ವಲಂತ ಸಾಕ್ಷಿ. ಇದನ್ನೂ ಮೀರಿದ್ದು ನಿನ್ನ ಸ್ವಾಭಿಮಾನ. 1983ರಲ್ಲಿ ಕೈವಾರದಲ್ಲಿದ್ದಾಗ ಯುಗಾದಿಯ ನೆನಪಾಗುತ್ತದೆ. ನಾನು ಮತ್ತು ನನ್ನ ಅಣ್ಣ ಇಬ್ಬರೂ ಇದ್ದ ಕೆಲಸ ಕಳೆದುಕೊಂಡಿದ್ದೆವು. ಮನೆಯಲ್ಲಿ ನೀನು ಮತ್ತು ಸೋದರಿ. ಮನೆಯ ಮಾಲಿಕರಿಗೆ ನಮ್ಮ ಪರಿಸ್ಥಿತಿ ತಿಳಿದಿತ್ತೇನೋ, ಊಟದ ಸಮಯಕ್ಕೆ ಐದಾರು ಹೋಳಿಗೆ ಕಳಿಸಿ ಮಕ್ಕಳಿಗೆ ಕೊಡಿ ಎಂದಾಗ ನೀನು ಬಿಲ್ಕುಲ್ ಒಪ್ಪಲಿಲ್ಲ. ನಮ್ಮದೆಲ್ಲಾ ಊಟ ಆಗಿದೆ, ನಾನೂ ಹೋಳಿಗೆ ಮಾಡಿದ್ದೆ ಎಂಬ ಸುಳ್ಳು ನಿನ್ನ ಸ್ವಾಭಿಮಾನಕ್ಕೆ ಹೊದಿಕೆಯಾಗಿತ್ತು. ಆಗ ನಿನ್ನ ಮೇಲೆ ತುಸು ಕೋಪ ಬಂದಿದ್ದು ಹೌದು. ಈಗ ನೆನೆದರೆ ಹೆಮ್ಮೆ ಎನಿಸುತ್ತದೆ.
ಅಮ್ಮ ನಿನ್ನ ನೆನಪಾಗುವುದು ಆ ಸಂಕಷ್ಟದ ದಿನಗಳಿಂದಾಗಿ. ಬಡತನ ಮತ್ತು ಹಸಿವು ಅಪಮಾನಗಳನ್ನು ಸಹಿಸಿಕೊಳ್ಳುವುದನ್ನು ಸಹ ಅನಿವಾರ್ಯವಾಗಿಸುತ್ತದೆ. ಹಾಗೆಯೇ ಸ್ವಾಭಿಮಾನವನ್ನು ಬೆಳೆಸಿಕೊಳ್ಳುವುದಕ್ಕೂ ಕಾರಣವಾಗುತ್ತದೆ. ಬಹುಶಃ 1978 ಅಥವಾ 79 ಇರಬೇಕು, ಬಂಗಾರಪೇಟೆಯಲ್ಲೇ ಇದ್ದ ಸೋದರ ಸಂಬಂಧಿ ಶ್ರೀಧರ ಯುಗಾದಿಯ ದಿನ ಮನೆಗೆ ಬಂದಿದ್ದ. ಅವನ ಉದ್ದೇಶ ನಾವು ಊಟಕ್ಕೆ ಏನು ಮಾಡಿಕೊಂಡಿದ್ದೇವೆ ಎಂದು ಗಮನಿಸುವುದಾಗಿತ್ತು. ಅದು ಅನುಕಂಪವಲ್ಲ, ಹೃದಯಾಂತರಾಳದ ಪ್ರೀತಿ ಮತ್ತು ಕಾಳಜಿಯಿಂದ. (ಈಗ ಬೆಂಗಳೂರಿನಲ್ಲಿದ್ದಾನೆ ). ಅವನು ಬರುತ್ತಿರುವುದು ತಿಳಿದ ಕೂಡಲೇ ಅಡುಗೆ ಮನೆಗೆ ಹೋಗಿ, ಪಾತ್ರೆಗಳನ್ನೆಲ್ಲಾ ಬೋರಲು ಹಾಕಿ, ಊಟದ ತಟ್ಟೆಗಳನ್ನು ಬಚ್ಚಲಲ್ಲಿಟ್ಟು ಬಂದ ನೀನು “ ನಮ್ಮದೆಲ್ಲಾ ಊಟ ಆಯಿತು ” ಎಂದು ಸುಳ್ಳು ಹೇಳಿದ ಪ್ರಸಂಗ ನೆನಪಿದೆ. ಚುರುಗುಟ್ಟುತ್ತಿದ್ದ ನಮ್ಮ ಹೊಟ್ಟೆ ಹಾಗೆಯೇ ಮುಂದುವರೆಯಬೇಕಾಯಿತು.
ಆ ಮಡಿಲ ಆಸರೆಯ ಕ್ಷಣಗಳು
ಈ ಪ್ರಸಂಗಗಳಲ್ಲಿ ನಿನ್ನ ಮಡಿಲಲ್ಲಿ ತಲೆ ಇಟ್ಟು ಮಲಗುವಾಗೆಲ್ಲಾ ನೀನು ಹೇಳುತ್ತಿದ್ದುದೊಂದೇ ಮಾತು, ಅಮ್ಮ. “ ಮಗೂ (ನನ್ನನ್ನು ಹೀಗೇ ಕರೆಯುತ್ತಿದ್ದುದು) ಧೈರ್ಯಗೆಡವುದು ಬೇಡ, ನಮ್ಮ ಪಾಲಿಗೆ ದೇವರಿದ್ದಾನೆ !!!! ”. ಆದರೆ ಆ ವೇಳೆಗೆ ದೇವರು ಎಂಬ ಕಲ್ಪನೆ ನನ್ನೊಳಗೆ ಎಂದೋ ಸತ್ತುಹೋಗಿತ್ತು. ಆದರೂ ನಿನ್ನ ಮಮತೆ ಮತ್ತು ಸಾಂತ್ವನದ ಮಾತುಗಳು ಹಸಿವನ್ನು ಮರೆಸುವುದಷ್ಟೇ ಅಲ್ಲ, ಸುರಂಗದ ತುದಿಯಲ್ಲಿ ಒಂದು ಬೆಳಕಿಂಡಿ ಇದೆ ಎಂಬ ನಾಣ್ಣುಡಿಯನ್ನು ನೆನಪಿಸುತ್ತಿದ್ದವು. ಯುಗಾದಿ ನಿನ್ನ ಹುಟ್ಟಿದ ದಿನ ಎಂಬ ಅರಿವಿದ್ದೂ ಎದೆಯಾಳದಲ್ಲಿ ಈ ನೋವುಗಳನ್ನು ಹುದುಗಿಸಿಟ್ಟುಕೊಂಡು, ನಮ್ಮೊಳಗಿನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತಿದ್ದ ನಿನ್ನ ಆ ಭರವಸೆಯ ಮಾತುಗಳು ಪ್ರತಿ ಯುಗಾದಿಯಂದು ನೆನಪಾಗುತ್ತದೆ ಅಮ್ಮ. ಬಹುಶಃ ಆ ಭರವಸೆಯೇ ನನ್ನನ್ನು, ಇಡೀ ಕುಟುಂಬವನ್ನು ದಡ ಸೇರಿಸಿದ್ದು ಎಂದರೆ ತಪ್ಪೇನಲ್ಲ. ಈ ಕ್ಷಾಮ ನೀಗಲು ನನಗೆ 1984ರ ಬ್ಯಾಂಕ್ ಉದ್ಯೋಗ ನೆರವಾಗಿತ್ತು. ಆಗಲೂ ನಿನ್ನ ಷರತ್ತು “ ಹಬ್ಬದ ದಿನ ಮತ್ತೊಬ್ಬರ ಮನೆಗೆ ಹೋಗಬೇಡಿ !!! ”ಎಂದೇ ಇರುತ್ತಿತ್ತು.
ನಾನು ಬ್ಯಾಂಕಿಗೆ ಸೇರಿದ ನಂತರ ಮೊದಲ ಯುಗಾದಿಯ ದಿನ (1984) ನಿನ್ನ ಉದ್ಗಾರ “ ಅಂತೂ ನಮ್ಮ ಕರು (ಅಮ್ಮ ನನ್ನನ್ನು ಹೀಗೂ ಕರೆಯುತ್ತಿದ್ದರು.) ಸಂಪಾದಿಸುವ ಹಾಗಾಯಿತು , ದೇವರ ದಯೆ ” ಇನ್ನೂ ನೆನಪಿದೆ. ನನ್ನ ಶ್ರಮದ ಫಲ ಎಂದು ನನಗೆ ತಿಳಿದಿದ್ದ ಸತ್ಯ. ಏನೇ ಇರಲಿ, ಪ್ರತಿ ವರ್ಷ ಯುಗಾದಿ ಬಂದಾಗ ನನಗೆ ಮಾವು, ಬೇವು, ಬೆಲ್ಲ ಇದಾವುದೂ ಮುಖ್ಯ ಎನಿಸುವುದಿಲ್ಲ. ಬೆಂದ ಜೀವಗಳಿಗೆ ನಿನ್ನ ನೊಂದ ಹೃದಯದಿಂದ ಹೊರಬರುತ್ತಿದ್ದ ಮಮತೆಯ ಸಾಂತ್ವನದ ನುಡಿಗಳು ಮತ್ತೆ ಕೇಳಬೇಕೆನಿಸುತ್ತದೆ. ನಿನ್ನ 95ನೇ ಜನ್ಮದಿನವನ್ನು ಹೇಗೆ ಆಚರಿಸಲಿ ? ಬತ್ತಿಹೋದ ತಾಯಿ ಜೀವವನ್ನು 95 ಕ್ಯಾಂಡಲ್ಗಳು ಬಿಂಬಿಸುವುದಿಲ್ಲ ಅಲ್ಲವೇ ? ಈ ದಿನ ನನಗೆ ಹಬ್ಬ ಎನಿಸುವುದಕ್ಕಿಂತಲೂ ಒಂದು ವಿಷಾದ ಭಾವನೆಯ ದಿನವಾಗಿಯೇ ಕಾಡುತ್ತದೆ. ನಿನ್ನ ವಾತ್ಸಲ್ಯದ ಮಡಿಲು ಮತ್ತು ʼ ಕರೂ-ಮಗೂ ʼ ಎಂಬ ನಲ್ಮೆಯ ಕರೆ ದಿನವಿಡೀ ಗುನುಗುನಿಸುತ್ತದೆ.

ನಿನ್ನ ಕರು ಈಗ ಮುದಿ ಎತ್ತು ಆಗುತ್ತಿದೆ. ಮಡದಿ ಪ್ರೀತಿಯಿಂದ ಮಾಡುವ ಹೋಳಿಗೆ ತಟ್ಟೆಗೆ ಬಿದ್ದಾಗ, ಅದರ ಮೇಲೆ ಅವಳು ಹಾಕು ತುಪ್ಪದ ಎರಡು ಹನಿಗಿಂತಲೂ, ನಿನ್ನ ನೆನಪಿನಲ್ಲಿ ಟಪಕ್ಕನೆ ಉದುರುವ ನನ್ನ ಎರಡು ಕಂಬನಿಯ ಹನಿ, ಜೀವನ ಸಾಕ್ಷಾತ್ಕಾರದ ಸಂಕೇತವಾಗಿ ಕಾಣುತ್ತದೆ. ನನ್ನಿಂದ ಇನ್ನೇನು ಮಾಡಲು ಸಾಧ್ಯ ? ಪ್ರೀತಿ-ವಾತ್ಸಲ್ಯ-ಮಮತೆ ಇವೆಲ್ಲವೂ ಬದುಕಿನ ಸಾಕ್ಷಾತ್ಕಾರದ ಅಂತರಾಳದ ಭಾವನೆಗಳಷ್ಟೇ ಅಲ್ಲ ಬಾಳ ಬಂಡಿಯನ್ನು ಸಾಗಿಸುವ ಕಾಲಚಕ್ರದ ಶಕ್ತಿಯೂ ಹೌದು ಎನ್ನುವುದನ್ನು ಪ್ರತ್ಯಕ್ಷವಾಗಿ ತೋರಿಸಿಕೊಟ್ಟ ನಿನ್ನ ಆ ದಿನಗಳ ಮಡಿಲ ನೆನಪು ನನ್ನ ಯುಗಾದಿಯ ದಿನವನ್ನು ಆವರಿಸುತ್ತದೆ. ಇವೆಲ್ಲವೂ ಒಂದು ಭ್ರಮೆ ಎನಿಸುವಂತೆ ಮಾಡಿದ ಮುಂದಿನ ಸಂತತಿಯನ್ನೂ ಕಾಣುತ್ತಲೇ, ನಿನ್ನ ನೆನಪಿನಲ್ಲಿ ಯುಗಾದಿಯನ್ನು ಸವಿಯುತ್ತೇನೆ.
ಇದಕ್ಕೇ ಹೇಳುವುದಲ್ಲವೇ ? ಕಾಲಾಯ ತಸ್ಮೈ ನಮಃ ! ಜನ್ಮದಿನದ ಶುಭಾಶಯಗಳು ಹೆತ್ತೊಡಲಿಗೆ.
-೦-೦-೦-೦-