ಸತ್ಯ ಸಾಗರ್
( ಮೂಲ : Fear and Hope post the Fourth of June in India – Satya Sagar- Counter currents.org – 02/06/2024 )
ಕನ್ನಡಕ್ಕೆ : ನಾ ದಿವಾಕರ
ಕಳೆದ ಹಲವು ವಾರಗಳಿಂದ, ಭಾರತದಲ್ಲಿನ ಪ್ರತಿಯೊಬ್ಬರೂ ದೇಶದ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಬಗ್ಗೆ ಊಹಾಪೋಹಗಳನ್ನು ಚರ್ಚೆ ಮಾಡುತ್ತಿದ್ದಾರೆ. ಮಾಧ್ಯಮಗಳ ಸುಳಿವುಗಳನ್ನು ಹುಡುಕುತ್ತಿದ್ದಾರೆ. ಹಿಂದಿನ ಮತದಾನದ ಪ್ರವೃತ್ತಿಗಳನ್ನು ಅಧ್ಯಯನ ಮಾಡುತ್ತಿದ್ದಾರೆ ಮತ್ತು ಚುನಾವಣಾ ಡೇಟಾಬೇಸ್ಗಳಿಂದ ಅಂಕಿ. ಸಂಖ್ಯೆಗಳನ್ನು ಪಡೆಯಲೆತ್ನಿಸುತ್ತಿದ್ದಾರೆ. ಜನರು ನರೇಂದ್ರ ಮೋದಿಯವರ ಹಿಂದೂ ಬಹುಸಂಖ್ಯಾತ ಆಡಳಿತದ ಪರವಾಗಿಯೋ ಅಥವಾ ಅದರ ವಿರುದ್ಧ ಇರುವವರ ಕಡೆ ನಿಲ್ಲುತ್ತಾರೋ ಎನ್ನುವುದು, ಸೈದ್ಧಾಂತಿಕ ವಿಭಜನೆಯ ಯಾವ ಬದಿಯಲ್ಲಿ ನಿಲ್ಲುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಈ ಧೃವೀಕರಣವು ಎಷ್ಟರ ಮಟ್ಟಿಗೆ ನಡೆದಿದೆ ಎಂದರೆ ಫಲಿತಾಂಶಗಳು ಹೊರಬರುವ ಮೊದಲೇ ಹಾಲಿ ಸರ್ಕಾರವನ್ನು ಮರು ಆಯ್ಕೆ ಮಾಡಲಾಗಿದೆ ಎಂದು ಈಗಾಗಲೇ ಘೋಷಿಸಿರುವ ಮುಖ್ಯವಾಹಿನಿಯ ಮಾಧ್ಯಮಗಳು ಅಥವಾ ಚುನಾವಣೋತ್ತರ ಸಮೀಕ್ಷೆಗಳನ್ನು ನಂಬುವುದು ಅಸಾಧ್ಯವಾಗಿಯೇ ಕಾಣುತ್ತದೆ.
ವಾಸ್ತವವೆಂದರೆ ಈ ಚುನಾವಣೆಯಲ್ಲಿ ಯಾವುದೇ ಸ್ಪಷ್ಟ ರಾಜಕೀಯ ಅಲೆಯ ಇಲ್ಲದಿರುವುದರಿಂದ ಅಂತಿಮ ಫಲಿತಾಂಶ ತೀರ್ಪು ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂದು ಯಾರೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇಲ್ಲಿ ಹಲವು ಅಂಶಗಳು ನಿರ್ಣಾಯಕವಾಗಿ ಸಾಬೀತಾಗುತ್ತವೆ. ಆದಾಗ್ಯೂ ಖಚಿತವಾಗಿ ಹೇಳಬಹುದಾದ ಒಂದು ವಿಷಯ ಎಂದರೆ, ಕಳೆದ ಮೂರು ದಶಕಗಳಿಂದ ನಮಗೆ ತಿಳಿದಿರುವಂತೆ ಭಾರತವು ಜೂನ್ 4 ರ ಅನಂತರದ ಭಾರತದಿಂದ ಭಿನ್ನವಾಗಿಯೇ ಕಾಣತೊಡಗುತ್ತದೆ. ಫಲಿತಾಂಶ ಏನೇ ಆದರೂ ದೇಶವು ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂಬುದರ ಸ್ಪಷ್ಟ ಚಿಹ್ನೆಗಳಿವೆ, ಇದು ಹೆಚ್ಚು ಪ್ರಕ್ಷುಬ್ಧ ಯುಗವಾಗಿ ಪರಿಣಮಿಸಲಿದ್ದು ಕಳೆದ ಹಲವು ವರ್ಷಗಳ ರಾಜಕೀಯದಿಂದ ಅಪಾರ ಅಂತರವನ್ನು ಕಾಣಲಿದೆ. ಮುಂದೆ ಸಾಕಷ್ಟು ನೋವು ಮತ್ತು ಸಂಕಟಗಳು ಇರುವುದು ಖಚಿತವಾದರೂ ಉತ್ತಮ ಭಾರತದ ದೊಡ್ಡ ಭರವಸೆಯ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ. ಸಮಗ್ರವಲ್ಲದಿದ್ದರೂ, ಭಾರತದ ಮಹಾ ಚುನಾವಣೆಗಳು 2024 ರ ಋತುವಿನಲ್ಲಿ ಗೋಚರಿಸುವ ಕೆಲವು ಅಸ್ಪಷ್ಟವಾದ ಮತ್ತು ಕೆಲವು ಸುಸ್ಪಷ್ಟವಾದ ಪ್ರವೃತ್ತಿಗಳನ್ನು ಹೀಗೆ ಗುರುತಿಸಬಹುದು.
![](https://pratidhvani.com/wp-content/uploads/2024/06/PM-Narendra-Modi-Mangalore-Roadshow-1.jpg)
ಬದಲಾದ ಭವಿಷ್ಯ ಭಾರತದಲ್ಲಿ
ಮೊದಲನೆಯದಾಗಿ ಮೋದಿ ಅಲೆ ಮಾಯವಾಗಲಿದೆ. ಹೌದು, ಕೋಮು ವಿಷ, ಕಾರ್ಪೊರೇಟ್ ನಗದು ಮತ್ತು ಭ್ರಷ್ಟಾಚಾರದ ಹಗರಣಗಳಿಂದ ಹಿಡಿದು ಎಲ್ಲವನ್ನೂ ಬಳಸಿಕೊಂಡು ರಾಷ್ಟ್ರದ ಉನ್ನತ ಹುದ್ದೆಗೆ ಏರಿದ ನರೇಂದ್ರ ಮೋದಿ, ಧಾರ್ಮಿಕ/ರಾಷ್ಟ್ರೀಯತಾವಾದಿ ಭಾವನೆಗಳನ್ನು ತಿರುಚುವ ಮೂಲಕ ಮತ್ತು ದೇಶದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಜನರ ವಿರುದ್ಧ ದ್ವೇಷವನ್ನು ಬಳಸಿಕೊಳ್ಳುವ ಮೂಲಕ ಅಧಿಕಾರ ಗಳಿಸಿದ ನರೇಂದ್ರ ಮೋದಿ ಇತಿಹಾಸದ ವಿಸ್ಮೃತಿಗೆ ಜಾರಲಿದ್ದಾರೆ. ಭಾರತದ ವಿಶಾಲ ಸಮಾಜದ ಬಹುಸಂಖ್ಯೆಯ ಜನತೆ ತಮ್ಮ ಮೇಲೆ ದೀರ್ಘಕಾಲದಿಂದ ಉಂಟಾಗಿರುವ ಪ್ರಭಾವದಿಂದ ಹೇಗೆ ಹೊರಬಂದಿದೆ ಎಂಬುದನ್ನು ಈ ಚುನಾವಣೆಯಲ್ಲಿ ನಾವು ಸ್ಪಷ್ಟವಾಗಿ ನೋಡಿದ್ದೇವೆ.
ದೇಶದ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವ ಯುವ ಸಮೂಹವು ಕಲ್ಪಿತ ಗತಕಾಲದ ನೆಲೆಯಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದ ಬೇಸತ್ತಿರುವುದು ವಾಸ್ತವವಾಗಿದ್ದು ಅಧಿಕಾರದಾಹಿಗಳ ರಾಜಕೀಯ ದಾಳಗಳಾಗಿ ಬಳಸಲ್ಪಡುವ ಯುವ ಸಮೂಹವು ಈ ಪ್ರಭಾವದಿಂದ ಹೊರಬರಲಿದೆ. ಯುವ ಸಮೂಹಕ್ಕೆ ಬೇಕಾಗಿರುವುದು ಸುಭದ್ರ, ಸೂಕ್ತ, ಸುರಕ್ಷಿತ ಉದ್ಯೋಗಗಳು ಮತ್ತು ಮೇಲ್ಮುಖ ಸಾಮಾಜಿಕ ಮತ್ತು ಆರ್ಥಿಕ ಚಲನಶೀಲತೆ ಎನ್ನುವ ವಾಸ್ತವ ಜನತೆಗೆ ಮನದಟ್ಟಾಗಿದೆ. ಉಳಿದಂತೆ ದೇಶದ ಜನಸಂಖ್ಯೆಯು ಯಾವುದೇ ಚಿಂತೆಯಿಲ್ಲದೆ ತಮ್ಮ ಜೀವನವನ್ನು ಮುಂದುವರಿಸಲು ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಬಯಸುತ್ತವೆ. ಒಂದು ವೇಳೆ ಮೋದಿ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೂ ಗೆಲುವು ಅಲ್ಪಾವಧಿಯದ್ದಾಗಿರುತ್ತದೆ ಮತ್ತು ಅವರ ಆಡಳಿತದ ವಿಫಲ ನೀತಿಗಳ ವಿರುದ್ಧ ಹೆಚ್ಚುತ್ತಿರುವ ಅಸಮಾಧಾನವು ವೇಗಗೊಳ್ಳುತ್ತದೆ. ಹಾಗಾಗಿ ನಾವು ಭಾರತದ ರಾಜಕಾರಣ ಮತ್ತು ಸಮಾಜವನ್ನು ಪರಿವರ್ತಿಸುವ ತೀವ್ರವಾದ ಸಾಮಾಜಿಕ ಸಜ್ಜುಗೊಳಿಸುವಿಕೆ ಮತ್ತು ಆಂದೋಲನಗಳ ಯುಗವನ್ನು ಪ್ರವೇಶಿಸುತ್ತಿದ್ದೇವೆ. ಆದಾಗ್ಯೂ, ನರೇಂದ್ರ ಮೋದಿ ಅಷ್ಟು ಸುಲಭವಾಗಿ ಅಧಿಕಾರವನ್ನು ಬಿಡುವುದಿಲ್ಲ ಎಂದು ನಮಗೆ ತಿಳಿದಿದೆ ಏಕೆಂದರೆ ಅವರು ಕಳೆದುಕೊಳ್ಳುವುದು, ಮರೆಮಾಚುವುದು ಬಹಳಷ್ಟಿದೆ. ಆದ್ದರಿಂದ ಮುಂದೆ ಸಾಮಾಜಿಕ ಮತ್ತು ರಾಜಕೀಯ ಪ್ರಕ್ಷುಬ್ಧತೆಯ ಬಗ್ಗೆ ಆತಂಕ ಮಡುಗಟ್ಟಿದೆ. ಜೂನ್ ನಾಲ್ಕನೆಯ ನಂತರ ಖಂಡಿತವಾಗಿಯೂ ಸಂಘರ್ಷಗಳು ಹೆಚ್ಚಾಗುತ್ತವೆ .
![](https://pratidhvani.com/wp-content/uploads/2024/05/rahul-gandhi-pti1-1681645429-1024x576.jpg)
ಎರಡನೆಯದಾಗಿ, ಹಿಂದುತ್ವದ ವಿದ್ಯಮಾನವು ತನ್ನ ಅಂತಿಮ ಘಟ್ಟ ತಲುಪಿದೆ. ಹಿಂದುತ್ವವನ್ನು ಉತ್ತೇಜಿಸುವ ಸೈದ್ಧಾಂತಿಕ ಮತ್ತು ಸಾಂಸ್ಥಿಕ ಒತ್ತಡ, ಭಾರತವು ಜಾತ್ಯತೀತತೆಯನ್ನು ತ್ಯಜಿಸಬೇಕು ಮತ್ತು ಹಿಂದೂ ಬಹುಸಂಖ್ಯಾತ ಆಡಳಿತವನ್ನು ಬಹಿರಂಗವಾಗಿ ಅಳವಡಿಸಿಕೊಳ್ಳಬೇಕು ಎಂಬ ಆರೆಸ್ಸೆಸ್ ಕಲ್ಪನೆಯು ಅದರ ಆಕರ್ಷಣೆಯನ್ನು ಕಳೆದುಕೊಂಡಿದೆ. 90ರ ದಶಕದ ಆರಂಭದಲ್ಲಿ ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆ, ಬಾಬರಿ ಮಸೀದಿ ಧ್ವಂಸ ಮತ್ತು 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವ ಮೂಲಕ ಭಾರತದ ಆಡಳಿತ ಯಂತ್ರವನ್ನು ವಶಪಡಿಸಿಕೊಳ್ಳುವುದರೊಂದಿಗೆ ಪ್ರಾರಂಭವಾದ ಇದು ತನ್ನ ವೇಗವನ್ನು ಕಳೆದುಕೊಂಡಿದೆ. ಬಿಜೆಪಿ ಮತ್ತು ಆರೆಸ್ಸೆಸ್ ಎರಡೂ ದೀರ್ಘಕಾಲದಿಂದ ಬಯಸಿದ ಮತ್ತು ಅಂತಿಮವಾಗಿ ಸಾಧಿಸಿದ ಅದೇ ಶಕ್ತಿಯಿಂದ ಭ್ರಷ್ಟವಾಗಿವೆ.
ಆದರೆ ಹಿಂದುತ್ವವು ಶೀಘ್ರದಲ್ಲೇ ಕಣ್ಮರೆಯಾಗುವುದಿಲ್ಲ. ಸಮಾಜದ ಹೊರ ವಾತಾವರಣದಲ್ಲಿ ಇದು ಇನ್ನೂ ಪ್ರಸ್ತುತತೆ ಪಡೆದುಕೊಂಡಿರುತ್ತದೆ. ಹಿರಿಯ ತಲೆಮಾರಿನ ಜನರನ್ನು ಇದು ಇನ್ನೂ ಬಾಧಿಸುತ್ತದೆ. ಆದರೆ ಹೊಸ ಅನುಯಾಯಿಗಳನ್ನು ಸಂಪರ್ಕಿಸಲಾಗುವುದಿಲ್ಲ ಅಥವಾ ಜನರನ್ನು ಶರಣಾಗುವಂತೆ ಹೆದರಿಸುವ ಅದರ ಸಾಮರ್ಥ್ಯವನ್ನು ಕಳೆದಕೊಂಡಿದೆ. ಈ ಕುಸಿತಕ್ಕೆ ಸ್ವತಃ ನರೇಂದ್ರ ಮೋದಿಯವರೇ ಕಾರಣ. ಹಿಂದುತ್ವದ ಆಕರ್ಷಣೆಯನ್ನು ಜನಪ್ರಿಯಗೊಳಿಸುವಲ್ಲಿ ಮತ್ತು ಅದರ ರಾಜಕೀಯ ಮತ್ತು ಸಾಮಾಜಿಕ ಪ್ರಾಬಲ್ಯವನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರೂ, ಅದರ ಭವಿಷ್ಯವನ್ನು ದುರ್ಬಲಗೊಳಿಸಲು ಅವರು ಕಾರಣರಾಗಿದ್ದಾರೆ. ಪರಮಾತ್ಮನಿಂದ ನೇರವಾಗಿ ಸಂದೇಶಗಳನ್ನು ಸ್ವೀಕರಿಸುವ ಪ್ರವಾದಿಯಾಗಿ ಸ್ವಯಂ-ನಿಯೋಜಿತ ಪಾತ್ರದಲ್ಲಿ ಅವರು ತಮ್ಮ ಮೂಲ ಪರಿವಾರಕ್ಕಿಂತ ದೊಡ್ಡದಾಗಿ ಬೆಳೆದಿದ್ದಾರೆ .ಆರೆಸ್ಸೆಸ್ ತನ್ನ ದೀರ್ಘಕಾಲೀನ ಉಳಿವಿಗಾಗಿ ಒಂದು ಹಂತದಲ್ಲಿ ಮೋದಿಯನ್ನು ತ್ಯಜಿಸಬೇಕಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
![](https://pratidhvani.com/wp-content/uploads/2024/06/lokshabha-result--1024x576.webp)
ಮೂರನೆಯದಾಗಿ, ಭಾರತದ ಎಡಪಂಥೀಯತೆ ಪುನರುಜ್ಜೀವನಗೊಳ್ಳುತ್ತದೆ. ಇಲ್ಲಿ ನಾನು ಸ್ಥಾಪಿತ ಎಡಪಕ್ಷಗಳ ಬಗ್ಗೆ ಮಾತನಾಡುತ್ತಿಲ್ಲ. ಭಾರತದ ರಾಜಕಾರಣದಲ್ಲಿ ಅನೇಕ ದಶಕಗಳಲ್ಲಿ ಹೊರಹೊಮ್ಮಿದ ಅತಿದೊಡ್ಡ ಎಡಪಂಥೀಯ ಚಿಂತಕ ಮತ್ತು ನಾಯಕ ಎಂದರೆ ಕಾಂಗ್ರೆಸ್ ಪಕ್ಷದ ಉತ್ಸಾಹಭರಿತ ನಾಯಕ ರಾಹುಲ್ ಗಾಂಧಿ. ಕಳೆದ ಒಂದು ವರ್ಷದಲ್ಲಿ ರಾಹುಲ್ ರಾಷ್ಟ್ರೀಯ ಚರ್ಚೆಯನ್ನು ಹಿಂದೂ-ಮುಸ್ಲಿಂ ವಿಭಜನೆಗಳ ವಿಷಯದಿಂದ ದೃಢವಾಗಿ ಬೇರೆಡೆಗೆ ತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಪತ್ತಿನ ಅಸಮಾನತೆ, ಜೀವನೋಪಾಯ, ಕಾರ್ಮಿಕರಿಗೆ ಉತ್ತಮ ವೇತನ, ಬಡವರ ಕಲ್ಯಾಣ ಮತ್ತು ಸುಧಾರಿತ ರೈತರ ಆದಾಯದ ಸಮಸ್ಯೆಗಳನ್ನು ರಾಜಕೀಯ ಸಂಕಥನದ ಕೇಂದ್ರ ಬಿಂದುವಾಗಿ ಮಾಡಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಹಲವು ದಶಕಗಳಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷಗಳಿಂದ ಮತ್ತು ಜಾತಿ ಆಧಾರಿತ ಪಕ್ಷಗಳಿಂದ ಸಂಪರ್ಕಿಸಲು ಸಾಧ್ಯವಾಗದಿದ್ದ ವರ್ಗ, ಜಾತಿ ಮತ್ತು ಸಾಂವಿಧಾನಿಕ ಮೌಲ್ಯಗಳ ಮನವರಿಕೆಯಾಗುವ ವೇದಿಕೆಯನ್ನು ರಾಹುಲ್ ಅದ್ಭುತವಾಗಿ ಸಂಯೋಜಿಸಿದ್ದಾರೆ.
ಸಂಪತ್ತಿನ ಮರುಹಂಚಿಕೆ, ಮೀಸಲಾತಿಯನ್ನು ವಿಸ್ತರಿಸಲು ರಾಷ್ಟ್ರೀಯ ಜಾತಿ ಜನಗಣತಿಗೆ ಕರೆ ನೀಡುವ ಮೂಲಕ ಮತ್ತು ಭಾರತೀಯ ಸಂವಿಧಾನವನ್ನು ಬಲವಾಗಿ ರಕ್ಷಿಸುವ ಮೂಲಕ ಅವರು ಮಾರ್ಕ್ಸ್, ಪೆರಿಯಾರ್ ಮತ್ತು ಅಂಬೇಡ್ಕರ್ ಅವರ ತ್ರಿಮೂರ್ತಿಗಳನ್ನು ಈ ಹಿಂದೆ ಯಾವುದೇ ಮುಖ್ಯವಾಹಿನಿಯ ರಾಜಕೀಯ ನಾಯಕರು ಪ್ರಯತ್ನಿಸದ ರೀತಿಯಲ್ಲಿ ಕೌಶಲ್ಯದಿಂದ ಒಟ್ಟುಗೂಡಿಸಿದ್ದಾರೆ. ಸಹಜವಾಗಿಯೇ ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಗಮನಿಸಿದರೆ ಪಕ್ಷವು ಈ ವಿಚಾರಗಳನ್ನು ಎಷ್ಟರ ಮಟ್ಟಿಗೆ ಕೈಗೆತ್ತಿಕೊಳ್ಳುತ್ತದೆ ಎಂಬುದು ಚರ್ಚಾಸ್ಪದ ಪ್ರಶ್ನೆಯಾಗಿದೆ. ಆದಾಗ್ಯೂ, ಈ ಪರಿಕಲ್ಪನೆಗಳು ಭಾರತೀಯರಲ್ಲಿ, ವಿಶೇಷವಾಗಿ ಬಡವರು, ದಲಿತರು, ಹಿಂದುಳಿದ ಜಾತಿಗಳು, ಮಹಿಳೆಯರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಆಳವಾದ ಸಂಬಂಧವನ್ನು ಹೊಂದಿವೆ ಎಂಬುದರಲ್ಲಿ ಸಂದೇಹವಿಲ್ಲ. ಈ ತೀವ್ರಗಾಮಿ, ಸಾಮಾಜಿಕ ಮತ್ತು ಪ್ರಜಾಸತ್ತಾತ್ಮಕ ದೃಷ್ಟಿಕೋನದ ಸುತ್ತ ಜಾಗೃತ ಜನಸಮೂಹವನ್ನು ಪರಿಣಾಮಕಾರಿಯಾಗಿ ಸಂಘಟಿಸಬಲ್ಲ ಯಾರಾದರೂ ಮುಂದಿನ ದಶಕದಲ್ಲಿ ಖಂಡಿತವಾಗಿಯೂ ಪ್ರಾಬಲ್ಯ ಸಾಧಿಸಲಿದ್ದಾರೆ.
![](https://pratidhvani.com/wp-content/uploads/2024/06/images-2024-06-04T073628.607.jpg)
ಪ್ರಜಾಪ್ರಭುತ್ವದ ಭವಿಷ್ಯದ ದಿನಗಳು
ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ಕಳೆದ ದಶಕದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಿರಂತರ ದಾಳಿಗಳು ನಡೆದಿವೆ ಮತ್ತು ಅದರ ಮೂಲ ಸಂರಚನೆಗಳಿಗೆ ಗಂಭೀರ ಧಕ್ಕೆಯುಂಟಾಗಿದೆ. ಆದಾಗ್ಯೂ, ಯಾವುದೇ ಸಮಾಜದಲ್ಲಿ ಪ್ರಜಾಪ್ರಭುತ್ವವು ಕೇವಲ ದೇವತೆಯಂತೆ ಪೂಜಿಸಬೇಕಾದ ಸಾಂಕೇತಿಕ ಸಂಸ್ಥೆಗಳ ಗುಂಪಾಗಿ ಇರುವುದಿಲ್ಲ. ಬದಲಾಗಿ ಸರ್ವಾಧಿಕಾರದ ವಿರುದ್ಧ ನಿರಂತರ, ಪಟ್ಟುಬಿಡದ ಪ್ರಯತ್ನಗಳನ್ನು ಒಳಗೊಂಡಿರುವ ಕ್ರಿಯಾತ್ಮಕ ಜೀವಂತ ಪ್ರಕ್ರಿಯೆಯಾಗಿರುತ್ತದೆ. ಆ ಅರ್ಥದಲ್ಲಿ ಪ್ರಜಾಪ್ರಭುತ್ವವು ಎಲ್ಲಿಯೂ ಕೊನೆಗಾಣಲು ಸಾಧ್ಯವಿಲ್ಲ ಏಕೆಂದರೆ ಅದು ಅನ್ಯಾಯ, ದಬ್ಬಾಳಿಕೆ ಮತ್ತು ಅಧಿಕಾರ ಮತ್ತು ಸಂಪನ್ಮೂಲಗಳ ಮೇಲೆ ಏಕಸ್ವಾಮ್ಯವನ್ನು ಸ್ಥಾಪಿಸುವ ಹೋರಾಟವಾಗಿರುತ್ತದೆ. 2024 ರ ಚುನಾವಣಾ ಪ್ರಚಾರವು, ತಮ್ಮ ವಿರುದ್ಧ ಎಲ್ಲಾ ಅಡೆತಡೆಗಳ ಹೊರತಾಗಿಯೂ, ಭಾರತೀಯ ಪ್ರತಿಪಕ್ಷಗಳು ಹೇಗೆ ಹೋರಾಡಿದವು ಎಂಬುದನ್ನು ತೋರಿಸಿದೆ, ಚುನಾವಣೆಯಲ್ಲಿ ಮೋದಿ ಆಡಳಿತವನ್ನು ಉರುಳಿಸಲು ಸಹ ನಿರೀಕ್ಷಿಸುತ್ತದೆ. ಇದು ಪ್ರಜಾಪ್ರಭುತ್ವವು ಇನ್ನೂ ಜೀವಂತವಾಗಿದೆ ಮತ್ತು ಭವಿಷ್ಯಕ್ಕೆ ಉತ್ತಮ ಸಂಕೇತವಾಗಿದೆ ಎಂಬುದರ ಸ್ಪಷ್ಟ ಸಂಕೇತವಾಗಿದೆ.
ಮೂಲಭೂತ ನೆಲೆಯಲ್ಲಿ ಪ್ರಜಾಪ್ರಭುತ್ವವು ನಿರುದ್ಯೋಗಿಗಳು, ಕಾರ್ಮಿಕರು, ಮಹಿಳೆಯರು ಮತ್ತು ರೈತರ ಅಪಾರ ಜನಸಂಖ್ಯೆಯು ರಾಷ್ಟ್ರೀಯ ಸಂಪನ್ಮೂಲಗಳಲ್ಲಿ ಹೆಚ್ಚಿನ ಪಾಲನ್ನು ಪಡೆಯುವ ಹೋರಾಟದ ರೂಪದಲ್ಲಿಯೂ ತನ್ನನ್ನು ಪ್ರಕಟಗೊಳಿಸುತ್ತದೆ. ಪಂಜಾಬ್ ಮತ್ತು ಹರಿಯಾಣದ ರೈತ ಚಳುವಳಿಗಳು ಸಂಭಾವ್ಯ ಬೆಳವಣಿಗೆಗಳ ಸಂಕೇತವಾಗಿದೆ. ಹಿಂದುತ್ವ ಮತ್ತು ಭಾರತವನ್ನು ಏಕರೂಪಗೊಳಿಸುವ ಬಿಜೆಪಿಯ ಒತ್ತಾಯಕ್ಕೆ ಪ್ರತಿರೋಧವೂ ಹೆಚ್ಚುತ್ತಿದೆ. ಒಂದು ರಾಷ್ಟ್ರ, ಒಂದು ಚುನಾವಣೆ, ಒಂದು ಧರ್ಮ, ಒಂದು ಪಕ್ಷ, ಒಂದು ನಾಯಕ. ಇವೆಲ್ಲವೂ ಪ್ರಶ್ನೆಗೊಳಗಾಗುತ್ತಿದೆ. ಅಧಿಕಾರವನ್ನು ಅತಿಯಾಗಿ ಕೇಂದ್ರೀಕರಿಸುವ ಬಗ್ಗೆ ಜಾಗರೂಕರಾಗಿರುವ ರಾಜ್ಯಗಳಿಂದ ಪ್ರತಿರೋಧ ತೀವ್ರವಾಗುತ್ತದೆ. ನೈಜ ಒಕ್ಕೂಟ ಭಾರತಕ್ಕಾಗಿ ಸಂಘರ್ಷವು ತೀವ್ರಗೊಳ್ಳುತ್ತದೆ.
![](https://pratidhvani.com/wp-content/uploads/2024/06/narendra-modi-1-1024x576.webp)
ಹಿಂದಿ ಹೇರಿಕೆಯ ವಿರುದ್ಧ ದೇಶಾದ್ಯಂತ ವಿವಿಧ ಭಾಷಾ ಗುಂಪುಗಳಿಂದ ಈ ವಿರೋಧ ವ್ಯಕ್ತವಾಗಲಿದೆ. ವೈವಿಧ್ಯಮಯ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಪ್ರದಾಯಗಳು ತಮ್ಮನ್ನು ಹಿಂದೂಗಳು ಎಂದು ಒಟ್ಟುಗೂಡಿಸುವುದರ ವಿರುದ್ಧ ಮತ್ತು ತಮ್ಮದೇ ಆದ ವಿಶಿಷ್ಟ ಧಾರ್ಮಿಕ ಅಥವಾ ಆಧ್ಯಾತ್ಮಿಕ ಆಚರಣೆಗಳಿಗೆ ಮಾನ್ಯತೆಯನ್ನು ನಿರಾಕರಿಸುವುದರ ವಿರುದ್ಧ ಇನ್ನೂ ದೊಡ್ಡ ಪ್ರತಿರೋಧ ಒಡ್ಡಲು ಕಾಯುತ್ತಿವೆ. 2024 ರ ಚುನಾವಣಾ ಸಮರವು ಕೇವಲ ಒಂದು ಸಣ್ಣ ಕಸರತ್ತಿನ ಹಂತವಾಗಿದ್ದು, ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ರೂಪುಗೊಂಡ ಭಾರತೀಯ ಗಣರಾಜ್ಯದ ಮೌಲ್ಯಗಳು, ತತ್ವಗಳು ಮತ್ತು ಪರಂಪರೆಯನ್ನು ರಕ್ಷಿಸಲು ದೊಡ್ಡ ಹೋರಾಟ ಮುಂದಿನ ದಿನಗಳಿಗೆ ಬಾಕಿ ಉಳಿದಿದೆ.
ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ದುಷ್ಟ ಮತ್ತು ನಿರ್ದಯ ಆಡಳಿತವನ್ನು ಎದುರಿಸುತ್ತಿರುವ ಸಾಕಷ್ಟು ಸಂಖ್ಯೆಯ ಭಾರತೀಯರು ಈ ಸವಾಲನ್ನು ಎದುರಿಸಲು ಎದ್ದು ನಿಂತಿದ್ದಾರೆ ಎಂಬುದು ಇಂದು ಹೃದಯಸ್ಪರ್ಶಿಯಾಗಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಎರಡನೇ ಐತಿಹಾಸಿಕ ಹೋರಾಟವನ್ನು ಪ್ರಾರಂಭಿಸಲು ಅಗತ್ಯವಾದ ಧೈರ್ಯ ಮತ್ತು ಸಾಮರ್ಥ್ಯವನ್ನು ಅವರು ತೋರಿಸುತ್ತಿದ್ದಾರೆ. ಜೂನ್ ನಾಲ್ಕರಂದು ಏನೇ ಆಗಲಿ, ನಾವೆಲ್ಲರೂ ಅವರೊಂದಿಗೆ ಸೇರಬೇಕು.
(ಸತ್ಯ ಸಾಗರ್ ಒಬ್ಬ ಪತ್ರಕರ್ತ ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕರ್ತರಾಗಿದ್ದು, ಅವರನ್ನು ಸಂಪರ್ಕಿಸಬಹುದು sagarnama@gmail.com)