
ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. 70 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ಕ್ಕೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಇದೇ ಜನವರಿ 10ರಂದು ಚುನಾವಣಾ ಅಧಿಸೂಚನೆ ಪ್ರಕಟ ಆಗಲಿದ್ದು, ನಾಮಪತ್ರ ಸಲ್ಲಿಕೆಗೆ ಜನವರಿ 17 ಕೊನೆಯ ದಿನವಾಗಿದೆ. ಇನ್ನು ನಾಮಪತ್ರ ವಾಪಸ್ಗೆ ಜನವರಿ 20 ಕೊನೆಯ ದಿನ. ಫೆಬ್ರವರಿ 10ರಂದು ದೆಹಲಿಯ ಚುನಾವಣಾ ಪ್ರಕ್ರಿಯೆ ಅಂತ್ಯ ಆಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಒಕ್ಕೂಟ ಜಯಭೇರಿ ಬಾರಿಸಲಿದೆ ಅಂತಾ ಸಾಕಷ್ಟು ಸಮೀಕ್ಷೆಗಳು ಹೇಳಿದ್ದವು. ಆದರೆ ಚುನಾವಣಾ ಫಲಿತಾಂಶದ ದಿನ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿತ್ತು. ಅಂದೇ ಆಮ್ ಆದ್ಮಿ ಪಾರ್ಟಿ ಸೇರಿದಂತೆ ಕಾಂಗ್ರೆಸ್ ಮೈತ್ರಿಕೂಟದ INDIA ಒಕ್ಕೂಟ EVM ಬಗ್ಗೆ ಅಸಮಾಧಾನ ಹೊರ ಹಾಕಿತ್ತು. ಚುನಾವಣಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿತ್ತು. ಕಟ್ಟ ಕಡೆಯ ನಿಮಿಷಗಳಲ್ಲಿ ಆಗಿದ್ದ ವೋಟಿಂಗ್ ಬಗ್ಗೆ ಭಾರೀ ಅನುಮಾನ ವ್ಯಕ್ತವಾಗಿತ್ತು. ಯಾವೆಲ್ಲಾ ಕ್ಷೇತ್ರಗಳಲ್ಲಿ ವೋಟಿಂಗ್ ಕೊನೇ ಕ್ಷಣಗಳಲ್ಲಿ ಹೆಚ್ಚಾಗಿತ್ತೋ ಆ ಕ್ಷೇತ್ರಗಳಲ್ಲಿ ಬಿಜೆಪಿ ಹಾಗು ಅದರ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಗೆದ್ದಿವೆ ಅಂತಾನೂ ಕಾಂಗ್ರೆಸ್ ಆರೋಪಿಸಿತ್ತು. ಆದರೆ ಯಾವುದಕ್ಕೂ ಚುನಾವಣಾ ಆಯೋಗ ಸೊಪ್ಪು ಹಾಕಿರಲಿಲ್ಲ.

ಇದೀಗ ದೆಹಲಿ ಚುನಾವಣೆ ಘೋಷಣೆ ಆಗಿದ್ದು, ದೆಹಲಿಯನ್ನು ಮೂರು ಬಾರಿ ಆಳ್ವಿಕೆ ಮಾಡಿದ ಮಾಜಿ ಸಿಎಂ ಶೀಲಾ ದೀಕ್ಷಿತ್ ಪುತ್ರರಾಗಿರುವ ಕಾಂಗ್ರೆಸ್ನ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ಹೋದಾಗ ದೆಹಲಿ ಜನರು ಈ ಬಗ್ಗೆ ಪ್ರಶ್ನೆ ಮಾಡ್ತಿದ್ದಾರೆ. ನಾವು ಹಾಕುವ ಮತ ಬಿಜೆಪಿಗೆ ಹೋಗುತ್ತೆ. ನೀವು ಯಾಕೆ ಮತ ಕೇಳ್ತಿದ್ದೀರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ ಎಂದಿರುವ ಸಂದೀಪ್ ದೀಕ್ಷಿತ್. EVM ತೆಗಿಯದೆ ಬೇರೆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಆದರೆ ಮಾಜಿ ಸಂಸದ ಸಂದೀಪ್ ಆಕ್ಷೇಪಣೆಗೂ ಚುನಾವಣಾ ಆಯೋಗ ಉತ್ತರ ಕೊಟ್ಟಿದ್ದು, ಇವಿಎಂ ಹ್ಯಾಕಿಂಗ್ ಅನ್ನೋದೆಲ್ಲಾ ಬೋಗಸ್ ಎಂದಿದೆ.
EVM ಮೇಲಿನ ಅನುಮಾನಕ್ಕೆ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸ್ಪಷ್ಟ ಉತ್ತರ ನೀಡಿದ್ದು, EVM ಮೇಲೆ ಅನುಮಾನಪಡುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ನಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ನಾವು ಮತ್ತೆ ಬ್ಯಾಲೆಟ್ ವೋಟಿಂಗ್ ಪದ್ಧತಿಗೆ ಹೋಗುವುದಕ್ಕೆ ಸಾಧ್ಯವೇ ಇಲ್ಲ. ಭಾರತದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯ ಪರಿಶೀಲನೆಯಲ್ಲೂ EVM ಟೆಸ್ಟ್ ಪಾಸ್ ಆಗಿದೆ. EVM ತಿರುಚುವುದಕ್ಕೇ ಸಾಧ್ಯವೇ ಇಲ್ಲ ಎನ್ನುವ ಮೂಲಕ ಇವಿಎಂ ಟ್ಯಾಂಪರಿಂಗ್ ಅನ್ನೋ ಆರೋಪಕ್ಕೆ ಕೇಂದ್ರ ಚುನಾವಣ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಉತ್ತರಿಸಿದ್ದಾರೆ. ಆದರೂ ಕಾಂಗ್ರೆಸ್ ಸೇರಿದಂತೆ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳಲ್ಲಿ ಮಾತ್ರ ಢವಢವ ನಿಲ್ಲುವ ಹಾಗೆ ಕಾಣ್ತಿಲ್ಲ.







