ಬ್ಲರ್ಬ್: ಮುಸ್ಲಿಮರ ಜನಸಂಖ್ಯೆ 14% ಕ್ಕಿಂತ ಹೆಚ್ಚಿದ್ದರೂ, ಸಿವಿಲ್ ಸೇವೆಗಳಲ್ಲಿ ಅವರ ಪ್ರಾತಿನಿಧ್ಯ ಕೇವಲ 2% ರಿಂದ 3%. ಮುಸ್ಲಿಮರ ಓಲೈಕೆ ಎಂಬ ಮಿಥ್ಯೆಯನ್ನು 1980 ಹಾಗೂ 1990ರ ದಶಕಗಳಲ್ಲಿ ಸೃಷ್ಟಿಸಲಾಗಿತ್ತು. ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿರುವ ಮುಸ್ಲಿಮರ ತುಷ್ಟೀಕರಣ ಎಂಬ ವಾದವು ಬರೀ ಕಟ್ಟುಕತೆ.
ಹಲವು ವರ್ಷಗಳಿಂದ ದೇಶದಲ್ಲಿ ಮುಸ್ಲಿಮರ ತುಷ್ಟೀಕರಣ ನಡೆಯುತ್ತಿತ್ತು ಎಂಬ ವಾದವು ಒಂದು ‘ಭ್ರಾಂತಿ’ಯಾಗಿದೆ, ಹೆಚ್ಚುತ್ತಿರುವ ಧ್ರುವೀಕರಣದಿಂದ ಎಲ್ಲಾ ಪಕ್ಷಗಳು ಮುಸ್ಲಿಂ ಸಮುದಾಯವನ್ನು ಕೈಬಿಡುವಂತೆ ತೋರುತ್ತಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ಹೇಳಿದ್ದಾರೆ.
ಮುಸ್ಲಿಮರ ಓಲೈಕೆ ಎಂಬ ಮಿಥ್ಯೆಯನ್ನು 1980 ಹಾಗೂ 1990ರ ದಶಕಗಳಲ್ಲಿ ಸೃಷ್ಟಿಸಲಾಗಿತ್ತು. ಕೇವಲ ಧ್ರುವೀಕರಣವನ್ನು ಹೆಚ್ಚಿಸಲು ಈ ರೀತಿ ಮಾಡಲಾಗಿತ್ತು, ಮುಸ್ಲಿಂ ಸಮುದಾಯವು ಜನಸಂಖ್ಯೆಯ ಶೇ 14 ಕ್ಕಿಂತ ಹೆಚ್ಚಿದ್ದರೂ, ಸಿವಿಲ್ ಸರ್ವಿಸ್ ಮತ್ತು ಇತರೆ ಸರಕಾರಿ ಸಂಸ್ಥೆಗಳಲ್ಲಿ ಕೇವಲ ಶೇ 2 ರಿಂದ ಶೇ 3 ರಷ್ಟು ಪ್ರಾತಿನಿಧ್ಯ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿರುವ ಮುಸ್ಲಿಮರ ತುಷ್ಟೀಕರಣ ಎಂಬ ವಾದವು ಬರೀ ಕಟ್ಟುಕತೆ. ಇದು ತಮ್ಮ ಉದ್ಯೋಗಗಳನ್ನು ಅವಕಾಶಗಳನ್ನು ಮುಸ್ಲಿಮರು ಕಸಿದುಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಮುಸ್ಲಿಮೇತರರಲ್ಲಿ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕುರೇಶಿ ಮುಸ್ಲಿಮರ ವಿರುದ್ಧ ಹೆಚ್ಚುತ್ತಿರುವ ದ್ವೇಷದ ಭಾಷಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ‘‘ದ್ವೇಷದ ಭಾಷಣ ಸಹಿಸಬಾರದು, ನಮ್ಮಲ್ಲಿ ಇದರ ವಿರುದ್ಧ ಸಾಕಷ್ಟು ಕಾನೂನುಗಳಿವೆ, ಆದರೆ ಅದರ ಜಾರಿ ಮಾಡುವ ನಿರ್ವಹಣೆ ಕಳಪೆಯಾಗಿದೆ,’’ಎಂದು ಅವರು ಹೇಳಿದರು.
“ಧ್ರುವೀಕರಣದ ವಾತಾವರಣದಿಂದಾಗಿ ರಾಜಕೀಯ ಪಕ್ಷಗಳು ಮುಸ್ಲಿಮರನ್ನು ತಲುಪಲು ಬಹಳಷ್ಟು ಶ್ರಮ ಪಡುತ್ತಿಲ್ಲ. ಧ್ರುವೀಕರಣದಿಂದ ಹೀಗಾಗಿದೆ, ಮುಸ್ಲಿಮರ ಬಗ್ಗೆ ಮೃದು ನಿಲುವು ತಾಳಿದರೆ ಹಿಂದುಗಳು ಕೈಜಾರಬಹುದು ಎಂಬ ಭಯ ರಾಜಕೀಯ ಪಕ್ಷಗಳಿಗಿದೆ,” ಎಂದು ಖುರೇಷಿ ಹೇಳಿದ್ದಾರೆ.
“ಅಲ್ಲದೆ, ಅನೇಕ ಪಕ್ಷಗಳು ಮುಸ್ಲಿಂ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲಿ ಅಥವಾ ಇಲ್ಲದಿರಲಿ, ಮುಸ್ಲಿಮರಿಗೆ ಬೇರೆ ಆಯ್ಕೆಗಳಿಲ್ಲ (ಅವರನ್ನು ಬೆಂಬಲಿಸುವುದನ್ನು ಹೊರತುಪಡಿಸಿ), ಆದರೆ, ನಾನು ಈ ಕ್ಷೇತ್ರದಲ್ಲಿ ಪರಿಣಿತ ವಿಶ್ಲೇಷಕನಲ್ಲ” ಎಂದು ಖುರೈಶಿ ಹೇಳಿದರು.
“ಆದಾಗ್ಯೂ, ಬಹುತೇಕ ಎಲ್ಲಾ ಪಕ್ಷಗಳು ಮುಸ್ಲಿಮರನ್ನು ದೂರವಿಡುತ್ತಿವೆ ಮತ್ತು ಮುಸ್ಲಿಂ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ಸುತ್ತಿನ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು ದ್ವೇಷಪೂರಿತ ಭಾಷಣಗಳನ್ನು ಮಾಡಿದ ಅಭ್ಯರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಖುರೈಶಿ, ಅಂತಹ ಪ್ರಕರಣಗಳ ಬಗ್ಗೆ ವೈಯಕ್ತಿಕವಾಗಿ ತಿಳಿದಿಲ್ಲ, ಆದರೆ ಕ್ರಮ ಕೈಗೊಳ್ಳಬೇಕಾದ ಕಡೆ ತೆಗೆದುಕೊಳ್ಳದಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
“ಚುನಾವಣಾ ಆಯೋಗವು ಯಾವಾಗಲೂ ಬಹಳ ಜಾಗರೂಕವಾಗಿದೆ ಮತ್ತು ಭವಿಷ್ಯದ ಚುನಾವಣೆಗಳಲ್ಲಿ ಅವರು ಇನ್ನಷ್ಟು ಜಾಗರೂಕರಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
“ದಿ ಪಾಪ್ಯುಲೇಶನ್ ಮಿಥ್: ಇಸ್ಲಾಂ, ಫ್ಯಾಮಿಲಿ ಪ್ಲಾನಿಂಗ್ ಅಂಡ್ ಪಾಲಿಟಿಕ್ಸ್ ಇನ್ ಇಂಡಿಯಾ” ಎಂಬ ಪುಸ್ತಕವನ್ನು ಬರೆದ ಖುರೈಶಿ, ಮುಸ್ಲಿಮರ ಜನಸಂಖ್ಯೆಯು ಆತಂಕಕಾರಿ ಪ್ರಮಾಣದಲ್ಲಿ ಬೆಳೆಯುತ್ತಿದೆ ಮತ್ತು ಅದು ಭವಿಷ್ಯದಲ್ಲಿ ಹಿಂದೂಗಳ ಜನಸಂಖ್ಯೆಯನ್ನು ಮೀರಿಸುತ್ತದೆ ಅಥವಾ ಸಂಖ್ಯಾತ್ಮಕವಾಗಿ ಸವಾಲು ಹಾಕುತ್ತದೆ ಎಂಬ ನಿರೂಪಣೆಯನ್ನು ತಳ್ಳಿಹಾಕಿದ್ದಾರೆ. ಮುಸ್ಲಿಂ ಮತ್ತು ಹಿಂದೂ ಜನನ ದರಗಳ ನಡುವಿನ ಅಂತರವು ಈಗ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
“ಮುಸ್ಲಿಮರು ಹೆಚ್ಚುತ್ತಿದ್ದಾರೆ ಮತ್ತು ಅವರು ಜನಸಂಖ್ಯಾ ಸ್ಫೋಟಕ್ಕೆ ಕಾರಣರಾಗಿದ್ದಾರೆ ಎಂದು ನಾವು ವರ್ಷಗಳಿಂದ ಕೇಳುತ್ತಿದ್ದೇವೆ. ಹಿಂದೂ ಕುಟುಂಬಕ್ಕೆ ಇಬ್ಬರು ಮಕ್ಕಳಿದ್ದರೆ, ಮುಸ್ಲಿಂ ಕುಟುಂಬಕ್ಕೆ ಹತ್ತು ಮಂದಿ ಎಂಬ ಭಾವನೆ ಮೂಡಿಸಲಾಗುತ್ತದೆ. ಆದರೆ ಅದು ಸತ್ಯಕ್ಕೆ ತುಂಬಾ ದೂರವಿದೆ” ಎಂದು ಅವರು ಹೇಳಿದ್ದಾರೆ.
ಮುಸ್ಲಿಮರ ಬಗ್ಗೆ ದೇಶದಲ್ಲಿ ಮಿಥ್ಯೆಗಳನ್ನು ಸೃಷ್ಟಿಸಲಾಗುತ್ತಿದೆ, ಇದು ಅಲ್ಪಸಂಖ್ಯಾತ ಗುಂಪಿನ ವಿರುದ್ಧ ಹಿಂದೂಗಳಲ್ಲಿ ದ್ವೇಷಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯು ದೇಶದಲ್ಲಿ ಜನಸಂಖ್ಯಾ ಸಮತೋಲನವನ್ನು ಹಾಳುಮಾಡುತ್ತಿದೆ ಎಂಬ ಸಿದ್ಧಾಂತಗಳನ್ನು ನಿರಾಕರಿಸಿದ ಅವರು, ಭಾರತದ ಜನಸಂಖ್ಯಾ ಅನುಪಾತವು ಮುಸ್ಲಿಮರಲ್ಲಿ 1951 ರಲ್ಲಿ ಶೇಕಡಾ 9.8 ರಿಂದ 2011 ರಲ್ಲಿ ಶೇಕಡಾ 14.2 ಕ್ಕೆ ಏರಿಕೆಯಾಗಿದೆ ಮತ್ತು ಹಿಂದೂ ಜನಸಂಖ್ಯೆಯಲ್ಲಿ ಶೇಕಡಾ 84.2 ರಿಂದ ಶೇಕಡಾ 79.8 ಕ್ಕೆ ಇಳಿಕೆಯಾಗಿದೆ ಎಂದು ತೋರಿಸುತ್ತದೆ, ಅಂದರೆ, 60 ವರ್ಷಗಳಲ್ಲಿ ಮುಸಿಮರ ಜನಸಂಖ್ಯೆಯಲ್ಲಿ ಕೇವಲ 4.4 ಶೇಕಡಾ ಮಾತ್ರ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
ರಾಜಕೀಯ ಅಧಿಕಾರವನ್ನು ವಶಪಡಿಸಿಕೊಳ್ಳಲು ಮುಸ್ಲಿಮರು ಪ್ರಯತ್ನಿಸುವುದಿಲ್ಲ ಎಂದು ಖುರೈಶಿ ಹೇಳುತ್ತಾರೆ.
ದೇಶದಲ್ಲಿ ರಾಜಕೀಯ ಅಧಿಕಾರವನ್ನು ವಶಪಡಿಸಿಕೊಳ್ಳಲು ಮುಸ್ಲಿಮರು ಹಿಂದೂ ಜನಸಂಖ್ಯೆಯನ್ನು ಹಿಂದಿಕ್ಕುವ ಷಡ್ಯಂತ್ರದಲ್ಲಿ ತೊಡಗಿದ್ದಾರೆ ಎಂಬ ಮಿಥ್ಯೆಯನ್ನು ಕಟುವಾಗಿ ಟೀಕಿಸಿದ ಅವರು, ಈ ಉದ್ದೇಶಕ್ಕಾಗಿ ಹೆಚ್ಚಿನ ಮಕ್ಕಳಿಗೆ ಜನ್ಮ ನೀಡುವಂತೆ ಅಲ್ಪಸಂಖ್ಯಾತ ಗುಂಪಿಗೆ ಯಾವುದೇ ಮುಸ್ಲಿಂ ನಾಯಕ ಅಥವಾ ವಿದ್ವಾಂಸರು ಸಮುದಾಯಕ್ಕೆ ಒತ್ತಾಯಿಸಲಿಲ್ಲ ಎಂದು ಹೇಳಿದ್ದಾರೆ.
ಮುಸ್ಲಿಮರು ಬಹುಪತ್ನಿತ್ವವನ್ನು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಒಂದು ಸಾಧನವಾಗಿ ಬಳಸುತ್ತಿದ್ದಾರೆ ಎಂಬ ವಾದಗಳನ್ನು ಕೂಡಾ ನಿರಾಕರಿಸಿದ ಮಾಜಿ ಚುನಾವಣಾ ಆಯುಕ್ತ, ಸರ್ಕಾರದ ಅಧ್ಯಯನದ ಪ್ರಕಾರ 1975 ರ ವೇಳೆ, ಎಲ್ಲಾ ಸಮುದಾಯಗಳು ಸ್ವಲ್ಪ ಮಟ್ಟಿಗೆ ಬಹುಪತ್ನಿತ್ವವನ್ನು ಹೊಂದಿದ್ದವು, ಆದರೆ ಅರಿಗೆ ಹೋಲಿಸಿದರೆ ಮುಸ್ಲಿಮರಲ್ಲಿ ಬಹುಪತ್ನಿತ್ವ ಕಡಿಮೆ ಪ್ರಮಾಣದಲ್ಲಿತ್ತು ಎಂದು ತಿಳಿಸಿದ್ದಾರೆ.
ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಭಾಗವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ವೈಯಕ್ತಿಕವಾಗಿ ಹಾಗೆ ಯೋಚಿಸುವುದಿಲ್ಲ ಮತ್ತು ಇದು ವೈಯಕ್ತಿಕ ಆಯ್ಕೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.
ಆದರೆ, ಕುರಾನ್ನಲ್ಲಿ ಮಹಿಳೆಯರು ಮತ್ತು ಪುರುಷರ ಉಡುಪುಗಳ ಬಗ್ಗೆ ಶ್ಲೋಕಗಳಿವೆ ಎಂದು ಅವರು ಹೇಳಿದರು.
ಈ ಶ್ಲೋಕಗಳನ್ನು ಇಸ್ಲಾಂ ಧರ್ಮದ ಪಂಡಿತರು ಉತ್ತಮವಾಗಿ ಅರ್ಥೈಸಿಕೊಳ್ಳಬಹುದು ಎಂದು ಖುರೈಶಿ ಹೇಳಿದರು. ವಾಸ್ತವವಾಗಿ, ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಆಯಾ ಧಾರ್ಮಿಕ ತಜ್ಞರು ವ್ಯಾಖ್ಯಾನಿಸಲು ಬಿಡಬೇಕು ಎಂದು ಅವರು ಹೇಳಿದರು.