ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಜಾರಿ ನಿದೇರ್ಶನಾಲಯ(ಇಡಿ) ತನಿಖೆ ನಡೆಸುತ್ತಿದ್ದು, ಈ ಹಂತದಲ್ಲಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಂದುವರೆದು, ನಾವು ಅಧಿಕಾರಿಗಳಿಗೆ ಮುಕ ಸ್ವಾತಂತ್ರ್ಯ ನೀಡಬೇಕು. ತನಿಖೆ ನಡೆದಾಗ ಸತ್ಯಾಂಶ ಗೊತ್ತಾಗುತ್ತದೆ. ತನಿಖಾ ಹಂತದಲ್ಲಿಈ ರೀತಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇಡೀ ದೇಶದಲ್ಲಿ, ಜಗತ್ತಿನಲ್ಲಿ ಕಾನೂನಿಗಿಂತ ಯಾರೊಬ್ಬರೂ ದೊಡ್ಡವರಿಲ್ಲ.ಇದನ್ನು ಸ್ವತಃ ಈ ಹಿಂದೆ ಕಾಂಗ್ರೆಸ್ ಪಕ್ಷದವರೇ ಹೇಳುತ್ತಿದ್ದರು. ಇದನ್ನು ಅವರು, ಅರ್ಥಮಾಡಿಕೊಳ್ಳಬೇಕು ಎಂದು ನಿರಾಣಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ತನಿಖೆ ಹಂತದಲ್ಲಿರುವಾಗಲೇ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುವುದನ್ನು ನೋಡಿದರೆ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ್ರು ಅನ್ನುವ ಹಾಗೆ ಇದೆ ಎಂದು ವ್ಯಂಗ್ಯವಾಡಿದ್ದಾರೆ.
ಹಾಗಾಗಿ ಯಾವುದೇ ಹೋರಾಟ ಮಾಡಲಾರದೇ ಇಡಿ ತನಿಖೆಗೆ ಸಹಕರಿಬೇಕು ಎಂದ ನಿರಾಣಿ ಅವರು ಮನವಿ ಮಾಡಿದ್ದಾರೆ. ಐ ಟಿ, ಇಡಿ ಇಟ್ಟುಕೊಂಡು ಬಿಜೆಪಿ ಹೆದರಿಸುವ ಕೆಲಸ ಮಾಡುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದಿದ್ದಾರೆ.
ವಿಧಾನಪರಿಷತ್ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಸೀಳು ನಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರಾಣಿ ಸಿದ್ದರಾಮಯ್ಯ ಹಿರಿಯರು, ಸಿಎಂ ಆದವರು, ಸಿದ್ದರಾಮಯ್ಯಗೆ ಸಲಹೆ ಕೊಡವಷ್ಟು ದೊಡ್ಡವರು ನಾವಲ್ಲ. ಹೊಸದಾಗಿ ಬಂದಂತ ರಾಜಕಾರಣಿಗಳು ಹಿರಿಯರನ್ನು ಅನುಕರಣೆ ಮಾಡುತ್ತಾರೆ. ಅನುಕರಣೆ ಮಟ್ಟದಲ್ಲಿ ಮಾರ್ಗದರ್ಶನ, ಸಲಹೆ ಇರಬೇಕು ಎಂದು ಹೇಳಿದ್ದಾರೆ.