ಮಧ್ಯಪ್ರದೇಶದ ಬಡಿ ಜಾರಿಯಾ ಗ್ರಾಮದಲ್ಲಿ ಬುಡಕಟ್ಟು ಮಹಿಳೆಯೊಬ್ಬರು ಚಿರತೆಯೊಂದಿಗೆ ತೀವ್ರ ಸೆಣಸಾಟದ ನಂತರ ತಮ್ಮ ಎಂಟು ವರ್ಷದ ಮಗನನ್ನು ಚಿರತೆಯಿಂದ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನಿಂದ 500 ಕಿ.ಮೀ ದೂರದಲ್ಲಿರುವ ಸಿಧಿ ಜಿಲ್ಲೆಯ ಸಂಜಯ್ ಟೈಗರ್ ರಿಸರ್ವ್ನ ಬಫರ್ ವಲಯದಲ್ಲಿ ಈ ಘಟನೆ ನಡೆದಿದೆ.
ಬೈಗಾ ಬುಡಕಟ್ಟು ಜನಾಂಗಕ್ಕೆ ಸೇರಿದ ಕಿರಣ್ ಎಂಬ ಮಹಿಳೆ ಚಿರತೆಯೊಂದಿಗೆ ಸೆಣಸಾಡಿ ಇದೀಗ ಸುದ್ದಿಯಲ್ಲಿದ್ದಾರೆ. ಎಂದಿನಂತೆ ಮಹಿಳೆ ತಮ್ಮ ಮೂವರು ಮಕ್ಕಳೊಂದಿಗೆ ತಮ್ಮ ಗುಡಿಸಿಲಿನ ಹೊರಗೆ ಚಳಿಗೆ ಬೆಂಕಿ ಕಾಯಿಸಿಕೊಂಡು ಕುಳಿತಿದ್ದ ಸಮಯದಲ್ಲಿ ಇದ್ದಕ್ಕಿದಂತೆಯೇ ಚಿರತೆಯೊಂದು ಕಾಣಿಸಿಕೊಂಡಿದೆ. ನೋಡುವಷ್ಟರಲ್ಲಿ ಚಿರತೆಯು ತನ್ನ ಎಂಟು ವರ್ಷದ ಮಗನನ್ನು ಕಚ್ಚಿಕೊಂಡು ಹೋಗಿರುವುದನ್ನು ಕಿರಣ್ ನೋಡಿದ್ದಾರೆ. ಧೃತಿಗೆಡದೆ ತನ್ನ ಎರಡು ಮಕ್ಕಳನ್ನು ಗುಡಿಸಿಲಿನ ಒಳಗಡೆ ಇರುವಂತೆ ಹೇಳಿ ಚಿರತೆಯನ್ನು ಬೆನ್ನಟ್ಟಿ ತನ್ನ ಮಗನನ್ನು ರಕ್ಷಿಸಿದ್ದಾಳೆ. ಆಧರೆ, ಚಿರತೆ ಇಬ್ಬರ ಮೇಲೂ ದಾಳಿ ಮಾಡಿರುವ ಕಾರಣ ತಾಯಿ ಮತ್ತು ಮಗುವಿಗೆ ಗಾಯಗಳಾಗಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೀಗ ಮಹಿಳೆಯ ಶೌರ್ಯ ಪರಾಕ್ರಮವನ್ನ ಸ್ವತಃ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ರವರು ಟ್ವೀಟ್ ಮಾಡುವ ಮೂಲಕ ಮಹಿಳೆಯ ತೋರಿದ ಧೈರ್ಯವನ್ನ ಹಾಡಿ ಹೊಗಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅರಣ್ಯ ಅಧಿಕಾರಿ ವೈ.ಪಿ.ಸಿಂಗ್ ಮಹಿಳೆಯು ಘಟನೆಯ ಆಘಾತಕ್ಕೊಳಗಾಗಿದ್ದು ಆಕೆಗೆ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಹೇಳಿದ್ದಾರೆ. ಮಹಹಿಳೆಯು ಚಿರತೆಯ್ನು ಸುಮಾರು ಒಂದು ಕಿಲೋಮೀಟರ್ಗೂ ದೂರ ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಚಿರತೆಯು ಪೊದೆಯಲ್ಲಿ ಅಡಗಿ ಕುಳಿತುಕೊಂಡಿತ್ತು ಮತ್ತು ಮಹಿಳೆಯು ಚಿರತೆಯನನ್ನು ಬೆದರಿಸಿ ಮಗುವನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಚಿರತೆಯು ಮಹಿಳೆಯ ಧೈರ್ಯವನ್ನ ನೋಡಿ ಮಗುವನ್ನು ಕೆಳಗೆ ಬಿಟ್ಟಿದ್ದೆ. ಕಿರಣ್ ತನ್ನ ಮಗನನ್ನು ಎತ್ತಿಕೊಂಡಾಗ ಚಿರತೆಯು ಮಗು ಮತ್ತು ತಾಯಿ ಇಬ್ಬರ ಮೇಲೂ ದಾಳಿ ಮಾಡಿದೆ. ಆದರೆ, ಆಕೆ ದೈರ್ಯಗೆಡದೆ ಚಿರತೆಯನ್ನ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿರತೆಯೊಂದಿಗೆ ಕಾದಾಡುವ ಸಮಯದಲ್ಲಿ ಮಹಿಳೆ ತನ್ನ ರಕ್ಷಣೆಗಾಗಿ ಸಹಾಯಕ್ಕಾಗಿ ಕೂಗಿದ್ದಾಳೆ ಮತ್ತು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ ಕೂಡಲೇ ಚಿರತೆ ಕಾಡಿನಲ್ಲಿ ಒಡಿಹೋಗಿದೆ. ದಾಳಿಯಲ್ಲಿ ಬಾಲಕನ ಕೆನ್ನೆ, ಬೆನ್ನು ಮತ್ತು ಕಣ್ಣುಗಳಿಗೆ ಗಾಯಗಳಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
ತಕ್ಷಣವೇ ಬಫರ್ ರೇಂಜರ್ ಅಸೀಮ್ ತಕ್ಷಣವೇ ಸ್ಥಳಕ್ಕೆ ಧಾವಿಸಿ ಮಹಿಳೆ ಮತ್ತು ಆಕೆಯ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ಸಂಪೂರ್ಣ ಖರ್ಚು ವೆಚ್ಚವನ್ನು ಅರಣ್ಯ ಇಲಾಖೆ ಕಡೆಯಿಂದ ಭರಿಸುವುದಾಗಿ ಹೇಳಿದ್ದಾರೆ.