ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಡೆದ ಮಳೆಗಾಲದ ಅಧಿವೇಶನದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಜಾರಿಗೆ ತಂದಿತ್ತು. ಈ ಕೃಷಿ ಕಾನೂನುಗಳು ಸಂಪೂರ್ಣ ಬಂಡವಾಳಶಾಹಿಯಾಗಿದ್ದು, ಇದು ರೈತ ವಿರೋಧಿ ಮಸೂದೆ ಎಂದು ರೈತರು ದೆಹಲಿಯ ಮೂರು ಗಡಿ ಭಾಗಗಳಲ್ಲಿ ಒಂದು ವರ್ಷಗಳ ಕಾಲ ಗಾಳಿ, ಮಳೆ, ಬಿಸಿಲು, ಚಳಿ, ಕೋವಿಡ್ ಎರಡನೇ ಅಲೆಯನ್ನು ಲೆಕ್ಕಿಸದೆ ಪ್ರತಿಭಟಿಸಿ ಕೊನೆಗೆ ಮೋದಿಯವರೇ ಆ ಕಾಯ್ದೆಗಳನ್ನು ಹಿಂತಗೆದುಕೊಳ್ಳುವಂತೆ ಮಾಡಿ ಯಶಸ್ವಿಯಾಗಿದ್ದು ಕಣ್ಮುಂದೆ ಇದೆ.
ಒಂದು ವರ್ಷಗಳ ಕಾಲ ನಡೆದ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಹಲವು ಸಾರಿ ಪ್ರಯತ್ನಿಸಿದ್ದರೂ ರೈತರು ಯಾವುದಕ್ಕೂ ಜಗ್ಗದೆ ಮೋದಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದ್ದರು. ಕಳೆದ ತಿಂಗಳು ಭಾರತದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಜನ್ಮ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ಇದು ವಿರೋಧ ಪಕ್ಷಗಳಿಗಿಂತ ಹೆಚ್ಚಾಗಿ ರೈತಾಪಿ ವರ್ಗದವರು ಸಂತಸವನ್ನ ವ್ಯಕ್ತಪಡಿಸಿದ್ದರು.
ಆದರೆ, ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, “ಸದ್ಯಕ್ಕೆ ಕೃಷಿ ಕಾನೂನುಗಳನ್ನು ಹಿಂಪಡೆದಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಸದ್ಯ ರದ್ದಾಗಿರುವ ಕಾನೂನುಗಳನ್ನು ಮರಳಿ ಜಾರಿಗೆ ತರಲಾಗುವುದು,” ಎಂದು ಹೇಳುವ ಮೂಲಕ ವಿವಾದ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ.
ಮುಂದುವರೆದು, ಕೃಷಿ ಕಾನೂನುಗಳು ರದ್ದಾಗಿರುವುದರಿಂದ ಕೆಲವರಿಗೆ ತೃಪ್ತಿ ಆಗಿದೆ. ಸಂಸತ್ತಿನಲ್ಲಿ ಚರ್ಚೆಯ ಕೊರತೆಯಿಂದಾಗಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಯಿತು. ಆದರೆ, ನಾವು ಒಂದು ಹೆಜ್ಜೆ ಹಿಂದೆ ಇಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ದೊಡ್ಡ ಹೆಜ್ಜೆ ಗುರುತಾಗಲಿದೆ ಎಂದು ತೋಮರ್ ಹೇಳಿದ್ದಾರೆ.
ನಾವು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 70 ವರ್ಷಗಳ ನಂತರ ರೈತರ ಸುಧಾರಣೆಗಾಗಿ ಕೃಷಿ ಕಾನೂನನ್ನು ಜಾರಿಗೆ ತಂದಿದ್ದೆವು. ಆದರೆ, ಈ ಕಾಯ್ದೆ ಕೆಲವರಿಗೆ ಇಷ್ಟವಾಗಲಿಲ್ಲ. ಸರ್ಕಾರಕ್ಕೆ ಇದರಿಂದ ಯಾವುದೇ ರೀತಿಯ ನಿರಾಸೆಯಾಗಿಲ್ಲ. ಮುಂದಿನ ದಿನಗಳಲ್ಲಿ ರೈತರ ಸುಧಾರಣೆಗಾಗಿ ಕಾನೂನನ್ನು ಜಾರಿಗೆ ತರುತ್ತೇವೆ . ಏಕೆಂದರೆ. ರೈತರು ದೇಶದ ಬೆನ್ನೆಲುಬು ಎಂದು ಮೋದಿ ಸರ್ಕಾರಕ್ಕೆ ಗೊತ್ತಿದೆ ಎಂದಿದ್ದಾರೆ.

ಕೃಷಿ ಕಾನೂನುಗಳನ್ನು ರದ್ದು ಮಾಡುವ ಎರಡು ದಿನ ಮೊದಲು ಸರ್ಕಾರವು `Objects & Reasons’ ಕುರಿತು ಟಿಪ್ಪಣಿಯನ್ನು ನೀಡಿತ್ತು. ತೋಮರ್ ಸಹಿ ಇದ್ದ ಟಿಪ್ಪಣಿಯಲ್ಲಿ ರೈತರ ಸುಧಾರಣೆಯನ್ನು ಸಹಿಸದೆ ಅಡ್ಡ ನಿಂತಿರುವುದನ್ನು ದೂಷಿಸಿದೆ ಮತ್ತು ಮೋದಿ ಸರ್ಕಾರವು ರೈತರನ್ನು ಜಾಗೃತಗೊಳಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.
ಸದ್ಯ ತೋಮರ್ ನೀಡಿರುವ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೋದಿ ಸರ್ಕಾರದ ವಿರುದ್ದ ಹರಿಹಾಯುತ್ತಿದ್ದಾರೆ. ಆದರೆ, ಮೋದಿ ಸಂಪುಟ ಸಹೋದ್ಯೋಗಿ ತೋಮರ್ರವರ ಈ ಹೇಳಿಕೆಗಳು ಚುನಾವಣೆಯಲ್ಲಿ ಬಿಜೆಪಿ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಕೃಷಿ ಕಾನೂನು ರದ್ದತಿ ವಿಚಾರವಾಗಿ ಹಲವರು ಮೋದಿ ಸರ್ಕಾರದ ಕ್ರಮವನ್ನ ಶ್ಲಾಘಿಸಿದ್ದರೆ ಹಲವರು ಇದು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೋದಿ ಸರ್ಕಾರ ಹೊಡೆದಿರುವ ಯು-ಟರ್ನ್ ಎಂದು ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಬಿಜೆಪಿಯ ಎಲ್ಲಾ ಸಚಿವರು, ಸಂಸದರು, ಶಾಸಕರ ಸಹಿತ ರೈತರ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ಪ್ರತಿಭಟನಾನಿರತು ಯಾರೂ ರೈತರಲ್ಲ ಎಲ್ಲಾ ದಲ್ಲಾಳಿಗಳು, ಖಲಿಸ್ತಾನಿಗಳು ಎಂದೆಲ್ಲ ರೈತರನ್ನು ಟೀಕಿಸಿದ್ದರು. ಆದರೆ, ರೈತರು ಜಗ್ಗದೆ ಪ್ರತಿಭಟನೆ ಮಾಡಿದ್ದರು. ರೈತರ ಪ್ರತಿಭಟನೆಗೆ ಮಣಿದ ಮೋದಿ ಸರ್ಕಾರ ಯಾವುದೇ ಕಾರಣಕ್ಕೂ ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ ಎಂದಿ ಬೊಬ್ಬೆ ಹೊಡೆದು ಕೊನೆಗೆ ರೈತರ ಮುಂದೆ ಮಂಡಿಯೂರಿತು.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಹೆಚ್ಚಾಗಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ರೈತರು ಪ್ರತಿಭಟಿಸಿದ್ದರು. ಉತ್ತರಪ್ರದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಎಂದೇ ವ್ಯಾಖ್ಯಾನಿಸಲಾಗುವ ಬಿಜೆಪಿ ಸರ್ಕಾರವು ಅಲ್ಲಿನ ಜನರ ಕೋಪಕ್ಕೆ ತುತ್ತಾಯಿತು. ಪ್ರತಿಭಟನೆಯಲ್ಲಿ ಹೆಚ್ಚಾಗಿ ಭಾಗವಹಿಸಿದ್ದ ರೈತರು ಪಂಜಾಬ್ದವರಾಗಿದ್ದು, ಅಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಎರಡು ರಾಜ್ಯಗಳು ಬಿಜೆಪಿಗೆ ಮುಖ್ಯವಾಗಿದ್ದು ಎರಡು ರಾಜ್ಯಗಳಲ್ಲಿ ಬಿಜೆಪಿ ಗೆಲುವ ಲೆಕ್ಕಾಚಾರ ಹಾಕಿಕೊಂಡಿದೆ ಎನ್ನಲಾಗಿದೆ.
ಪ್ರತಿಭಟನಾ ನಿರತ ರೈತರನ್ನು ಹೊಡೆದೋಡಿಸುವಂತೆ ಭದ್ರತಾ ಪಡೆಗಳಿಗೆ ಆದೇಶಿಸಿದ್ದು, ಕೇಂದ್ರ ಸಚಿವ ಅಜಯ್ ಮಿಶ್ರಾನ ನೇತೃತ್ವದಲ್ಲಿ ನಡೆದ ಲಖೀಂಪುರ್ ಖೇರಿ ಹತ್ಯಾಕಾಂಡದಂತಹ ವಿಚಾರದಲ್ಲಿ ಈಗಾಗಲೇ ತೀವ್ರ ಮುಜುಗರಕ್ಕೀಡಾಗಿರುವ ಮೋದಿ ಸರ್ಕಾರ ತೋಮರ್ ನೀಡಿರುವ ಹೇಳಿಕೆಯಿಂದ ಹೇಗೆ ಪಾರಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
2024ರಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಒಂದು ವೇಳೆ ಮೋದಿ ನೇತೃತ್ವದ ಎನ್ ಡಿ ಎ ಮೃತ್ರಿ ಕೂಟ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದರೆ ಕೃಷಿ ಕಾನೂನುಗಳನ್ನು ಪುನಃ ಜಾರಿಗೆ ತರಬಹುದು ಎಂಬ ಪ್ರತಿಪಕ್ಷಗಳ ಊಹಾಪೋಹಗಳಿಗೆ ಜೀವ ಸಿಕ್ಕಂತಾಗಿದೆ. ಇದೇ ವಿಚಾರವನ್ನ ಬಂಡವಾಳವನ್ನಾಗಿಸಿಕೊಂಡು ಪ್ರತಿಪಕ್ಷಗಳು ಬಿಜೆಪಿ ವಿರುದ್ದ ದಾಳಿ ಮಾಡುವ ಸಾಧ್ಯತೆ ಈಗ ದಟ್ಟವಾಗಿದೆ. ಮುಂದಿನ ದಿನಗಳಲ್ಲಿ ಈ ವಿಚಾರ ಬಿಜೆಪಿಗೆ ಹೇಗೆ ಮಗ್ಗಲ ಮುಳ್ಳಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ.







