ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುವಾಗ ತನ್ನ ಸುಂದರ ಕಣ್ಣುಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಮೊನಾಲಿಸಾ ಭೋಸ್ಲೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಥಂಪನೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಯಾರ ಮೇಲೆ ಗೊತ್ತೆ ?

ಮಲಯಾಳಂ ಚಿತ್ರದ ಚಿತ್ರೀಕರಣಕ್ಕಾಗಿ ತಿರುವನಂತಪುರದಲ್ಲಿರುವ ಅವರು, ಬೆಳಿಗ್ಗೆ ತಮ್ಮ ಗೆಳೆಯನೊಂದಿಗೆ ಥಂಪನೂರು ಪೊಲೀಸ್ ಠಾಣೆಗೆ ಬಂದು ತಮ್ಮ ತಂದೆ ವಿಜಯ್ ಸಿಂಗ್ ಭೋಸ್ಲೆ ವಿರುದ್ಧ ದೂರು ದಾಖಲಿಸಿದ್ದಾರೆ. ತಮ್ಮ ತಂದೆ ಆಯ್ಕೆ ಮಾಡಿದ ವ್ಯಕ್ತಿಯೊಂದಿಗೆ ಬಲವಂತದ ಮದುವೆ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇಂದು ಸಂಜೆ ಕೇರಳದ ತಿರುವನಂತಪುರಂ ಸಮೀಪದ ದೇವಸ್ಥಾನವೊಂದರಲ್ಲಿ ನಟ ಮೊಹಮ್ಮದ್ ಫರ್ಮಾನ್ ಅವರೊಂದಿಗೆ ಮೊನಾಲಿಸಾ ವಿವಾಹ ಮಾಡಿಕೊಂಡಿದ್ದಾರೆ.ಅವರದ್ದು ಅಂತರ್ ಧರ್ಮೀಯ ವಿವಾಹವಾಗಿದ್ದು, ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದಾರೆ. ಮದುವೆಯ ನಂತರ ಮಾತನಾಡಿದ ಈ ಜೋಡಿ, ‘ನಮಗೆ ಕೇರಳ ಎಂದರೆ ತುಂಬಾ ಇಷ್ಟ. ಇಲ್ಲಿನ ಸುರಕ್ಷತೆ ಮತ್ತು ಪರಿಸರ ಕಂಡು ನಾವು ಇಲ್ಲಿಯೇ ಮದುವೆಯಾಗಲು ನಿರ್ಧರಿಸಿದೆವು’ ಎಂದು ಹೇಳಿದ್ದಾರೆ.

ಮೊನಾಲಿಸಾ ಅವರು ಇಂದೋರ್ ಮೂಲದವರು. ಮೊಹಮ್ಮದ್ ಫರ್ಮಾನ್ ಮಹಾರಾಷ್ಟ್ರದವರು. ಇವರಿಬ್ಬರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಆರು ತಿಂಗಳ ಹಿಂದೆ ಚಿತ್ರೀಕರಣದ ವೇಳೆಯಲ್ಲಿ ಭೇಟಿಯಾಗಿದ್ದರು. ‘ನಾನು ಮೊನಾಲಿಸಾಳನ್ನು ಚಿತ್ರೀಕರಣದ ಸೆಟ್ನಲ್ಲಿ ಭೇಟಿಯಾದೆ. ಆರು ತಿಂಗಳಿನಿಂದ ನಮ್ಮ ಪ್ರೀತಿ ಬೆಳೆದಿದೆ. ಈ ಆರು ತಿಂಗಳು ನಮಗೆ 60 ವರ್ಷಗಳ ಸುದೀರ್ಘ ಬಾಂಧವ್ಯದಂತೆ ಭಾಸವಾಗುತ್ತಿದೆ’ ಎಂದು ಫರ್ಮಾನ್ ಹೇಳಿದ್ದಾರೆ.
ಮಹಾಕುಂಭಮೇಳದಲ್ಲಿ ವೈರಲ್ ಆದ ನಂತರ ಮೊನಾಲಿಸಾಗೆ ಸಿನಿಮಾ ಆಫರ್ಗಳು ಬಂದಿದ್ದು, ಪಿ. ಬಿನು ವರ್ಗೀಸ್ ನಿರ್ದೇಶನದ ಮತ್ತು ಜೀಲಿ ಜಾರ್ಜ್ ನಿರ್ಮಿಸಿದ ‘ನಾಗಮ್ಮ’ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ.






