ಒಂಬತ್ತನೇ ಸಿಖ್ ಗುರು ತೇಗ್ ಬಹದ್ದೂರ್ ಅವರ 400ನೇ ಜನ್ಮ ವಾರ್ಷಿಕೋತ್ಸವದಂದು ಕೆಂಪು ಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಿಖ್ಖರು ಮತ್ತು ಹಿಂದುತ್ವವನ್ನು ಸಮೀಕರಿಸಿ ಮಾತಾನಾಡುತ್ತಾ ಔರಂಗಜೇಬ್ನಿಂದ ಈ ಎರಡೂ ಸಮುದಾಯ ಶೋಷಣೆಗೆ ಒಳಗಾಗಿದೆ ಎಂದು ಹೇಳಿದ್ದಾರೆ.
ಗುರುವಾರ ಕೆಂಪುಕೋಟೆಯಲ್ಲಿ ಮಾತನಾಡಿದ ಮೋದಿ, “ಇತಿಹಾಸ ಸಾಕ್ಷಿಯಾಗಿದೆ, ಈ ಪ್ರಸ್ತುತ ಸಮಯ ಸಾಕ್ಷಿಯಾಗಿದೆ. ಔರಂಗಜೇಬ್ ಮತ್ತು ಅವನ ದುರುಳ ಪಡೆ ಅನೇಕ ತಲೆಗಳನ್ನು ಕತ್ತರಿಸಿದ್ದಾರೆ. ಅವರಿಗೆ ನಮ್ಮ ನಂಬಿಕೆ ಮತ್ತು ಭಕ್ತಿಯನ್ನು ನಮ್ಮಿಂದ ಬೇರ್ಪಡಿಸಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ಈ ಕೆಂಪು ಕೋಟೆ ಸಾಕ್ಷಿಯಾಗಿದೆ” ಎಂದು ಹೇಳಿದ್ದಾರೆ. ಆದರೆ ಅವರ ಸಮೀಕರಣವನ್ನು ಒಪ್ಪದ ಹಲವು ತಜ್ಞರು ಸಿಖ್ಖರ ಮತ್ತು ಬಲಪಂಥೀಯ ಹಿಂದುಗಳನ್ನು ಒಂದು ಸಾಮಾನ್ಯ ನೆಲೆಯಡಿ ತರುವ ಪ್ರಧಾನಿಯವರ ಪ್ರಯತ್ನ ಸಫಲವಾಗದು ಎಂದಿದ್ದಾರೆ.
1675ರಲ್ಲಿ ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಗೊಳಿಸುವುದರ ವಿರುದ್ಧ ನಿಂತಿದ್ದಕ್ಕಾಗಿ ಮೊಘಲ್ ಚಕ್ರವರ್ತಿಯ ಆದೇಶದ ಮೇರೆಗೆ ದೆಹಲಿಯ ಚಾಂದಿನಿ ಚೌಕ್ನಲ್ಲಿ ಗುರು ತೇಗ್ ಬಹದ್ದೂರ್ ಅವರ ಶಿರಚ್ಛೇದ ಮಾಡಲಾಗಿತ್ತು. ಈಗ ಪ್ರಧಾನಿಯವರು ಇತಿಹಾಸದ ಈ ಘಟನೆಯನ್ನು ಗುರಾಣಿಯಾಗಿಟ್ಟುಕೊಂಡು ಹಿಂದೂ ಬಲಪಂಥೀಯರ ಸಮರ್ಥನೆಗೆ ಇಳಿದಿದ್ದಾರೆ. ಆದರೆ “ ಗುರು ತೇಗ್ ಬಹದ್ದೂರ್ ಅವರ ತತ್ವಗಳನ್ನು ನೋಡದೆ ಅವರ ಕಥೆಯೊಂದನ್ನು ಮಾತ್ರ ಪ್ರಧಾನಿ ಹೇಳಿದ್ದಾರೆ. ಸ್ವತಃ ಗುರುನಾನಕ್ ಅವರೇ ಜನಿವಾರವನ್ನು (ಬ್ರಾಹ್ಮಣರು ಧರಿಸುವ ಪವಿತ್ರ ದಾರ) ತಿರಸ್ಕರಿಸಿದ್ದರು. ಆದರೆ ಒಂಭತ್ತನೇ ಗುರು ತೇಗ್ ಸಿಂಗ್ ಅವರು ಔರಂಗಜೇಬನ ಆದೇಶದ ವಿರುದ್ಧ ನಿಲ್ಲುವ ಕಾರಣಕ್ಕಾಗಿ ಮಾತ್ರ ಜನಿವಾರ ಧರಿಸುವ ಕಾಶ್ಮೀರಿ ಪಂಡಿತರ ಜೊತೆ ನಿಂತರು ” ಎಂದು ಪಂಜಾಬ್ನ ಲೇಖಕ ಮತ್ತು ಇತಿಹಾಸಕಾರರಾದ ಅಮನ್ದೀಪ್ ಸಂಧು ಹೇಳುತ್ತಾರೆ. “ಅಂದರೆ ತೇಗ್ ಸಿಂಗರದು ಸ್ಪಷ್ಟವಾಗಿ ತುಳಿತಕ್ಕೊಳಗಾದವರ ಪರನಿಲ್ಲುವ ಸಂದೇಶವಾಗಿದೆ ಹೊರತು ಅದು ಎಂದೂ ಪ್ರಧಾನಿ ಸಾರುತ್ತಿರುವ ಸಂದೇಶವಲ್ಲ. ಅವರು ಇಸ್ಲಾಮೋಫೋಬಿಯಾವನ್ನು ಮತ್ತಷ್ಟು ಹೆಚ್ಚಿಸಲು ಸಿಖ್ ಕಥೆಯನ್ನು ಬಳಸುತ್ತಿದ್ದಾರೆ. ಅವರು ನಿಜವಾಗಿಯೂ ನ್ಯಾಯವನ್ನು ಪ್ರತಿಪಾದಿಸಲು ಬಯಸುತ್ತಿದ್ದರೆ, ಅವರು ಸಂಪೂರ್ಣ ಕಥೆಯನ್ನು ಅದರ ನಂಬಿಕೆ ಮತ್ತು ತತ್ವಗಳೊಂದಿಗೆ ಹೇಳಬೇಕು”ಎಂದು ಸಂಧು ಹೇಳಿದ್ದಾರೆ..
ಪಂಜಾಬಿ ವಿಶ್ವವಿದ್ಯಾನಿಲಯದ ಸಿಖ್ ಧರ್ಮ ಎನ್ಸೈಕ್ಲೋಪೀಡಿಯಾ ವಿಭಾಗದ ಮುಖ್ಯಸ್ಥ ಪರಮವೀರ್ ಸಿಂಗ್ ಅವರು “ಗುರು ತೇಗ್ ಬಹದ್ದೂರ್ ಅವರು ಅವಿಭಜಿತ ಬಂಗಾಳ ಸೇರಿದಂತೆ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಐದು ವರ್ಷಗಳನ್ನು ಕಳೆದಿದ್ದಾರೆ. ಅಲ್ಲಿ ಅವರು ಇತರ ಧರ್ಮಗಳ ಆಡಳಿತಗಾರರು ಮತ್ತು ನಾಯಕರೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದರು” ಎನ್ನುತ್ತಾರೆ.“ಗುರು ತೇಗ್ ಬಹದ್ದೂರ್ ಅವರ ದೃಷ್ಟಿಯಲ್ಲಿ ‘ಬೇರೆ’ ಎನ್ನುವ ಭಾವನೆಯೇ ಇರಲಿಲ್ಲ. ಮೊಘಲ್ ಅಧಿಕಾರಿಗಳ ಬಲವಂತದ ಮತಾಂತರದ ಆದೇಶಕ್ಕೆ ಮಾತ್ರ ಅವರು ಮಧ್ಯಪ್ರವೇಶಿಸಿದರು. ಅವರ ನಿಕಟ ಅನುಯಾಯಿಗಳಲ್ಲಿ ಬಂಗಾಳದ ಗವರ್ನರ್ ಶೈಸ್ತಾ ಖಾನ್ ಮತ್ತು ಕಾಶ್ಮೀರ ಮತ್ತು ಆಗ್ರಾದ ಗವರ್ನರ್ ಆಗಿ ಸೇವೆ ಸಲ್ಲಿಸಿದ ನವಾಬ್ ಸೈಫುದ್ದೀನ್ ಅವರಂತಹ ಮುಸ್ಲಿಂ ಆಡಳಿತಗಾರರಿದ್ದರು” ಎಂದು ಸಿಂಗ್ ಹೇಳಿದರು.
![](https://pratidhvani.com/wp-content/uploads/2022/04/67ce44955ac13f794aadf203d4cb5b8aa594c718376799d5a1fa7873c87fec86.0.gif)
ಸಿಖ್ ವಕೀಲೆ ಮತ್ತು ಕಾರ್ಯಕರ್ತೆ, ಸುರನ್ಯಾ ಅಯ್ಯರ್ “ಪ್ರಧಾನಿ ಗುರು ತೇಗ್ ಬಹದ್ದೂರ್ ಅವರ ಜನ್ಮ ವಾರ್ಷಿಕೋತ್ಸವದಂತಹ ಪವಿತ್ರ ಮತ್ತು ಆಧ್ಯಾತ್ಮಿಕ ಸಂದರ್ಭವನ್ನು ಬಳಸಿಕೊಂಡು ರಾಜಕೀಯಗೊಳಿಸುತ್ತಿರುವುದು ನೋವಿನ ಸಂಗತಿಯಾಗಿದೆ, ಆದರೆ ಇದರಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ ಹಿಂದೂ ಬಲಪಂಥೀಯ ರಾಜಕೀಯದಲ್ಲಿ ಚಕ್ರವರ್ತಿ ಔರಂಗಜೇಬನ ದಬ್ಬಾಳಿಕೆಯ ಆಳ್ವಿಕೆ ಮತ್ತು ಬಲವಂತದ ಧಾರ್ಮಿಕ ಮತಾಂತರವು ಸಾಮಾನ್ಯ ವಿಷಯಗಳಾಗಿವ ಮತ್ತು ಇದನ್ನೇ ಅವರು ತಮ್ಮ ಭಾಷಣದಲ್ಲಿ ಬಳಸಿಕೊಂಡರು” ಎನ್ನುತ್ತಾರೆ. “ಸಿಖ್ಖರು ಔರಂಗಜೇಬ್ ವಿರುದ್ಧ ಬಂಡಾಯದ ಇತಿಹಾಸವನ್ನು ಹೊಂದಿದ್ದಾರೆ ಎಂಬುದು ನಿಜ. ಆದರೆ ಅವರು ಹಿಂದೂ ಧರ್ಮವನ್ನು ತಾತ್ವಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ನಂಬಿಕೆಯ ಆಧಾರದ ಮೇಲೆ ಪ್ರತ್ಯೇಕಗೊಂಡಿರುವ ಇತಿಹಾಸವನ್ನೂ ಹೊಂದಿದ್ದಾರೆ. ಆದ್ದರಿಂದ, ಸಿಖ್ಖರು ಮತ್ತು ಹಿಂದೂ ಬಲಪಂಥೀಯರ ನಡುವೆ ಸಾಮಾನ್ಯ ನೆಲೆಯನ್ನು ಕಂಡುಕೊಳ್ಳುವ ಪ್ರಯತ್ನದ ಭಾಷಣವು ಸಫಲವಾಗುವುದಿಲ್ಲ ಎನ್ನುತ್ತಾರೆ ಸುರನ್ಯಾ ಐಯ್ಯರ್.
“ಸಿಖ್ ಗುರುಗಳು ಗುರು ಗ್ರಂಥ ಸಾಹಿಬ್ ಮೂಲಕ ಬದುಕುತ್ತಾರೆ ಎಂದು ನಂಬುತ್ತಾರೆ ಮತ್ತು ಅವರು ಇಂದು ಮುಸ್ಲಿಮರೊಂದಿಗೆ ನಿಂತಿದ್ದಾರೆ ಏಕೆಂದರೆ ಆದಿವಾಸಿಗಳು, ಮಹಿಳೆಯರು ಮತ್ತು ದಲಿತರ ಮೇಲೆ ಹಿಂದುತ್ವವಾದಿಗಳಿಂದ ದಬ್ಬಾಳಿಕೆಯಾಗುತ್ತಿದೆ” ಎಂದು ಸಂಧು ಹೇಳುತ್ತಾರೆ.
ಮೋದಿ ಔರಂಗಜೇಬನ್ನು ಸಮೀಕರಿಸಿ ಮಾತಾಡಿದ ಅದೇ ದಿನ, ಅಮೃತಸರದ ಗೋಲ್ಡನ್ ಟೆಂಪಲ್ನಲ್ಲಿ ನಡೆದ ಆಚರಣೆಯ ಸಂದರ್ಭದಲ್ಲಿ ಸಿಖ್ಖರ ಧ್ವನಿ ಎಂದು ಹೇಳಲ್ಪಡುವ ಜತೇದಾರ್ ಅಕಾಲ್ ತಖ್ತ್ ಗಿಯಾನಿ ಹರ್ಪ್ರೀತ್ ಸಿಂಗ್ ಅವರು “ಶ್ರೀ ಗುರು ತೇಗ್ ಬಹದ್ದೂರ್ ಸಾಹಿಬ್ ಜಿ ಅವರ ಹುತಾತ್ಮತೆಯ ಉದ್ದೇಶವು ಪ್ರತಿಯೊಬ್ಬರಿಗೂ ತಮ್ಮ ನಂಬಿಕೆ/ಧರ್ಮವನ್ನು ಆಚರಿಸುವ ಹಕ್ಕನ್ನು ಒದಗಿಸುವುದಾಗಿದೆ ಆದರೆ ಇಂದು ಭಾರತದಲ್ಲಿ ಗುರು ಸಾಹಿಬ್ನ ಸಿದ್ಧಾಂತಕ್ಕೆ ವಿರುದ್ಧವಾಗಿ ಅಲ್ಪಸಂಖ್ಯಾತರ ಧಾರ್ಮಿಕ ನಂಬಿಕೆಗಳನ್ನು ಹತ್ತಿಕ್ಕಲಾಗುತ್ತಿದೆ” ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.