ಪ್ರತಿ ವರ್ಷ ಮೇ ೩ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವಾಗಿ ಆಚರಿಸಲ್ಪಡುತ್ತದೆ. ಆದರೆ ದುರಂತದ ಸಂಗತಿ ಎಂದರೆ 575 ದಿನಗಳ ಹಿಂದೆ ಇದೇ ದಿನ (ಮೇ 3, 2022) ಭಾರತದ ಉತ್ತರ ಪ್ರದೇಶದಲ್ಲಿ ಸಿದ್ದಿಕ್ ಕಪ್ಪನ್ ಎಂಬ ಪತ್ರಕರ್ತನನ್ನು ಜೈಲಿಗೆ ತಳ್ಳಲಾಗಿತ್ತು. ಯುಪಿಯ ಹತ್ರಾಸ್ನಲ್ಲಿ ದಲಿತ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರˌ ಹತ್ಯೆ ಮತ್ತು ಆನಂತರದ ಬೆಳವಣಿಗೆಗಳನ್ನು ವರದಿ ಮಾಡಲು ಹೋದಾಗ ಅವರನ್ನು ಬಂಧಿಸಲಾಗಿತ್ತು. ಮೂರು ತಿಂಗಳ ಹಿಂದೆ ಇದೇ ದಿನ ಕಾಶ್ಮೀರದ ಪತ್ರಿಕಾ ಸಂಪಾದಕ ಫಹಾದ್ ಷಾರನ್ನು ಶ್ರೀನಗರದಲ್ಲಿ ಮತ್ತು ನಾಲ್ಕು ತಿಂಗಳ ಹಿಂದೆ ಇದೇ ದಿನ ಸ್ವತಂತ್ರ ಪತ್ರಕರ್ತ ಸಜದ್ ಗುಲ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಭಯೋತ್ಪಾದನಾ ನಿಗ್ರಹ ಕಾನೂನಿನಡಿಯಲ್ಲಿ ಜೈಲಿಗಟ್ಟಿದ್ದರು. ಕಪ್ಪನ್ ಬಂಧನಕ್ಕೊಳಗಾಗಿ ಒಂದೂವರೆ ವರ್ಷಗಳ ನಂತರವೂ ಜಾಮೀನು ಪಡೆಯಲು ಸಾಧ್ಯವಾಗಿಲ್ಲ.
ಫಹಾದ್ ಷಾ ಅವರನ್ನು ಜಾಮೀನು ನೀಡಿದ ನಂತರ ಮತ್ತೊಂದು ಆರೋಪದಡಿಯಲ್ಲಿ ತಕ್ಷಣವೇ ಬಂಧಿಸಲಾಗಿದೆ. ಬಂಧಿತ ಪತ್ರಕರ್ತರನ್ನು ಜೈಲಿನಲ್ಲಿಯೇ ಇಡುವುದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆಯಂತೆ ಜಮ್ಮು ಕಾಶ್ಮೀರ್ ಸರ್ಕಾರವು ಈಗ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯಿದೆ (ಪಿಎಸ್ಎ) ಅಡಿಯಲ್ಲಿ ಬಂಧಿಸಿದೆ. ಇದರನ್ವಯ ‘ಬಂಧಿತ’ ವ್ಯಕ್ತಿಯನ್ನು ಯಾವುದೇ ಆರೋಪ ಮತ್ತು ವಿಚಾರಣೆ ಇಲ್ಲದೆ ಒಂದು ವರ್ಷದವರೆಗೆ ಜೈಲಿನಲ್ಲಿಡಬಹುದು. ಸಜಾದ್ ಗುಲ್ ಅವರನ್ನು ಬಂಧಿಸಲು ಕೂಡ ಪೊಲೀಸರು ಬಳಸಿದ್ದು ಇದೇ ಮಾರ್ಗ. ಆತನ ವಿರುದ್ಧದ ಪ್ರಕರಣವು ನ್ಯಾಯಾಂಗದ ಪರಿಶೀಲನೆಗೂ ಒಳಪಡುವುದಿಲ್ಲ. ಪಿಎಸ್ಎ ಕಾನೂನಿನ ಬಳಕೆಯು ತಿರುಗುವ ಬಾಗಿಲು ಇದ್ದ ಹಾಗೆ. ಒಂದು ವರ್ಷದ ಅವಧಿ ಮುಗಿದ ಮೇಲೆ ಆ ವ್ಯಕ್ತಿಯನ್ನು ತಕ್ಷಣ ಅದೇ ಕಲಮ್ ಅಡಿಯಲ್ಲಿ ಮರು ಬಂಧನಕ್ಕೊಳಪಡಿಸಬಹುದು.
ಕಪ್ಪನ್, ಗುಲ್ ಮತ್ತು ಷಾ ಈ ಮೂವರನ್ನು ಇಂದಿನ ದಿನ ನಾವೆಲ್ಲರು ಸ್ಮರಿಸುವುದು ಅತ್ಯಂತ ಅಗತ್ಯ ˌ ಏಕೆಂದರೆ ಇವರು ಇಂದಿನ ಮೋದಿ ಪ್ರಣೀತ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಪ್ರಭುತ್ವದ ಧೂರ್ತ ಆಕ್ರಮಣದ ಅತ್ಯಂತ ಜ್ವಲಂತ ಸಂಕೇತಗಳಾಗಿದ್ದಾರೆ. ಐದು ವರ್ಷಗಳ ಹಿಂದೆ ಪತ್ರಿಕಾ ಧರ್ಮ ಪಾಲಿಸುತ್ತಿರುವ ನಿಯತ್ತಿನ ಮಾಧ್ಯಮಗಳು ಪ್ರಭುತ್ವದಿಂದ ಎದುರಿಸಿದ ಕಿರುಕುಳ ಮತ್ತು ಬೆದರಿಕೆಯ ಸಾಧನಗಳು ಯಾವುವು ಆಗಿದ್ದವೆಂದರೆ ಮಾನನಷ್ಟ ಮೊಕದ್ದಮೆಯ ದುರುಪಯೋಗ ಮಾತ್ರ. ಆದರೆ ಇಂದು, ಪತ್ರಿಕಾ ಧರ್ಮ ಪಾಲಿಸುವ ಮಾಧ್ಯಮಗಳಿಗೆ ಇರುವ ಬೆದರಿಕೆಯ ವ್ಯಾಪ್ತಿಯು ಹೆಚ್ಚು ಮಾರಣಾಂತಿಕವಾಗಿರುವುದು ದುರ್ದೈವದ ಸಂಗತಿಯಾಗಿದೆ. ಪ್ರಸ್ತುತ ಮೋದಿ ಆಡಳಿತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ಆಕ್ರಮಣದ ಹಲವಾರು ರೂಪಗಳು ಹೀಗಿವೆ:
▪️ಪತ್ರಕರ್ತರ ಬಂಧನ ಮತ್ತು ಜೈಲುವಾಸ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಹಲವಾರು ಜನ ವರದಿಗಾರರ ವಿರುದ್ಧ ನಕಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ (ದಿ ವೈರ್ ವೆಬ್ ಜರ್ನಲ್ ಮತ್ತು ಅದರ ಪತ್ರಕರ್ತರ ವಿರುದ್ಧ ಹೂಡಲಾದ ಮೊಕದ್ದಮೆಗಳು).
▪️ದಿ ವೈರ್ ವೆಬ್ ಜರ್ನಲ್ಲಿನಲ್ಲಿ ಕೆಲಸ ಮಾಡುವ ಪತ್ರಕರ್ತರೂ ಸೇರಿದಂತೆ ಅನೇಕ ಜನ ಆಯ್ದ ಪತ್ರಕರ್ತರ ವಿರುದ್ಧ ಪೆಗಾಸಸ್ ಸ್ಪೈವೇರ್ನಂತಹ ಒಳನುಗ್ಗುವ ಕಣ್ಗಾವಲು ತಂತ್ರಜ್ಞಾನಗಳ ಬಳಕೆ ಮಾಡಲಾಗಿದೆ.
▪️ವರದಿ ಮಾಡಲು ಹೋದಾಗ ವರದಿಗಾರರ ಮೇಲೆ ಮಾಡಲಾದ ದೈಹಿಕ ಹಲ್ಲೆಗಳು. ಈ ಹಲ್ಲೆಗಳನ್ನು ಕೆಲವೊಮ್ಮೆ ಅಧಿಕಾರಿಗಳು ಹಾಗು ಸರಕಾರದ ಬೆಂಬಲವಿರುವ ಅಸಂವಿಧಾನಿಕ ಸಂಘಟನೆಗಳಿಗೆ ಸೇರಿದ ಗೂಂಡಾ ಶಕ್ತಿಗಳು ಮಾಡಿದ್ದಿದೆ.
▪️ಸರ್ಕಾರ ಮತ್ತು ಆಡಳಿತ ಪಕ್ಷಗಳ ತಪ್ಪುಗಳುಳ್ಳ ಬರಹಗಳನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಿ ಹಾಕಲು ಸಾಮಾಜಿಕ ಮಾಧ್ಯಮದ ಮಧ್ಯವರ್ತಿಗಳ ಬೆದರಿಕೆಗಳು. ಬಹಿರಂಗಪಡಿಸದ ಮತ್ತು ಸಂಭಾವ್ಯವಾಗಿ ಕಾಲ್ಪನಿಕ ರಾಷ್ಟ್ರೀಯ ಭದ್ರತೆಯ ನೆಪವನ್ನು ಒಡ್ಡಿ ಅನೇಕ ಸತ್ಯ ಸಂಗತಿಗಳ ಪ್ರಸಾರವನ್ನು ನಿಷೇಧಿಸುವ ಕಾರ್ಯ ಸರಕಾರ ಮಾಡಿದೆ.
▪️’ಆರ್ಥಿಕ ಅಪರಾಧಗಳ’ ಹೆಸರಿನಲ್ಲಿ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರಿಗೆ ಕಿರುಕುಳ ನೀಡಲು ಸರಕಾರದ ಅಧಿಕೃತ ಸಾಂವಿಧಾನಿಕ ತನಿಖಾ ಸಂಸ್ಥೆಗಳ ದುರ್ಬಳಕೆ.
▪️ಸರಕಾರˌ ಆಡಳಿತ ಪಕ್ಷ ಮತ್ತು ಅವರ ಬೆಂಬಲಿಗರಿಂದ ಇಂಟರ್ನೆಟ್ ಬ್ಲ್ಯಾಕೌಟ್ಗಳ ಅಭೂತಪೂರ್ವ ಬಳಕೆ.
▪️ಶ್ರೀಮತಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾಡಿದಂತೆ ಸರ್ಕಾರದ ಜಾಹಿರಾತು ಹಂಚಿಕೆಯಲ್ಲಿ ಅಪರಿಮಿತವಾದ ಪಕ್ಷಪಾತ ಮಾಡಲಾಗಿದೆ (ಒಲವು ಮತ್ತು ಪ್ರತಿಕಾರ).
▪️ಡಿಜಿಟಲ್ ಮಾಧ್ಯಮದಲ್ಲಿ ಅಧಿಕೃತ ಮಾನ್ಯತೆ ಮತ್ತು ವಿದೇಶಿ ಹೂಡಿಕೆಗೆ (FDI) ಅನುಮೋದನೆಯ ಪ್ರಕ್ರಿಯೆಯಲ್ಲಿ ಅನಿಯಂತ್ರಿತ ಪಕ್ಷಪಾತ.
▪️ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ರದ್ದತಿಯ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾಧ್ಯಮಗಳು ಕಾಶ್ಮೀರಕ್ಕೆ ಸಂಬಂಧಿಸಿದ ಸುದ್ದಿ ಸಂಪಾದನಾ ಪ್ರಕ್ರಿಯೆಗಾಗಿ ಮಾಡುವ ಭೇಟಿಗಳ ಮೇಲೆ ವಾಸ್ತವಿಕ ನಿಷೇಧ ಮತ್ತು ಸಾಮಾನ್ಯವಾಗಿ ಪತ್ರಕರ್ತರಿಗೆ ನೀಡಲಾಗುವ ವೀಸಾ ನಿಯಮಗಳನ್ನು ಬಿಗಿಗೊಳಿಸುವಿಕೆ.
▪ನಿವೃತ್ತರಾದ ಆರು ತಿಂಗಳ ನಂತರ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಮತ್ತೊಬ್ಬ ಅಧ್ಯಕ್ಷರನ್ನು ನೇಮಿಸುವಲ್ಲಿ ವಿಳಂಬ ನೀತಿ ಅನುಸರಿಸುವ ಮೂಲಕ ಸಂಸ್ಥೆಯನ್ನು ನಿಸ್ಕ್ರೀಯಗೊಳಿಸುವುದು.
▪️ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವನ್ನು ಔಪಚಾರಿಕವಾಗಿ ರದ್ದುಗೊಳಿಸಿದ್ದ ಇಂದಿರಾ ಗಾಂಧಿಯವರ ೧೯೭೬ ರ ಆಡಳಿತಾತ್ಮಕ ನಿರ್ಧಾರದ ಪುನರಾವರ್ತನೆ.
▪️ಬೃಹತ್ ಪ್ರಮಾಣದಲ್ಲಿ ನಕಲಿ ಸುದ್ದಿಗಳ ಉತ್ಪಾದನೆ, ಟ್ರೋಲಿಂಗ್ ಮತ್ತು ಪತ್ರಕರ್ತರಿಗೆ ಕಿರುಕುಳ ನೀಡುವುದು. ಇದೆಲ್ಲವೂ ಆಡಳಿತ ಪಕ್ಷದ ಆಶ್ರಯದಲ್ಲಿ ನಡೆಯುವಂತದ್ದು. ಇದು ಟೆಕ್ಫಾಗ್ ಅಪ್ಲಿಕೇಶನ್ನಲ್ಲಿ ದಿ ವೈರ್ನ ತನಿಖೆಯಿಂದ ನಿರೂಪಿಸಲ್ಪಟ್ಟಿದೆ. ಅಧಿಕೃತ ಕಾರ್ಯನಿರ್ವಾಹಣೆ ಮತ್ತು ಡಿಜಿಟಲ್ ಸುದ್ದಿ ವಿಷಯಗಳನ್ನು ಸೆನ್ಸಾರ್ ಮಾಡಲು ಮಾಹಿತಿ ತಂತ್ರಜ್ಞಾನ ನಿಯಮ-೨೦೨೧ರ ವ್ಯಾಪಕ ದುರ್ಬಳಕೆ.
ಮೋದಿ ಆಡಳಿತದಲ್ಲಿ ಪ್ರಧಾನ ಮಂತ್ರಿಯಿಂದ ಹಿಡಿದು ಅವರ ಸಂಪುಟದ ಮಂತ್ರಿಗಳು ಹಾಗು ಸಂಪೂರ್ಣ ಸರಕಾರಿ ಯಂತ್ರದ ಸಾರ್ವಜನಿಕರೊಂದಿಗಿನ ಹಾಗು ಮಾಧ್ಯಮಗಳೊಂದಿಗಿನ ಸಂವಹನದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆ ಸಾಕಷ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತದಲ್ಲಿ ಇದುವರೆಗೆ ಒಂದೇ ಒಂದು ಬಹಿರಂಗ ಪತ್ರಿಕಾಗೋಷ್ಠಿ ನಡೆಸಲಾಗಿಲ್ಲ. ಅದನ್ನು ಅವರು ದೃಢವಾಗಿ ಯಾವ ಅಳುಕೂ ಇಲ್ಲದೆ ನಿರಾಕರಿಸುತ್ತಾರೆ ಮತ್ತು ವಿದೇಶದಲ್ಲಿ ಅವರಿಗಾಗಿ ಆಯೋಜಿಸಲಾಗುವ ಕಾರ್ಯಕ್ರಮಗಳ ಸಂದರ್ಭದಲ್ಲಿ ಪತ್ರಕರ್ತರು ಪ್ರಶ್ನೆ ಕೇಳದಂತೆ ವ್ಯವಸ್ಥೆ ಮಾಡಿರಲಾಗಿರುತ್ತದೆ. ಪತ್ರಕರ್ತರು ಹಾಗು ಸಾರ್ವಜನಿಕರು ಸರಕಾರದ ಕಾರ್ಯನಿರ್ವಹಣೆ ಹಾಗು ನೀತಿ ನಿರ್ಧಾರಗಳ ಕುರಿತು ಮಾಹಿತಿ ಹಕ್ಕುಗಳ ಕಾನೂನಿನಡಿಯಲ್ಲಿ ಕೇಳಲಾದ ಮಾಹಿತಿಗಳು/ಪ್ರಶ್ನೆಗಳನ್ನು ಅತ್ಯಂತ ದುರ್ಬಲವಾದ ಕಾರಣಗಳು ನೀಡಿ ನಿರಾಕರಿಸಲಾಗುತ್ತದೆ ಅಥವಾ ತಿರಸ್ಕರಿಸಲಾಗುತ್ತದೆ.
ಮಾಧ್ಯಮ ಮತ್ತು ಪತ್ರಕರ್ತರ ಮೇಲಿನ ಮೋದಿ ಸರ್ಕಾರದ ಆಕ್ರಮಣವು ಎರಡು ಬಲ ಗುಣಕಗಳ ಮೇಲೆ ಅವಲಂಬಿತವಾಗಿರುತ್ತದೆ: ದೊಡ್ಡ ಮಾಧ್ಯಮಗಳು ಕೇವಲ ಸರಕಾರದ ಕಾರ್ಯ ವಿಧಾನವನ್ನು ಶ್ಲಾಘಿಸುವುದುˌ ಸರಕಾರದ ಎಲ್ಲ ಬಗೆಯ ಆಡಳಿತಾತ್ಮಕ ನಿರ್ಧಾರಗಳನ್ನು ಸಮರ್ಥಿಸುವುದು ಮತ್ತು ನ್ಯಾಯಾಲಯಗಳಿಗೆ ಮಾಧ್ಯಮಗಳ ಸಾಂವಿಧಾನಿಕ ಸ್ವಾತಂತ್ರದ ರಕ್ಷಣೆಯ ಖಾತರಿಯನ್ನು ತ್ವರಿತವಾಗಿ ಮತ್ತು ನಿರ್ಣಾಯಕವಾಗಿ ಎತ್ತಿಹಿಡಿಯಲು ಇಷ್ಟವಿಲ್ಲದಿರುವುದು.
ಕೆಲವೊಂದು ಅಪವಾದಗಳ ಹೊರತಾಗಿ ಕೆಳ ಹಂತದ ನ್ಯಾಯಾಲಯಗಳು ಆಗಾಗ್ಗೆ ಮಾಧ್ಯಮಗಳ ಮೇಲೆ ಹಾಗು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಸರಕಾರದ ಕಾರ್ಯನಿರ್ವಾಹಕ ಅಧಿಕಾರದ ದುರುಪಯೋಗವನ್ನು ಖಡಾ ಖಂಡಿತವಾಗಿ ಟೀಕಿಸದೆ ಅದರ ನಿರ್ಣಯವನ್ನು ಉನ್ನತ ಹಂತದ ನ್ಯಾಯಾಂಗಕ್ಕೆ ಬಿಡುತ್ತಿರುವುದನ್ನು ನಾವು ಗಮನಿಸಬೇಕಿದೆ. ವಿಷಾದದ ಸಂಗತಿಯೆಂದರೆ, ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಸರಕಾರದ ದಾಳಿಗೆ ಉಚ್ಛ ನ್ಯಾಯಾಲಯ ಹಾಗು ಸರ್ವೋಚ್ಛ ನ್ಯಾಯಾಲಗಳ ಪ್ರತಿಕ್ರಿಯೆಯು ಏಕರೂಪವಾಗಿಲ್ಲದಿರುವುದು. ಅದಾಗ್ಯೂ ˌ ಪೆಗಾಸಸ್ ಕದ್ದಾಲಾಕೆ ಪ್ರಕರಣದಲ್ಲಿ ಸರ್ಕಾರದ ‘ರಾಷ್ಟ್ರೀಯ ಭದ್ರತೆ’ ನೆಪವನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸುವುದು ಒಂದು ಮಹತ್ವದ ಉದಾಹರಣೆಯಾಗಿದೆ. ಆದರೆ ಜೈಲು ಶಿಕ್ಷೆಯ ಬೆದರಿಕೆಯಿಲ್ಲದೆ ಪತ್ರಕರ್ತರು ತಮ್ಮ ದೈನಂದಿನ ಕೆಲಸವನ್ನು ನಿರ್ಭಯವಾಗಿ ಮಾಡುವ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಅವರಿಗೆ ಬೇಕಾದ ದೃಢತೆ ಮತ್ತು ತುರ್ತು ರೀತಿ ಮತ್ತು ಕ್ಷೀಪ್ರಗತಿಯಲ್ಲಿ ನಮ್ಮ ನ್ಯಾಯಾಲಯಗಳು ಕಾರ್ಯ ನಿರ್ವಹಿಸಲಿಲ್ಲ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಒಕ್ಕೂಟದ ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವರು ಮಾಹಿತಿ ತಂತ್ರಜ್ಞಾನ ಕಾಯ್ದೆ, ೨೦೦೦ ಅನ್ನು ತಿದ್ದುಪಡಿ ಮಾಡುವ ಸರ್ಕಾರದ ಯೋಜನೆಗಳ ಬಗ್ಗೆ ಸೂಚ್ಯವಾಗಿ ಮಾತನಾಡಿದ್ದಾರೆ. ಇದರಿಂದಾಗಿ “೧೯(೨) ಕಲಮ್ ಅನ್ನು ಮೀರಿದ” ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ನಿರ್ಬಂಧಗಳನ್ನು ಹೇರಲು, ಅಂದರೆ ಸಂವಿಧಾನವು ಕಾನೂನಿನ ಮೂಲಕ ವಿಧಿಸಲು ಸರ್ಕಾರಕ್ಕೆ ಅನುಮತಿಸುವುದಕ್ಕಿಂತ ಹೆಚ್ಚಿನ ನಿರ್ಬಂಧಗಳು ಹೇರಲು ಸರಕಾರ ತಯ್ಯಾರಿ ಮಾಡಿಕೊಂಡಿರುವುದು ಕಾಣಬಹುದಾಗಿದೆ.
ಇಂದಿರಾ ಗಾಂಧಿಯವರು ಹೇರಿದ್ದ ತುರ್ತುಪರಿಸ್ಥಿತಿಯ ೨೧ ತಿಂಗಳುಗಳ ಕಾಲಾವಧಿಯಲ್ಲಿ ಸೆನ್ಸಾರ್ಶಿಪ್, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ರದ್ದತಿ ಮತ್ತು ಪತ್ರಕರ್ತರ ಬಂಧನ ವ್ಯಾಪಕವಾಗಿ ಮಾಡಲಾಗಿತ್ತು. ನರೇಂದ್ರ ಮೋದಿಯವರು ೧೯೭೭ ರಿಂದೀಚೆಗೆ ಕಾಣದ ಪ್ರಮಾಣದಲ್ಲಿ ಪತ್ರಿಕೋದ್ಯಮವನ್ನು ಅಪರಾಧೀಕರಿಸಿದ್ದಾರೆ. ಆಡಳಿತಾತ್ಮಕ ವಿಧಾನಗಳನ್ನು ಬಳಸಿಕೊಂಡು ಪ್ರೆಸ್ ಕೌನ್ಸಿಲ್ ಅನ್ನು ಅಪ್ರಸ್ತುತಗೊಳಿಸಿದ್ದಾರೆ ಮತ್ತು ಐಟಿಯ ಘೋಷಣೆಯ ಮೂಲಕ ‘ಆಕ್ಷೇಪಾರ್ಹ ವಿಷಯಗಳ ಪ್ರಕಟಣೆಯ ತಡೆ ಕಾಯಿದೆ, ೧೯೭೬’ ರ ನಿಯಮಗಳನ್ನು ಪುನರುಜ್ಜೀವನಗೊಳಿಸಿದ್ದಾರೆ. ೨೦೨೧ ರ ಐಟಿ ರೂಲ್ಸ್ ಮೂಲಕ ಸರ್ಕಾರವು ಆಕ್ಷೇಪಾರ್ಹವೆಂದು ಪರಿಗಣಿಸುವ ಡಿಜಿಟಲ್ ಸುದ್ದಿ ವಿಷಯವನ್ನು ಅಳಿಸಿ ಹಾಕುವ ಹಕ್ಕನ್ನು ಹೊಂದಿದೆ.
ಭಾರತದಲ್ಲಿ ಮೋದಿಯವರ ಅಘೋಷಿತ ತುರ್ತುಪರಿಸ್ಥಿತಿ ಈಗಾಗಲೇ ಎಂಟನೇ ವರ್ಷಕ್ಕೆ ಕಾಲಿಟ್ಟಿದೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಜನರ ನಾಗರಿಕ ಸ್ವಾತಂತ್ರ್ಯಗಳ ವಿರುದ್ಧದ ಆಕ್ರಮಣವನ್ನು ಹೆಚ್ಚಿಸುವ ಪ್ರತಿಯೊಂದು ಲಕ್ಷಣವನ್ನು ತೋರಿಸುತ್ತಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಹಗಲು ಹೊತ್ತಿನ ಬೆಳಕಿನಲ್ಲಿಯೇ ಸಾಯುತ್ತಿದೆ. ಪತ್ರಿಕಾ ಸ್ವಾತಂತ್ರವು ಸರಕಾರದ ಕಪಿಮುಷ್ಟಿಯಲ್ಲಿ ಬಂಧಿಸಲ್ಪಟ್ಟಿದೆ. ಆದರೆ ಮಾಧ್ಯಮ ಸ್ವಾತಂತ್ರದ ನೆಲೆಯನ್ನು ಭದ್ರ ಪಡಿಸಿಕೊಂಡು ನಿಲ್ಲುವ ಮಾರ್ಗಗಳನ್ನು ಮಾಧ್ಯಮ ಸಂಸ್ಥೆಗಳು ಕಂಡುಕೊಳ್ಳಬೇಕಿದೆ ಹಾಗು ಪ್ರತಿಯೊಬ್ಬ ಪತ್ರಕರ್ತ ಮತ್ತು ಮಾಧ್ಯಮ ಸಂಸ್ಥೆಗಳು ಅತ್ಯಂತ ಐಕಮತ್ಯದಲ್ಲಿ ಇದರ ವಿರುದ್ಧ ಧ್ವನಿ ಎತ್ತಬೇಕಿದೆ.