ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕಾವೇರಿ ನಿಸರ್ಗಧಾಮದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಮಿಯಾವಾಕಿ ವನ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಜಲಪ್ರಳಯ ಉಂಟಾಗಿ ಬೆಟ್ಟಗುಡ್ಡಗಳು ಕುಸಿದು ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಜೊತೆಗೆ ಬೆಟ್ಟಗಳ ತಪ್ಪಲಿನಲ್ಲಿ ವಾಸಿಸುತ್ತಿದ್ದ ಅನೇಕ ಜನರು, ಪ್ರಾಣಿ,ಪಕ್ಷಿಗಳು ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡರು. ಪ್ರತಿ ವರ್ಷ ಆಗಸ್ಟ್ ನಲ್ಲಿ ಸಂಭವಿಸುವ ಈ ದುರಂತವನ್ನು ತಪ್ಪಿಸಲು ವಿಶೇಷ ಹಾಗೂ ಶಾಶ್ವತ ಯೋಜನೆ ಕಾರ್ಯರೂಪಕ್ಕೆ ತರಬೇಕು ಎಂಬ ಕೂಗು ಕೇಳಿ ಬಂದಿತು. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ಭೂಕುಸಿತ ತಡೆಗಟ್ಟಲು ವಿನೂತನವಾದ ಪ್ರಯೋಗಕ್ಕೆ ಮುಂದಾಗಿದೆ. ಅದುವೇ ಮಿಯಾವಾಕಿ ಪದ್ಧತಿಯಲ್ಲಿ ಸಮೃದ್ಧವಾಗಿ ಅರಣ್ಯ ಬೆಳೆಸುವ ಮೂಲಕ ಮಣ್ಣಿನ ಸಡಿಕೆಯನ್ನು ತಡೆಗಟ್ಟಲು ಪ್ರಯೋಗಿಕ ಪ್ರಯೋಗ ನಡೆಸುತ್ತಿದೆ.

ಪ್ರಥಮ ಹಂತವಾಗಿ ಅರಣ್ಯ ಇಲಾಖೆಯು ಬಿಡದಿಯ ಟೊಯೋಟಾ ಕಿಲೋಸ್ಕರ್ ಮೋಟಾರ್ಸ್ ಸಹಯೋಗದೊಂದಿಗೆ ಕಾವೇರಿ ನಿಸರ್ಗಧಾಮದ ಆವರಣದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಮಿಯಾವಾಕಿ ಮಾದರಿ ಅರಣ್ಯೀಕರಣ ಯೋಜನೆ ತಲೆ ಎತ್ತಿ ನಿಂತಿದೆ. ಜಪಾನ್ ಸಸ್ಯ ಶಾಸ್ತ್ರಜ್ಞ ಡಾ.ಅಕಿರ ಮಿಯಾವಾಕಿ ಅವರು ಆವಿಷ್ಕಾರ ಮಾಡಿರುವ ವಿಶೇಷ ತಳಿಯ ಗಿಡಗಳಾಗಿದ್ದು, ಇವು ಭೂಕುಸಿತ ಮಣ್ಣಿನ ಸಡಿಕೆಯಾಗದಂತೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.

ಸುಮಾರು 10 ಸಾವಿರ ವಿವಿಧ ಜಾತಿಯ ಸಸ್ಯಗಳನ್ನು ಬೆಳೆದಿರುವ ಮಿಯಾವಾಕಿ ವನದ ಸಂಪೂರ್ಣ ನಿರ್ವಹಣೆಯನ್ನು ಟೊಯೊಟೊ ಕಿರ್ಲೋಸ್ಕರ್ ಸಂಸ್ಥೆ ನೋಡಿಕೊಳ್ಳುತ್ತಿದೆ. ಕೊಡಗು ಜಿಲ್ಲೆಯ ಬೆಟ್ಟದ ಸಾಲಿನಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾಗದಲ್ಲಿ ಇಂತಹ ಅರಣ್ಯೀಕರಣ ಬೆಳೆಸುವುದಾದರೆ ನೆರವು ನೀಡಲೂ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ. ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲೂ ಬಿಸಿಲಿನ ತಾಪಮಾನ ಏರಿಕೆ ಕಂಡುಬಂದಿದೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಮಿಯಾವಾಕಿ ವನ ತುಂಬ ಅನುಕೂಲಕರವಾಗಿವೆ. ಜಿಲ್ಲೆಯಲ್ಲಿ ಮುಂದೆ ದುಬಾರೆಯಲ್ಲಿ 5 ಎಕರೆ, ಹಾರಂಗಿ ಹಿನ್ನೀರಿನ ಟ್ರೀ ಪಾರ್ಕ್ ನಲ್ಲಿ 5 ಎಕರೆ ಪ್ರದೇಶದಲ್ಲಿ ಮಿಯಾವಾಕಿ ಅರಣ್ಯ ಬೆಳೆಸುವ ಯೋಜನೆ ಇದೆ.
2018ರ ಈಚೆಗೆ ಪ್ರತಿ ಮಳೆಗಾಲ ಹಾಗೂ ಆಗಸ್ಟ್ ನಲ್ಲಿ ಸಂಭವಿಸುವ ಜಲಪ್ರಳಯ ಜಿಲ್ಲೆಯ ಜನರಲ್ಲಿ ಆತಂಕವನ್ನು ತರುತ್ತಿದೆ. ಜೊತೆಗೆ ಜೀವಭಯದಿಂದ ದಿನಗಳನ್ನು ಕಳೆಯುವಂತ ವಾತಾವರಣ ನಿರ್ಮಾಣ ಆಗಿದೆ. ಆಗಸ್ಟ್ ಕಂಟಕ ಭೂಕುಸಿತದ ರೂಪದಲ್ಲಿ ಮೊದಲ ವರ್ಷ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಜನರ ಬದುಕನ್ನು ನರಕ ಮಾಡಿದರೆ, 2019ರಲ್ಲಿ ವಿರಾಜಪೇಟೆ ತಾಲೂಕಿನ ತೋರ, ಭಾಗಮಂಡಲದ ಕೋರಂಗಾಲದಲ್ಲಿ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿತು. 2020ರಲ್ಲಿ ತಲಕಾವೇರಿಯಲ್ಲಿ ಐವರು ಭೂಸಮಾಧಿ ಆದರು. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ ತೋಟ,
ಪ್ರೀತಿಯಿಂದ ಸಾಕಿದ್ದ ಜಾನುವಾರುಗಳೂ ಕುಸಿದ ಮಣ್ಣಿನ ಅಡಿಗೆ ಸೇರಿಕೊಂಡವು. ತಲಕಾವೇರಿ ದುರಂತಕ್ಕೆ ಕಾರಣವಾದ ಅಂಶಗಳನ್ನು ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಈಗಾಗಲೇ ಬಹಿರಂಗಪಡಿಸಿದೆ.
ಈ ಮಧ್ಯೆ ಮುಂದಿನ ದಿನಗಳಲ್ಲಿ ಈ ರೀತಿಯ ದುರ್ಘಟನೆಗಳನ್ನು ತಡೆಯುವ ಉದ್ದೇಶದಿಂದ ಹಲವರು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳು ಭೂಕುಸಿತದ ಪ್ರದೇಶಗಳಲ್ಲಿ ಈಗಾಗಲೇ ʼವೆಟ್ಟಿವೆರ್ ಹುಲ್ಲುʼ ನಾಟಿ ಮಾಡಿದ್ದಾರೆ. ಮತ್ತೊಂದು ಕಡೆ ಅರಣ್ಯ ಇಲಾಖೆಯೂ ಭೂಕುಸಿತ ತಡೆಯುವ ನಿಟ್ಟಿನಲ್ಲಿ ಪರಿಹಾರೋಪಾಯಗಳನ್ನು ಕಂಡು ಹುಡುಕುವ ಬಗ್ಗೆ ಪ್ರಯತ್ನಗಳನ್ನು ನಡೆಸುತ್ತಿದೆ. ʼಮಿಯಾವಾಕಿʼ ಪದ್ಧತಿಯ ಅರಣ್ಯ ಬೆಳೆಸುವುದರಿಂದ ಬೆಟ್ಟ ಜರಿದು ಬರುವ ಸಮಸ್ಯೆ ಕಡಿವಾಣಗೊಳ್ಳುವ ಸಾಧ್ಯತೆಯಿದೆ.

ಬಿಡದಿಯ ಟೊಯೋಟಾ ಕಿಲೋಸ್ಕರ್ ಮೋಟಾರ್ಸ್ ಸಂಸ್ಥೆ ಸಹಯೋಗದಲ್ಲಿ ಕುಶಾಲನಗರದ ಕಾವೇರಿ ನಿಸರ್ಗಧಾಮದ ಒಂದು ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ʼಮಿಯಾವಾಕಿʼ ರೀತಿ ಅರಣ್ಯವನ್ನು ಬೆಳೆಸಲಾಗಿದೆ. ಈ ವನದಲ್ಲಿ ಹೆಬ್ಬೇವು, ಹಲಸು, ನೇರಳೆ, ಕಾಡುಮಾವು, ದಿಂಡಲ್, ತಡಸಲು ಸೇರಿದಂತೆ ಕೊಡಗಿನಲ್ಲಿ ಸಾಮಾನ್ಯವಾಗಿ ಕಾಣಸಿಗುವಂತಹ ಮರಗಳನ್ನೇ ಇಲ್ಲಿ ಬೆಳೆಯಲಾಗಿದೆ. ಜಿಲ್ಲೆಯ ವಾತಾವರಣಕ್ಕೆ ʼಮಿಯಾವಾಕಿʼ ಪದ್ಧತಿ ಹೊಂದಿಕೊಳ್ಳುವ ಸೂಚನೆ ಸಿಕ್ಕಿದೆ. ʼಮಿಯಾವಾಕಿʼ ಪದ್ಧತಿಯಲ್ಲಿ ಒತ್ತೊತ್ತಾಗಿ ಮರಗಳನ್ನು ಬೆಳೆಸುವುದರಿಂದ ಬೇರುಗಳ ಜಾಲ ನೆಲವನ್ನು ಗಟ್ಟಿಯಾಗಿ ಹಿಡಿದುಕೊಂಡು ಹರಡುತ್ತದೆ. ಇದರಿಂದ ಭೂಮಿಯ ಪದರಗಳು ಬಲಿಷ್ಠವಾಗಲಿದ್ದು, ಭೂಕುಸಿತಕ್ಕೆ ಅವಕಾಶ ನೀಡಲಿಕ್ಕಿಲ್ಲ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ಹಾಗಾಗಿ ಇಲಾಖೆಯ ಜಾಗದಲ್ಲಿ ʼಮಿಯಾವಾಕಿʼ ಪದ್ಧತಿಯಲ್ಲಿ ಅರಣ್ಯ ಬೆಳೆಸಲು ಚಿಂತನೆ ನಡೆದಿದೆ. ಜಪಾನ್ ಜೈವಿಕ ತಜ್ಞ ಡಾ.ಅಕಿರಾ ಮಿಯಾವಾಕಿ ಎಂಬವರು ಆವಿಷ್ಕಾರ ಮಾಡಿದ ಅರಣ್ಯ ಪದ್ಧತಿಯೇ ʼಮಿಯಾವಾಕಿ ಅರಣ್ಯʼ ಕಡಿಮೆ ಸ್ಥಳದಲ್ಲಿ ದಟ್ಟ ಅರಣ್ಯೀಕರಣವೇ ಇದರ ಕಲ್ಪನೆಯಾಗಿದೆ. ಈ ಪದ್ಧತಿ ಪ್ರಕಾರ ಒಂದು ಸ್ಥಳದಲ್ಲಿ ಸಾಮಾನ್ಯಕ್ಕಿಂತ 10 ಪಟ್ಟು ಅಧಿಕ ಕಾಡು ಬೆಳೆಸಲಾಗುವುದು. ಸಣ್ಣ ಸ್ಥಳಗಳಲ್ಲಿಯೂ ಅತೀ ಹೆಚ್ಚು ಮರಗಳನ್ನು ಬೆಳೆಸುವ ಉದ್ದೇಶದಿಂದ ಈ ಕಲ್ಪನೆ ಹುಟ್ಟು ಹಾಕಲಾಯಿತು.

ಜಪಾನ್ನಲ್ಲಿ ಭೂಕುಸಿತ ತಡೆಗೂ ಈ ಪದ್ಧತಿಯ ಅರಣ್ಯ ಬೆಳೆಸಲಾಗುತ್ತದೆ. ಭಾರತದ ಕೆಲವು ನಗರಗಳಲ್ಲಿ ಇದು ಹೆಸರು ಮಾಡಿದೆ. ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಉಂಟಾಗುವ ಜಾಗಗಳಲ್ಲಿ ಮಿಯಾವಕಿ ವನ ಬೆಳೆಸಿದರೆ ಅನಾಹುತ ತಡೆಯಲು ಸಾಧ್ಯವಾಗುತ್ತದೆ. ಜಪಾನ್ ನಲ್ಲಿ ಹೆಚ್ಚು ಭೂಕುಸಿತ ಆಗುವ ಪ್ರದೇಶಗಳಲ್ಲಿ ಮಿಯಾವಾಕಿ ಪದ್ಧತಿಯಲ್ಲಿ ತುಂಬಾ ಒತ್ತೊತ್ತಾಗಿ ಗಿಡಗಳನ್ನು ಬೆಳೆಸುತ್ತಾರೆ. ಮರಗಳು ಹತ್ತಿರ ಹತ್ತಿರವಾಗಿ ಬೆಳೆಯುವುದರಿಂದ ನೆಲವನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ಆಗ ಭೂಕುಸಿತ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲೂ ಆ ಪ್ರಯೋಗ ಮಾಡಲಾಗುತ್ತಿದೆ.