ಭಾರತದ ಸ್ಟಾರ್ ವೇಟ್ಲಿಫ್ಟರ್ ಮೀರಾಬಾಯಿ ಚಾನು ಅವರು ಶನಿವಾರ ಇತಿಹಾಸ ಸೃಷ್ಟಿಸಿದ್ದು, ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ವೇಟ್ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2000ದಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಕರ್ಣಂ ಮಲ್ಲೇಶ್ವರಿಯವರು ವೈಟ್ ಲಿಫ್ಟಿಂಗ್ನಲ್ಲಿ ಕಂಚಿನ ಪದಕ ಗೆದ್ದ ನಂತರ ಭಸರತ ಈ ವಿಭಾಗದಲ್ಲಿ ಪದಕಗಳ ಬರ ಎದುರಿಸುತ್ತಿತ್ತು. ಆದರೆ ಈಗ ಮಣಿಪುರದ 26 ವರ್ಷದ ಮೀರಾಬಾಯಿ ಚಾನು ಈ ಕೊರತೆ ನೀಗಿಸಿದ್ದಾರೆ. ಮಾತ್ರವಲ್ಲದೆ ಇದು ಈ ಕೂಟದಲ್ಲಿ ಭಾರತದ ಮೊದಲ ಪದಕವೂ ಹೌದು. 2016ರ ರಿಯೋ ಒಲಿಂಪಿಕ್ಸ್ನಲ್ಲೇ ಮೀರಾಬಾಯಿ ಪದಕ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಗಾಯದ ಕಾರಣದಿಂದಾಗಿ ಅವರಿಗೆ ಈ ಸಾಧನೆ ಮಾಡಲಾಗಿರಲಿಲ್ಲ.

ಪಿಟಿಐಗೆ ನೀಡಲಾಗಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು “ಚಿಕ್ಕಂದಿನಲ್ಲಿಯೇ ತಾನು ಕ್ರೀಡಾಪಟುವಾಗಲು ನಿರ್ಧರಿಸಿದ್ದೆ. ತನ್ನ ಮನೆಯ ಹುಡುಗರು ಮತ್ತು ಸಂಬಂಧಿಕರು ಪುಟ್ಬಾಲ್ ಆಡುತ್ತಿದ್ದರಿಂದ ಪ್ರತಿದಿನ ಬಟ್ಟೆಯೆಲ್ಲ ಗಲೀಜು ಮಾಡಿಕೊಂಡು ವಾಪಸ್ ಬರುತ್ತಿದ್ದರು. ಹಾಗಾಗಿ ತಾನು ಮಾತ್ರ ಶುಚಿಯಾದ, ನೀಟ್ ಆಗಿರುವ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಬಯಸಿದ್ದೆ. ಹಾಗಾಗಿ ಆರ್ಚರ್ ಕ್ರೀಡೆಯು ಅದಕ್ಕೆ ತಕ್ಕುದಾದ ಮತ್ತು ಸ್ಟೈಲ್ ಆದ ಕ್ರೀಡೆಯಾಗಿದ್ದು ಅದನ್ನು ಅಭ್ಯಸಿಸಲು ಬಯಸಿದ್ದೆ” ಎಂದು ತಿಳಿಸಿದ್ದಾರೆ.
ಮಣಿಪುರದ ರಾಜಧಾನಿ ಇಂಫಾಲ್ನಿಂದ 20 ಕಿ.ಮೀ ದೂರದಲ್ಲಿರುವ ನಾನ್ಸ್ಕ್ರಿಪ್ಟ್ ನಾಂಗ್ಪೋಕ್ ಕಾಚಿಂಗ್ ಗ್ರಾಮದಲ್ಲಿ ಕಡಿಮೆ ಆದಾಯದ ಕುಟುಂಬದ 13 ವರ್ಷದ ಬಾಲಕಿಯಾಗಿ, ಮೀರಾಬಾಯಿ ತನ್ನ ಜೀವನದ ಆರಂಭದಲ್ಲಿಯೇ ತಾನು ಕ್ರೀಡಾಪಟುವಾಗಿ ಖ್ಯಾತಿಯನ್ನು ಗಳಿಸುವುದಾಗಿ ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ರೀಡಾ ಸೌಲಭ್ಯ ಮತ್ತು ಮಾರ್ಗದರ್ಶಕನನ್ನು ಹುಡುಕುವ ಅನ್ವೇಷಣೆಯಲ್ಲಿ, 2008 ರ ಆರಂಭದಲ್ಲಿ ಇಂಫಾಲ್ನ ಖುಮನ್ ಲ್ಯಾಂಪಕ್ನಲ್ಲಿರುವ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್ಎಐ) ಕೇಂದ್ರಕ್ಕೆ ಸೋದರ ಸಂಬಂಧಿಯೊಂದಿಗೆ ಪ್ರಯಾಣ ಬೆಳೆಸಿದ್ದರು. ಆದರೆ ಅವರಿಗೆ ಯಾವುದೇ ಬಿಲ್ಲುಗಾರ ತರಬೇತುದಾರರು ದೊರೆತಿರಲಿಲ್ಲ. ಭಾರತದ ಅದೃಷ್ಟವೇನೋ ಎಂಬಂತೆ ಅವತ್ತು ಮಣಿಪುರಿ ವೇಟ್ಲಿಫ್ಟರ್ ಕುಂಜರಾಣಿ ದೇವಿಯವರ ಸಾಧನೆಗಳ ತುಣುಕುಗಳನ್ನು ನೋಡಿದ್ದರು. ಅದು ಅವರನ್ನೂ ವೈಟ್ಲಿಫ್ಟರ್ ಆಗುವಂತೆ ಪ್ರೇರೇಪಿಸಿತು.
ಕೆಲವು ದಿನಗಳ ನಂತರ ವೇಟ್ಲಿಫ್ಟಿಂಗ್ ತರಬೇತಿ ಕೇಂದ್ರಕ್ಕೆ ಹೋದ ಅವರಿಗೆ ಮಾಜಿ ಅಂತಾರಾಷ್ಟ್ರೀಯ ವೇಟ್ಲಿಫ್ಟರ್ ಮತ್ತು ತರಬೇತುದಾರ ಅನಿತಾ ಚಾನು ಅವರನ್ನು ಭೇಟಿಯಾದರು ಮತ್ತು ಅವರು ಮೀರಾಬಾಯಿಯನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡರು. ಮೀರಾಬಾಯಿ ತನ್ನ ತರಬೇತಿಯನ್ನು ತನ್ನ ಶಾಲೆಯ ವೇಳಾಪಟ್ಟಿಗೆ ಹೊಂದಿಸಲು ಆ ಚಿಕ್ಕ ವಯಸ್ಸಿನಲ್ಲಿ ಕಷ್ಟಪಟ್ಟಿದ್ದಾರೆ. ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ತರಬೇತಿ ಕೇಂದ್ರವನ್ನು ತಲುಪಬೇಕಾಗಿತ್ತು ಮತ್ತು 22 ಕಿ.ಮೀ ಪ್ರಯಾಣದಲ್ಲಿ ತನ್ನ ಹಳ್ಳಿಯಿಂದ ಎರಡು ಬಾರಿ ಅವರು ಬಸ್ ಬದಲಾಯಿಸಬೇಕಾಗಿತ್ತು . ಈ ಎಲ್ಲಾ ಕಷ್ಟಗಳನ್ನು ದಿಟ್ಟವಾಗಿ ಎದುರಿಸುವಷ್ಟು ಮಾನಸಿಕ ದೃಢತೆ ಹೊಂದಿದ್ದ ಅವರು ಹನ್ನೆರಡು ವರ್ಷದ ಚಿಕ್ಕ ವಯಸ್ಸಿನಲ್ಲೇ ತಮ್ಮ ಸಹೋದರರು ಹೊರುತ್ತಿದ್ದ ಕಟ್ಟಿಗೆಗಿಂತ ಭಾರದ ಕಟ್ಟಿಗೆ ಹೊರುತ್ತಿದ್ದರು.
2014ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ 170ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದ ಅವರು, 2016ರಲ್ಲಿ ನಡೆದ ನ್ಯಾಷನಲ್ ಸ್ಪರ್ಧೆಯಲ್ಲಿ 186 ಕೆಜಿ ಭಾರ ಎತ್ತಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಆದರೆ ಅದೇ ವರ್ಷ ನಡೆದ ರಿಯೋ ಒಲಪಿಂಕ್ನಲ್ಲಿ ಗಾಯಗೊಂಡು ನಿರಾಸೆ ಮೂಡಿಸಿದ್ದರು. ಹಾಗಾಗಿ ಒಲಿಂಪಿಕ್ ಪದಕದ ಕನಸು ಕನಸಾಗಿಯೇ ಉಳಿದಿತ್ತು. ಆದರೆ 2017 ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಮತ್ತು 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮತ್ತೆ ಚಿನ್ನ ಗೆದ್ದಿದ್ದರು. ಅಲ್ಲಿಂದ ಟೋಕಿಯೋ ಒಲಂಪಿಕ್ಸ್ಗಾಗಿ ತಯಾರಿ ನಡೆಸಿದ ಅವರು ಕೊನೆಗೂ ಭರವಸೆ ಹುಸಿಗೊಳಿಸದೆ ಪದಕ ತಂದುಕೊಟ್ಟಿದ್ದಾರೆ.

ಈ ತಯಾರಿಯೂ ಸುಲಭದ್ದಾಗಿರಲಿಲ್ಲ. ಭೀಕರವಾದ ಗಾಯಗಳ ನೋವಿನಿಂದ ಅವರ ದೇಹವು ದುರ್ಬಲವಾಗಿತ್ತು. ಗಾಯ ಮತ್ತು ನೋವು ಅವರನ್ನು ಅತಿಯಾದ ಮಾನದಿಕ ಒತ್ತಡಕ್ಕೂ ಗುರಿಯಾಗಿಸಿತ್ತು. ಹಾಗಾಗಿ 2020 ರಲ್ಲಿ ಅವರ ಕೋಚ್ ವಿಜಯ ಶರ್ಮಾ ಅವರು ಅವರನ್ನು ಅಮೆರಿಕದ ಡಾ.ಆರೋನ್ ಅವರ ಬಳಿ ಕರೆದುಕೊಂಡು ಹೋಗಿ ತಮ್ಮ ಗಾಯಗಳಿಂದ ಬೇಗ ಚೇತರಿಸಿಕೊಳ್ಳಲು ನೆರವಾಗುತ್ತಾರೆ.
ಭಾರತೀಯ ರೈಲ್ವೆಯಲ್ಲಿ ಚೀಫ್ ಟಿಕೆಟ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಚಾನು ಹಲವು ಕ್ರೀಡಾಕೂಟದಲ್ಲಿ ವಿಶ್ವದಾಖಲೆ ಗಳಿಸಿದ್ದಾರೆ. ಇಂದಿನ ಒಲಂಪಿಕ್ ಬೆಳ್ಳಿ ಅವರ ಹಿರಿಮೆಗೆ ಮತ್ತೊಂದು ಗರಿಯಾಗಿದ್ದು, ಭಾರತದ ಹೆಮ್ಮೆಯ ಪುತ್ರಿಯೆಂದು ಸದಾ ಗುರುತಿಸಿಕೊಳ್ಳಲಿದ್ದಾರೆ.




