ರೌಡಿಶೀಟರ್ ಕಚೇರಿಗೆ ಭೇಟಿ ನೀಡಿದ್ದಾರೆಂದು ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವ ಸೋಮಣ್ನ ನನ್ನ ಜೀವನದಲ್ಲಿ ರೌಡಿಗಳ ಪರಿಚಯವೇ ಇಲ್ಲ ಅದರ ಅವಶ್ಯಕತೆಯೂ ನನಗಿಲ್ಲ ಎಂದುಇ ಸ್ಪಷ್ಟಪಡಿಸಿದ್ದಾರೆ.
50 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಸಾವಿರಾರು ಜನ ನನ್ನ ಮನೆಯ ಹತ್ತಿರ ಬಂದು ಹೋಗಿದ್ದಾರೆ. ಅದರಲ್ಲಿ ನಾಗ ಯಾರು, ತಿಮ್ಮ ಯಾರು ಅನ್ನೋದು ನನಗೆ ಗೊತ್ತಿಲ್ಲ. ನಾಗ ಎಂಬುವವರನ್ನು ನಾನೂ ನೋಡಿಲ್ಲ.
ಒಂದು ಗಂಟೆಯಲ್ಲ, ಒಂದು ನಿಮಿಷವೂ ನಾನು ಮಾತನಾಡಿಲ್ಲ. ನನ್ನ ಜೀವನ ತೆರೆದ ಪುಸ್ತಕವಿದ್ದಂತೆ. ನಾನು ಆ ತರಹದ ಜೀವನ ಮಾಡಿಲ್ಲ. ಸಾರ್ವಜನಿಕ ರಸ್ತೆ ಎಂದ ಮೇಲೆ ಯಾರ್ಯಾರೋ ಓಡಾಡುತ್ತಾರೆ. ಅದಕ್ಕೆ ನಾನು ಹೇಗೆ ಹೊಣೆಯಾಗಲು ಸಾಧ್ಯ. ಒಳ್ಳೆಯವರನ್ನೂ ರಸ್ತೆಗೆ ಕರೆ ತಂದು ನಿಲ್ಲಿಸುವ ಕೆಲಸ ಮಾಡಬೇಡಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ರಾಜಕಾರಣದಲ್ಲಿ 11 ಚುನಾವಣೆ ಎದುರಿಸಿದ್ದೇನೆ. ನನ್ನ ಜೀವನದಲ್ಲಿ ರೌಡಿಗಳ ಪರಿಚಯವೇ ಇಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ನಮ್ಮ ವಯಸ್ಸು, ನಮ್ಮ ಸೇವೆಯನ್ನು ಮಾಧ್ಯಮ ಸ್ನೇಹಿತರೂ ಒಮ್ಮೆ ಅವಲೋಕಿಸಿಕೊಳ್ಳಬೇಕು. ಆರೋಪ ಮಾಡುವ ಮೊದಲು ನಮ್ಮ ರಾಜಕೀಯ ಇತಿಹಾಸವನ್ನು ನೋಡಬೇಕು.
ಸುಮ್ಮನೆ ಸುಳ್ಳು ಆರೋಪ ಮಾಡಿ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಬೇಡಿ. ದಯಮಾಡಿ ಇಂತಹ ಸುದ್ದಿಯನ್ನು ಬಿತ್ತರಿಸುವಾಗ ನಮ್ಮ ಪೂರ್ವಾಪರ ತಿಳಿದುಕೊಳ್ಳಿ ಎಂದು ಮಾತನಾಡುವ ವೇಳೆ ಸಚಿವ ಸೋಮಣ್ಣ ಹೇಳಿದ್ದಾರೆ.