ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ಗಳ ಕೊರತೆ ವಿಚಾರವಾಗಿ ರಾಜ್ಯ ಸರ್ಕಾರ(State Government) ಮತ್ತು ಉದ್ಯಮಿ ಟಿ.ವಿ. ಮೋಹನ್ ದಾಸ್ ಪೈ(Mohandas Pai) ನಡುವಿನ ವಾಕ್ಸಮರ ತೀವ್ರಗೊಂಡಿದೆ. ಬಿಎಂಟಿಸಿ ಬಸ್ಗಳ ಸಂಖ್ಯೆ ನಗರಕ್ಕೆ ಸಾಕಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದ ಮೋಹನ್ ದಾಸ್ ಪೈ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಹಿರಂಗ ಸವಾಲು ಹಾಕಿದ್ದಾರೆ.

ಇತ್ತೀಚೆಗೆ ಉದ್ಯಮಿ ಮೋಹನ್ ದಾಸ್ ಪೈ ಅವರು ಟ್ವೀಟ್ ಮೂಲಕ, ಬೆಂಗಳೂರಿನಲ್ಲಿ ಕನಿಷ್ಠ 10,000ಕ್ಕೂ ಹೆಚ್ಚು ಬಸ್ಗಳ ಕೊರತೆಯಿದೆ. ಆದರೆ ಸರ್ಕಾರ ಅಗತ್ಯಕ್ಕಿಂತ ಅರ್ಧಕ್ಕಿಂತಲೂ ಕಡಿಮೆ ಬಸ್ಗಳನ್ನು ಮಾತ್ರ ಖರೀದಿ ಮಾಡಲು ಮುಂದಾಗಿದೆ. ಬಸ್ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಜನರಿಗೆ ಉತ್ತಮ ಸಾರಿಗೆ ಸೇವೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದರು.

ಉದ್ಯಮಿ ಟಿ.ವಿ. ಮೋಹನ್ ದಾಸ್ ಪೈ ಅವರ ಈ ಹೇಳಿಕೆ ರಾಜ್ಯ ಸರ್ಕಾರದ ಗಮನ ಸೆಳೆದಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪೈ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವರುʼಬರೀ ಟ್ವೀಟ್ ಮಾಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಅಂಕಿ-ಅಂಶಗಳೊಂದಿಗೆ ನೇರ ಚರ್ಚೆಗೆ ಬನ್ನಿʼ ಎಂದು ಸವಾಲು ಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುವುದಕ್ಕಿಂತ, ಸಾರಿಗೆ ಇಲಾಖೆಯ ವಾಸ್ತವಾಂಶಗಳೊಂದಿಗೆ ಚರ್ಚಿಸಲು ಮುಂದಾಗಬೇಕು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು (MD) ಪೈ ಅವರೊಂದಿಗೆ ಚರ್ಚೆಗೆ ಸಂಪೂರ್ಣ ಸಿದ್ಧರಾಗಿದ್ದು, ಬಸ್ ಖರೀದಿ, ನಿರ್ವಹಣೆ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ತಯಾರಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಹೊಸ ಬಸ್ಗಳನ್ನು ಹಂತ ಹಂತವಾಗಿ ಸೇರ್ಪಡೆಗೊಳಿಸುತ್ತಿದ್ದು, ತಾಂತ್ರಿಕ ಹಾಗೂ ಹಣಕಾಸು ಕಾರಣಗಳಿಂದ ಸ್ವಲ್ಪ ವಿಳಂಬವಾಗುತ್ತಿದೆ. ಈ ಅಂಶಗಳನ್ನು ಅರಿಯದೆ ಟೀಕೆ ಮಾಡುವುದು ಸರಿಯಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬೆಂಗಳೂರಿನಂತಹ ಮಹಾನಗರದಲ್ಲಿ ಮೆಟ್ರೋ ಜೊತೆಗೆ ಬಿಎಂಟಿಸಿ ಬಸ್ಗಳ ಅವಶ್ಯಕತೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶೇಷವಾಗಿ ಶಕ್ತಿ ಯೋಜನೆ ಜಾರಿಯಾದ ನಂತರ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಬಸ್ಗಳ ಕೊರತೆ ಇದೆ ಎನ್ನುವುದು ಸಾರ್ವಜನಿಕರಿಂದ ಹೆಚ್ಚಾಗಿ ಕೇಳಿಬರುತ್ತಿರುವ ದೂರು. ಹೀಗಾಗಿ ಟಿ.ವಿ. ಮೋಹನ್ ದಾಸ್ ಪೈ ಅವರು ಸಚಿವರ ಸವಾಲು ಸ್ವೀಕರಿಸಿ ಚರ್ಚೆಗೆ ಬರುತ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
Mr. @TVMohandasPai, Our BMTC MD is enough to handle a face-to-face debate with you on any platform.
Kindly come and discuss the facts with them directly. Are you ready to step up, or will you just keep tweeting?
Your view is not just biased—it is fundamentally dogmatic.
— Ramalinga Reddy (@RLR_BTM) January 29, 2026












