ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ(Bhadravathi) ನಡೆದ ಪ್ರಸಿದ್ಧ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ರಾಜಕೀಯ ವಲಯದ ಗಮನ ಸೆಳೆದ ಅಪರೂಪದ ಘಟನೆ ನಡೆದಿದೆ. ರಾಜಕೀಯದಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.

ರಾಜಕೀಯವಾಗಿ ಸದಾ ಪರಸ್ಪರ ಟೀಕೆ-ಟಿಪ್ಪಣಿಗಳನ್ನು ಮಾಡುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್(BL Santosh-) ಹಾಗೂ ಕಾಂಗ್ರೆಸ್ ನಾಯಕ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ ‘ತರಳಬಾಳು ಹುಣ್ಣಿಮೆ’ ಮಹೋತ್ಸವದ ‘ಸರ್ವಧರ್ಮ ಸಮನ್ವಯ ಸಭೆ’ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ ಆಗಮಿಸಿದ ವೇಳೆ ಬಿ.ಎಲ್. ಸಂತೋಷ್ ಎದ್ದು ನಿಂತು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಸುಮಾರು 10 ನಿಮಿಷಗಳ ಕಾಲ ಇಬ್ಬರೂ ನಗುಮುಖದಿಂದ ಚರ್ಚೆ ನಡೆಸಿದರು.

ಸಾಮಾನ್ಯವಾಗಿ ರಾಜಕೀಯವಾಗಿ ಪರಸ್ಪರ ಟೀಕೆ-ಪ್ರತಿಟೀಕೆಗಳಲ್ಲಿ ತೊಡಗಿರುವ ಈ ಇಬ್ಬರು ನಾಯಕರು ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಸ್ನೇಹಪೂರ್ಣ ನಡೆ ತೋರಿಸಿದ್ದು ನೆರೆದವರಲ್ಲಿ ಅಚ್ಚರಿ ಮೂಡಿಸಿತು. ಸರ್ವಧರ್ಮ ಸಮನ್ವಯ ಸಭೆಯ ಆಶಯಕ್ಕೆ ತಕ್ಕಂತೆ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ವೇದಿಕೆ ಹಂಚಿಕೊಂಡ ಈ ಕ್ಷಣ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.






