ವರ್ಷದ ‘ಗೃಹಲಕ್ಷ್ಮೀ’ ಮೊತ್ತ; ವೈಯಕ್ತಿಕ ನೆರವಿನ ‘ಹಸ್ತ’
ಬೆಳಗಾವಿ (Belagavi): ಬದುಕಿಗೆ ಆಸರೆಯಾಗಿದ್ದ ಇದ್ದೋರ್ವ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ಹಿರಿಯ ವಯಸ್ಸಿನ ತಾಯಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ನೆರವಾಗಿದ್ದಾರೆ.
ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಮೂಲಕ ಒಂದು ವರ್ಷಕ್ಕೆ ಜಮಾ ಆಗುವ ಹಣವನ್ನು ವೈಯಕ್ತಿಯವಾಗಿ ನೀಡುವ ಮೂಲಕ ನೆರವಿನ ಹಸ್ತ ಚಾಚಿದ್ದಾರೆ.
![](https://pratidhvani.com/wp-content/uploads/2024/02/lakshmi-hebbalkar-88387858-1024x768.webp)
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಗುರಕ್ಕನವರ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದರು. ಈತನ ತಾಯಿ ನೀಲವ್ವ ಗುರಕ್ಕನವರ ಮಗನನ್ನು ಕಳೆದುಕೊಂಡು, ಮಗನ ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗದೇ ಅಸಹಾಯಕಳಾಗಿದ್ದಳು. ನಂತರ ಮಾಜಿ ಮೇಯರ್ ವಿಜಯ ಮೋರೆ ಅವರ ಪುತ್ರ ಅಲೆನ್ ಮತ್ತು ಅವರ ಗೆಳೆಯರ ನೆರವಿನಿಂದ ಮಗನ ಅಂತ್ಯಸಂಸ್ಕಾರ ನೆರೆವೇರಿಸಿದ್ದರು. ಅಂತ್ಯಸಂಸ್ಕಾರ ವೇಳೆ ಗೃಹಲಕ್ಷ್ಮೀ ಯೋಜನೆಯಿಂದ ಪಡೆಯುತ್ತಿರುವ ಮಾಸಿಕ 2 ಸಾವಿರ ರೂಪಾಯಿ ಹಣದ ಕುರಿತು ಪ್ರಸ್ತಾಪಿಸಿ ಆಕ್ರಂದನ ವ್ಯಕ್ತಪಡಿಸಿದ್ದರು.
ಅಂತ್ಯಸಂಸ್ಕಾರ ವೇಳೆ ತಾಯಿ ಅರಣ್ಯ ರೋಧನೆ
ಮಗನನ್ನು ಕಳೆದುಕೊಂಡ ತಾಯಿ ಅಂತ್ಯಸಂಸ್ಕಾರ ಸಮಯದಲ್ಲಿ ಅರಣ್ಯ ರೋಧನದ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಗಮನಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಅಂತ್ಯಸಂಸ್ಕಾರ ಮುಗಿಸಿ ಸ್ವ ಗ್ರಾಮ ಮರಕುಂಬಿಗೆ ಹೋಗಿದ್ದ ತಾಯಿಯ ನೆರವಿಗೆ ಧಾವಿಸಿ ಆರ್ಥಿಕ ಸಹಾಯ ಮಾಡಿದ್ದಾರೆ.
ಮನೆ ಬಾಗಿಲಿಗೆ ನೆರವು
ಒಂದು ವರ್ಷಕ್ಕೆ ಗೃಹಲಕ್ಷ್ಮೀ ಯೋಜನೆಯ ಮೂಲಕ ಜಮಾ ಆಗುವ ಒಟ್ಟು 24 ಸಾವಿರ ರೂಪಾಯಿ ಹಣದ ನೆರವಿನ ಹಸ್ತ ಚಾಚಿದ್ದಾರೆ. ತಮ್ಮ ಕಚೇರಿಯ ಸಿಬ್ಬಂದಿ ಮೂಲಕ ಹಣವನ್ನು ಮಹಿಳೆಯ ಮನೆಗೆ ಹಣವನ್ನು ಕಳುಹಿಸಿದ್ದಾರೆ. ಅಲ್ಲದೇ ನೊಂದ ತಾಯಿಯೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸ್ವಾಂತ್ವನ ಹೇಳಿ ಧೈರ್ಯ ಹೇಳಿದ್ದಾರೆ. ಸದಾಕಾಲವೂ ತಾಯಿಯ ಬೆನ್ನಿಗೆ ನಿಲ್ಲುವುದಾಗಿ ತಿಳಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತಾಯಿ ಹೃದಯಕ್ಕೆ ನೊಂದ ಹಿರಿಯ ಜೀವ ಹರಿಸಿ ಹಾರೈಯಿಸಿದೆ.
ಸಚಿವರ ನಡೆಗೆ ಎಲ್ಲೆಡೆ ಶ್ಲಾಘನೆ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮನಮಿಡಿದು, ದುಃಖದಿಂದ ಭಾರವಾದ ತಾಯಿ ಹೃದಯಕ್ಕೆ ಧೈರ್ಯ ತುಂಬಿ ನೆರವಿನ ಹಸ್ತ ನೀಡಿದ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
#Karnataka #Belagavi #LakshmiHebbalkar #GruhaLakshmi #Helping #Humanity