
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಜನರ ಮೇಲೆ ಬೆಲೆ ಏರಿಕೆ ಪ್ರಹಾರ ಮುಂದುವರಿಸಿದೆ. ಮೆಟ್ರೋ, ಬಸ್ ಟಿಕೆಟ್ ದರ ಹೆಚ್ಚಳ ಬೆನ್ನಲ್ಲೇ ಈಗ ಹಾಲು ಮತ್ತು ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಪ್ರತೀ ಲೀಟರ್ ಹಾಲಿನ ಪ್ಯಾಕೇಟ್ ದರ 4 ರೂಪಾಯಿ ಹೆಚ್ಚಳ ಮಾಡುವುದಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹಾಲಿನ ದರ 5 ರೂಪಾಯಿ ಏರಿಕೆಗೆ ಕೆಎಂಎಫ್ ಬೇಡಿಕೆ ಇಟ್ಟಿತ್ತು. ಸದ್ಯ ಕ್ಯಾಬಿನೆಟ್ 4 ರೂಪಾಯಿ ಏರಿಕೆಗೆ ಸಮ್ಮತಿ ಸೂಚಿಸಿದೆ. ಏಪ್ರಿಲ್ 1 ರಿಂದಲೇ ಹೊಸ ದರ ಜಾರಿಗೆ ಬರಲಿದೆ.

ಯುಗಾದಿ ಹಬ್ಬಕ್ಕೂ ಮುನ್ನವೇ ರಾಜ್ಯದ ಜನರಿಗೆ ಸರ್ಕಾರ ಬೆಲೆ ಏರಿಕೆಯ ಶಾಕ್ ಕೊಟ್ಟಿದೆ. ಸಚಿವ ಸಂಪುಟದ ನಿರ್ಧಾರದಂತೆ ಸದ್ಯ ಈ ಹಿಂದೆ ನೀಲಿ ಟೋನ್ಡ್ ಹಾಲು ದರ ಲೀಟರ್ಗೆ 43 ರೂಪಾಯಿ ಇತ್ತು. ಈಗ 47 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಹಸಿರು ಪಾಕೆಟ್ ಹಾಲು ದರ 50 ರೂಪಾಯಿ ಆಗಿದೆ. ಅರೆಂಜ್ ಸ್ಪೆಷಲ್ ದರ 54 ರೂಪಾಯಿ ಆಗಿದೆ. ಶುಭಂ ಟೋನ್ಡ್ ಹಾಲು 55 ರೂಪಾಯಿ, ಸಮೃದ್ಧಿ ಹಾಲು 57 ರೂಪಾಯಿ, ಸಂತೃಪ್ತಿ ಹಾಲು 61 ರೂಪಾಯಿಗೆ ಹೆಚ್ಚಳವಾಗಿದೆ.

ಸದ್ಯಕ್ಕೆ ಹಾಲಿನ ದರ ಏರಿಕೆ ಮಾಡಿರುವ 4 ರೂಪಾಯಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರದ ಹಾಲು ದರ ಹೆಚ್ಚಳ ನಿರ್ಧಾರವನ್ನ ರೈತರು ಹಾಗೂ ಹಾಲು ಉತ್ಪಾದಕರು ಸ್ವಾಗತಿಸಿದ್ದಾರೆ. ಹಸು, ಎಮ್ಮೆಗಳಿಗೆ ಹಾಕುವ ಇಂಡಿ, ಬೂಸದ ದರ ದುಪ್ಪಟ್ಟು ಮಾಡಲಾಗಿತ್ತು. ಇತ್ತೀಚೆಗೆ ಹೈನುಗಾರಿಕೆ ಮಾಡಲು ಕಷ್ಟಕರವಾಗಿದೆ. ಗ್ರಾಹಕರಿಗೆ 4 ರೂಪಾಯಿ ದರ ಏರಿಕೆ ಮಾಡಿ, ಅದನ್ನು ರೈತರಿಗೆ ಕೊಡುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದ್ರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕೊಡುತ್ತಿದ್ದ 5 ರೂಪಾಯಿ ಸಹಾಯ ಧನ ನಿಲ್ಲಿಸಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.
ಹಾಲಿನ ದರ ಏರಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.. ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ನಾಯಕ ಎನ್ ರವಿಕುಮಾರ್, ಈ ಸರ್ಕಾರ ಮನೆ ಮುರುಕ ಸರ್ಕಾರ.. ಹಾಲಿನ ದರ ಲೀಟರ್ಗೆ 4 ರೂಪಾಯಿ ಏರಿಸಲು ನಿರ್ಧಾರ ಮಾಡಿದ್ದಾರೆ. ಜನರಿಗೆ ದರ ಏರಿಕೆ ಬರೆ ಹಾಕಿದ್ದಾರೆ. ಸರ್ಕಾರ ಕೂಡಲೇ ಹಾಲಿನ ದರ ಏರಿಕೆಯನ್ನ ವಾಪಸ್ ಪಡೆಯಬೇಕು, ಇಲ್ಲದಿದ್ರೆ ರಾಜ್ಯಾದ್ಯಂತ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. ಹಾಲು ಉಪಯೋಗಿಸುವ ಗ್ರಾಹಕರೂ ಕೂಡ ರಾಜ್ಯ ಸರ್ಕಾರ ಪದೇ ಪದೇ ದರ ಏರಿಕೆ ಮಾಡುತ್ತಲೇ ಇದೆ. ಇದರಿಂದ ಮಧ್ಯಮ ವರ್ಗದ ಜನರು ಬದುಕುವುದು ಕಷ್ಟವಾಗಿದೆ ಎನ್ನುತ್ತಿದ್ದಾರೆ.
