ಅವರು, ಕುಟುಂಬ ನಿರ್ವಹಣೆಗೆ ಉದ್ಯೋಗ ಹರಿಸಿ ಮಂಗಳೂರಿಗೆ ಬಂದಿದ್ದರು, ಆದ್ರೆ ಕೋವಿಡ್ 2 ನೇ ಮಹಾಮಾರಿ ಆತನನ್ನು ಸಮಸ್ಯೆಗೆ ದೂಡಿತು, ಲಾಕ್ಡೌನ್ ಎಂಬ ನಿಯಮ ಆತನನ್ನು ಕಕ್ಕಾಬಿಕ್ಕಿಗೊಳಿಸಿತು. ಹೌದು ಮನೆಗೆ ಹೋಗೋಣ ಎಂದ್ರೆ ಬಸ್ ಇಲ್ಲ, ಕೈಯಲ್ಲಿ ಕೆಲಸವಿಲ್ಲ, ಹೊಟ್ಟೆಗೆ ಊಟವಿಲ್ಲ, ಮುಂದೆ ಏನ್ ಮಾಡೋದು ಅಂತ ಆತನಿಗೆ ದಿಕ್ಕೇ ತೋಚಲಿಲ್ಲ, ದೈರ್ಯದಿಂದ ಒಂದು ನಿರ್ಧಾರಕ್ಕೆ ಬಂದ ಆ ವಲಸೆ ಕಾರ್ಮಿಕ..! ಸುಮಾರು 150 ಕಿ.ಮೀ ದೂರದಲ್ಲಿರುವ ಮನೆಗೆ ನಡೆದು ಕೊಂಡೇ ಹೋಗಲು ನಿರ್ಧರಿಸಿದ, ಇದು ಬೇರೆಯಾವುದೋ ರಾಜ್ಯದಲ್ಲಿ ನಡೆದ ಘಟನೆಯಲ್ಲ, ನಮ್ಮದೇ ರಾಜ್ಯದಲ್ಲೇ ನಡೆದ ಘಟನೆ. ಇಂತಹ ಅದೆಷ್ಟೋ ಘಟನೆಗಳು ನಡೆದಿರ ಬಹುದು, ಬೆಳಕಿಗೆ ಬರೋದು ಕೆಲವೊಂದು ಮಾತ್ರಾ ಅದರಲ್ಲಿ ಈ ಘಟನೆಯೂ ಒಂದು.
ಮಡಿಕೇರಿ ಮೂಲದ ಶಿವ ಎಂಬ ಕೂಲಿ ಕಾರ್ಮಿಕ, ಕೆಲಸ ಹುಡುಕಿ ಮಂಗಳೂರಿಗೆ ಹೋಗಿದ್ದ, ದುರಾದೃಷ್ಟವಶತ್ ಆತನಿಗೆ ಕೆಲಸ ಸಿಕ್ಕಿಲ್ಲ, ಕೈಯಲ್ಲಿ ಒಂದು ರೂಪಾಯಿ ದುಡ್ಡಿಲ್ಲ, ಮುಗ್ಧ ಮನಸಿನ ಈತ ಯಾರ ಸಹಾಯನೋ ಕೇಳಲು ಬಯಸಿಲ್ಲ, ಸುಮಾರು 50 ವರ್ಷದ ಶಿವ 60 ಕಿ.ಮೀ ನಡೆದೇ ಬಿಟ್ಟಿದ್ರೂ, ಇನ್ನೂ 90 ಕಿ.ಮೀ ಬಾಕಿಯಿತ್ತು, ಎರಡು ದಿನ ಊಟವಿಲ್ಲದೆ ಹಸಿವಿನಿಂದ ಬಳಲುತ್ತಿದ್ದ ಅವರು ರಸ್ತೆ ಮಧ್ಯದಲ್ಲಿ ಮರದಿಂದ ಬಿದ್ದಿದ್ದ ಮಾವಿನಹಣ್ಣನ್ನು ತಿನ್ನುತ್ತಿದ್ದಾಗ, ಪೊಲೀಸರ ಕಣ್ಣಿಗೆ ಬಿದ್ದು ಬಿಟ್ಟರು.
ಪುತ್ತೂರು ಗ್ರಾಮೀಣ ಪೊಲೀಸ್ ಹೆಡ್ ಕಾನ್ಸ್ಟೆಬಲ್ ದಯಾನಂದ್ ಮತ್ತು ಹೋಮ್ ಗಾರ್ಡ್ ಕಿರಣ್ ಸಂತ್ಯಾರು ಚೆಕ್ಪಾಯಿಂಟ್ನಲ್ಲಿ ಕರ್ತವ್ಯ ನಿರತವಾಗಿದ್ದಾಗ ಶಿವನನ್ನು ಗಮನಿಸಿ ಆತನನ್ನು ವಿಚಾರಿಸಿದಾಗ, ನಡೆದ ಘಟನೆಯನ್ನು ವಿವರಿಸುತ್ತಾರೆ. ನಾನು ಕಳೆದ ಎರಡು ದಿನಗಳಿಂದ ಏನನ್ನೂ ತಿಂದಿಲ್ಲ, ನನ್ನ ಬಳಿ ಹಣವಿಲ್ಲ, ನಾನೀಗ ಮಡಿಕೇರಿ ಬಳಿಯ ರಾಣಿಪೇಟೆಯಲ್ಲಿರುವ ಮನೆಗೆ ತೆರಳುತ್ತಿದ್ದೇನೆ ಎನ್ನುತ್ತಾರೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಶಿವು ಮಂಗಳೂರಿಗೆ ಕೆಲಸ ಅರಸಿ ಬಂದು ಕೇವಲ ಐದೇ ದಿನವಾಗಿತ್ತು. ಕೋವಿಡ್ ಕಠಿಣ ನಿರ್ಬಂಧವಿರುವ ಹಿನ್ನಲೆ ಆತನಿಗೆ ಕೆಲಸ ಕೂಡ ಸಿಕ್ಕಿಲ್ಲ, ಆತ ಎರಡು ದಿನದಿಂದ ಉಪವಾಸವಿದ್ದ, ಪಕ್ಷಿಗಳು ಅರ್ಧ ತಿಂದು ಕೆಳಗೆ ಬಿದಿದ್ದ ಹಾಳಾದ ಮಾವಿನ ಹಣ್ಣನ್ನು ತಿನ್ನುತ್ತಿದ್ದರು, ಎಂದು ಹೆಡ್ ಕಾನ್ಸ್ಟೆಬಲ್ ದಯಾನಂದ್ ಮಾಹಿತಿ ನೀಡಿದ್ದಾರೆ.
ಸುಮಾರು 60 ಕಿ.ಮೀ ನಡೆದು ಬಂದಿದ್ದ, ಶಿವನನ್ನು ವಾಹನದಲ್ಲಿ ಕಳುಹಿಸಲು ನಿರ್ಧರಿಸಿದ ಹೆಡ್ ಕಾನ್ಸ್ಟೆಬಲ್ ದಯಾನಂದ್ ತಂಡ ರಸ್ತೆಯಲ್ಲಿ ಸರಕು ತುಂಬಿದ ವಾಹನ ಒಂದನ್ನು ತಡೆದು, ಚಾಲಕನಿಗೆ ಶಿವುವಿನ ಬಗ್ಗೆ ತಿಳಿಸಿ, ಈತನನ್ನು ಮಡಿಕೇರಿಯಲ್ಲಿ ಇಳಿಸುವಂತೆ ವಿನಂತಿಸಿಕೊಂಡಿದ್ದಾರೆ. ಆತ ಒಪ್ಪಿ ಕರೆದುಕೊಂಡು ಹೋಗಿದ್ದಾನೆ. ಕೊನೆಗೂ ದೇವರ ದಯೆಯಿಂದ ಶಿವ ಸೇಫ್ ಆಗಿ ಮನೆ ಸೇರಿದ್ದಾನೆ. ಈ ಘಟನೆ ಮೇ 1 ರಂದು ನಡೆದಿದ್ದು, ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನವಾನೆ ಸೋಮವಾರ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.
ಹೀಗೆ ಅದೆಷ್ಟೋ ಜನ ಕುಟುಂಬ ನಿರ್ವಹಣೆಗೆ ಕೂಲಿ ಅರಸಿ ಬೇರೆ ಸ್ಥಳಗಳಿಗೆ ಹೋಗಿದ್ದು, ಈ ಕೋವಿಡ್ ಮಹಾಮಾರಿ ಅಂತವರ ಜೀವನವನ್ನೇ ಬಲಿ ತೆಗೆದುಕೊಂಡಿದೆ. ಸರ್ಕಾರ ಜಾರಿಗೆ ತಂದ ಕಠಿಣ ನಿಯಮಗಳನ್ನು ಅನುಸರಿಸುವುದು ಜನಸಾಮಾನ್ಯರ ಜವಬ್ದಾರಿ ಆದ್ರೆ ಈ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ನಿಯಮಗಳ ಹಿಂದೆ ಜನ ಹಿತ ಯೋಜನೆಗಳನ್ನು ಜಾರಿಗೆ ತರುವುದು ಸರ್ಕಾರದ ಪ್ರಮುಖ ಜವಬ್ದಾರಿ ಕೂಡ.
ಮೂಲ- ನ್ಯೂ ಇಂಡಿಯನ್ ಎಕ್ಸ್ಪ್ರೆಸ್