ಶೀಘ್ರದಲ್ಲೇ ಪ್ರಾಯೋಗಿಕವಾಗಿ ಗುಂಪುಗಳ ರಚನೆ, ಅಧಿಕಾರಿಗಳ, ಬ್ಯಾಂಕ್ ಪ್ರತಿನಿಧಿಗಳ ಸಭೆ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳನ್ನೊಳಗೊಂಡಂತೆ ಜಂಟಿ ಹೊಣೆಗಾರಿಗೆ ಗುಂಪುಗಳನ್ನು (Joint Liability Group) ರಚಿಸುವ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಇಂದು ವಿಧಾನ ಸೌಧದ ತಮ್ಮ ಕಚೇರಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಬ್ಯಾಂಕ್ ಪ್ರತಿನಿಧಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದರು.

ಗೃಹಲಕ್ಷ್ಮಿ ಯೋಜನೆ ಈಗಾಗಲೇ ಜನಪ್ರಿಯಗೊಂಡಿದ್ದು, ಜಂಟಿ ಹೊಣೆಗಾರಿಗೆ ಗುಂಪುಗಳನ್ನು ರಚಿಸುವ ಮೂಲಕ ಮಹಿಳೆಯರಿಗೆ ಇನ್ನಷ್ಟು ಆರ್ಥಿಕ ಶಕ್ತಿ ನೀಡುವುದೇ ಇದರ ಉದ್ದೇಶ. ಪ್ರಾಯೋಗಿಕವಾಗಿ ಸುಮಾರು 500 ಸಂಘಗಳನ್ನು ರಚಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಜೊತೆಗೆ ಮುಂದಿನ ಸಭೆಯಲ್ಲಿ ಜಂಟಿ ಹೊಣೆಗಾರಿಗೆ ಗುಂಪುಗಳ ರಚನೆಗೆ ಅಂತಿಮ ರೂಪು ರೇಷೆ ಸಿದ್ಧಪಡಿಸುವಂತೆ ಸೂಚಿಸಿದರು.

ಕರ್ನಾಟಕದಲ್ಲಿ ಅಂಗನವಾಡಿ ಕೇಂದ್ರಗಳು ಆರಂಭಗೊಂಡು 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ಸುವರ್ಣ ಮಹೋತ್ಸವ ಸಮಾರಂಭ ನಡೆಯಲಿದ್ದು, ಈ ವೇಳೆಗೆ ಜಂಟಿ ಹೊಣೆಗಾರಿಗೆ ಗುಂಪುಗಳ ರಚನೆಗೆ ಚಾಲನೆ ನೀಡಲಾಗುತ್ತಿದೆ.

ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ನಬಾರ್ಡ್ ಬ್ಯಾಂಕ್ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ.ಸುರೇಂದ್ರ ಬಾಬು, ಆಪ್ತ ಕಾರ್ಯದರ್ಶಿ ಟಿ.ಎಚ್.ವಿಶ್ವನಾಥ್, ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ವಲ್, ಸ್ತ್ರಿ ಶಕ್ತಿ ಯೋಜನೆಯ ಯೋಜನಾ ನಿರ್ದೇಶಕರಾದ ಎಂ.ಜಿ.ಪಾಲಿ, ನಬಾರ್ಡ್ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಡಾ.ಅಶುತೋಷ್ ಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕರಾದ ವಿ.ಎಂ.ರುಕ್ಮಿಣಿ, ಯೋಜನಾಧಿಕಾರಿ ಸವಿತಾ ವೈ.ಡಿ ಉಪಸ್ಥಿತರಿದ್ದರು.