ಹೊಡೆ (ಎಳೆ ತೆನೆ) ಹೊತ್ತು ಹಸಿರಿನಿಂದ ಕಂಗೊಳಿಸುವ ಭತ್ತದ ಗದ್ದೆಗಳ ನಡುವೆ ಭೂಮಿ ತಾಯಿಯ ಸೀಮಂತದ ಸಂಭ್ರಮ ಇಂದು ಮಲೆನಾಡಿನಾದ್ಯಂತ ಸಡಗರ ತಂದಿತ್ತು.
ಭತ್ತ ತೆನೆ ಒಡೆಯುವ ಮುನ್ನ ಫಸಲಿನ ಗರ್ಭ ಹೊತ್ತ ಭೂಮಿ ತಾಯಿಗೆ ಬಯಕೆ ತೀರಿಸುವ ಹಬ್ಬವೇ ಭೂಮಿ ಹುಣ್ಣಿಮೆ. ಸೀಗೆಹುಣ್ಣಿಮೆಯ ದಿನ ಮಲೆನಾಡಿನ ಬಹುತೇಕ ಕಡೆ ಈ ಹಬ್ಬವನ್ನ ಮಣ್ಣಿನ ಮಕ್ಕಳು ಅತ್ಯಂತ ವಿಶಿಷ್ಟವಾಗಿ ಆಚರಿಸುತ್ತಾರೆ.
ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ದಾವಣಗೆರೆ ಜಿಲ್ಲೆ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಈ ಹಬ್ಬವನ್ನು ಭೂಮಿತಾಯಿಯೊಂದಿಗಿನ ಕಳ್ಳುಬಳ್ಳಿಯ ನಂಟಿನ ಸಂಭ್ರಮದಂತೆ ಆಚರಿಸುತ್ತಾರೆ. ವಿಶೇಷವೆಂದರೆ ಈ ಪ್ರದೇಶದ ದೀವರು, ಒಕ್ಕಲಿಗರು, ಲಿಂಗಾಯತ ಮುಂತಾದ ಕೃಷಿಕ ಸಮುದಾಯಗಳ ರೈತಾಪಿ ಜನ, ತಮ್ಮದೇ ವಿಶಿಷ್ಟ ರೀತಿಯಲ್ಲಿ ಈ ಭೂಮಿ ಹುಣ್ಣಿಮೆ ಆಚರಿಸುತ್ತಾರೆ.
ಭೂಮಿಯಲ್ಲಿ ಉತ್ತಿಬಿತ್ತಿ ಅನ್ನ ಬೆಳೆಯುವ ಅನ್ನದಾತನಿಗೆ ಭೂಮಿ ಎಂದರೆ ಬರೀ ಮಣ್ಣಲ್ಲ, ಭೂಮಿ ಅನ್ನ ಕೊಡುವೆ ತಾಯಿ. ದ್ಯಾವಾ ಪೃಥ್ವಿ. ಫಲವತ್ತಾದ ನೆಲ. ಹಾಗಾಗಿ ಈ ಹುಣ್ಣಿಮೆಯ ಹೊತ್ತಿಗೆ ಕಾಳು ಕಟ್ಟುವ ಹಂಗಾಮಿನಲ್ಲಿ ಬಸುರಿ ಭೂಮಿ ತಾಯಿಯ ಬಯಕೆ ತೀರಿಸಿ ಉತ್ತಮ ಫಸಲು ಕೊಡು ತಾಯೆ ಎಂದು ಬೇಡುವ ಭೂಮಿ ತಾಯಿಯ ಚೊಚ್ಚಿಲ ಮಕ್ಕಳ ಹಬ್ಬ ಇದು.
ಮಲೆನಾಡಿನ ವಿಶಿಷ್ಟ ಸಮುದಾಯವಾದ ದೀವರಲ್ಲಿ ಈ ಹಬ್ಬ ಅವರ ಕಲಾ ನೈಪುಣ್ಯತೆ, ಪ್ರಕೃತಿ ಮತ್ತು ಮನುಷ್ಯನ ನಡುವಿನ ಅನ್ಯೋನ್ಯತೆ ಬಿಂಬಿಸುವ ಹಬ್ಬ ಇದು. ಅವರು ಈ ಹಬ್ಬದಲ್ಲಿ ಬಿದುರಿನ ಬುಟ್ಟಿಗೆ ವಿವಿಧ ನೈಸರ್ಗಿಕ ಬಣ್ಣಗಳಿಂದ ಚಿತ್ತಾರ ಬರೆದು, ಅದರಲ್ಲಿ ಚರಗ ತುಂಬಿಕೊಂಡು ಹೋಗಿ ಭೂಮಿ ಪೂಜೆ ಮಾಡುತ್ತಾರೆ ಚಿತ್ತಾಕರ್ಷಕ .ಜಾನಪದ ಕಲೆಯ ಆ ಬುಟ್ಟಿಯನ್ನು ಭುಮ್ಮಣ್ಣಿ ಬುಟ್ಟಿ ಎಂದು ಕರೆಯುತ್ತಾರೆ.

ಜೊತೆಗೆ ಭೂಮಿ ಹುಣ್ಣಿಮೆ ಹಿಂದಿನ ದಿನ ರೈತ ಮಹಿಳೆಯರು ಮನೆ ಸಾರಿಸಿ, ಮಡಿಯುಟ್ಟು, ಇಡೀ ರಾತ್ರಿ ನಿದ್ದೆ ಮಾಡದೆ ವಿಶೇಷ ಅಡುಗೆಯನ್ನು ಸಿದ್ದಪಡಿಸುತ್ತಾರೆ. ಭೂಮಿಯ ಮೇಲಿರುವ ವಿವಿಧ ಸೊಪ್ಪು,ತರಕಾರಿ, ಗೆಡ್ಡೆ ಗೆಣಸುಗಳನ್ನು ಹಾಕಿ ಸಿದ್ದಪಡಿಸಿದ ಪದಾರ್ಥಕ್ಕೆ ‘ಸಾಗುಸೊಪ್ಪು ಅಥವಾ ಚರಗ’ ಎನ್ನುತ್ತಾರೆ .ಅಲ್ಲದೆ ಭೂಮಿ ತಾಯಿಗೆ ಎಡೆಮಾಡಲು ಚೀನಿ ಕಾಯಿ, ಸೌತೆ ಕಾಯಿ, ಕುಂಬಳಕಾಯಿ ಕಡುಬು ಮತ್ತು ಕೊಟ್ಟೆ ಕಡುಬು, ಏಳು ಬಗೆಯ ತರಕಾರಿ ಪಲ್ಯ ಬಗೆಬಗೆಯ ಸಿಹಿತಿಂಡಿ ಸಿದ್ದಪಡಿಸುತ್ತಾರೆ.
ರಾತ್ರಿ ತಯಾರಿಸಿದ,ಕಡುಬು ಬುತ್ತಿಯನ್ನು ಭುಮ್ಮಣ್ಣಿ ಬುಟ್ಟಿಗೆ ತುಂಬಿ, ತಲೆಯ ಮೇಲೆ ಹೊತ್ತು ಗದ್ದೆಗೆ ಕೊಂಡೊಯ್ದು, ಅಲ್ಲಿ ಭತ್ತ ಅಥವಾ ತೋಟದಲ್ಲಿ ಪೂಜೆ ಮಾಡಿ ಎಡೆ ಮಾಡಿ ಊಟ ಮಾಡುವುದು ವಾಡಿಕೆ. ಹಾಗೇ.ಗದ್ದೆಯಲ್ಲಿ ಪೂಜೆ ಸಲ್ಲಿಸಿದ ನಂತರ ಕಾಗೆ, ಇಲಿಗಳಿಗೂ ಎಡೆ ಇಟ್ಟು ನಂತರ ಎಲ್ಲರೂ ಗದ್ದೆಯಲ್ಲಿಯೇ ಸಾಮೂಹಿಕವಾಗಿ ಹಬ್ಬದೂಟ ಸವಿಯುತ್ತಾರೆ.

ಭುಮ್ಮಣ್ಣಿ ಬುಟ್ಟಿಯ ಚಿತ್ತಾರಗಳಲ್ಲಿ ಕಾಣುವ ಜೀವಪರ ತುಡಿತಗಳು ಮತ್ತು ಇಡೀ ಈ ಹಬ್ಬದ ಪ್ರತಿ ಆಚರಣೆಗಳಲ್ಲು ಕಾಣುವ ಪ್ರಕೃತಿ ಆರಾಧನೆಯ ಅಂಶಗಳು ದೀವರ ಸಮುದಾಯದ ಕಲಾವಂತಿಕೆ ಮತ್ತು ಜೀವಪರತೆಗೆ ನಿದರ್ಶನ. ಆ ಹಿನ್ನೆಲೆಯಲ್ಲಿಯೇ ಇಂದು ಈ ಸಮುದಾಯದ ಬುಟ್ಟಿ ಚಿತ್ತಾರ ಮತ್ತು ಹಸೆ ಚಿತ್ತಾರಗಳು ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಗಮನಸೆಳೆದಿವೆ. ಕಲೆ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬಂಧದ ಜೊತೆಗೆ ಧಾರ್ಮಿಕ ಆಯಾಮದಲ್ಲಿಯೂ ಈ ಸಮುದಾಯದ ಭೂಮಿ ಹುಣ್ಣಿಮೆ ಆಸಕ್ತಿದಾಯಕ.











