ತೈಲ ಬೆಲೆ ಏರಿಕೆ ಬಗ್ಗೆ ಯಾವ ಮಾತೂ ಆಡದ ಕಾರಣ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ವಿರುದ್ಧ ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿ ಸಮರ ಸಾರಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿ (MPCC) ಅಧ್ಯಕ್ಷ ನಾನಾ ಪಟೋಲೆ ಪ್ರತಿಕ್ರಿಯಿಸಿದ್ದು, ಮಹಾರಾಷ್ಟ್ರದಲ್ಲಿ ಈ ನಟರ ಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುರುವಾರ ಬೆದರಿಕೆ ಹಾಕಿದ್ದಾರೆ.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಆದ ಸಂದರ್ಭದಲ್ಲಿ ಈ ಇಬ್ಬರೂ ನಾಯಕರು ಟ್ವೀಟ್ ಮೂಲಕ ಟೀಕಿಸಿದ್ದನ್ನು ಪಟೋಲೆ ಉಲ್ಲೇಖಿಸಿದ್ದಾರೆ.
‘ಈ ನಾಯಕ ನಟರ ಚಲನಚಿತ್ರಗಳನ್ನು ಮಹಾರಾಷ್ಟ್ರದಲ್ಲಿ ಚಿತ್ರೀಕರಿಸಲು ನಾವು ಅನುಮತಿಸುವುದಿಲ್ಲ. ಅವರ ಚಿತ್ರವನ್ನು ಮಹಾರಾಷ್ಟ್ರದಲ್ಲಿ ಪ್ರದರ್ಶಿಸಲು ಸಹ ಅವಕಾಶ ನೀಡುವುದಿಲ್ಲ’ ಎಂದು ತಮ್ಮ ಪಟೋಲೆ ಹೇಳಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಾಗುತ್ತಿರುವಾಗ ಅವರು ಈಗ ಏಕೆ ಟ್ವೀಟ್ ಮಾಡುತ್ತಿಲ್ಲ? ಎಂದು ಪ್ರಶ್ನಿಸಿರುವ ಪಟೋಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಒತ್ತಡದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಲೆ ಏರಿಕೆ ವಿರುದ್ಧ ಅಕ್ಷಯ್ ಕುಮಾರ್ ಹಳೆಯ ಟ್ವೀಟ್
‘ಯುಪಿಎ ಸರ್ಕಾರದ ಅವಧಿಯಲ್ಲಿನ ದರಗಳಿಗೆ ಹೋಲಿಸಿದರೆ, ಬಿಜೆಪಿ ಆಡಳಿತದ 7 ವರ್ಷಗಳ ಅವಧಿಯಲ್ಲಿ ತೈಲ ದರ ದ್ವಿಗುಣವಾಗಿದೆ. ಆ ಸಮಯದಲ್ಲಿ ಈ ಎಲ್ಲ ಸೆಲೆಬ್ರಿಟಿಗಳು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದರು, ಆದರೆ ಈಗ ಅವರು ಬಿಜೆಪಿಗೆ ಹೆದರುತ್ತಿದ್ದಾರೆ. ಯುಪಿಎ ಸರ್ಕಾರವು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಆಡಳಿತ ನೀಡುತ್ತಿತ್ತು. ಅದಕ್ಕಾಗಿಯೇ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಸೇರಿದಂತೆ ಇತರ ಅನೇಕ ಸೆಲೆಬ್ರಿಟಿಗಳು ಸರ್ಕಾರದ ವಿರುದ್ಧ ಭಯವಿಲ್ಲದೆ ಧ್ವನಿ ಎತ್ತುತ್ತಿದ್ದರು. ಇಂದು, ಅವರು ಬಿಜೆಪಿಯ ಕೈಗೊಂಬೆಗಳಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಭಾರತದ ಸೆಲೆಬ್ರಿಟಿಗಳು ಇನ್ನು ಮುಂದೆ ಹಣದುಬ್ಬರ, ಇಂಧನ ಬೆಲೆಗಳು, ರೈತರು ಮತ್ತು ಸಮಾಜದ ಇತರ ವರ್ಗಗಳ ವಿರುದ್ಧದ ದೌರ್ಜನ್ಯದ ಬಗ್ಗೆ ಮಾತನಾಡದಿರಬಹುದು. ಆದರೆ, ವಿಶ್ವದಾದ್ಯಂತ ಜನರು ರೈತರಿಗೆ ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

ಬೆಲೆ ಏರಿಕೆ ವಿರುದ್ಧ ಅಮಿತಾಬ್ ಬಚ್ಚನ್ ಹಳೆಯ ಟ್ವೀಟ್