ಹಾರಾಟದ ಕನಸುಗಳಿಗೆ ಲೋಹದ ರೆಕ್ಕೆ ಕಟ್ಟಿದ ಜಹಾಂಗೀರ್ ರತನ್ ಜಿ ದಾದಾಭಾಯ್ ಟಾಟಾ ಅವರಿಂದು ಬದುಕಿಲ್ಲ. ಆದರೆ, ಅವರು ಕಟ್ಟಿ ಬೆಳೆಸಿದ್ದ ಏರ್ ಇಂಡಿಯಾ ಏಳು ದಶಕಗಳ ನಂತರ ಅವರದ್ದೇ ಗೂಡಿಗೆ ಮರಳಿದೆ. ಭಾರತೀಯ ವೈಮಾನಿಕ ಇತಿಹಾಸ ಒಂದು ವೃತ್ತವನ್ನು ಪೂರೈಸಿದಂತಾಗಿದೆ. ಇಡೀ ಬೆಳವಣಿಗೆಯನ್ನು ಸರ್ಕಾರದ ವೈಫಲ್ಯಗಳ ದೃಷ್ಟಿಯಿಂದಲೂ ಖಾಸಗಿ ಕಂಪನಿಗಳ ಸಾಫಲ್ಯಗಳ ದೃಷ್ಟಿಯಿಂದಲೂ ನೋಡಬೇಕಿದೆ. ಆ ಲೆಕ್ಕದಲ್ಲಿ ಆಳುವವರಿಗೆ ಆಳ್ವಿಕೆಯಷ್ಟೇ ಮುಖ್ಯವೇ ಹೊರತು ಅಭಿವೃದ್ಧಿಯಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಏರ್ ಇಂಡಿಯಾ ಭಾರತ ಸರ್ಕಾರದಿಂದ ಟಾಟಾ ಸಮೂಹದ ತೆಕ್ಕೆಗೆ ಸೇರಿಕೊಂಡಿದ್ದು ಅದಕ್ಕೆ ತಾಜಾ ಉಹಾಹರಣೆ.
ಈ ಬೆಳವಣಿಗೆಯು ಭಾರತದ ವಾಯುಯಾನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ. ಅಷ್ಟರಮಟ್ಟಿಗೆ ಇದು ಸಕಾರಾತ್ಮಕ ಬೆಳವಣಿಗೆಯೇ ಹೌದು. ಏರ್ ಇಂಡಿಯಾದಂತೆಯೇ ಜಗತ್ತಿನಲ್ಲಿ ನೂರಾರು ಏರ್ಲೈನ್ ಕಂಪನಿಗಳಿವೆ. ಯಶಸ್ವಿಯಾಗಿ ನಡೆಯುತ್ತಿವೆ. ಪ್ರತಿವರ್ಷವೂ ಒಂದಿಲ್ಲೊಂದು ಹೊಸ ಏರ್ಲೈನ್ ಸಂಸ್ಥೆ ಉದಯಿಸುತ್ತಲೇ ಇದೆ. ವಿಮಾನಯಾನಿಗರ ಸಂಖೆಯೂ ಹೆಚ್ಚುತ್ತಲೇ ಇದೆ. ಉದಯಿಸುತ್ತಿರುವ ಆರ್ಥಿಕತೆಯ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರುವ ಭಾರತದಲ್ಲಿ ವಿಮಾನಯಾನ ಉದ್ಯಮಕ್ಕೆ ಉಜ್ವಲ ಭವಿಷ್ಯವಿದೆ. ಕಳೆದ ಒಂದೂವರೆ ದಶಕದಲ್ಲಿ ಅರ್ಧ ಡಜನ್ ವಿಮಾನಯಾನ ಕಂಪನಿಗಳು ಪ್ರಾರಂಭವಾಗಿ, ಯಶಸ್ವಿಯಾಗಿ ನಡೆಯುತ್ತಿವೆ. ಕಿಂಗ್ ಫಿಶರ್ ಏರ್ಲೈನ್ಸ್ ‘ಕ್ರ್ಯಾಶ್ ಲ್ಯಾಂಡಿಂಗ್’ ಆಗಿದ್ದರ ಹೊರತಾಗಿ ಬಹುತೇಕ ಕಂಪನಿಗಳದ್ದು ಸುಗಮ ಹಾರಾಟ. ವಿಸ್ತರಿತ ಹಾರಾಟ!

ಏರ್ ಇಂಡಿಯಾವನ್ನು ಟಾಟಾ ಸಮೂಹವು ಮುಕ್ತ ಹರಾಜಿನಲ್ಲಿ ಬಿಡ್ಡು ಮಾಡಿ ಪಡೆದಿದೆ. ಅಷ್ಟರಮಟ್ಟಿಗೆ ಇಡೀ ವಹಿವಾಟು ಪಾರದರ್ಶಕವಾಗಿಯೇ ಇದೆ. 18,000 ಕೋಟಿ ರೂಪಾಯಿ ಮೊತ್ತಕ್ಕೆ ಟಾಟಾ ಸಮೂಹ ಖರೀದಿ ಮಾಡಿದೆ. ಆದರೆ, 18,000 ಕೋಟಿ ರೂಪಾಯಿಗಳ ಪೈಕಿ 2,700 ಕೋಟಿ ರುೂಪಾಯಿಗಳನ್ನು ಮಾತ್ರ ನಗದು ರೂಪದಲ್ಲಿ ಪಾವತಿಸುತ್ತದೆ. ಉಳಿದ 15,300 ಕೋಟಿ ರೂಪಾಯಿಗಳನ್ನು ಸಾಲದ ರೂಪದಲ್ಲಿ ಮುಂಬರುವ ವರ್ಷಗಳಲ್ಲಿ ಪಾವತಿಸಲಿದೆ.
ಅಷ್ಟಕ್ಕೂ ಏರ್ ಇಂಡಿಯಾ ಖರೀದಿಗೆ ಹೆಚ್ಚು ಕಂಪನಿಗಳು ಆಸಕ್ತಿ ವಹಿಸದೇ ಇರುವುದಕ್ಕೆ ಮುಖ್ಯ ಕಾರಣ ಸಂಸ್ಥೆಯ ಮೇಲಿರುವ ಬೃಹತ್ತಾದ ಸಾಲ. 2021ರ ಆಗಸ್ಟ್ 31ರಂದು ಇದ್ದಂತೆ ಕಂಪನಿಯ ಮೇಲಿನ ಸಾಲದ ಹೊರೆಯು 60,000 ಕೋಟಿ ರುೂಪಾಯಿಗಳಾಗಿತ್ತು. ಈ ಬೃಹತ್ ಮೊತ್ತದ ಸಾಲವನ್ನು ನಿಭಾಯಿಸುವ ಮತ್ತು 12,500 ಸಿಬ್ಬಂದಿಗಳನ್ನು ನಿರ್ವಹಿಸುವ ಆರ್ಥಿಕ ಸಾಮರ್ಥ್ಯ ಬೇರಾವ ಕಂಪನಿಗಳಿಗೂ ಇದ್ದಂತಿಲ್ಲ. ದೇಶದ ಅತಿ ದೊಡ್ಡ ಉದ್ಯಮ ಸಮೂಹವಾಗಿರುವ ಟಾಟಾಗೆ ಏರ್ ಇಂಡಿಯಾ ಬಗೆಗಿನ ‘ಭಾವನಾತ್ಮಕ’ ಸಂಬಧವೂ ಖರೀದಿಗೆ ಪ್ರೇರೇಪಿಸಿದೆ.
ಭಾರತ ಸರ್ಕಾರವಂತೂ ಪ್ರತಿ ವರ್ಷ ನಷ್ಟದಲ್ಲೇ ಸಾಗುತ್ತಿರುವ ಏರ್ ಇಂಡಿಯಾ ಭಾರವನ್ನು ಯಾರ ಹೆಗಲಿಗಾದರೂ ಹೊರೆಸಿದರೆ ಸಾಕಪ್ಪಾ ಅನ್ನುವ ಮಟ್ಟಕ್ಕೆ ಬಂದಿತ್ತು. ಅದು ಭಾರತ ಸರ್ಕಾರದ ವೈಫಲ್ಯವೂ ಹೌದು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಳೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದರೂ ಏರ್ ಇಂಡಿಯಾವನ್ನು ನಷ್ಟದಿಂದ ಮುಕ್ತ ಮಾಡಲು ಸಾಧ್ಯವಾಗಲಿಲ್ಲ. ಇದು ಮೋದಿ ಸರ್ಕಾರ ಆಡಳಿತ ವೈಖರಿಗೆ ಸಾಕ್ಷಿ.
ಏರ್ ಇಂಡಿಯಾ ಮಹಾನಗರಗಳಲ್ಲಿ ಸ್ಥಿರಾಸ್ತಿಗಳನ್ನು ಹೊಂದಿದೆ. ಆ ಸ್ಥಿರಾಸ್ತಿಗಳನ್ನು ಮಾರಾಟ ಮಾಡಿ ಸಾಲವನ್ನು ತೀರಿಸಲಾಗುತ್ತದೆ. ಅದಕ್ಕಾಗಿ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್ಪಿವಿ) ರೂಪಿಸಲಾಗಿದೆ. ಅದು ಆಸ್ತಿ ವಿಲೇವಾರಿ ನಿಭಾಯಿಸಲಿದೆ.
ಬಂಡವಾಳ ಹಿಂತೆಗೆತ ಯೋಜನೆಯಡಿ ಏರ್ ಇಂಡಿಯಾ ಮಾರಾಟ ಮಾಡಿದ್ದು ಮೋದಿ ಸರ್ಕಾರದ ಅತಿ ದೊಡ್ಡ ‘ಸಾಧನೆ’?! ಮೋದಿ ಸರ್ಕಾರದ ಮಾರಾಟದ ಪಟ್ಟಿಯಲ್ಲಿ ಹತ್ತು ಹಲವು ಕಂಪನಿಗಳಿವೆ! 2022 ಜನವರಿ 20ಕ್ಕೆ ಇದ್ದಂತೆ ಏರ್ ಇಂಡಿಯಾದ ಬ್ಯಾಲೆನ್ಸ್ ಶೀಟ್ (ಲಾಭ-ನಷ್ಟ ಪಟ್ಟಿ)ಅನ್ನು ಟಾಟಾ ಕಂಪನಿಯೊಂದಿಗೆ ಭಾರತ ಸರ್ಕಾರ ವಿನಿಮಯ ಮಾಡಿಕೊಂಡಿದೆ. ಅಂದಿನಿಂದ ಏರ್ ಇಂಡಿಯಾದಲ್ಲಾಗುವ ವಹಿವಾಟು ನಿರ್ವಹಣೆ ಲಾಭ ನಷ್ಟಗಲೆಲ್ಲವೂ ಟಾಟಾಗೆ ಸೇರಿದ್ದು.
ಸದ್ಯಕ್ಕೆ ಬೇಕಾಗಿರುವ 15,300 ಕೋಟಿ ರೂಪಾಯಿಗಳ ಸಾಲವನ್ನು ಟಾಟಾ ಸಮೂಹಕ್ಕೆ ಒದಗಿಸಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ನೇತೃತ್ವ ಸಾರ್ವಜನಿಕ ವಲಯದ ಬ್ಯಾಂಕುಗಳ ಒಕ್ಕೂಟವು ಮುಂದಾಗಿದೆ.
ನವದೆಹಲಿಯ ಪ್ರತಿಷ್ಠಿತ ಏರ್ಲೈನ್ಸ್ ಹೌಸ್ನಲ್ಲಿ ಏರ್ ಇಂಡಿಯಾ ಮಾಲಿಕತ್ವದ ಅಂತಿಮ ಹಸ್ತಾಂತರದ ವಿಧಿವಿಧಾನಗಳು ಪೂರ್ಣಗೊಂಡಿವೆ. ಇದಕ್ಕೂ ಮುನ್ನ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ, ಏರ್ ಇಂಡಿಯಾ ಬಗ್ಗೆ ಟಾಟಾ ಸಮೂಹದ ಭವಿಷ್ಯದ ಕನಸುಗಳನ್ನು ವಿವರಿಸಿದ್ದಾರೆ.

ಇಡೀ ಬೆಳವಣಿಗೆ ಕುರಿತಂತೆ ಟಾಟಾ ಸನ್ಸ್ ಹೇಳಿದ್ದು: “ವಿಮಾನಯಾನ ಕ್ಷೇತ್ರದ ಕುರಿತಂತೆ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ನಾವು ತಾತ್ವಿಕವಾಗಿ ಒಪ್ಪುತ್ತೇವೆ, ವಿಮಾನಯಾನವು ಜನರ ಕೈಗೆಟುಕುವಂತೆ ಮಾಡಲು ಮತ್ತು ನಾಗರಿಕರಿಗೆ ‘ಸುಲಭ ದರದಲ್ಲಿ’ ಲಭ್ಯವಾಗುವಂತೆ ಮಾಡಲು ಬದ್ಧವಾಗಿದ್ದೇವೆಂಬುದನ್ನು ಸಂಸ್ಥೆ ಖಚಿತಪಡಿಸುತ್ತದೆ.”
ಟಾಟಾ ಗ್ರೂಪ್, ಟ್ವಿಟರ್ ಪೋಸ್ಟ್ನಲ್ಲಿ, ಏರ್ ಇಂಡಿಯಾವನ್ನು ಟ್ಯಾಗ್ ಮಾಡಿ, “ನಿಮ್ಮ ಆಗಮನಕ್ಕಾಗಿ ಸಂಸ್ಥೆ ತುಂಬಾ ಕಾಯುತ್ತಿತ್ತು” ಎಂದು ಹೇಳಿದೆ. “ಸ್ವಾಗತ ಹಿಂತಿರುಗಿ ಬನ್ನಿ, ಏರ್ ಇಂಡಿಯಾ!” ಎಂಬ ಫೋಟೋವನ್ನು ಸಹ ಪೋಸ್ಟ್ ಮಾಡಿದೆ.
ಮಾಲಿಕತ್ವ ಹಸ್ತಾಂತರದ ನಂತರ ಏರ್ ಇಂಡಿಯಾ ಉದ್ಯೋಗಿಗಳಿಗೆ ಪತ್ರ ಬರೆದಿರುವ, ಟಾಟಾ ಸಂಸ್ಥೆ ಅಧ್ಯಕ್ಷ ಎನ್. ಚಂದ್ರಶೇಖರನ್ “ನನ್ನ ಮೊದಲ ವಿಮಾನಯಾನವು ಏರ್ ಇಂಡಿಯಾ ಮೂಲಕ ಡಿಸೆಂಬರ್ 1986 ರಲ್ಲಾಗಿತ್ತು. ವಿಮಾನದಲ್ಲಿದ್ದಾಗ ಎಷ್ಟು ವಿಶೇಷವಾಗಿತ್ತು, ನಾನು ಮೊದಲ ಬಾರಿಗೆ ವಿಮಾನ ಏರಿದಾಗ ಆದ ಉಲ್ಲಾಸವನ್ನು ಎಂದಿಗೂ ಮರೆಯುವುದಿಲ್ಲ. ಆಕಾಶ… ಇಂದು ಹೊಸ ಅಧ್ಯಾಯದ ಆರಂಭ. ರಾಷ್ಟ್ರದ ಕಣ್ಣುಗಳು ನಮ್ಮ ಮೇಲೆ ಇವೆ, ನಾವು ಒಟ್ಟಾಗಿ ಏನನ್ನು ಸಾಧಿಸುತ್ತೇವೆ ಎಂದು ನೋಡಲು ಕಾಯುತ್ತಿವೆ. ನಮ್ಮ ದೇಶಕ್ಕೆ ಅಗತ್ಯವಿರುವ ವಿಮಾನಯಾನವನ್ನು ನಿರ್ಮಿಸಲು, ನಾವು ಭವಿಷ್ಯವನ್ನು ನೋಡಬೇಕಾಗಿದೆ” ಎಂದು ಬರೆದಿದ್ದಾರೆ.
ಸಮಾಧಾನದ ಸಂಗತಿ ಎಂದರೆ, ಏರ್ ಇಂಡಿಯಾ ಟಾಟಾ ಸಮೂಹದ ತೆಕ್ಕೆಗೆ ಮರಳಿರುವುದು. ಮೋದಿ ಆಪ್ತ ಉದ್ಯಮಿಗಳ ಕೈಸೇರಿದ್ದರೆ ಏನಾಗುತ್ತಿತ್ತು ನೀವೇ ಊಹಿಸಿ!!











