
ನಾಳೆಯಿಂದ ಲಾರಿ ಮುಷ್ಕರ ತೀವ್ರಗೊಳ್ಳಲಿದ್ದು, ಲಾರಿ ಮಾಲೀಕರಿಂದ ಅಸಹಕಾರ ಚಳುವಳಿ ಮಾಡಲು ಮುಂದಾಗಿದ್ದಾರೆ. ರಸ್ತೆಯುದ್ದಕ್ಕೂ ಲಾರಿ ಪಾರ್ಕಿಂಗ್ ಮಾಡಲು ನಿರ್ಧಾರ ಮಾಡಿದ್ದು, ಒಂದು ವೇಳೆ ಲಾರಿ ಮುಷ್ಕರ ತೀವ್ರಗೊಂಡರೆ ಟ್ರಾಫಿಕ್ ಜಾಮ್ ಸಂಕಷ್ಟ ಗ್ಯಾರಂಟಿ ಆಗಲಿದೆ. ನಾಳೆ ಬೆಳಗ್ಗೆಯಿಂದಲೇ ರಸ್ತೆಯಲ್ಲಿಯೇ ಲಾರಿ ನಿಲ್ಲಿಸಿ ಹೋರಾಟ ಮಾಡಲು ಯೋಜನೆ ರೂಪಿಸಿದ್ದಾರೆ. ಆರ್ಟಿಓ ಕಚೇರಿ, ಚೆಕ್ ಪೋಸ್ಟ್, ಸರ್ಕಾರಿ ಕಚೇರಿ ಮುಂದೆ ಸಾವಿರಾರು ಲಾರಿಗಳನ್ನು ನಿಲ್ಲಿಸಲು ಯೋಜನೆ ರೂಪಿಸಲಿದ್ದಾರೆ.
ಪ್ರಮುಖ ರಸ್ತೆಯಲ್ಲಿ ಸಾವಿರಾರು ಲಾರಿಗಳನ್ನು ನಿಲ್ಲಿಸಲು ನಿರ್ಧಾರ ಮಾಡಿದ್ದು, ಅಗತ್ಯ ವಸ್ತುಗಳ ಲಾರಿಗಳು ಕಾರ್ಯಾಚರಣೆ ಕಷ್ಟ ಎದುರಾಗಲಿದೆ. ಇಲ್ಲಿಯವರೆಗೆ ಲಾರಿ ಮುಷ್ಕರದಿಂದ ಯಾರಿಗೂ ತೊಂದರೆಯಾಗದಂತೆ ಲಾರಿ ಮುಷ್ಕರ ಮಾಡಲಾಗಿದೆ. ನಾಳೆಯಿಂದ ಲಾರಿ ಮುಷ್ಕರ ಚಳುವಳಿಯಾಗಿ ಮಾರ್ಪಾಡು ಆಗಲಿದೆ. ಸಾರ್ವಜನಿಕರು ರಸ್ತೆಯಲ್ಲಿ ವಾಹನ ಓಡಿಸಲು ಕಷ್ಟವಾಗಲಿದೆ. ಈಗಾಲಾದ್ರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು. ಸರ್ಕಾರ ಇದನ್ನು ಎಚ್ಚರಿಕೆ ಎಂದು ಪರಿಗಣಿಸಿ ನಮ್ಮ ಮನವಿ ಸ್ಪಂದಿಸಲಿ ಎಂದು ಲಾರಿ ಮಾಲಿಕರ, ಏಜೆಂಟ್ ಸಂಘದ ಸೆಕ್ರಟರಿ ಅರವಿಂದ್ ಅಪ್ಪಾಜಿ ಹೇಳಿದ್ದಾರೆ. ನಾಳೆ ಒಂದೇ ಒಂದು ಲಾರಿ ಓಡಾಡಲ್ಲ. ರಾಜ್ಯದಾದ್ಯಂತ ಎಲ್ಲ ಆರ್ ಟಿ ಓ ಕಚೇರಿ ಮುಂದೆ ಲಾರಿ, ಗೂಡ್ಸ್ ವಾಹನ ನಿಲ್ಲಿಸಲಿದ್ದೇವೆ ಎಂದಿದ್ದಾರೆ.

ಲಾರಿ ಮಾಲಿಕರ ಮುಷ್ಕರ ಹಿನ್ನೆಲೆಯಲ್ಲಿ ಇಂದು ಮತ್ತೊಂದು ಸುತ್ತಿನ ಮಾತುಕತೆಗೆ ಆಹ್ವಾನಿಸಿದೆ ಸರ್ಕಾರ. ಇಂದು ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಯಲಿದೆ. ಮೂರನೇ ಸುತ್ತಿನ ಮಾತುಕತೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಹ್ವಾನ ಮಾಡಿದ್ದಾರೆ. ಸಚಿವರ ಜೊತೆಗಿನ ಸಭೆಯಲ್ಲಿ ಅಧ್ಯಕ್ಷ ಷಣ್ಮುಖಪ್ಪ, ಸಂಘದ ಮುಖಂಡರು, ಸಾರಿಗೆ ಇಲಾಖೆ ಆಯುಕ್ತರು, ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಈ ನಡುವೆ ಲಾರೀ ಮಾಲೀಕರ ಸಂಘದಲ್ಲೇ ಬಿರುಕು ಮೂಡಿದ್ಯ ಅನ್ನೋ ಅನುಮಾನವೂ ಮೂಡುತ್ತಿದೆ.

ನಾಳೆಯಿಂದ ಲಾರಿ ಮುಷ್ಕರ ಹೋರಾಟ ತೀವ್ರಗೊಳ್ಳುವ ಬಗ್ಗೆ ಚೆನ್ನಾ ರೆಡ್ಡಿ ಬಣದಿಂದ ಟಕ್ಕರ್ ಕೊಟ್ಟಿದ್ದು, ನಾಳೆಯಿಂದ ನಮ್ಮ ವಾಹನಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಷಣ್ಮುಖಪ್ಪ ಬಣದ ಮುಷ್ಕರಕ್ಕೆ ನಮ್ಮ ಬೆಂಬಲ ಇಲ್ಲ. ಚೆನ್ನಾರೆಡ್ಡಿ ಬಣದ ಫೆಡರೇಷನ್ ಆಫ್ ಲಾರಿ ಮಾಲಿಕರ ಸಂಘ ಅಧ್ಯಕ್ಷ ನವೀನ ರೆಡ್ಡಿ ಹೇಳಿದ್ದಾರೆ. ಕಳೆದ ಮೂರು ದಿನಗಳಿಂದ ಯಾವುದೇ ಮುಷ್ಕರ ಪರಿಣಾಮ ಆಗ್ತಿಲ್ಲ. ಜನಸಾಮಾನ್ಯರಿಗೆ ತೊಂದರೆ ಆಗಿಲ್ಲ. ಕೆಲವು ಕಡೆ ಒತ್ತಡ ಹೇರಿ ಲಾರಿ ನಿಲ್ಲಿಸಿದ್ದಾರೆ. ಆದರೆ ರಾಜ್ಯಾದ್ಯಂತ ಎಲ್ಲ ಕಡೆ ಲಾರಿ, ಗೂಡ್ಸ್ ವಾಹನ ಸೇವೆ ನೀಡ್ತಿವಿ. ನಾಳೆಯೂ ಎಂದಿನಂತೆ ಲಾರಿ, ಗೂಡ್ಸ್ ವಾಹನ ಸೇವೆ ಇರಲಿದೆ. ನಮ್ಮ ಸಂಘದ ಯಾರೊಬ್ಬರೂ ಮುಷ್ಕರಕ್ಕೆ ಬೆಂಬಲ ಕೊಡ್ತಿಲ್ಲ ಎಂದಿದ್ದಾರೆ. ಸರ್ಕಾರಕ್ಕೆ ನಾವು ಮನವಿ ಪತ್ರ ಸಲ್ಲಿಸಿದ್ದೇವೆ. ಮುಷ್ಕರ ಮಾಡಿ ಅಲ್ಲ, ಮಾತುಕತೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಚೆನ್ನಾರೆಡ್ಡಿ ಬಣದ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಪ್ರಸಾದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
