ಮೈಸೂರು : ಮೈಸೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದು ನಾಲ್ವರು ಕೋಟಿ ಕೋಟಿ ಕುಳಗಳಿಗೆ ಶಾಕ್ ನೀಡಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಲೆಕ್ಕಾಧಿಕಾರಿ ಹಾಗೂ ಪ್ರಾಧಿಕಾರದ ಇಂಜಿನಿಯರ್ ನಾಗೇಶ್, ನಂಜನಗೂಡು ಹಿರಿಯ ಸಬ್ ರಿಜಿಸ್ಟ್ರಾರ್ ಶಿವಶಂಕರ್ ಮೂರ್ತಿ, ಪಾಲಿಕೆ ಉಪ ಆಯುಕ್ತ ಮಹೇಶ್ ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಪಾಲಿಕೆ ಉಪ ಆಯುಕ್ತ ಮಹೇಶ್ ಕುಮಾರ್ಗೆ ಸೇರಿದ ಕುವೆಂಪುನಗರದ ಮನೆ ಹಾಗೂ ಅವರಿಗೆ ಸೇರಿದ 13 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದಾರೆ . ಮನೆಯಲ್ಲಿ 50 ಸಾವಿರ ರೂಪಾಯಿ ಮೌಲ್ಯದ ಮದ್ಯ ಪತ್ತೆಯಾಗಿದೆ. ಕುವೆಂಪುನಗರದಲ್ಲಿರುವ ಮನೆಯ ಮೌಲ್ಯ 35 ಲಕ್ಷ ರೂಪಾಯಿಯಿದ್ದು , ನಂಜನಗೂಡಿನ ಕಾಡಜಟ್ಟಿಯಲ್ಲಿ 48 ಲಕ್ಷ ರೂಪಾಯಿ ಮೌಲ್ಯದ 8 ಎಕರೆ ಜಮೀನು ಹಾಗೂ ತೋಟದ ಮನೆ, 629 ಗ್ರಾಂ ಚಿನ್ನ, 7 ಕೆ.ಜಿ ಬೆಳ್ಳಿ, 17 ಲಕ್ಷ ಮೌಲ್ಯದ ಬಿ.ಎಂ.ಡಬ್ಲ್ಯೂ ಕಾರು, 1 ಟಿಲ್ಲರ್ ಪತ್ತೆಯಾಗಿದೆ.
ಪ್ರಾಧಿಕಾರದ ಇಂಜಿನಿಯರ್ ನಾಗೇಶ್ಗೆ ಸೇರಿದ ದಟ್ಟಗಳ್ಳಿಯಲ್ಲಿರುವ 5 ಲಕ್ಷ ರೂಪಾಯಿ ಮೌಲ್ಯದ ನಿವೇಶನ , ಮದಗಳ್ಳಿಯಲ್ಲಿ 30 ಲಕ್ಷ ರೂಪಾಯಿ ಹಾಗೂ ರಾಮಕೃಷ್ಣ ನಗರದಲ್ಲಿ 50 ಲಕ್ಷ ರೂಪಾಯಿ ಮೌಲ್ಯದ ಮನೆ ಮತ್ತು ಸಿದ್ಧಾರ್ಥ ನಗರದಲ್ಲಿ 2.5 ಲಕ್ಷ ರೂಪಾಯಿ ಮೌಲ್ಯದ ನಿವೇಶನ, ರತ್ನಹಳ್ಳಿಯಲ್ಲಿ 22.13 ಎಕರೆ ಜಮೀನು, 1 ಕೆಜಿ 25 ಗ್ರಾಂ ಚಿನ್ನ, 9 ಕೆಜಿ ಬೆಳ್ಳಿ, 1 ಲಕ್ಷ ನಗದು, 16.5 ಲಕ್ಷ ಮೌಲ್ಯದ 2 ಕಾರು, 1.25 ಲಕ್ಷ ಮೌಲ್ಯದ ಬೈಕ್ ಪತ್ತೆಯಾಗಿದೆ.
ಹಿರಿಯ ಸಬ್ರಿಜಿಸ್ಟ್ರಾರ್ ಶಿವಶಂಕರ ಮೂರ್ತಿ ಬಳಿ 1.28 ಕೋಟಿ ರೂಪಾಯಿ ಮೌಲ್ಯದ 5 ನಿವೇಶನ, 30 ಲಕ್ಷ ರೂಪಾಯಿ ಮೌಲ್ಯದ ವಾಹನಗಳು, 1.38 ಲಕ್ಷ ನಗದು, 19 ಲಕ್ಷ ಮೌಲ್ಯದ ಚಿನ್ನ, 55 ಸಾವಿರ ಮೌಲ್ಯದ ಬೆಳ್ಳಿ , ಪತ್ನಿ ಪ್ರಿಯಾಂಕಾ ಹಾಗೂ ತಾಯಿ ರಾಜಮ್ಮ ಹೆಸರಿನಲ್ಲಿ ಒಟ್ಟು 2.60 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.