ಮೈಸೂರು : ಮಾ.29: ನಮ್ಮ ತಂದೆ ಧ್ರುವನಾರಾಯಣ ಈಗ ನಮ್ಮೊಂದಿಗೆ ದೈಹಿಕವಾಗಿ ಇಲ್ಲ. ಆದರೆ ಮಾನಸಿಕವಾಗಿ ಇದ್ದಾರೆ. ಅವರ ಜನ ಸೇವೆಯನ್ನು ನಮ್ಮ ಕುಟುಂಬ ಮುಂದುವರೆಸಿಕೊಂಡು ಹೋಗಲು ನಿರ್ಧಾರ ಮಾಡಿದೆ. ನಮ್ಮ ತಂದೆಯಂತೆ ನನ್ನ ಮೇಲೆ ನಂಬಿಕೆ, ವಿಶ್ವಾಸ ಇಡಿ. ಅದನ್ನು ನಾನು ಉಳಿಸಿಕೊಂಡು ಹೋಗುತ್ತೇನೆ ಎಂದು ದರ್ಶನ್ ಧ್ರುವನಾರಾಯಣ ಹೇಳಿದರು.
ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಶಾಸಕ ಧ್ರುವನಾರಾಯಣ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ತಂದೆ ನಮ್ಮೊಂದಿಗೆ ದೈಹಿಕವಾಗಿ ಇಲ್ಲ. ಆದರೆ ಮಾನಸಿಕವಾಗಿ ಇದ್ದಾರೆ. ನಮ್ಮ ತಂದೆಯವರ ಅಂತಿಮ ಕಾರ್ಯಕ್ಕೆ ರಾಜ್ಯಾದ್ಯಂತ ಜನ ಬಂದರು. ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಜಾರಕಿಹೊಳಿ ಸೇರಿದಂತೆ ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಮಾರ್ಗದರ್ಶನ ನೀಡಿ ಕೈಹಿಡಿಯಿರಿ ಎಂದು ಕೋರುತ್ತೇನೆ ಎಂದು ಮನವಿ ಮಾಡಿದರು.
ಇನ್ನು ನಮ್ಮ ತಂದೆ ಯಾವತ್ತೂ ನನಗೆ ರಾಜಕೀಯ ಪಾಠ ಹೇಳಿಕೊಡಲಿಲ್ಲ. ಆದರೆ, ಅವರ ಜನ ಸೇವೆಯನ್ನು ನೋಡಿ ಬೆಳೆದಿದ್ದೇವೆ. ನಮ್ಮ ಇಡೀ ಕುಟುಂಬ ಜನ ಸೇವೆ ಮಾಡುತ್ತೇವೆ. ಈ ನಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮಾಡಲು ನಿಮ್ಮ ಆಶೀರ್ವಾದ ಇರಲಿ. ನಮ್ಮ ತಂದೆ ಮೇಲಿದ್ದ ನಂಬಿಕೆ, ವಿಶ್ವಾಸವನ್ನು ನಮ್ಮ ಮೇಲಿಟ್ಟರೆ ಅದನ್ನು ಉಳಿಸಿಕೊಂಡು ಹೋಗುತ್ತೇನೆ ಎಂದು ಎಚ್.ಡಿ. ಕೋಟೆಯಲ್ಲಿ ನಡೆದ ಧ್ರುವನಾರಾಯಣ ಅವರ ನುಡಿನಮನ ಕಾರ್ಯಕ್ರಮದಲ್ಲಿ ದರ್ಶನ್ ಧ್ರುವನಾರಾಯಣ ಮನವಿ ಮಾಡಿದರು.
ಎತ್ತರಕ್ಕೆ ಬೆಳೆಯುವ ಅವಕಾಶ ಕಿತ್ತುಕೊಂಡ ವಿಧಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಧ್ರುವನಾರಾಯಣ ಅವರಿಗೆ ರಾಜಕೀಯದಲ್ಲಿ ಬಹಳ ಎತ್ತರಕ್ಕೆ ಬೆಳೆಯುವ ಅವಕಾಶ ಇತ್ತು. ವಿಧಿ ಬಹಳ ಕ್ರೂರಿ. ಅವರು ಮಾಡಿದ ಕೆಲಸಗಳು, ಆದರ್ಶಗಳನ್ನ ನಮ್ಮೊಡನೆ ಬಿಟ್ಟು ಹೋಗಿದ್ದಾರೆ. ಧ್ರುವನಾರಾಯಣ ಇಡೀ ಜೀವನವನ್ನ ತಮ್ಮ ರಾಜಕಾರಣಕ್ಕೆ ಅರ್ಪಿಸಿಕೊಂಡಿದ್ದರು. ಇಂತಹ ರಾಜಕಾರಣಿ ನಮ್ಮ ದೇಶದಲ್ಲಿ ಸಿಗಲ್ಲ. ಶಾಸಕರು, ಮಂತ್ರಿಗಳು ವೈಭವ ಜೀವನಕ್ಕೆ ಮಾರು ಹೋಗುತ್ತಾರೆ. ಶಾಸಕ, ಸಂಸದರಾಗಿದ್ದಾಗ ವಯಕ್ತಿಕ ಸುಖ ಹಾಗೂ ವೈಭವದ ಜೀವನಕ್ಕೆ ಆಸೆ ಪಟ್ಟವರಲ್ಲ ಎಂದು ಹೇಳಿದರು.
ಧ್ರುವನಾರಾಯಣ ಸೋಲಿನಿಂದ ಚಾಮರಾಜನಗರ ಕ್ಷೇತ್ರಕ್ಕೆ ನಷ್ಟ: ನಾನು ಮೊದಲಿನಿಂದ ಕಾಂಗ್ರೆಸ್ನಲ್ಲಿ ಇರಲಿಲ್ಲ. 2006ರಲ್ಲಿ ಕಾಂಗ್ರೆಸ್ ಪಕ್ಷದ ಸೇರಿದೆ. ಅಂದಿನಿಂದ ಅವರ ಜೊತೆ ಸ್ನೇಹ ಆರಂಭವಾಯ್ತು. ಧ್ರುವನಾರಾಯಣ 1 ಮತದಿಂದ ಗೆದ್ದು, ಲೋಕಸಭಾ ಸದಸ್ಯರಾಗಿ ಶಾಸಕ ರೀತಿ ಕೆಲಸ ಮಾಡಿದರು. ಪ್ರತಿ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನ ಬಗೆ ಹರಿಸುತ್ತಿದ್ದರು. ಚಾಮರಾಜನಗರ ಜಿಲ್ಲೆ ಅಭಿವೃದ್ಧಿಯಾಗಿದ್ರೆ ಧ್ರುವನಾರಾಯಣ ಕಾರಣ. ಯಾವಗ ಭೇಟಿಯಾದ್ರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ನಾನು ಸಿಎಂ ಆಗಿದ್ರು ನನ್ನ ಕ್ಷೇತ್ರದ ಕೆಲಸವನ್ನ ಅವರೇ ಮಾಡುತ್ತಿದ್ದರು. ರಾಜಕಾರಣದಲ್ಲಿ ಕೆಲಸ ಮಾಡುವವರು ಸೋಲುತ್ತಾರೆ. ಕೆಲಸ ಮಾಡದೆ ಇದ್ದವರು ಗೆಲ್ಲುತ್ತಾರೆ. ಅವರು ಸೋಲಿನಿಂದ ಅವರಿಗೆ ನಷ್ಟ ಆಗಲಿಲ್ಲ. ಅವರ ಸೋಲಿನಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದರು.
ದರ್ಶನ್ನನ್ನು ವಿಧಾನಸೌಧಕ್ಕೆ ಕಳುಹಿಸಿ: ಧ್ರುವನಾರಾಯಣ ಸಾವಿಗೆ ಇಡೀ ರಾಜ್ಯದ ಜನ ಕಣ್ಣೀರಿಟ್ಟಿದೆ. ಧ್ರುವನಾರಾಯಣ ಅವರಿಗೆ ಅವರೇ ಸಾಟಿ. ಅವರ ದಾರಿಯಲ್ಲಿ ದರ್ಶನ ನಡೆಸುವ ನಂಬಕೆ ವಿಶ್ವಾಸ ಇದೆ. ಕಾಂಗ್ರೆಸ್ ಪಕ್ಷ ನಂಜನಗೂಡಿಗೆ ಅಭ್ಯರ್ಥಿಯಾಗಿ ಮಾಡಿದೆ. ಸದ್ಯ ಅವರ ಜಯ, ಅಪಜಯ ನಿಮ್ಮ ಕೈಯಲ್ಲಿದೆ. ನಿಮ್ಮ ಒತ್ತಾಯ ನೋವನ್ನ ಪರಿಗಣಿಸಿ ದರ್ಶನ ಅವರನ್ನ ಅಭ್ಯರ್ಥಿಯಾಗಿ ಮಾಡಿದೆ. ಅವರ ಗೆಲುವು ನಿಮ್ಮಗೆಲುವು. ಅವರನ್ನ ಗೆಲ್ಲಿಸಿ ಕಳುಹಿಸಿ. ಚುನಾವಣಾ ಪ್ರಚಾರಕ್ಕೆ ನಾನು ಬರುತ್ತೇನೆ. ಅವರನ್ನ ಗೆಲ್ಲಿಸ್ತೀರಾ ಎಂಬ ನಂಬಿಕೆ ಇದೆ. ದರ್ಶನ ಅವರನ್ನ ವಿಧಾನಸೌಧಕ್ಕೆ ಕಳುಹಿಸಿ ಎಂದು ಮನವಿ ಮಾಡಿದರು.