ದೇಶದ ಇಂಡಿಯಾ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡಲಾಗುವುದು. ಇದನ್ನು ವಿರೋಧಿಸುವವರು ದೇಶ ತೊರೆಯಲಿ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ ಹೇಳಿದ್ದಾರೆ.
ಖರಗ್ಪುರ ನಗರದಲ್ಲಿ ಭಾನುವಾರ (ಸೆಪ್ಟೆಂಬರ್ 10) ನಡೆದ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಪಶ್ಚಿಮ ಬಂಗಾಳದಲ್ಲಿ ನಮ್ಮ ಪಕ್ಷ (ಬಿಜೆಪಿ) ಅಧಿಕಾರಕ್ಕೆ ಬಂದರೆ, ಕೋಲ್ಕತ್ತದಲ್ಲಿರುವ ವಿದೇಶಿಯರ ಎಲ್ಲಾ ಪ್ರತಿಮೆಗಳನ್ನು ತೆಗೆದುಹಾಕುತ್ತೇವೆ” ಎಂದು ದಿಲೀಪ್ ಘೋಷ್ ಹೇಳಿದರು.
ಹಿರಿಯ ಬಿಜೆಪಿ ನಾಯಕ ರಾಹುಲ್ ಸಿನ್ಹಾ ಮಾತನಾಡಿ, “ಒಂದು ದೇಶಕ್ಕೆ ಎರಡು ಹೆಸರುಗಳು ಇರಬಾರದು. ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಸಭೆಯಲ್ಲಿ ವಿದೇಶ ನಾಯಕರು ಭಾಗವಹಿಸಿದ್ದು, ದೇಶದ ಹೆಸರು ಬದಲಾವಣೆಗೆ ಇದು ಸೂಕ್ತ ಸಮಯವಾಗಿದೆ” ಎಂದು ತಿಳಿಸಿದರು.
“ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾಕ್ಕೆ ಹೆದರಿದ ಬಿಜೆಪಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ತಂತ್ರ ಮಾಡಿದೆ” ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಸಂತಾನು ಸೇನ್ ಹೇಳಿದರು.