ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಾರಾಣಾಸಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಲು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಉತ್ಸಾಹ ತೋರಿದ್ದು, ಈ ಕುರಿತು ವರಿಷ್ಠರಿಗೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಭಾನುವಾರ (ಆಗಸ್ಟ್ 27) ಹೇಳಿದ್ದಾರೆ.
“ಪ್ರಿಯಾಂಕಾ ಗಾಂಧಿ ತಾವು ಬಯಸಿದ ಯಾವುದೇ ಕ್ಷೇತ್ರದಲ್ಲೂ ಬೇಕಾದರೂ ಸ್ಪರ್ಧಿಸಲಿ. ಅದಕ್ಕೆ ನಮ್ಮ ಬೆಂಬಲ ಇರುತ್ತದೆ. ಅವರು ಯಾವ ಕ್ಷೇತ್ರದಲ್ಲಿ ನಿಂತರೂ ಅವರನ್ನು ಗೆಲ್ಲಿಸುತ್ತೇವೆ. ಆದರೆ ವಾರಾಣಾಸಿಯಿಂದ ಸ್ಪರ್ಧಿಸಬೇಕೆಂಬುವುದು ನಮ್ಮ ಬಯಕೆಯಾಗಿದೆ” ಎಂದು ಅಜಯ್ ಸುದ್ದಿಗಾರರಿಗೆ ಉತ್ತರಿಸಿದರು.
ವಾರಾಣಾಸಿಯಲ್ಲಿ ಪ್ರಿಯಾಂಕಾ ಅವರನ್ನು ಕಣಕ್ಕಿಸುವ ಉದ್ದೇಶವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೈ, ‘ಅವರ (ಮೋದಿ) ವಿರುದ್ಧ ಕಠಿಣ ಸ್ಪರ್ಧೆ ನೀಡಲು ಒಬ್ಬರು ಶಕ್ತರಾಗಿದ್ದಾರೆ ಎಂಬ ಸಂದೇಶವನ್ನು ನೀಡಲು ಪ್ರಿಯಾಂಕಾ ಗಾಂಧಿ ಅವರು ಕಣಕ್ಕಿಳಿಯಬೇಕು ಎಂದು ಅಜಯ್ ತಿಳಿಸಿದರು.
1991ರಿಂದಲೂ ವಾರಣಾಸಿ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. 2004ರಲ್ಲಿ ಕಾಂಗ್ರೆಸ್ ಕೈ ಸೇರಿದ್ದು, 2009ರಲ್ಲಿ ಮತ್ತೆ ಬಿಜೆಪಿಯ ಪಾಲಾಯಿತು. 2014 ಮತ್ತು 2019 ಎರಡು ಚುನಾವಣೆಯಲ್ಲಿ ನರೇಂದ್ರ ಮೋದಿ ವಿರುದ್ಧ ಅಜಯ್ ರೈ ಸ್ಪರ್ಧಿಸಿದ್ದು, ಎರಡರಲ್ಲಿಯೂ ಸೋಲು ಕಂಡಿದ್ದರು.