ಕಾಂಗ್ರೆಸ್ನಲ್ಲಿದ್ದ ಸಿ.ಎಂ ಇಬ್ರಾಹಿಂ ಇತ್ತೀಚಿಗೆ ಜೆಡಿಎಸ್ ಸೇರ್ಪಡೆ ಆಗಿದ್ದರು. ಭರ್ಜರಿ ಭಾಷಣ ಮಾಡುವ ಇಬ್ರಾಹಿಂ ಪಕ್ಷ ತೊರೆದರೂ ಯಾವುದೇ ನಷ್ಟವಿಲ್ಲ ಎಂದು ಅರಿತ ಕಾಂಗ್ರೆಸ್ ಕಿಂಚಿತ್ತು ತಲೆಕೆಡಿಸಿಕೊಳ್ಳಲಿಲ್ಲ. ಇದೀಗ ಇಬ್ರಾಹಿಂ ಹೊಸ ಮನೆಯಿಂದಲೂ ಜಾಗ ಖಾಲಿ ಮಾಡುವ ಮನಸ್ಸು ಮಾಡಿದ್ದಾರೆ. ಜೆಡಿಎಸ್ – ಬಿಜೆಪಿ ಜೊತೆಗೆ ಹೊಂದಾಣಿಕೆ ಮಾತುಕತೆ ನಡೆಯುತ್ತಿದ್ದ ಹಾಗೆ ಭೂಗತರಾಗಿದ್ದ ಇಬ್ರಾಹಿಂ ಮಾಧ್ಯಮಗಳ ಎದುರು ಕಾಣಿಸಿಕೊಂಡಿದ್ದು, ಜೆಡಿಎಸ್ ತೊರೆಯುವ ಬಗ್ಗೆ ಸುಳಿವು ನೀಡಿದ್ದಾರೆ. ಅಕ್ಟೋಬರ್ 16ಕ್ಕೆ ನಿರ್ಧಾರ ಪ್ರಕಟಿಸುತ್ತೇನೆ ಎಂದಿರುವ ಸಿ.ಎಂ ಇಬ್ರಾಹಿಂ ಯಾವುದೋ ಲೆಕ್ಕಾಚಾರದಲ್ಲಿ ಇದ್ದಾರೆ ಎನ್ನುವ ಸೂಚನೆ ಸಿಗುತ್ತಿದೆ.
ಇಬ್ರಾಹಿಂ ವಿಚಾರದಲ್ಲಿ ಕುಮಾರಸ್ವಾಮಿ ಸುಳ್ಳು ಹೇಳಿದ್ರಾ..?
![](https://pratidhvani.com/wp-content/uploads/2023/10/HD-Kumaraswamy-1024x683.jpg)
ಬಿಜೆಪಿ ಜೊತೆಗೆ ಮೈತ್ರಿ ಮಾತುಕತೆ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಆಗಿರುವ ಸಿ.ಎಂ ಇಬ್ರಾಹಿಂ ಕಾಣದೆ ಇರುವ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದ್ದವು. ಆ ವೇಳೆ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಎಲ್ಲಾ ವಿಚಾರಗಳನ್ನು ಸಿ.ಎಂ ಇಬ್ರಾಹಿಂ ಅವರ ಜೊತೆಗೆ ಚರ್ಚೆ ನಡೆಸಿದ್ದೇನೆ ಎಂದಿದ್ದರು. ಆದರೆ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ನನಗೆ ಗೊತ್ತಿರಲಿಲ್ಲ, ದೆಹಲಿಗೆ ಹೋಗಿದ್ರೂ ಹೇಳಿಲ್ಲ, ಏನು ಚರ್ಚೆ ಮಾಡಿದ್ರು ಅಂತನೂ ನನಗೆ ಹೇಳಲಿಲ್ಲ ಎಂದಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ. ಜೆಡಿಎಸ್ ಪಕ್ಷದಲ್ಲಿ ಮೊದಲಿನಿಂದಲೂ ಮೈತ್ರಿ ಬಗ್ಗೆ ಚರ್ಚೆ ಆಗಿಲ್ಲ, ಏಕಾಏಕಿ ಕುಮಾರಸ್ವಾಮಿ ದೆಹಲಿಗೆ ಹೋಗಿ ಭೇಟಿಯಾಗಿದ್ದು ನೋವಾಗಿದೆ ಎಂದು ಸಂಕಟ ವ್ಯಕ್ತಪಡಿಸಿದ್ದಾರೆ. ಇನ್ನೂ ಕುಮಾರಸ್ವಾಮಿ ನನ್ನನ್ನ ಸಂಪರ್ಕ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಆಗಿಲ್ಲ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ.
ಜೆಡಿಎಸ್ ಬಿಡೋ ಮನಸ್ಸಿಲ್ಲ.. ಕಾಂಗ್ರೆಸ್ ಕಡೆಗೆ ಆಸೆ..
![](https://pratidhvani.com/wp-content/uploads/2023/10/1695634092_deve-gowda.jpg)
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮಾತಿನಲ್ಲಿ ಸಾಕಷ್ಟು ಗೊಂದಲಕಾರಿ ಹೇಳಿಕೆಗಳು ಕಾಣಿಸಿದ್ದು, ಸಿ.ಎಂ ಇಬ್ರಾಹಿಂ ಮುಂದಿನ ನಡೆ ಬಗ್ಗೆ ಗೊಂದಲಕಾರಿ ಆಗಿದ್ದಾರೆ ಎನ್ನುವಂತಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನನಗೆ ತಂದೆ ಸಮಾನರು, ಮಾಜಿ ಸಿಎಂ ಕುಮಾರಸ್ವಾಮಿ ನನಗೆ ಸಹೋದರ ಇದ್ದಂತೆ ಎಂದಿರುವ ಸಿ.ಎಂ ಇಬ್ರಾಹಿಂ, ನನಗೆ ಕಾಂಗ್ರೆಸ್ನಲ್ಲೂ ಸ್ನೇಹಿತರಿದ್ದಾರೆ, ಕಾಂಗ್ರೆಸ್ಗೆ ವಾಪಸ್ ಬನ್ನಿ ಎಂದು ಕರೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಮುಂದೆ ರಾಜಕೀಯ ಯಾರ ಜೊತೆಗೆ ಅನ್ನೋ ಬಗ್ಗೆ ಸಮಾನ ಮನಸ್ಕ ಬೆಂಬಲಿಗರ ಜೊತೆಗೆ ಕುಳಿತು ನಿರ್ಧಾರ ಮಾಡ್ತೇನೆ. ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗು ಎನ್ಸಿಪಿಯ ಶರದ್ ಪವರ್ ಕೂಡ ಸಂಪರ್ಕ ಮಾಡಿದ್ದಾರೆ. ಯಾರ ಜೊತೆಗೆ ಹೋಗೋದು ಅಂತ ತೀರ್ಮಾನಿಸ್ತೇನೆ ಅಂತಾನೂ ಹೇಳಿಕೊಂಡಿದ್ದಾರೆ.
ಸಿ.ಎಂ ಇಬ್ರಾಹಿಂ ಪಕ್ಷ ಬಿಟ್ಟರೆ ಜೆಡಿಎಸ್ಗೆ ಹೊಡೆತಾನಾ..?
ಸಿ.ಎಂ ಇಬ್ರಾಹಿಂ ಉತ್ತಮ ಭಾಷಣಕಾರ ಅಷ್ಟೆ. ಆದರೆ ಮಾತುಗಳ ಮೂಲಕ ಮತ ಸೆಳೆಯುವ ಶಕ್ತಿ ಇಲ್ಲ ಎನ್ನುವುದು ಕಾಂಗ್ರೆಸ್ ಬಳಿಕ ಜೆಡಿಎಸ್ನಲ್ಲೂ ಸಾಬೀತಾಯ್ತು. ಸ್ವಂತ ಮಗನಿಗೆ ಟಿಕೆಟ್ ಪಡೆದಿದ್ದ ಸಿ.ಎಂ ಇಬ್ರಾಹಿಂ, ಗೆಲ್ಲಿಸಿಕೊಳ್ಳಲು ಆಗದೆ ಮುಖಭಂಗ ಅನುಭವಿಸಿದ್ರು. ಸ್ವತಃ ತಾನೇ ಭದ್ರಾವತಿಯಿಂದ ಒಮ್ಮೆ ಸ್ಪರ್ಧೆ ಮಾಡಿದರೂ ಗೆಲ್ಲಲಾಗದೆ ವಿಧಾನಪರಿಷತ್ಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್ನಲ್ಲಿ ಇದ್ದರೆ ಅಷ್ಟೋ ಇಷ್ಟೋ ಮರ್ಯಾದೆ ಉಳಿಸಿಕೊಳ್ಳಬಹುದಿತ್ತು. ಆದರೆ ಸಿ.ಎಂ ಇಬ್ರಾಹಿಂ ಜೆಡಿಎಸ್ ಪಕ್ಷಕ್ಕೆ ಓಡೋಡಿ ಬಂದು ಅಧ್ಯಕ್ಷರಾದರು. ಇದೀಗ ರಾಜ್ಯದಲ್ಲಿ ಜೆಡಿಯು ಅಥವಾ ಎನ್ಸಿಪಿ ಜೊತೆಗೆ ಹೋಗುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಮಾತಿಗೆ ಮಾವಿನ ಕಾಯಿ ಉದುರಲ್ಲ ಅನ್ನೋದು ಸ್ವತಃ ಸಿ.ಎಂ ಇಬ್ರಾಹಿಂಗೂ ಗೊತ್ತಿರುವ ಸಂಗತಿ. ಮುಂದೆ ಯಾವ ನಿರ್ಧಾರ ಸಿ.ಎಂ ಇಬ್ರಾಹಿಂ ಅವರೇ ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ.
–ಕೃಷ್ಣಮಣಿ