ಬೆಂಗಳೂರು: ಬಡ ಮಕ್ಕಳಿಗೆ ಬೆಂಗಳೂರಿನಲ್ಲಿ ಹಾಸ್ಟೆಲ್ ನಿರ್ಮಾಣ ಮಾಡುವ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಕನಸು ನನಸಾಗಿಸಲು ಬಿಡಿಎ ಅಥವಾ ಬಿಎಂಆರ್ ಡಿಎ ವತಿಯಿಂದ ಅಗತ್ಯ ಜಾಗ ಮಂಜೂರು ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್(DCM D.K. Shivakumar) ಭರವಸೆ ನೀಡಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಇತ್ತೀಚೆಗೆ ಲಿಂಗೈಕ್ಯರಾದ ಮಾಜಿ ಸಚಿವರಾದ ಡಾ. ಭೀಮಣ್ಮ ಖಂಡ್ರೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಈಶ್ವರ್ ಖಂಡ್ರೆ ಅವರು ನನ್ನನ್ನು ಭೇಟಿ ಮಾಡಿ, ವೀರಶೈವ ಮಹಾಸಭಾ ವತಿಯಿಂದ ಬೆಂಗಳೂರಿನಲ್ಲಿ ಬಡ ಮಕ್ಕಳು, ಹೊರಗಡೆಯಿಂದ ಬಂದ ಮಕ್ಕಳಿಗೆ ಒಂದು ಹಾಸ್ಟೆಲ್ ವ್ಯವಸ್ಥೆ ಆಗಬೇಕು ಎಂಬುದು ನಮ್ಮ ತಂದೆಯವರ ಕನಸಾಗಿತ್ತು. ಅದು ಸಾಧ್ಯವಾಗಿಲ್ಲ. ಅದಕ್ಕೆ ಬೇಕಾದ ಜಾಗ ಒದಗಿಸಿಕೊಡಬೇಕು ಎಂದು ತಿಳಿಸಿದರು.

ಈ ಕೆಲಸವನ್ನು ನಮ್ಮ ಸರ್ಕಾರದ ವತಿಯಿಂದ ಮಾಡಿಕೊಡುತ್ತೇವೆ ಎಂದು ಈ ಭವ್ಯ ಸಭೆಯಲ್ಲಿ ತಿಳಿಸಲು ಬಯಸುತ್ತೇನೆ. ಅವರ ಆಲೋಚನೆ, ಆಚಾರ ವಿಚಾರ ಹೀಗೆ ಮುಂದುವರಿಯಲಿ. ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡಿಕೊಂಡು ಹೋಗೋಣ ಎಂದು ತಿಳಿಸಿದರು.
ಇದನ್ನೂ ಓದಿ: Nelamangala: ತಾಯಿಯ ಫೋಟೋಶೂಟ್ ವೇಳೆ ಮೂರು ವರ್ಷದ ಮಗು ಸಾ***
ಮಾತು ಮುಂದುವರಿಸಿದ ಅವರು, ಭೀಮಣ್ಣ ಖಂಡ್ರೆ ಅವರಿಗೆ ನುಡಿನಮನ ಅರ್ಪಿಸುವ ಸೌಭಾಗ್ಯ ನಮ್ಮೆಲ್ಲರಿಗೂ ಸಿಕ್ಕಿದೆ. ಸರಳತೆ, ಸರ್ವಧರ್ಮ ಸಮುದಾಯದ ನಾಯಕ ಎಂದು ನಾವೆಲ್ಲರೂ ಅವರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಅದೇ ರೀತಿ ನಮ್ಮ ಭೀಮಣ್ಣ ಖಂಡ್ರೆ ಸಾಹೇಬರು ಮಾಡಿದ ಹೋರಾಟವನ್ನು ನಾವಿಂದು ಮೆಲುಕು ಹಾಕುತ್ತಿದ್ದೇವೆ.

ನಾಲ್ಕು ಬಾರಿ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಮಾಡಿದ್ದಾರೆ. ಅವರು ಪರಿಷತ್ ಸದಸ್ಯರಾಗಿದ್ದಾಗ ನಾನು ಅವರ ಜತೆಯಲ್ಲಿ ಕೆಲಸ ಮಾಡುವ ಭಾಗ್ಯ ಸಿಕ್ಕಿದೆ. ಅವರ ಮಗ ವಿಜಯ್ ಕುಮಾರ್ ಖಂಡ್ರೆ ಅವರು ನನ್ನ ಜೊತೆ ಶಾಸಕರಾಗಿದ್ದರು. ಮತ್ತೊಬ್ಬ ಮಗ ಈಶ್ವರ್ ಖಂಡ್ರೆ ಅವರು ನನ್ನ ಜತೆ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೊಮ್ಮಗ ನಮ್ಮ ಪಕ್ಷದ ಸಂಸದರಾಗಿದ್ದಾರೆ. ಇವರ ಜತೆ ನಾವು ಕೆಲಸ ಮಾಡಿದ್ದೇವೆ. ಅವರು ಬಿಟ್ಟು ಹೋಗಿರುವ ಪರಂಪರೆ ಮುಂದುವರಿಯುತ್ತಿದೆ ಎಂದು ಹೇಳಿದರು.





