ಮೈಸೂರು: ಕೇಂದ್ರ ಬಿಜೆಪಿ (BJP) ಸರ್ಕಾರ ಮೀಸಲಾತಿ ವಿಚಾರದಲ್ಲಿ ಹಿಂದಿನಿಂದಲೂ ನಾಟಕೀಯ ವರ್ತನೆ ತೋರಿತ್ತಿದ್ದು, ಸದಾಶಿವ ವರದಿ ಜಾರಿಗೆ (Sadashiva ayoga) ನಾಟಕವನ್ನಾಡದೇ ವರದಿ ಯಥಾವತ್ ಜಾರಿಗೊಳಿಸಲಿ ಎಂದು ಕೆಪಿಸಿಸಿ ಮಾದ್ಯಮ ವಕ್ತಾರ ಎಂ.ಲಕ್ಷ್ಮಣ್ (Mlakshman) ಆಗ್ರಹಿಸಿದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 101 ಜಾತಿ ಇರುವ ವ್ಯವಸ್ಥೆ ಯಡಿಯಲ್ಲಿ ಎಲ್ಲರಿಗೂ ಸಮಪಾಲು ಇರಬೇಕೆಂಬ ಬೇಡಿಕೆಗೆ ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿ ಸದಾಶಿವ ಆಯೋಗವನ್ನು ರಚನೆ ಮಾಡಲಾಯಿತು. ಅನಂತರ ಬಂದ ಮುಖ್ಯಮಂತ್ರಿ ಸದಾನಂದಗೌಡ ಅವರ ಅವಧಿಯಲ್ಲಿ ವರದಿ ಸಲ್ಲಿಕೆಯಾಗಿ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಮೂಲೆ ಸೇರಿತ್ತು. ಸಂವಿಧಾನದ ತಿದ್ದುಪಡಿ ಕಾಲಂ 341ಅಡಿಯ ಕಾನೂನು ಪ್ರಕಾರ ಶೇ.17 ರಷ್ಟು ಮೀಸಲಾತಿ ಯನ್ನು ಹಂಚಿಕೆ ಮಾಡಲು ಕಾನೂನಾತ್ಮಕವಾಗಿ ಮಾಡಬೇಕಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರ ಅದನ್ನು ಮಾಡದೇ ಕೇವಲ ಒಬ್ಬ ಅಧಿಕಾರಿ ಕೈಯಲ್ಲಿ ಒಂದು ಲೆಟರ್ ಕಳುಹಿಸಿ ಅದನ್ನೇ ಚುನಾವಣೆಯ ಫಸಲಾಗಿಸಿಕೊಳ್ಳಲು ಮುಂದಾಗಿ ವರದಿಯನ್ನೂ ಮೂಲೆಗುಂಪಾಗಿಸಿದರು ಎಂದರು.

ಆದರೆ, ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ವರ್ಷದೊಳಗೆ ಸದಾಶಿವ ವರದಿಯನ್ನು ಯಥಾವತ್ ಜಾರಿಗೆ ಕೇಂದ್ರಕ್ಕೆ ಒತ್ತಾಯಿಸುವ ನಿರ್ಣಯ ಘೋಷಿಸಿತ್ತು. ಅದರಂತೆ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರಲು ಕೇಂದ್ರಕ್ಕೆ ವರದಿ ಕಳುಹಿಸಿಕೊಟ್ಟಿದ್ದೇವೆ. ಆದರೆ, ಈ ಬಗ್ಗೆ ಕೇಂದ್ರ ಬಿಜೆಪಿ ಸರ್ಕಾರ ಒಂದು ಸಮಿತಿ ರಚಿಸಿ ಪರಿಶೀಲಿಸುತ್ತೇವೆಂದು ಹೇಳುತ್ತಿರುವುದು ಬಿಜೆಪಿಯ ಮತ್ತೊಂದು ನಾಟಕ ಆಗಿದೆ. ಏಕೆಂದರೆ ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಲಿಂಗಾಯತ, ಒಕ್ಕಲಿಗರಿಗೆ ಕೊಟ್ಟ ಹಂಚಿದ ಮೀಸಲಾತಿ ಊರ್ಜಿತವಾಗದೇ ನ್ಯಾಯಾಲಯದಲ್ಲಿ ತಡೆಯಾಗಿದೆ. ಎಸ್ಟಿ ಮೀಸಲಾತಿ 4 ರಿಂದ 7ಕ್ಕೆ ಹೆಚ್ಚಿಸಿರುವುದಾಗಿ ಶ್ರೀರಾಮುಲು ಅಬ್ಬರದ ಪ್ರಚಾರ ಮಾಡಿದರು. ಅದರ ಮೀಸಲಾತಿ ಏನಾಯಿತು. ಬಿಜೆಪಿ 15 ಎಸ್ಟಿ ಶಾಸಕರಲ್ಲಿ ಶ್ರೀರಾಮುಲು ಸೇರಿದಂತೆ ಒಂದು ಸ್ಥಾನವೂ ಸಹ ಗೆಲ್ಲಲು ಆಗಲಿಲ್ಲ. ಪರಿಶಿಷ್ಟ ಪಂಗಡಕ್ಕೂ ಇದೇ ರೀತಿ ಮೋಸ ಮಾಡಿದ್ದೀರಿ. ಹೀಗೆ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಆಡುತ್ತಿರುವ ನಾಟಕ ಸಾಕಾಗಿದೆ.

ಈಗಲಾದರೂ ಸದಾಶಿವ ವರದಿ ಆಯೋಗದ ಜಾರಿಗೊಳಿಸಬೇಕು. ಮೀಸಲಾತಿ ವಿಚಾರದಲ್ಲಿ ಎಲ್ಲಾ ಕ್ರೆಡಿಟ್ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಸರ್ಕಾರಕ್ಕೆ ಸಲ್ಲಬೇಕೆಂದರು.
ಸಂಸದರ ಹೇಳಿಕೆ ಖಂಡನೀಯ: ಸಂಸದರ ಉದ್ಧಟನದ ಹೇಳಿಕೆಯನ್ನು ಖಂಡಿಸುತ್ತೇನೆ. ನೀವೇನೂ ಬಾರಿ ಮೇಧಾವಿನಾ ..? ಅಂಕಣಕಾರರು ಅಂದರೆ ಎನೂ ಆ ಹುದ್ದೆ ಎಂದರೆ ಎನೂ ಎಂಬುದು ಗೊತ್ತಾ? ನೀವೂ ವಿಶೇಷ ವರದಿಗಾರರು ಅಲ್ಲ ಅಂಕಣಕಾರರು ಅಲ್ಲ. ಪತ್ರಕರ್ತರ ಪ್ರಶ್ನೆಗೆ ಉತ್ತರಿಸದ ನಿಮಗೆ ನಾಚಿಕೆ ಆಗಬೇಕು. ಸಂಸದರಾಗಿ ಹಿಟ್ ಅಂಡ್ ರನ್ ಮಾಡಿ ಜಾಗ ಖಾಲಿ ಮಾಡುವುದಲ್ಲ. ಎಲ್ಲರ ಪ್ರಶ್ನೆಗೂ ಉತ್ತರಿಸುವ ಕೆಲಸ ಮಾಡಬೇಕು. ಆದರೆ, ಕೆಲವು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವುದು ಎಷ್ಟು ಸರಿ. ಇದನ್ನು ನಾವು ಖಂಡಿಸುತ್ತೇನೆಂದರು.
ಮಾನದಂಡ ಇದೆಯೇ?: ಸಾಮಾಜಿಕ ಜಾಲತಾಣಗಳಲ್ಲಿ ದೇಶವನ್ನು ಬಡತನದಿಂದ ಮೇಲೆತ್ತಿದ್ದೇವೆಂದು ಬಿಜೆಪಿ ಬೊಬ್ಬೆ ಹೊಡೆಯುತ್ತಿದ್ದಾರೆ. ಚಪ್ಪಲಿ ಹಾಕೊಂಡು ನಡೆಯುವವರು, ಹ್ಯಾಂಡ್ರೈಡ್ ಮೊಬೈಲ್ ಬಳಕೆದಾರರು, ಬ್ಯಾಂಕ್ ಅಕೌಂಟ್ ಹೊಂದಿರುವವರು ಶ್ರೀಮಂತರೆಂಬ ಮಾನದಂಡಗಳ ಮೂಲಕ ಬಡತನ ನಿವಾರಣೆ ಆಗಿದೆ ಎಂಬ ಸುಳ್ಳು ಮಾಹಿತಿ ಹರಿ ಬಿಡುತ್ತಿದ್ದಿರಿ. ಆದರೆ, ಉಚಿತ ಅಕೌಂಟ್ ತೆಗೆಸಿ ವಾರ್ಷಿಕ 2 ಸಾವಿರ ಹಣ ಪಡೆಯುತ್ತಾ ಜನರಿಗೆ ಹೊರೆ ಹಾಕಿದ್ದಿರಿ. ಕಾಂಗ್ರೆಸ್ ನ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ 41 ರಲ್ಲಿದ್ದ ದೇಶದ ಹಸಿವಿನ ಸೂಚ್ಯಂಕ ಸ್ಥಾನ ಈಗ ೧೨೧ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತಲೂ ತಳಕ್ಕೆ ಕುಸಿದಿರುವುದೇ ನಿಮ್ಮ ಆಡಳಿತದ ಸಾಧನೆ ಎಂದು ವ್ಯಂಗ್ಯವಾಡಿದರು.
ಇನ್ನೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹುಬ್ಬಳಿ ರೈಲ್ವೆ ನಿಲ್ದಾಣ 13 ಎಕರೆ ಅಭಿವೃದ್ಧಿಗೆ ನೀಡಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ದಾಖಲೆ ಬಿಡುಗಡೆ ಮಾಡಿದ್ದು, ಬಿಜೆಪಿಗೆ ನೈತಿಕತೆಯಿದ್ದರೆ ಅವರ ರಾಜೀನಾಮೆ ಪಡೆಯಿರಿ ಎಂದು ಆಗ್ರಹಿಸಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದೆ. ಈ ಹಿಂದಿನ ಅವಧಿಯಲ್ಲಿ ಪ್ರತಿ ಸರ್ಕಾರಿ ಬಸವಣ್ಣ ಪೋಟೊ ಹಾಕುವಂತೆ ಮಾಡಿದ್ದಾರೆ. ಮಾತ್ರವಲ್ಲದೆ ಸಿಎಂಸಿದ್ದರಾಮಯ್ಯ ಅವರು ಪ್ರಥಮ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದು ಸಹ ಬಸವಣ್ಣನವರ ಜಯಂತಿಯದ್ದೇ ಆಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಚಿವರ ಜತೆಗೆ ಚರ್ಚಿಸಿ ದೊಡ್ಡ ಸಂಭ್ರಮಾಚರಣೆ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿಯ ಅನುಷ್ಠಾನ ಸಮಿತಿ ರಚಿಸಲು ತಿಳಿಸಿದ್ದು, ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಆಗಲಿದೆ. ಇದರಲ್ಲಿ ಎಂಎಲ್ ಎ ಸೇರಿ ಯಾವುದೇ ಜನಪ್ರತಿನಿಧಿಗಳಿಗೆ ಅವಕಾಶ ಇರುವುದಿಲ್ಲ. ಕಾರ್ಯಕರ್ತರ ಪಡೆಗೆ ಮುಕ್ತ ಅವಕಾಶ ಇರಲಿದೆ ಎಂದರು.ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಈಶ್ವರ ಚಕ್ಕಡಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮಾದ್ಯಮ ವಕ್ತಾರ ಮಹೇಶ್, ಹಿಂದುಳಿದ ವರ್ಗಗಳ ನಗರ ಅಧ್ಯಕ್ಷ ನಾಗೇಶ್, ಎಸ್ಸಿ ವಿಭಾಗದ ಅಧ್ಯಕ್ಷ ರಮೇಶ್ ಗೋಷ್ಠಿಯಲ್ಲಿದ್ದರು.