ಗ್ಯಾಂಗ್ಟಕ್: ಉತ್ತರ ಸಿಕ್ಕಿಂನ ಲ್ಹೋನಕ್ ಸರೋವರದ ಮೇಲಿನ ಮೇಘಸ್ಫೋಟದ ಪರಿಣಾಮ ತೀಸ್ತಾ ನದಿಯಲ್ಲಿ ಉಂಟಾದ ದಿಢೀರ್ ಪ್ರವಾಹದಿಂದಾಗಿ 14 ಮಂದಿ ಮೃತಪಟ್ಟಿದ್ದು, 22 ಯೋಧರು ಸೇರಿದಂತೆ 102 ನಾಗರಿಕರು ನಾಪತ್ತೆಯಾಗಿದ್ದಾರೆ.
ಬುಧವಾರ ಮುಂಜಾನೆ ಮೇಘ ಸ್ಫೋಟ ಸಂಭವಿಸಿತ್ತು. ಇದರಿಂದ ಸರೋವರದ ನೀರು ಉಕ್ಕಿ ಹರಿದು ತೀಸ್ತಾ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದೆ. ಚುಂಗ್ತಾಂಗ್ನಲ್ಲಿನ ಅಣೆಕಟ್ಟೆಯ ಭಾಗಗಳು ರಭಸದ ನೀರಿನಲ್ಲಿ ಕೊಚ್ಚಿ ಹೋಗಿದೆ. ಇದರಿಂದ ಕೆಳ ಹಂತದ ಪ್ರದೇಶದಲ್ಲಿನ ಪ್ರವಾಹ ಮತ್ತಷ್ಟು ಭಯಾನಕ ಸ್ವರೂಪ ಪಡೆದುಕೊಂಡಿದೆ. ಚುಂಗ್ತಾಂಗ್ ಅಣೆಕಟ್ಟು ಸಿಕ್ಕಿಂ ರಾಜ್ಯದ ಅತಿ ದೊಡ್ಡ ಜಲ ವಿದ್ಯುತ್ ಯೋಜನೆಯಾಗಿದೆ.
3 ಸಾವಿರ ಪ್ರವಾಸಿಗರು ಅತಂತ್ರ
ಅವಘಡದಲ್ಲಿ ಈವರೆಗೂ 26 ಮಂದಿ ಗಾಯಗೊಂಡಿದ್ದಾರೆ. 2 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. 14 ಸೇತುವೆಗಳು ಕೊಚ್ಚಿ ಹೋಗಿದ್ದು, 22 ಸಾವಿರಕ್ಕೂ ಹೆಚ್ಚು ಮಂದಿಗೆ ತೊಂದರೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ವಿವಿಧ ಸಂಸ್ಥೆಗಳು ಹಾನಿಗೊಳಗಾದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ಭಾರತೀಯ ವಾಯು ಪಡೆ ಕೂಡ ಸನ್ನದ್ಧವಾಗಿದೆ.
ಪೂರ್ವ ಸಿಕ್ಕಿಂನ ಪಾಕ್ಯೋಂಗ್ನಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 59 ಜನರು ನಾಪತ್ತೆಯಾಗಿದ್ದಾರೆ. 23 ಯೋಧರು ಇಲ್ಲಿಂದಲೇ ಕಾಣೆಯಾಗಿದ್ದರು. ಅವರಲ್ಲಿ ಒಬ್ಬ ಸೈನಿಕನನ್ನು ರಕ್ಷಿಸಲಾಗಿದೆ.