ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಬಿಜೆಪಿ ಹೈಕಮಾಂಡ್ ರಾಜೀನಾಮೆ ಪಡೆಯಲಿದೆ. ಪರ್ಯಾಯ ನಾಯಕನಿಗಾಗಿ ಹುಡುಕಾಟ ಆರಂಭವಾಗಿದೆ. ಯಾವಾಗ ಬೇಕಾದರೂ ದಿಢೀರನೆ ನಾಯಕತ್ವ ಬದಲಾಗಬಹುದು ಎಂಬ ಚರ್ಚೆಗಳು ಬಿರುಸಾಗಿ ನಡೆಯುತ್ತಿವೆ. ಇದೇ ಹಿನ್ನಲೆಯಲ್ಲಿ ಆರೇಳು ಮಂದಿಯ ಹೆಸರು ಕೇಳಿಬರುತ್ತಿವೆ. ಆ ಹೆಸರುಗಳ ಪೈಕಿ ಅತ್ಯಂತ ಕುತೂಹಲ ಮತ್ತು ಆಶ್ಚರ್ಯ ಮೂಡಿಸಿರುವುದು ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ಹೆಸರು.
ಅರವಿಂದ ಬೆಲ್ಲದ ಹೆಸರು ಹಿಂದೆ ರಾಜಕೀಯವಾಗಿ ಯಾವುದೇ ಸಂದರ್ಭದಲ್ಲಿ ಚರ್ಚೆ ಆಗಿಲ್ಲ. ಈಗ ರಾಜ್ಯಾದ್ಯಂತ ಚರ್ಚೆ ಆಗುತ್ತಿರುವ ಈ ಹೆಸರು ಕೆಲ ದಿನಗಳ ಹಿಂದೆ ಅವರ ಸ್ವಕ್ಷೇತ್ರದಿಂದ ಆಚೆಗೆ ಜಿಲ್ಲೆಯಲ್ಲೇ ಅಪ್ರಸ್ತುತವಾಗಿತ್ತು. ಈಗ ಒಂದೇ ಸಲಕ್ಕೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಚರ್ಚೆ ಮಾಡಲಾಗುತ್ತಿದೆ. ಇದರಿಂದಾಗಿ ಸಹಜವಾಗಿ ಅರವಿಂದ ಬೆಲ್ಲದ ಅವರ ಹಿಂದೆ ‘ಯಾರೋ ಇರಬಹುದು’ ಎಂಬ ಅನುಮಾನ ಹುಟ್ಟುಕೊಂಡಿದೆ. ಯಾರದು?
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಇರಬಹುದು ಎಂಬ ದಟ್ಟವಾದ ಗುಮಾನಿ ಇದೆ. ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಬಿ.ಎಲ್. ಸಂತೋಷ್ ನಡೆಸುತ್ತಿರುವ ನಿರಂತರ ಪ್ರಯತ್ನ-ಪ್ರಯೋಗದ ಭಾಗ ಅರವಿಂದ ಬೆಲ್ಲದ ಎಂದು ಹೇಳಲಾಗುತ್ತಿದೆ. ಬ್ರಾಹ್ಮಣರಾದ ಪ್ರಹ್ಲಾದ್ ಜೋಷಿ ಅವರನ್ನು ಪಕ್ಕಕ್ಕೆ ಸರಿಸಿ, ಉಳಿದವರೆಲ್ಲರನ್ನೂ ಬಿಟ್ಟು ಬಿ.ಎಲ್. ಸಂತೋಷ್ ಅವರು ಅರವಿಂದ ಬೆಲ್ಲದ ಅವರನ್ನು ಆಯ್ಕೆ ಮಾಡಿಕೊಂಡಿದ್ದು ಮತ್ತೊಂದು ಆಸಕ್ತಿದಾಯಕ ಸಂಗತಿ ಎಂತಲೂ ಹೇಳಲಾಗುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಆ ಸ್ಥಾನದಲ್ಲಿ ಪ್ರಹ್ಲಾದ್ ಜೋಷಿಯನ್ನು ಪ್ರತಿಷ್ಠಾಪಿಸಿದರೆ ಲಿಂಗಾಯತ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದುಕೊಂಡಿದ್ದಾರೆ. ಹಾಗಾದರೆ ಲಿಂಗಾಯತರ ಪೈಕಿ ಯಾವ ಉಪಜಾತಿಗೆ ಮಣೆ ಹಾಕಬೇಕೆಂಬ ಇನ್ನೊಂದು ಸಮಸ್ಯೆ ಕೂಡ ಇದೆ. ಲಿಂಗಾಯತರ ಪೈಕಿ ಪಂಚಮಸಾಲಿ ಶಾಸಕರೇ ಹೆಚ್ಚಿರುವುದರಿಂದ ಅವರಲ್ಲೆ ಒಬ್ಬರನ್ನು ಮುಖ್ಯಮಂತ್ರಿ ಮಾಡಿದರೆ ಆಗ ಉಳಿದ ಪಂಚಮಸಾಲಿ ಲಿಂಗಾಯತರು ವಿರೋಧ ಮಾಡಲ್ಲ, ‘ಲಿಂಗಾಯತ’ ಎಂಬ ಕಾರಣಕ್ಕೆ ಉಳಿದ ಉಪ ಜಾತಿಗಳು ಮುನಿದು ದೂರು ಹೋಗುವುದನ್ನು ತಪ್ಪಿಸಬಹುದು ಎಂಬ ಲೆಕ್ಕಾಚಾರ ಇದೆಯಂತೆ.
ಪಂಚಮಸಾಲಿಗಳ ಪೈಕಿ ಯಾರು? ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಗೇಶ್ ನಿರಾಣಿ ಪ್ರಮುಖರು. ಯತ್ನಾಳ್ ಕೇಂದ್ರ ಸಚಿವರಾಗಿದ್ದವರು. ಹಿರಿಯರು. ಹಿಂದುತ್ವದ ಐಕಾನ್ ಎಂಬುದಾಗಿಯೂ ಬ್ರಾಂಡ್ ಆಗಿದ್ದಾರೆ. ಸಮಸ್ಯೆ ಏನೆಂದರೆ ಅವರನ್ನು ನಿಯಂತ್ರಿಸುವುದು ಕಷ್ಟ ಎನಿಸಿದೆಯಂತೆ. ಅದಲ್ಲದೆ ಯಾವಾಗ ಯಾವ ವಿವಾದ ಹುಟ್ಟುಹಾಕುತ್ತಾರೆ ಎಂಬುದನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ಮುರುಗೇಶ್ ನಿರಾಣಿ ಅವರಿಗೆ ಕ್ಲೀನ್ ಇಮೇಜಿಲ್ಲ. ಯಡಿಯೂರಪ್ಪ ಅವರನ್ನು ಬದಲಿಸಿದ ನಂತರ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಸಾಮರ್ಥ್ಯವೂ ಅವರಲ್ಲಿ ಇಲ್ಲ.
ಹಾಗಾಗಿ ಅರವಿಂದ ಬೆಲ್ಲದ ಹೆಸರನ್ನು ಪರಿಗಣಿಸಲಾಗುತ್ತಿದೆ ಎಂಬುದು ಬಿಜೆಪಿ ಪಾಳೆಯದ ಗುಸುಗುಸು. ಅರವಿಂದ ಬೆಲ್ಲದ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದರೆ ಸರ್ಕಾರವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಬಹುದೆಂಬ ಲೆಕ್ಕಾಚಾರವೂ ಇದ್ದಂತಿದೆ. ಆದುದರಿಂದ ಬಿ.ಎಲ್. ಸಂತೋಷ್ ಅವರೇ ಅರವಿಂದ ಬೆಲ್ಲದ ಹೆಸರನ್ನು ಚರ್ಚೆಯ ಮುಂಚೂಣಿಗೆ ತಂದಿದ್ದಾರೆ ಎಂದು ಹೇಳಾಗುತ್ತಿದೆ.
ಇದಲ್ಲದೆ ಅರವಿಂದ ಬೆಲ್ಲದ ಅವರು ಗುಜರಾತ್ ಹಾಗೂ ದೆಹಲಿ ಮೂಲದ ವ್ಯಕ್ತಿಗಳ ಜೊತೆ ವ್ಯವಹಾರಿಕ ಸಂಬಂಧಗಳನ್ನು ಹೊಂದಿದ್ದಾರೆ. ಆ ಸಂಪರ್ಕಗಳನ್ನು ಬಳಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನ ಗೆದ್ದಿದ್ದಾರೆ. ಆ ಕಾರಣಕ್ಕೆ ಈಗ ಸಕ್ರೀಯವಾಗಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಯಾರೋ ಪ್ರಭಾವಿಗಳು ಅರವಿಂದ ಬೆಲ್ಲದ ಅವರ ಹಿಂದೆ ಇದ್ದಾರೆ. ಇಲ್ಲದಿದ್ದರೆ ಅವರು ದಿಢೀರನೆ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕುತ್ತಿರಲಿಲ್ಲ ಎನ್ನಲಾಗುತ್ತಿದೆ. ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬುದನ್ನು ಹೇಳುವುದಾದರೂ ಹೇಗೆ?