ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಈ ಮಧ್ಯೆ ರಾಜ್ಯದಲ್ಲಿ ಕೋವಿಡ್ನ ರೂಪಾಂತರಿ ಒಮಿಕ್ರಾನ್ ಕಾಣಿಸಿಕೊಂಡಿದ್ದು ಜನರು ಮತ್ತಷ್ಟು ಭಯಬೀಳುವಂತೆ ಮಾಡಿದೆ. ಈ ನಡುವೆ ಸೋಂಕು ಹೆಚ್ಚಾಗಿ ಶಾಲಾ-ಕಾಲೇಜುಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ಭಾನುವಾರ ಡಿಸೆಂಬರ್ 5ರಂದು ಚಿಕ್ಕಮಗಳೂರು ಜಿಲ್ಲೆಯ ಜವಹಾರ್ ನವೋದಯ ವಿದ್ಯಾಲಯದ 69 ಜನರಲ್ಲಿ 59 ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈ ಬಗ್ಗೆ ಮಾತನಾಡಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು ನಾವು ಶಾಲೆಯ 457 ಜನರ ಮಾದರಿಗಳನ್ನು ಪರೀಕ್ಷೆ ಮಾಡಿದ್ದೆವು ಇದರಲ್ಲಿ ಶಾಲಾ ಆಡಳಿತ ಮಂಡಳಿ ಸಿಬ್ಬಂದಿ 10 ಜನ ಒಳಗೊಂಡಂತೆ 59 ಜನ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಯಾವುದೇ ರೋಗ ಲಕ್ಷಣಗಳಿಲ್ಲದವರನ್ನು ಮುಂಜಾಗ್ರತ ಕ್ರಮವಾಗಿ ಐಸೋಲೇಟ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ.ಎಸ್.ಎನ್.ಉಮೇಶ್ ಹೇಳಿದ್ದಾರೆ. ಶಾಲೆಯಲ್ಲಿ ಕೆಲಸ ಮಾಡುವ ಎಲ್ಲರ ಗಂಟಲು ದ್ರವಗಳನ್ನು ಪರೀಕ್ಷಿಸಲಾಗಿತ್ತು. ಆದರೆ. ಈ 69 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯಾಧಿಕಾರಿ ಹೇಳಿದ್ದಾರೆ.
ಜಿಲ್ಲಾಡಳಿತದಿಂದ ಬಂದಿರುವ ಸುದ್ದಿ ಮೂಲಗಳ ಪ್ರಕಾರ ಪ್ರಸ್ತುತ ಶಾಲೆಯನ್ನು ಸೀಲ್ಡೌನ್ ಮಾಡಲಾಗಿದ್ದು ವೈದ್ಯಕೀಯ ಸಿಬ್ಬಂದಿ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಶಾಲೆಯ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಕಾಲೇಜೊಂದರಲ್ಲೂ ಕರೋನ ಸ್ಪೋಟ :
ಚಿಕ್ಕಮಗಳೂರಿಗೆ ಹೊಂದಿಕೊಂಡಿರುವ ಶಿವಮೊಗ್ಗ ನಗರದ ಹೊರವಲಯದಲ್ಲಿರುವ ನಂಜಪ್ಪ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ 42 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಕ್ಲಸ್ಟರ್ನಲ್ಲಿ ಇರುವ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಒಟ್ಟು 900 ಜನರ ಗಂಟಲು ದ್ರವಗಳನ್ನು ಪರೀಕ್ಷಿಸಲಾಗಿತ್ತು ಇದರಲ್ಲಿ 42 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚಾಗಿ ವಸತಿಯಿರುವ ಶಾಲಾ-ಕಾಲೇಜುಗಳಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದ್ದು ಎಲ್ಲರನ್ನು ಚಿಂತೆಗೀಡು ಮಾಡಿದೆ. ಈ ಪ್ರದೇಶಗಳಲ್ಲಿ ಸೋಂಕಿನ ತೀವ್ರತೆ ಅಷ್ಟಾಗಿ ಇಲ್ಲದಿರುವುದು ಸಾವುಗಳ ಸಂಖ್ಯೆ ಕೂಡ ಶೂನ್ಯವಾಗಿದ್ದು ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಲಕ್ಷಣರಹಿತರಾಗಿದ್ದಾರೆ.
![](https://pratidhvani.com/wp-content/uploads/2021/12/School-Coronavirus.jpg)
ಶನಿವಾರ ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ ಎರಡು ರೀತಿಯ ಕ್ಲಸ್ಟರ್ಗಳನ್ನು ಗುರುತಿಸಲಾಗಿದ್ದು ಮೊದಲನೆಯದು ಶಾಲಾ-ಕಾಲೇಜುಗಳು ಮತ್ತು ಎರಡನೇಯದ್ದು ಅಪಾರ್ಟ್ಮೆಂಟಗಳು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮೂರಕ್ಕಿಂತ ಹೆಚ್ಚು ಸೋಂಕಿನ ಪ್ರಕರಣಗಳು ಒಂದೇ ಪ್ರದೇಶದಲ್ಲಿ ಕಾಣಿಸಿಕೊಂಡರೆ ಅಂತಹ ಪ್ರದೇಶಗಳನ್ನು ಕ್ಲಸ್ಟರ್ ಎಂದು ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ ಕಾಣಿಸಕೊಂಡರೆ ಶಾಲಾಕಾಲೇಜುಗಳನ್ನು ಮುಚ್ಚಲು ಸರ್ಕಾರ ಸಿದ್ದವಿದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರವು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಿದೆ, ಪರಿಸ್ಥಿತಿ ಹದಗೆಟ್ಟರೆ ನಾವು ಶಾಲೆಗಳನ್ನು ಮುಚ್ಚಲು ಸಿದ್ದರಿದ್ದೇವೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಸಚಿವರು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಸಚಿವರು, ಅಂತಹ ತುರ್ತು ಪರಿಸ್ಥಿತಿ ತಲೆದೂರಿದರೆ ಪರ್ಯಾಯ ಕ್ರಮ ಕೈಗೊಳ್ಳಲು ಇಲಾಖೆ ಚಿಂತಿಸುತ್ತಿದೆ. ಮಕ್ಕಳು ಮತ್ತು ಪೋಷಕರು ಭಯಪಡುವ ಯಾವುದೇ ಅಗತ್ಯವಿಲ್ಲ ಎಂದು ಭರವಸೆಯನ್ನು ನೀಡಿದ್ದಾರೆ. ಪರೀಕ್ಷೆ ಸಮಯದಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಮತ್ತು ಒಂದು ಬೆಂಚಿಗೆ ಒಬ್ಬ ವಿದ್ಯಾರ್ಥಿಯನ್ನು ಕೂರಿಸಲಾಗುವುದು ಎಂದು ಹೇಳಿದ್ದಾರೆ.
ಇಲಾಖೆ ವತಿಯಿಂದ ವಸತಿ ಶಾಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡುವ ಬಗ್ಗೆ ಯೋಚಿಸುತ್ತಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಖುದ್ದು ನಾನೇ ಭೇಟಿ ನೀಡಲಿದ್ದೇನೆ ಮತ್ತು ಸೋಂಕಿನ ಮೂಲವನ್ನ ಹುಡುಕಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.