ಮದರಸಾಗಳು “ದೇಶವಿರೋಧಿ ಚಟುವಟಿಕೆಗಳನ್ನು” ಪೋಷಿಸುತ್ತಿವೆ ಎಂದು ಆರೋಪಿಸಿ ರಾಜ್ಯ ಸರಕಾರವು ಅವುಗಳ ಮೇಲೆ ನಿಷೇಧ ಹೇರಬೇಕು ಎಂದು ಕರ್ನಾಟಕ ಭಾರತೀಯ ಜನತಾ ಪಕ್ಷದ ಶಾಸಕ ಎಂಪಿ ರೇಣುಕಾಚಾರ್ಯ ಸೋಮವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ರೇಣುಕಾಚಾರ್ಯ ಮಾತನಾಡಿ, ಮದರಸಾಗಳು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಬದಲಿಗೆ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಬೇಕು, ಅಲ್ಲಿ ಪಠ್ಯಕ್ರಮವು ಮಗುವಿನ ಸರ್ವತೋಮುಖ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
“ಮದರಸಾಗಳಲ್ಲಿ, ಅವರು ನಮ್ಮ ದಾರ್ಶನಿಕರ ಬಗ್ಗೆ, ದೇಶಕ್ಕಾಗಿ ತ್ಯಾಗ ಮಾಡಿದ ನಾಯಕರ ಬಗ್ಗೆ ಕಲಿಸುವುದಿಲ್ಲ” ಬದಲಿಗೆ “ಅವರು ಅಲ್ಲಿ ಇಸ್ಲಾಮಿಕ್ [ಅಧ್ಯಯನಗಳ] ಬಗ್ಗೆ ಮಾತ್ರ ಕಲಿಸುತ್ತಾರೆ.” ಎಂದು ರೇಣುಕಾಚಾರ್ಯ ಹೇಳಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ.
ದೇಶದ ದಾರ್ಶನಿಕರ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸಿದರೆ ಮದರಸಾಗಳನ್ನು ಸ್ವಾಗತಿಸುವುದಾಗಿ ಬಿಜೆಪಿ ನಾಯಕ ರೇಣುಕಾಚಾರ್ಯ ಹೇಳಿದರು.
ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿನ ಮದರಸಾಗಳಿಗೆ ಹಣವನ್ನು ನೀಡುತ್ತಿತ್ತು, ಆದರೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಮಠಗಳಿಗೆ ನೀಡಲಿಲ್ಲ ಎಂದು ಆರೋಪಿಸಿರುವ ಕುರಿತು ಪಿಟಿಐ ವರದಿ ಮಾಡಿದೆ.

ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ರೇಣುಕಾಚಾರ್ಯ ತಮ್ಮ ಮಗಳಿಗೆ ನಕಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಪಡೆದಿದ್ದಾರೆ ಎಂದು ಆರೋಪಿಸಿದ ಕೆಲವು ದಿನಗಳ ನಂತರ ಈ ಹೇಳಿಕೆಯನ್ನು ನೀಡಿದ್ದಾರೆ.
ಬುಧವಾರ, ಪ್ರತಿಪಕ್ಷವು ರೇಣುಕಾಚಾರ್ಯ ಅವರು ಮಕಲಿ ಪ್ರಮಾಣಪತ್ರದ ಮೂಲಕ “ಸರ್ಕಾರಿ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದ್ದರು.
ಈ ಕುರಿತು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೇಡ ಜಂಗಮ ಹೆಸರಿನಲ್ಲಿ ಎಸ್ಸಿ ಪ್ರಮಾಣ ಪತ್ರ ಪಡೆದಿಲ್ಲ. ನನ್ನ ಸಹೋದರ 2012ರಲ್ಲಿ ನಾನು ವಿರೋಧ ಮಾಡಿದ್ದರೂ ನನ್ನ ಮಗಳ ಸಹಿ ಪಡೆದು ಪ್ರಮಾಣ ಪತ್ರ ಪಡೆದಿರುವುದು ನಿಜ. ಆದರೆ ಯಾವುದೇ ಸೌಲಭ್ಯ ಪಡೆದಿಲ್ಲ ಎಂದು ಹೇಳಿದ್ದರು.